ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಖಾನ್ಯಾರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಹತನಾಗಿದ್ದಾನೆ ಎಂದು ಐಜಿಪಿ ಕಾಶ್ಮೀರ ವಲಯ ವಿದ್ದಿ ಕುಮಾರ್ ಬರ್ದಿ ತಿಳಿಸಿದ್ದಾರೆ.
ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಲಷ್ಕರ್-ಎ-ತೊಯ್ಬಾ ಕಮಾಂಡರ್ 2023ರ ಇನ್ಸ್ಪೆಕ್ಟರ್ ಮಸ್ರೂರ್ ಹತ್ಯೆ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಐಜಿಪಿ ಬರ್ದಿ ಹೇಳಿದ್ದಾರೆ. ಶನಿವಾರ ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
‘ಈಗ ಕಾರ್ಯಾಚರಣೆ ಮುಗಿದಿದೆ. ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಭಯೋತ್ಪಾದಕನ ಹೆಸರು ಉಸ್ಮಾನ್ ಮತ್ತು ಅವನು ಲಷ್ಕರ್-ಎ-ತೊಯ್ಬಾದ ಕಮಾಂಡರ್. ಆತ ವಿದೇಶಿ ಭಯೋತ್ಪಾದಕ. ಈತನಿಗೆ ಇನ್ಸ್ ಪೆಕ್ಟರ್ ಮಸ್ರೂರ್ ಹತ್ಯೆಯಲ್ಲಿ ನಂಟು ಇದೆ’ ಎಂದು ಐಜಿಪಿ ಬರ್ದಿ ಹೇಳಿದ್ದಾರೆ.
ಅನಂತ್ ನಾಗ್ ಎನ್ಕೌಂಟರ್ ಕುರಿತು ಪ್ರತಿಕ್ರಿಯಿಸಿದ ಅವರು.. ‘ಬಂದ ಮಾಹಿತಿಯಂತೆ ನಾವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ’ ಎಂದು ಅವರು ಹೇಳಿದರು.