ಮಧ್ಯಪ್ರದೇಶ: ಇಲ್ಲಿನ ಕುನೊ ಅಭಯಾರಣ್ಯಕ್ಕೆ ನಮೀಬಿಯಾದ ಚೀತಾ ಬರುತ್ತಿರುವುದು ದೇಶದೆಲ್ಲೆಡೆ ಈಗ ಬಿಸಿ ಬಿಸಿ ಸುದ್ದಿ. ಈ ನಡುವೆ ಕಾಂಗ್ರೆಸ್ ಪಕ್ಷ ತನ್ನ ಹಿಂದಿನ ಯುಪಿಎ ಸರಕಾರ ಇಂದಿನ ದಿನದ ಸಾಕಾರಕ್ಕೆ ಹೇಗೆ ಕಾರಣವಾಗಿತ್ತು ಎನ್ನುವುದನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ
ಇಂದು ಪ್ರಧಾನಿ ನರೇಂದ್ರ ಮೋದಿಯವರು ಚೀತಾಗಳನ್ನು ಅಭಯಾರಣ್ಯದ ಒಳಗೆ ಬಿಡುವ ಮೂಲಕ ಉದ್ಘಾಟಿಸಲಿರುವ ಈ ಯೋಜನೆಗೆ 2008-09ರ ಸಾಲಿನಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ಚಾಲನೆ ನೀಡಿತ್ತು.
ಭಾರತದಲ್ಲಿ 1952ನೇ ಇಸವಿಯಲ್ಲಿ ಚೀತಾಗಳು ಕಣ್ಮರೆಯಾಗಿವೆ ಎಂದು ಘೋಷಿಸಲಾಗಿತ್ತು. ಚೀತಾಗಳನ್ನು ಭಾರತದಲ್ಲಿ ಮತ್ತೆ ಕಾಣುವ ಕನಸಿನೊಂದಿಗೆ ಹುಟ್ಟಿದ್ದ ಯೋಜನೆಗೆ ಯುಪಿಎ ಸರಕಾರ 2008-09ರ ಸಾಲಿನಲ್ಲಿ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಅವರು ಏಪ್ರಿಲ್ 2010ರಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಔಟ್ರೀಚ್ ಸೆಂಟರ್ಗೆ ಸಹ ತೆರಳಿದ್ದರು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ನಂತರ 2013ರಲ್ಲಿ ಸುಪ್ರೀಮ್ ಕೋರ್ಟ್ ಈ ಯೋಜನೆಗೆ ತಡೆ ನೀಡಿ, ನಂತರ 2020ರಲ್ಲಿ ಮತ್ತೆ ಸಮ್ಮತಿ ನೀಡಿತೆನ್ನುವುದನ್ನು ಸಹ ಕಾಂಗ್ರೆಸ್ ಉಲ್ಲೇಖಿಸಿದೆ.
ಈ ಕುರಿತು ರಾಜ್ಯಸಭಾ ಸದಸ್ಯರಾದ ಜೈ ರಾಮ್ ರಮೇಶ್ ಅವರೂ ಟ್ವೀಟ್ ಮಾಡಿದ್ದು ಅವರು ತಮ್ಮ ಟ್ವೀಟಿನಲ್ಲಿ, “ನಮೀಬಿಯಾದಿಂದ ಇಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳು ಆಗಮಿಸುತ್ತಿವೆ, ಈ ಹಿನ್ನೆಲೆಯಲ್ಲಿ ಜುಲೈ 30ರ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಹಂಚಿಕೊಳ್ಳುತ್ತಿದ್ದೇನೆ, ಇದು ಇಂದಿನ ಘಟನೆ ಏಕೆ ಮತ್ತು ಹೇಗೆ ಸಾಧ್ಯವಾಯಿತು ಎಂಬುದರ ಇತಿಹಾಸವನ್ನು ಹೇಳುತ್ತದೆ .” ಎಂದು ಬರೆದುಕೊಂಡು ಲೇಖನದ ಚಿತ್ರವನ್ನು ಹಂಚಿಕೊಂಡಿದ್ದಾರೆ