Tuesday, June 25, 2024

ಸತ್ಯ | ನ್ಯಾಯ |ಧರ್ಮ

ಪ್ರೀತಿಸುವುದನ್ನು ಕಲಿಯಿರಿ

ಮನುಷ್ಯರ ಜತೆ ಎಲ್ಲ ಸಾಕುಪ್ರಾಣಿಗಳು ಸಹಜವಾಗಿ ಹೊಂದಿಕೊಳ್ಳಲಾರವು. ಒಂದು ಸಲ ಅವುಗಳ ವಿಶ್ವಾಸವನ್ನು ಗಳಿಸಿಬಿಟ್ಟರೆ ಸಾಕು ಎದೆಗವಚಿಕೊಳ್ಳುವಷ್ಟು ಅವು ಹತ್ತಿರವಾಗಿ ಬಿಡುತ್ತವೆ. ಪತ್ರಿಕೋದ್ಯಮ ವಿದ್ಯಾರ್ಥಿ ರಾಹುಲ್‌ ತನ್ನ ಕಾಲೇಜಿನ ಸಮೀಪದ ಸೋನಿ ನಾಯಿಯ ಕುರಿತು ಬರೆಯುತ್ತಾ  “ನೀವು ಪ್ರೀತಿಸುವುದನ್ನು ಕಲಿಯಿರಿ- ಮನುಷ್ಯರು, ಪ್ರಾಣಿ, ಪಕ್ಷಿ ಎಲ್ಲವನ್ನೂ” ಎನ್ನುತ್ತಾ ಸಂದೇಶವೊಂದನ್ನು ರವಾನಿಸಿದ್ದಾರೆ. 

 ಪ್ರಾಣಿಗಳನ್ನು ಪ್ರೀತಿಸುವ ಪ್ರತಿಯೊಬ್ಬರು ಮನೆಯಲ್ಲಿ ಸಾಕಲು ಇಚ್ಛಿಸುವ ಪ್ರಾಣಿಯೆಂದರೆ ಅದು ನಾಯಿ.  ನಾಯಿ ಬೈಗುಳಕ್ಕೆ ಮಾತ್ರವಲ್ಲ, ನಿಯತ್ತಿಗೆ ಗುರುತಿಸಲ್ಪಟ್ಟ ಮೊದಲ ಜೀವಿ ಎಂದರೆ ತಪ್ಪಾಗಲಾರದು. ಸಾಕು ಪ್ರಾಣಿಗಳು ಹಲವಾರಿವೆ, ಆದರೆ ನಾಯಿ ಎಲ್ಲರಿಗೂ ಹಿಡಿಸುವುದು  ಏಕೆಂದರೆ ಅದು ನಮ್ಮೊಂದಿಗೆ ಹೊಂದಿಕೊಳ್ಳುವ ರೀತಿ, ತೋರಿಸುವ ಪ್ರೀತಿ, ನಿಯತ್ತು, ಮಾಡುವ ಕೀಟಲೆ ಇನ್ಯಾವ ಪ್ರಾಣಿಗಳು ಮಾಡಲಾರದು. ಆದ್ದರಿಂದ  ನಮ್ಮವರಿಗಿಂತ ಹೆಚ್ಚು ಪ್ರೀತಿಗೆ ಅದು ಹತ್ತಿರವಾಗುತ್ತದೆ.

