ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ರೈಲು ಅಪಘಾತ ಪ್ರಕರಣದ ತನಿಖೆ ತೀವ್ರಗೊಂಡಿದೆ. ಘಟನೆಗೆ ಕಾರಣರಾದ ಟೂರ್ ಆಪರೇಟರ್ ವಿರುದ್ಧ ಜಿಪಿಎಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಯಮಗಳಿಗೆ ವಿರುದ್ಧವಾಗಿ ರೈಲಿನಲ್ಲಿ ಅಡುಗೆ ಅನಿಲ ಸಿಲಿಂಡರ್ಗಳನ್ನು ಸಾಗಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದ್ದು, ಅವರ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಈ ಭೀಕರ ರೈಲು ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇತರ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಸಂದರ್ಭ ಮಧುರೈಯಲ್ಲಿ ಈ ದುರ್ಘಟನೆ ನಡೆದಿದೆ. ಟೂರ್ ಆಪರೇಟರ್ ಈ ಬೋಗಿಯನ್ನು ತೀರ್ಥಯಾತ್ರೆಗಳಿಗಾಗಿ ಬಾಡಿಗೆಗೆ ಪಡೆದಿದ್ದಾರೆ. ಪ್ರಯಾಣದ ವೇಳೆ ಕೋಚ್ನಲ್ಲಿ ಟೀ ಮಾಡಲು ಸಿಲಿಂಡರ್ ಹೊತ್ತಿಸಿದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಅಪಘಾತದಲ್ಲಿ ರೈಲಿನ ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯ ವೇಳೆ ರೈಲಿನಲ್ಲಿ 63 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ತಕ್ಷಣ ಮಾಹಿತಿ ಪಡೆದ ರೈಲ್ವೇ ಭದ್ರತಾ ಪಡೆಗಳು, ರೈಲ್ವೇ ಜನರಲ್ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದರು.
ಘಟನೆ ಕುರಿತು ಜಿಪಿಎಫ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಟೂರ್ ಆಪರೇಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಮತ್ತು ರೈಲ್ವೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮಧುರೈ ರೈಲು ನಿಲ್ದಾಣದ ಬಳಿಯ ಲೂಪ್ ಲೈನ್ನಲ್ಲಿ ಇರಿಸಲಾಗಿದ್ದ ಈ ಬೋಗಿಯನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸಿದ್ದಾರೆ. ಸ್ಫೋಟದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ.