Sunday, June 23, 2024

ಸತ್ಯ | ನ್ಯಾಯ |ಧರ್ಮ

ಕ್ರೌರ್ಯ ಮತ್ತು ಲೈಂಗಿಕ ತೃಷೆಯ ಮನಸ್ಥಿತಿ ಉಳ್ಳವರು ಬದಲಾಗುವುದೇ ಇಲ್ಲ: ಸುಖಲಾಕ್ಷಿ ಸುವರ್ಣ

ಮಂಗಳೂರು: ಗುಜರಾತ್ ಗಲಭೆಯ ವೇಳೆ ಗರ್ಭಿಣಿ ಬಿಲ್ಕಿಸ್ ಬಾನು ಅವರ ಮೇಲೆ ಅತ್ಯಾಚಾರ ಹಾಗೂ ಅವರ ಕುಟಂಬದ ಸದಸ್ಯರನ್ನು ಸಾಮೂಹಿಕ ಹತ್ಯೆ ನಡೆಸಿದ ಹನ್ನೊಂದು ಶಿಕ್ಷಿತರನ್ನು ಗುಜರಾತ್ ಸರಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕ್ರೌರ್ಯದ ಪರಮಾವಧಿ ಮತ್ತು ಪಾಶವೀ ಕೃತ್ಯವಾಗಿದೆ. ಕ್ರೌರ್ಯ ಮತ್ತು ಲೈಂಗಿಕ ತೃಷೆಯ ಮನಸ್ಥಿತಿ ಉಳ್ಳವರು ಬದಲಾಗುವುದೇ ಇಲ್ಲ. ಇಂತಹ ಹೇಯ ಕೃತ್ಯಕ್ಕೆ ಕ್ಷಮೆ ನೀಡಿರುವುದು ಎಲ್ಲ ಜೀವಪರ ಮನುಷ್ಯರಿಗೆ ಆಘಾತ ನೀಡಿದೆ. ನಾವು ಮಹಿಳೆಯರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ ಹೇಳಿದರು.

ಹಾಗೆಯೇ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ತಮ್ಮದೇ ವಸತಿ ನಿಲಯದ ಅಪ್ರಾಪ್ತ ದಲಿತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಎಸ್ ಸಿ ಎಸ್ಟಿ ಕಾಯಿದೆ ಹಾಗೂ ಪೋಕ್ಸೋ ಕಾಯಿದೆಯಡಿ ದಾಖಲಾದ ಈ ಪ್ರಕರಣದಲ್ಲಿ ತಕ್ಷಣ ಅವರನ್ನು ಬಂಧಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಸಂತ್ರಸ್ತ ಬಾಲಕಿಯರ ಪರ ನಿಲ್ಲಬೇಕಾದ ಸರಕಾರೀ ವ್ಯವಸ್ಥೆಯು ಆರೋಪಿಗಳಿಗೆ ಬೆಂಬಲವಾಗಿ ನಿಂತು ಪೋಕ್ಸೋ ಕಾಯಿದೆಯ ಮಹತ್ವವನ್ನು ನಾಶಮಾಡ ಹೊರಟಿರುವುದು ವಿಷಾದನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು ಹಮ್ಮಿಕೊಂಡ ʼಕಪ್ಪು ಉಡುಪಿನಲ್ಲಿ ಮಹಿಳೆಯರು” ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಹಾಗೂ ಮುರುಘಾ ಮಠದ ಮುರುಘಾ ಶ್ರೀಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಕೋರಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು

ನಗರದ ಮಿನಿ ವಿಧಾನ ಸೌಧದ ಎದುರಿನ ರಸ್ತೆಯ ಪಾದಾಚಾರಿ ಪಥದಲ್ಲಿ ಮಹಿಳೆಯರು ಪ್ಲಕಾರ್ಢುಗಳನ್ನು ಹಿಡಿದು ಮೌನ ಪ್ರತಿಭಟನೆಯನ್ನು ಒಂದು ಗಂಟೆಗಳ ಕಾಲ ನಡೆಸಿದರು.

ಬಿಲ್ಕಿಸ್ ಬಾನುಗೆ ನ್ಯಾಯ ಸಲ್ಲಿಸಲು, ಬಿಡುಗಡೆಯಾದ ಆ 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಬೇಕು,
ಮುರುಘಾ ಶರಣರಿಗೆ ಕಠಿಣ ಶಿಕ್ಷೆಯಾಗುವಂತೆ ಸಂಬಂಧಿತ ಎಲ್ಲ ಸರಕಾರೀ ವ್ಯವಸ್ಥೆಗಳು ಯಾವುದೇ ಒತ್ತಡಗಳಿಗೆ ಮಣಿಯದೆ ಕಾರ್ಯನಿವಹಿಸಬೇಕು, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ರೀತ್ಯಾ ಸಿಗಬೇಕಾದ ಪರಿಹಾರಗಳು ತಕ್ಷಣ ಸಿಗಬೇಕು, ಪೋಕ್ಸೋ ಕಾಯಿದೆಯ ಕುರಿತು ದೊಡ್ಡ ಮಟ್ಟದಲ್ಲಿ ಜನ ಸಾಮಾನ್ಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಸರಕಾರವು ಹಮ್ಮಿಕೊಳ್ಳಬೇಕು ಎಂಬ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.

ವಾಣಿ ಪೆರಿಯೋಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಆಪ್ತ ಸಲಹಾ ಕೇಂದ್ರದ ಪ್ರೊ. ಹಿಲ್ಡಾ ರಾಯಪ್ಪನ್‌ ಸಮಾರೋಪ ಮಾತುಗಳನ್ನು ಆಡಿದರು.

ಪ್ರಜ್ಞಾ ಸಲಹಾ ಕೇಂದ್ರ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಸಹೋದಯ, ಬಿಲ್ಲವ ಮಹಿಳಾ ಮಂಡಲ, ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ, ಫಾರ್ವರ್ಡ್‌ ಟ್ರಸ್ಟ್, ಡಿ.ಸಿ.ಸಿ.ಡಬ್ಲ್ಯು, ಯುವ ಮುನ್ನಡೆ ಮಂಗಳೂರು, ಸಂಚಲನ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಭಾರತೀಯ ಮಹಿಳಾ ಒಕ್ಕೂಟ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (ದ.ಕ), ಇಂಡಿಯನ್ ಕಮ್ಯುನಿಸ್ಟ್ ಆಕ್ಟಿವಿಸ್ಟ್ ನೆಟ್ ವರ್ಕ್, ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ, ಕರಾವಳಿ ಮಹಿಳಾ ಹಕ್ಕುಗಳ ರಕ್ಷಣಾ ವೇದಿಕೆ, ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ವಿಮೆನ್ ಇಂಡಿಯಾ ಮೂವ್ ಮೆಂಟ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜೀವನ್‌ ಧಾರಾ ಮತ್ತು ತರಿಕಿಟ ಕಲಾ ಕಮ್ಮಟ ಸಂಘಟನೆಗಳು ಭಾಗವಹಿಸಿದ್ದವು.

Related Articles

ಇತ್ತೀಚಿನ ಸುದ್ದಿಗಳು