ನಾನು ಇದುವರೆಗೂ ಸಾಕಷ್ಟು ನಾಯಿಗಳನ್ನು ನೋಡಿದ್ದೇನೆ, ಆದರೆ ನಮ್ಮ ಯಕ್ಷಗಾನ ಕೇಂದ್ರದ ಸೋನಿಯ ರೀತಿ ಮತ್ತೊಂದು ನಾಯಿಯನ್ನು ಇದುವರೆಗೂ ನಾನು ಕಂಡಿಲ್ಲ. ನಾವು ಮನುಷ್ಯರೇ ಒಬ್ಬರಿದ್ದಂತೆ ಇನ್ನೊಬ್ಬರಿರುವುದಿಲ್ಲ.  ಇನ್ನು ಅವುಗಳು ಇರುತ್ತವೆಯೆ!. ನನ್ನ ಮತ್ತು ಸೋನಿಯ ನಂಟು ಹೆಚ್ಚು ಕಡಿಮೆ ನಾಲ್ಕರಿಂದ ಐದು ವರ್ಷಗಳದ್ದು. ಆಕೆ ಹುಟ್ಟಿನಿಂದಲೇ ಕೇಂದ್ರದಲ್ಲಿ ಇದ್ದವಳಲ್ಲ,  ಗರ್ಭಿಣಿಯಾಗಿ, ಮುದ್ದಾದ ಮಕ್ಕಳನ್ನು ಹೆತ್ತು ಅವುಗಳ ಮೂಲಕ ಎಲ್ಲರ ಮನ ಗೆದ್ದು ಒಳ  ಸೇರಿದವಳು.  ಅವಳ ಮಕ್ಕಳು ಎಷ್ಟು ಮುದ್ದಾಗಿದ್ದವೋ ಆಕೆಯೂ ಅಷ್ಟೇ ಮುಗ್ಧತೆಯಿಂದ  ಎಲ್ಲರ ಮನಸ್ಸಿನಲ್ಲಿ ಪ್ರೀತಿ ಹುಟ್ಟು  ಹಾಕಿದ್ದಳು. ಈಕೆ ಮನುಷ್ಯರನ್ನು ಕಂಡರೆ ಮೊದ ಮೊದಲು ದೂರ ಸರಿಯುತ್ತಿದ್ದಳಾದರೂ, ಕೆಲ ಕಾಲ ಕಳೆದ ಬಳಿಕ ಅವಳ ಕಾಲ್ಗಳನೆತ್ತಿ ನಮ್ಮ ಕೈಗಳಿಗೆ ಇಡುವಷ್ಟು ಆಪ್ತಳಾದಳು.  ಕೆಲವೊಂದು ಸಂದರ್ಭಗಳಲ್ಲಿ ಸಾವಿನ ಬಾಯಿಗೆ ಕಾಲಿಟ್ಟು  ಹಿಂದೆ ಬಂದಿದ್ದಳು. ಆಯಸ್ಸನ್ನು ಆ ದೇವರು  ಇಂತಿಷ್ಟು ಎಂದು ಬರೆದಿರಬೇಕಾದರೆ ಯಾರಿಂದ ತಾನೇ ಅದನ್ನು ಅಳಿಸಲು ಅಥವಾ ತಿದ್ದಲು ಸಾಧ್ಯ? ಆಕೆ ಈಗ ಸುರಕ್ಷಿತವಾಗಿದ್ದಾಳೆ.

ಅದೇಕೋ ಗೊತ್ತಿಲ್ಲ, ಯಾರೇ ಏನನ್ನೇ ತಂದು ಹಾಕಲಿ ಅದನ್ನು ಅವರ ಮುಂದೆ ತಿನ್ನುವುದಿರಲಿ, ಅದೇನೆಂದು ತಿರುಗಿಯೂ ನೋಡುತ್ತಿರಲಿಲ್ಲ. ಆದರೆ ಇದೀಗ ಅಲ್ಪ ಸ್ವಲ್ಪ ಬದಲಾಗಿದ್ದಾಳೆ, ಹಸಿವಿದ್ದರೆ ಆಚೀಚೆ ನೋಡಿ ತಿಂದು ಬಿಡುತ್ತಾಳೆ. ಹೊಟ್ಟೆ ತುಂಬಿದ್ದರೆ, ಆ ಬದಿ ತಿರುಗಿಯೂ ನೋಡುವುದಿಲ್ಲ.  ಇದುವರೆಗೆ ಕೇಂದ್ರದಲ್ಲಿ ಎಂಟರಿಂದ ಹತ್ತು ಜೀವಗಳಿಗೆ ಜನ್ಮ ಕೊಟ್ಟಿದ್ದಾಳೆ. ಈಕೆಯ ಊಟವೆಲ್ಲ ಅಕ್ಕ ಪಕ್ಕದಲ್ಲಿರುವ ವಸತಿ ಗೃಹಗಳಲ್ಲಿ. ಹತ್ತಿರದಲ್ಲಿರುವ ಆಯುರ್ವೇದಿಕ್ ಮಸಾಜ್ ಸೆಂಟರ್ ನಲ್ಲಿ ಕೆಲಸ ಮಾಡುವ ಅಜ್ಜಿಯೂ ಊಟ ಹಾಕುತ್ತಾರೆ. ನಾನು ಪ್ರತಿ ಸಾರಿ ಮನೆಯಿಂದ ಉಡುಪಿಗೆ ಬಂದಾಗ ಕೇಂದ್ರದಲ್ಲಿ ಯಾರಿರುತ್ತಾರೋ ಯಾರಿರುವುದಿಲ್ಲವೋ ಗೊತ್ತಿಲ್ಲ, ಆದರೆ ಇವಳಂತೂ ಎದುರಿನ ಸಿಂಡಿಕೇಟ್ ರಂಗಸ್ಥಳದಲ್ಲಿ ಎರಡು ಕಾಲು ಮುಂದೆ, ಎರಡು  ಕಾಲು ಹಿಂದೆ ಚಾಚಿ ಹಾಜರಿರುತ್ತಾಳೆ. ನಾವು ಯಾವಾಗ ಎಲ್ಲಿಗೆ ಹೊರಡಲಿ, ನಮ್ಮನ್ನು ಮುಖ್ಯರಸ್ತೆಯವರೆಗೆ ಬಿಟ್ಟು ಬರದಿದ್ದರೆ  ಆಕೆಗೆ ಸಮಾಧಾನವೆ ಇಲ್ಲ.  ಪ್ರತಿದಿನ ಊಟವಾದ ಮೇಲೆ ನಮಗೆ ಸುಮ್ಮನೆ ಕತ್ತಲೆಯ ರಸ್ತೆಯಲ್ಲಿ,‌ ಕಾಲಿಗೆ ಚಪ್ಪಲಿ ಸಿಕ್ಕಿಸಿ ನಡೆಯುವ ಅಭ್ಯಾಸವೊಂದುಂಟು. ಆಗ ನಾವು ಮಾತ್ರ ಹೋಗುವುದಲ್ಲ, ಆಕೆಯೂ ನಮ್ಮೊಂದಿಗೆ ಬರುತ್ತಾಳೆ. ಮಾತ್ರವಲ್ಲದೆ  ಕೆಲವೊಂದು ದಿನ ಮುಖ್ಯ ರಸ್ತೆ ದಾಟಿ ಹೋಗುವ ಸಂದರ್ಭ ಬಂದರೆ, ಆಕೆ ನಮಗಿಂತ ಮೊದಲು ರಸ್ತೆ ದಾಟಿ ಕಾಯುತ್ತಾಳೆ. ಹೊರಗಿನವರು ಈಕೆಯ ಚುರುಕುತನ ನೋಡಿ “ನಿಮ್ಮ ನಾಯಿಯೆ” ಎಂದು ಕೇಳಿದಾಗ “ಹೌದು ನಮ್ಮದೇ” ಎಂದು ಹೇಳಲು ಈಗಲೂ ಹೆಮ್ಮೆಯಾಗುತ್ತದೆ.

