Thursday, December 26, 2024

ಸತ್ಯ | ನ್ಯಾಯ |ಧರ್ಮ

LGBTQIA+ಮಕ್ಕಳು: ಮನೆಯಿಂದಲೇ ಬದಲಾವಣೆ ಆರಂಭ

LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಲೇಖಕಿ ರುಕ್ಮಿಣಿ ಎಸ್‌ ನಾಯರ್ ರವರ ಈ ಲೇಖನ ಓದಿ

ವಿಭಿನ್ನ ಲೈಂಗಿಕ ಅಭಿವ್ಯಕ್ತಿಯು ಬಹಳ ಸಂಕೀರ್ಣವಾದದ್ದು. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕಿದೆ. ಏಕೆಂದರೆ ನಮ್ಮ ಭಾವನೆಗಳು ಹಾಗೂ ಲೈಂಗಿಕತೆಗಿಂತ ಮತ್ತು ಕೆಲವೊಮ್ಮೆ ಲೈಂಗಿಕ ಅವಯವಯಗಳ ರಚನೆ LGBTQIA+ಮಕ್ಕಳಲ್ಲಿ ಭಿನ್ನವಾಗಿರುತ್ತದೆ. ಕೆಲ ಮಕ್ಕಳು ಸಾಧಾರಣವಾಗಿರುವಂತೆ ಕಂಡರೂ ಕೂಡಾ ಅವರ ಬಯಕೆ ಹಾಗೂ ಭಾವನೆಗಳು ಹದಿಹರಯಕ್ಕೆ ಬಂದಾಗ ಉದ್ಭವಿಸುವುದು ಅವರ ವಿರುದ್ಧವಾಗಿರುತ್ತವೆ. ಇದು ಬಲವಂತದಿಂದ ಉಂಟಾದ ಮಾರ್ಪಾಡು ಆಗಿರುವುದಿಲ್ಲ ಎನ್ನುವ ವಿಚಾರವನ್ನು ಪೋಷಕರು ಸ್ವೀಕರಿಸಬೇಕಾಗುತ್ತದೆ.

ತಾವು ಇತರರಿಗಿಂತ ಭಿನ್ನವಾಗಿ ಇರುವುದನ್ನು ಅರಿತ ಮಕ್ಕಳು ಮಾನಸಿಕವಾಗಿ ಕೀಳರಿಮೆ ಹೊಂದಿರುವಂತಹ ಸಂದರ್ಭದಲ್ಲಿ ಅವರಿಗೆ ಆಸರೆಯಾಗಿ ನಿಂತು ನಾವು ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ತುಂಬಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮಕ್ಕಳು ಏನು ಮಾಡಬೇಕು ಎಂದು ತಿಳಿಯದೇ, ತಮ್ಮಂತೆ ಇರುವ ಇತರರಿಗೆ ಆಗುತ್ತಿರುವ ಭೀತಿ ಹುಟ್ಟಿಸುವ ಅನುಭವಗಳನ್ನು ಕಂಡು ಹೆದರಿ ಪೋಷಕರಿಗೆ ತಿಳಿಯದಂತೆ ಸ್ವತಃ ತಾವೇ ಮನೆ ಬಿಟ್ಟು ಹೊರಹೋಗುವ ಸಾಧ್ಯತೆಗಳು ಇರುತ್ತವೆ. 

ವಿದ್ಯೆ ಕಲಿತು ಉದ್ಯೋಗಸ್ಥರಾಗಿ ಸಬಲರಾಗುವವರೆಗೂ ಹಾಗೂ ಅದರ ನಂತರವೂ ಮಕ್ಕಳಿಗೆ ಪೋಷಕರ ಆಶ್ರಯದ ಅಗತ್ಯವಿರುತ್ತದೆ. ಹಾಗೆಯೇ ಕಾಯಿಲೆಗೆ ಬಿದ್ದಾಗ ವೃದ್ಧಾಪ್ಯದಲ್ಲಿ ಪೋಷಕರಿಗೆ ಮಕ್ಕಳು ಕೂಡ ಊರಗೋಲಾಗಿ ಇರಬೇಕಾಗುತ್ತದೆ. ದುಡುಕಿ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಮನೆ ಬಿಟ್ಟು ಹೋದ ಅಥವಾ ಮನೆಯಿಂದ ಹೊರ ಹಾಕಿದ LGBTQIA+ಮಕ್ಕಳು ನಾನಾ ತರದ ತೊಂದರೆಗೆ ಹಾಗೂ ಶೋಷಣೆಗೆ ಒಳಗಾಗುತ್ತಾರೆ. ಇದರಿಂದ ಅವರು ನೊಂದು ಕುಗ್ಗಿಹೋಗಿ ಕೊನೆಗೆ ಬದುಕಲಾರದೆ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಪೋಷಕರೂ ಕೂಡ ಮಾನಸಿಕವಾಗಿ ನೋವಿಗೊಳಗಾಗುತ್ತಾರೆ. ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಇಲ್ಲದೆ ಶಾರೀರಿಕವಾಗಿ ಮಾನಸಿಕವಾಗಿ ನರಳಿ ಮರಣ ಸಮಯದಲ್ಲಿ ಮಕ್ಕಳು ಜೊತೆ ಇಲ್ಲದೇ ಪ್ರಾಣ ಬಿಡುವ ಪರಿಸ್ಥಿತಿ ಉಂಟಾಗುತ್ತದೆ.

