ಬೆಂಗಳೂರು: ಫೆ. 27ರಂದು ರಾಜ್ಯಸಭೆಯ ಚುನಾವಣೆ ನಡೆಯಲಿದ್ದು, ಐದನೇ ಅಭ್ಯರ್ಥಿಯಾಗಿ ಜೆಡಿಎಸ್ನ ಕುಪೇಂದ್ರ ರೆಡ್ಡಿ ಇಂದು ನಾಮಪತ್ರ ಸಲ್ಲಿಸಿದರು.
ಈಗಿಗ ಶಾಸಕರ ಸ್ಥಾನಗಳ ಬಲಾಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಮತ್ತು ಬಿಜೆಪಿ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲು ಸಾಧ್ಯವಿದೆ. ಆಡಳಿತಾರೂಢ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಮಿತ್ರ ಪಕ್ಷಗಳು ಐದನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣವನ್ನುಂಟು ಮಾಡಿವೆ. ಅಡ್ಡ ಮತದಾನ ಮಾಡಿಸಿಯಾದರೂ ಕಾಂಗ್ರೆಸ್ಗೆ ಹಿನ್ನಡೆ ಮಾಡಿಸಬೇಕೆಂಬುದು ಬಿಜೆಪಿಯ ಲೆಕ್ಕಾಚಾರ.
ಕಾಂಗ್ರೆಸ್ 135 ಶಾಸಕರ ಬಲವನ್ನು ಹೊಂದಿದ್ದು, ಬಿಜೆಪಿ 66 ಮತ್ತು ಜೆಡಿಎಸ್ 19 ಶಾಸಕರ ಬಲ ಹೊಂದಿವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇನ್ನುಳಿದ ಶಾಶಕರುಗಳು. ದರ್ಶನ್, ಲತಾ, ಪುಟ್ಟಸ್ವಾಮಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ.ಈ ಮೊದಲು ಕಾಂಗ್ರೆಸ್ ಕಡೆ ಒಲುವು ಹೊಂದಿದ್ದ ಜನಾರ್ದನ ರೆಡ್ಡಿ, ಇತ್ತೀಚೆಗೆ, ಬಿಜೆಪಿ ಕಡೆ ಹೊರಳಿದ್ದಾರೆ. ಎನ್ನಲಾಗಿದೆ.
ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬಿಜೆಪಿಯ 21 ಹೆಚ್ಚುವರಿ ಮತಗಳು, ಜೆಡಿಎಸ್ನ 19, ಪಕ್ಷೇತರ 2 ಮತ್ತು ಕೆಆರ್ಪಿಪಿ ತಲಾ ಒಂದು ಮತಗಳನ್ನು ಪಡೆಯಲು ಸಾಧ್ಯವಾದರೆ 43 ಮತಗಳನ್ನು ಪಡೆಯಬಹುದು. ಅಲ್ಲದೇ, ಕಾಂಗ್ರೆಸ್ನಲ್ಲಿರುವ ಅಸಮಾಧಾನಿತರಿಗೆ ಗಾಳ ಹಾಕಿ ಇನ್ನೂ ಮೂರು ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವನ್ನು ಮಿತ್ರ ಪಕ್ಷಗಳು ನಡೆಸಿವೆ ಎನ್ನಲಾಗುತ್ತಿದೆ.