ಈಗ ಕೇಂದ್ರದಲ್ಲಿ ಅವಳೊಬ್ಬಳೆ ಅಲ್ಲ, ಅವಳೊಂದಿಗೆ ಇನ್ನೊಬ್ಬನು ಸೇರಿಕೊಂಡಿದ್ದಾನೆ. ಅವನದು ಇನ್ನೊಂದು ರೀತಿಯ ಕಥೆ. ಇಬ್ಬರು ಒಟ್ಟಿಗೆ ಇಡೀ ಊರು ಸುತ್ತುತ್ತಾರೆ. ಕೇಂದ್ರದೊಳಗೆ ಹೊಸಬರ ಪ್ರವೇಶವಾದರೆ ಅವರ ಭಾಷೆಯಲ್ಲಿ ಪ್ರಶ್ನಿಸುತ್ತಾರೆ. ನೋಡಿದ ಮುಖಗಳಾಗಿದ್ದಾರೆ ಕೂತ ಜಾಗದಲ್ಲೆ ಕಣ್ಣು ಮಿಟುಕಿಸುತ್ತ, ಬಾಲ ಬಗ್ಗಿಸುತ್ತ ಬಂದಿರಾ ಎಂಬ ಭಾವದಿಂದ ನೋಡುತ್ತಾರೆ.

ನನ್ನೊಂದಿಗಿರುವವರನ್ನು ಬಿಟ್ಟರೆ ತುಂಬಾ ಖುಷಿ ಕೊಡುವ ಬೇರೊಂದು ವಿಷಯವೊಂದಿದ್ದರೆ ಅದು ಅವಳೆ. ನಾವು ಅವಳಿಗೆ ಎಷ್ಟೊಂದು ಉಪಕಾರ ಮಾಡಿದ್ದೇವೋ, ಬಿಟ್ಟಿದ್ದೇವೋ ಗೊತ್ತಿಲ್ಲ ಆದರೆ, ಅಪಕಾರವನ್ನು ಮಾತ್ರ ಇದುವರೆಗೂ ಮಾಡಿಲ್ಲ. ನಿಮ್ಮಲ್ಲೂ ಕೇಳಿ ಕೊಳ್ಳುವುದಿಷ್ಟೆ, ನೀವು ಪ್ರೀತಿಸುವುದನ್ನು ಕಲಿಯಿರಿ – ಮನುಷ್ಯರು, ಪ್ರಾಣಿ, ಪಕ್ಷಿ ಎಲ್ಲವನ್ನೂ.  ಆಗ ನಿಮ್ಮನ್ನು ಪ್ರೀತಿಸುವುದನ್ನು ಅವುಗಳಿಗೆ ಹೇಳಿ ಕೊಡುವ ಅವಶ್ಯಕತೆ ಬರುವುದಿಲ್ಲ.

ರಾಹುಲ್‌

ಉಡುಪಿಯ ಎಂ ಜಿ ಎಮ್‌ ಕಾಲೇಜಿನ ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ-https://peepalmedia.com/the-story-of-a-nomad-boy-going-to-school/http://ಅಲೆಮಾರಿ ಹುಡುಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ

Related Articles

ಇತ್ತೀಚಿನ ಸುದ್ದಿಗಳು