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: LGBTQ+ ಮಕ್ಕಳ ತೊಳಲಾಟಗಳು!

ಯಾವುದೇ ಭಾವನೆಗಳನ್ನು ಕೃತಕವಾಗಿ ಮೂಡಿಸುವುದು ಸಾಧ್ಯವಿಲ್ಲ. ಹಾಗಾಗಿಯೇ ಪೋಷಕರಿಗೂ ಮಕ್ಕಳ ಭಿನ್ನ ಭಾವನೆಗಳನ್ನು ಸ್ವೀಕರಿಸುವುದು ಕೂಡ ಕಷ್ಟವಾಗುತ್ತದೆ. ಆದರೆ ಯಾರೂ ಬೇಕೆಂದು ವಿಭಿನ್ನ ಭಾವನೆಗಳನ್ನು ಬೆಳೆಸಿಕೊಳ್ಳುವುದಿಲ್ಲ. ತಮ್ಮ ಅಭಿವ್ಯಕ್ತಿಯು ಕುಟುಂಬ ಹಾಗೂ ಸಮಾಜ ವಿರೋಧಿ ಎನಿಸಿದರೂ ಅದನ್ನು ಬದಲಾವಣೆ ಮಾಡಿಕೊಳ್ಳಲು ಈ ಮಕ್ಕಳು ಆದಷ್ಟು ಪ್ರಯತ್ನಪಟ್ಟು ಸಾಧ್ಯವಾಗದೆ ಹೋದಾಗ ವಿಧಿಯಿಲ್ಲದೇ ತಮ್ಮ ಭಿನ್ನತೆಯನ್ನು ಒಪ್ಪಿಕೊಂಡು ಅದರೊಂದಿಗೇ ಜೀವನ ಸಾಗಿಸಲು ನಿರ್ಧರಿಸುತ್ತಾರೆ. ಆ ಮಕ್ಕಳಿಗೂ ತಂದೆ ತಾಯಿ ಹಾಗೂ ಕುಟುಂಬದ ಇನ್ನಿತರ ಸದಸ್ಯರ ಬಗ್ಗೆ ಗೌರವ ಇರುತ್ತದೆ. ಆದರೆ ಅವರ ಮನಸ್ಸಿನ ಕೂಗನ್ನು ತಿರಸ್ಕರಿಸಿ ಬದುಕಲು ಕೂಡ ಅವರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹ ಮಕ್ಕಳನ್ನು ಹಾಗೂ ಅವರ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ. 

ಇಲ್ಲಿ ಹೆತ್ತವರಿಗಿಂತ ಹೆಚ್ಚು ಪಟ್ಟು ನೋವಿಗೆ ಒಳಪಡುವುದು LGBTQIA+ಮಕ್ಕಳೇನೆ. ಇತ್ತ ಮನೆಯಲ್ಲಿ ಆಶ್ರಯವಿಲ್ಲದೆ, ತಂದೆ ತಾಯಿಯ ಪ್ರೀತಿ ಕಾಣದೇ ನೆರೆಹೊರೆ ಹಾಗೂ ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಬದುಕಲು ದಾರಿ ಇಲ್ಲದೆ ಶೋಷಣೆಗೆ ಒಳಗಾಗಿ ಹೆಣಗಾಡುವ ಪರಿಸ್ಥಿತಿ ಈ ಮಕ್ಕಳದು. ಈ ಮಕ್ಕಳ ವಿಭನ್ನತೆಯು ಸಮಾಜಕ್ಕೆ ತಿಳಿದರೆ ವಿದ್ಯಾಭ್ಯಾಸ, ಕಚೇರಿಗಳಲ್ಲಿ ಉತ್ತಮ ಕೆಲಸ ಹುದ್ದೆ ಕೊನೆಗೆ ಸಮಾಜದಲ್ಲಿ ಉತ್ತಮ ಬದುಕನ್ನು ಸಾಗಿಸುವುದರಿಂದಲೂ ವಂಚಿತವಾಗುತ್ತಾರೆ ಎನ್ನುವ ಭಯ ಅವರನ್ನು ಹಗಲು ರಾತ್ರಿ ಕಾಡುತ್ತಿರುತ್ತದೆ. 

