Home ದೇಶ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಕ್ರಮ ಧಾಬಾ, ರೆಸ್ಟೋರೆಂಟ್‌ಗಳಿಗೆ ಬಿಗ್ ಶಾಕ್: ತೆರವಿಗೆ 60 ದಿನಗಳ ಗಡುವು...

ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಕ್ರಮ ಧಾಬಾ, ರೆಸ್ಟೋರೆಂಟ್‌ಗಳಿಗೆ ಬಿಗ್ ಶಾಕ್: ತೆರವಿಗೆ 60 ದಿನಗಳ ಗಡುವು ನೀಡಿದ ಮಹಾರಾಷ್ಟ್ರ ಸರ್ಕಾರ

0

ಮಹಾರಾಷ್ಟ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳ ಇರುವುಗಳಲ್ಲಿ (Right of Way – ROW) ನಿರ್ಮಿಸಲಾಗಿರುವ ಅಕ್ರಮ ಧಾಬಾಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ವಾಣಿಜ್ಯ ನಿರ್ಮಾಣಗಳ ವಿರುದ್ಧ ಬೃಹತ್ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಹೆದ್ದಾರಿಗೆ ಸಂಬಂಧಿಸಿದ ಹಾಗೂ ಸರ್ಕಾರಿ ಕಾಯ್ದಿರಿಸಿದ ಜಾಗದಲ್ಲಿ ನಿರ್ಮಿಸಲಾಗಿರುವ ಎಲ್ಲಾ ಹೊಸ ಮತ್ತು ಹಳೆಯ ಪರವಾನಗಿ ರಹಿತ ಕಟ್ಟಡಗಳನ್ನು 60 ದಿನಗಳ ಒಳಗಾಗಿ ತೆರವುಗೊಳಿಸುವಂತೆ ನಗರ ಸಂಸ್ಥೆಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಜೊತೆಗೆ ಈ ವ್ಯಾಪ್ತಿಯಲ್ಲಿ ಹೊಸದಾಗಿ ಧಾಬಾ ಅಥವಾ ಅಂಗಡಿಗಳನ್ನು ತೆರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶಗಳನ್ನು ಅನುಷ್ಠಾನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸತತವಾಗಿ ನಡೆಯುತ್ತಿರುವ ಭೀಕರ ಅಪಘಾತಗಳು ಹಾಗೂ ರಸ್ತೆ ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಈ ಕುರಿತು ಸ್ವಯಂಪ್ರೇರಿತವಾಗಿ ಆಸಕ್ತಿ ವಹಿಸಿತ್ತು.

ಪ್ರಕರಣದ ಹಿನ್ನೆಲೆಯೇನು?

ರಾಜಸ್ಥಾನದ ಫಲೋದಿ ಮತ್ತು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಗಳಲ್ಲಿ ನವೆಂಬರ್ 2025 ರಲ್ಲಿ ನಡೆದ ಸರಣಿ ರಸ್ತೆ ಅಪಘಾತಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ನವೆಂಬರ್ 2 ಮತ್ತು 3 ರಂದು ನಡೆದಿದ್ದ ಈ ಅಪಘಾತಗಳಲ್ಲಿ ಒಟ್ಟು 34 ಜನರು ಸಾviದ್ದರು. ಈ ಘಟನೆಗಳನ್ನು ಕೇವಲ ಆಕಸ್ಮಿಕ ಅಪಘಾತಗಳೆಂದು ಪರಿಗಣಿಸದ ನ್ಯಾಯಾಲಯ, ಮೂಲಸೌಕರ್ಯಗಳ ಗಂಭೀರ ಲೋಪ ಹಾಗೂ ಆಡಳಿತಾತ್ಮಕ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಿಡಿಕಾರಿತ್ತು.

