Monday, June 30, 2025

ಸತ್ಯ | ನ್ಯಾಯ |ಧರ್ಮ

ಚೈತ್ರ ಕುಂದಾಪುರ ಹೇಳಿದ ಆ ಮತ್ತೊಂದು ಮಾಸ್ಟರ್ ಮೈಂಡ್ ಯಾರು ಗೊತ್ತಾ?

“ಸ್ವಾಮೀಜಿ ಅರೆಸ್ಟ್ ಆಗಲಿ, ಆಗ ದೊಡ್ಡ ದೊಡ್ಡವರೆಲ್ಲರ ಬಂಡವಾಳ ಹೊರಬರುತ್ತೆ” ಹೀಗನ್ನುತ್ತಲೇ ಟಿಕೆಟ್ ಹಗರಣದ ಪ್ರಮುಖ ಆರೋಪಿ ಚೈತ್ರ ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದೊಳಗೆ ಹೋಗಿದ್ದು ಈಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಅಡಿಯಲ್ಲಿ ಈಗಾಗಲೇ ಒಂದೊಂದೇ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್​ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸಧ್ಯಕ್ಕೆ ಪ್ರಕರಣದ 5ನೇ ಆರೋಪಿ ಚನ್ನ ನಾಯ್ಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

5 ನೇ ಆರೋಪಿ ಚನ್ನನಾಯ್ಕ್ ಈ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರಧಾರಿಯಾಗಿ ಗುರುತಿಸಿಕೊಂಡಿದ್ದ. ಸಧ್ಯ ಚನ್ನನಾಯ್ಕ್ ನನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈಗ ಎದ್ದಿರುವ ದೊಡ್ಡ ಚರ್ಚೆ ಎಂದರೆ ಪ್ರಕರಣದ ಎ1 ಆರೋಪಿ ಚೈತ್ರ ಕುಂದಾಪುರ ಸಾಂತ್ವನ ಕೇಂದ್ರದೊಳಗೆ ಹೋಗುತ್ತಾ, ದೊಡ್ಡ ದೊಡ್ಡವರ ಬಂಡವಾಳದ ಬಗ್ಗೆ ಮಾತನಾಡಿದ್ದಾರೆ. ಹೇಳಿಕೇಳಿ ಚೈತ್ರ ಕುಂದಾಪುರ ಬಿಜೆಪಿ ಪಕ್ಷಕ್ಕೆ ಬಾಡಿಗೆಗೆ ಭಾಷಣ ಮಾಡುವಾಕೆ. ಇದೇ ರೀತಿಯ ಬಿಜೆಪಿ ಪಕ್ಷದ ಬಾಡಿಗೆ ಭಾಷಣಕಾರನೊಬ್ಬನಿಗೂ ಈ 7 ಕೋಟಿಯಲ್ಲಿ ಪಾಲು ಹೋಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಅಷ್ಟೆ ಅಲ್ಲದೆ ಈ ಟಿಕೇಟ್ ಡೀಲಿಂಗ್ ನ ಹಿಂದೆ ಬಿಜೆಪಿ ಪಕ್ಷದ ಎರಡನೇ ದರ್ಜೆಯ ನಾಯಕರು, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಸಂಪೂರ್ಣ ನಿರ್ದೇಶನ ಇದೆ ಎಂಬ ರೀತಿಯಲ್ಲಿ ಚರ್ಚೆ ಶುರುವಾಗಿದೆ. ಇಲ್ಲಿ ಚೈತ್ರ ಕುಂದಾಪುರ ಕೂಡಾ ನಾನೊಬ್ಬಳೇ ಇದರ ಪಾಲುದಾರ ಅಲ್ಲ ಎಂಬ ಸಂದೇಶವನ್ನು ನೀಡಿದ್ದಾಳೆ. ಇಲ್ಲಿ ಅಭಿನವ ಹಾಲಸ್ವಾಮಿಯ ಜೊತೆಗೆ ಇನ್ನೊಂದು ಮಾಸ್ಟರ್ ಮೈಂಡ್ ಕೂಡಾ ಕೆಲಸ ಮಾಡಿದೆ ಎಂಬುದು ಸ್ಪಷ್ಟವಾದಂತಿದೆ. ಈ ಮೂಲಕ ಈ ಹಗರಣದ ಪ್ರಮುಖ ವ್ಯಕ್ತಿಗೂ ಸಜೆ ಆಗಲಿ ಎಂದು ಚೈತ್ರ ಬಯಸಿದ್ದಾಳೆ.

ಹಾಗಾದರೆ ಆ ಇನ್ನೊಂದು ಮತ್ತೊಂದು ತಲೆ ಯಾರದ್ದು? ಅಭಿನವ ಹಾಲಸ್ವಾಮಿ ಮತ್ತು ಚೈತ್ರ ಕುಂದಾಪುರ ಇಬ್ಬರಿಗೂ ಆಪ್ತನಾದ ವ್ಯಕ್ತಿ ಯಾರು? 7 ಕೋಟಿ ಹಣದಲ್ಲಿ ಒಂದೂವರೆ ಕೋಟಿ ಹಾಲಸ್ವಾಮಿಗೆ ಹೋದರೆ ಉಳಿದ ಐದೂವರೆ ಕೋಟಿಯ ಪಾಲುದಾರಿಕೆ ಯಾರ್ಯಾರಿಗೆ ಹೋಗುತ್ತೆ? ಈಗಾಗಲೇ ಟಿಕೆಟ್ ಹಗರಣದಲ್ಲಿ ಬಂಧಿತರಾಗಿರುವ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್​ ಹೊರತಾಗಿ ಇರುವ ಘಟಾನುಘಟಿ ಯಾರು ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

ಇನ್ನೊಂದು ಮೂಲದ ಪ್ರಕಾರ ಬಿಜೆಪಿಯ ಬಾಡಿಗೆ ಭಾಷಣಕಾರನೇ ಈ ಎಲ್ಲಾ ಹಗರಣದ ಮುಖ್ಯ ರೂವಾರಿ ಎಂಬ ಅನುಮಾನ ಕೂಡಾ ಇದೆ. ಹಲವಷ್ಟು ಬಾರಿ ತಾನು ಹೋಗಲು ಆಗದಂತಹ ‘ಸಂಘದ’ ಅಥವಾ ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಗೆ ಆತ ಚೈತ್ರ ಕುಂದಾಪುರಳನ್ನು ಕಳುಹಿಸುತ್ತಿದ್ದ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆದು ಸತ್ಯ ಹೊರಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page