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ನಮ್ಮ ಮನೆಗಳಿಂದಲೇ ಮೊದಲು ಬದಲಾವಣೆ ಪ್ರಾರಂಭವಾಗಬೇಕು. ನಮ್ಮ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವಲ್ಲದೆ ಅವರಿಗೆ ಇನ್ಯಾರಿದ್ದಾರೆ. ಪೋಷಕರಿಂದ ದೂರಾಗಿ ಬದುಕುವ ಆಸೆ ಆ ಮಕ್ಕಳಿಗೆ ಖಂಡಿತ ಇರದು. LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ನಮ್ಮ ಮಕ್ಕಳ ಮೇಲೆ ನಮಗೆ ಕರುಣೆ ಇರಲಿ. ಅವರು ನಮ್ಮ ಕುಟುಂಬದ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಮನಗಂಡು ಪರಿಗಣಿಸಬೇಕು. ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗೆಯೇ LGBTQIA+ ಮಕ್ಕಳು ಅವರ ಅಭಿವ್ಯಕ್ತಿಯಂತೆ ಬದುಕುವ ಹಕ್ಕನ್ನು ನಾವು ಕಸಿದುಕೊಳ್ಳದೆ ಅವರನ್ನು ಮಾನವರಾಗಿ ಕಾಣೋಣ. ನಮ್ಮ ಮಕ್ಕಳು ನಮ್ಮವರು. ಪೋಷಕರಿಗೆ ಮಕ್ಕಳಿಲ್ಲದೆ ಹೇಗೆ ಬದುಕುವುದು ಕಷ್ಟ ಸಾಧ್ಯವೋ ಹಾಗೆ ಮಕ್ಕಳಿಗೂ ಕೂಡ. ಮಕ್ಕಳು ಹೇಗಿರುವರೋ ಹಾಗೆ ಅವರನ್ನು ಆಲಂಗಿಸೋಣ. ಸುಖ, ಸಂತೋಷದಿಂದ, ನೆಮ್ಮದಿಯಿಂದ ಬಾಳುವ ಸದವಕಾಶವನ್ನು ನಾವು ಪೋಷಕರು ನಮ್ಮ ಕರುಳ ಕುಡಿಗಳಿಗೆ ಒದಗಿಸಿ ಕೊಡೋಣ. 

ಸಂಬಂಧಗಳು

ಋತುಗಳಿಗನುಗುಣವಾಗಿ
ಮರಗಳಿಂದೆಲೆಗಳು
ಉದುರಿ ಹೋಗುವ ತೆರದಿ
ಕಾಲಕ್ಕನುಗುಣವಾಗಿ
ಬದಲಾಗುವ ಸ್ನೇಹಗಳು
ಹೂಹಣ್ಣುಗಳ ಭಾರದಿ
ರೆಂಬೆಕೊಂಬೆಗಳು
ಮುರಿದು ಬೀಳುವ ತೆರದಿ
ಜವಾಬ್ದಾರಿಗಳಿಗಂಜಿ
ತೊರೆವ ಸಂಬಂಧಗಳು
ಹವಾಮಾನ ವೈಪರೀತ್ಯದಿ
ಬಿರುಗಾಳಿಯಬ್ಬರಕೆ
ಬುಡಮೇಲಾದ ವೃಕ್ಷದ ತೆರದಿ
ಭದ್ರತೆಯ ಕಳಚಿ
ಬೇರ್ಪಟ್ಟ ಅನುಬಂಧಗಳು
ಋತುಗಳು ಬದಲಾಗಲಿ
ಹೊರೆಯಾದರಾಗಲಿ
ಕಷ್ಟನಷ್ಟಗಳೇನೇ ಬರಲಿ
ನಿನ್ನೊಂದಿಗಿರುವೆನೆಂಬ
ಭರವಸೆಯೀವ ಜೀವಗಳು
ಬೇಕಿದೀಬಾಳನೌಕೆಗೆ
ಹುಟ್ಟಾಗಿ ಜೀಕಿ
ಸುಳಿಸೆಳೆತದಿಂಕಾಪಾಡಿ
ದಡಕೆ ಹೊತ್ತೊಯ್ಯುವ
ಮಾನವೀಯ ಹೃದಯಗಳು

ಲೇಖನ: ರುಕ್ಮಿಣಿ.ಎಸ್.ನಾಯರ್

ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page