Home ರಾಜ್ಯ ತುಮಕೂರು ತುಮಕೂರು ಲೋಕಸಭೆ: ಬಿಜೆಪಿ, ಜೆಡಿಎಸ್‌ನಂತೆ ಕಾಂಗ್ರೆಸ್ ನಾಯಕರೂ ನನ್ನ ಗೆಲುವಿಗೆ ಸಹಕರಿಸಿದ್ದಾರೆ: ಸಚಿವ ವಿ. ಸೋಮಣ್ಣ

ತುಮಕೂರು ಲೋಕಸಭೆ: ಬಿಜೆಪಿ, ಜೆಡಿಎಸ್‌ನಂತೆ ಕಾಂಗ್ರೆಸ್ ನಾಯಕರೂ ನನ್ನ ಗೆಲುವಿಗೆ ಸಹಕರಿಸಿದ್ದಾರೆ: ಸಚಿವ ವಿ. ಸೋಮಣ್ಣ

0

ತುಮಕೂರು: “ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ರೀತಿಯಲ್ಲಿಯೇ ಕಾಂಗ್ರೆಸ್‌ನ ನಾಯಕರು ಸಹ ನನಗೆ ಸಹಕಾರ ನೀಡಿದ್ದಾರೆ,” ಎಂದು ತುಮಕೂರು ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದ ಹೊರ ವಲಯದ ಹೆಗ್ಗೆರೆಯಲ್ಲಿ ಶನಿವಾರ ರೈಲ್ವೆ ಮೇಲುಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣಾ ಉಸ್ತುವಾರಿಯಾಗಿದ್ದ ಸಚಿವ ಜಿ. ಪರಮೇಶ್ವರ ಅವರೂ ಭಾಗಿಯಾಗಿದ್ದರು.

ಪರಮೇಶ್ವರ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದು ಸೋಮಣ್ಣ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಇದು, ಚುನಾವಣೆಗೆ ಸ್ಪರ್ಧಿಸಿದ್ದ ಎಸ್. ಪಿ. ಮುದ್ದಹನುಮೇಗೌಡ ಅವರ ಸೋಲಿಗೆ ಕಾಂಗ್ರೆಸ್‌ನೊಳಗಿನ ನಾಯಕರೇ ಕಾರಣರಾಗಿದ್ದಾರೆಯೇ ಎಂಬ ವಿಚಾರಕ್ಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಸೋಮಣ್ಣ ಅವರು ಡಾ. ಜಿ. ಪರಮೇಶ್ವರ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹಾರೈಸುತ್ತಲೇ, “ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರು ಕಾರಣರಾಗಿದ್ದಾರೆ” ಎಂದರು. ಕೂಡಲೇ ಪಕ್ಕದಲ್ಲಿದ್ದ ಶಾಸಕ ಬಿ. ಸುರೇಶ್‌ಗೌಡ ಅವರು, “ಡಿ. ಕೆ. ಶಿವಕುಮಾರ್ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, “ಆಮೇಲೆ ಮಾತನಾಡೋಣ, ಅದೆಲ್ಲ ಸೆಕೆಂಡರಿ. ಅವರ ನಡವಳಿಕೆಯೂ ಬೇಕಲ್ಲ” ಎಂದು ಹೇಳುವ ಮೂಲಕ ವಿಷಯಾಂತರ ಮಾಡಿದರು.

You cannot copy content of this page

Exit mobile version