ಜನರ ಸುರಕ್ಷಿತ ಪ್ರಯಾಣದ ಹಕ್ಕನ್ನು ಇಂತಹ ನಿರ್ಲಕ್ಷ್ಯಗಳು ಕಸಿದುಕೊಳ್ಳುತ್ತಿವೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೆ ಅಪಘಾತಗಳ ನಂತರದ ಅಕ್ರಮ ಆಕ್ರಮಣಗಳ ತೆರವು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿತ್ತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಪ್ರೀಂ ಕೋರ್ಟ್ ಕಟ್ಟುನಿಟ್ಟು ಏಕೆ?

ಸುಪ್ರೀಂ ಕೋರ್ಟ್ ನೀಡಿರುವ ಮಾಹಿತಿ ಪ್ರಕಾರ, ದೇಶದ ಒಟ್ಟು ರಸ್ತೆ ಜಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪಾಲು ಕೇವಲ ಶೇ. 2 ರಷ್ಟಿದೆ. ಆದರೆ, ರಸ್ತೆ ಅಪಘಾತಗಳಿಂದ ಸಂಭವಿಸುವ ಒಟ್ಟು ಸಾವುಗಳಲ್ಲಿ ಹೆದ್ದಾರಿಗಳ ಕೊಡುಗೆಯೇ ಸುಮಾರು ಶೇ. 30 ರಷ್ಟಿದೆ!

ಆಡಳಿತಾತ್ಮಕ ನಿರ್ಲಕ್ಷ್ಯ ಅಥವಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳು ‘ಅಪಾಯಕಾರಿ ವಲಯಗಳಾಗಿ’ ಬದಲಾಗಲು ಬಿಡಬಾರದು ಎಂದು ಎಚ್ಚರಿಸಿರುವ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಸ್ತೆ ಸಾರಿಗೆ ಇಲಾಖೆಗಳಿಗೆ ಹಲವು ಮಹತ್ವದ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.

ಧಾಬಾ ಮತ್ತು ಅಂಗಡಿಗಳ ಕುರಿತು ನೀಡಲಾದ ಆದೇಶಗಳೇನು?

  • ರಾಷ್ಟ್ರೀಯ ಹೆದ್ದಾರಿಯ ಆಸ್ತಿ ವ್ಯಾಪ್ತಿಯಲ್ಲಿ (ROW) ನಿರ್ಮಿಸಲಾದ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು 60 ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿದೆ.
  • ಹೆದ್ದಾರಿಯ ಸುರಕ್ಷತಾ ವಲಯದಲ್ಲಿ ಯಾವುದೇ ಹೊಸ ಧಾಬಾ, ರೆಸ್ಟೋರೆಂಟ್ ಅಥವಾ ತಿಂಡಿ ಅಂಗಡಿಗಳನ್ನು ನಿರ್ಮಿಸುವಂತಿಲ್ಲ.
  • ಸಂಬಂಧಿತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ರೀತಿಯ ವ್ಯಾಪಾರ ಪರವಾನಗಿ ಅಥವಾ ಎನ್‌ಒಸಿ (NOC) ನೀಡುವುದಾಗಲಿ, ನವೀಕರಿಸುವುದಾಗಲಿ ಮಾಡಬಾರದು. ಈಗಾಗಲೇ ನೀಡಲಾದ ಪರವಾನಗಿಗಳನ್ನೂ ಮರುಪರಿಶೀಲಿಸಬೇಕು.

ಭಾರಿ ವಾಹನಗಳ ಅಸಂಘಟಿತ ಪಾರ್ಕಿಂಗ್‌ಗೆ ತಡೆ

ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಭಾರಿ ಹಾಗೂ ವಾಣಿಜ್ಯ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆ ಅಥವಾ ಪಕ್ಕದ ರಸ್ತೆಗಳಲ್ಲಿ (Paved shoulders) ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಇಂತಹ ವಾಹನಗಳನ್ನು ಕೇವಲ ನಿಗದಿಪಡಿಸಿದ ಪಾರ್ಕಿಂಗ್ ತಾಣಗಳಲ್ಲಿ ಮಾತ್ರ ನಿಲ್ಲಿಸಲು ಅನುಮತಿ ಇರಲಿದೆ.

ಈ ನಿಯಮಗಳನ್ನು ಜಾರಿಗೊಳಿಸಲು ‘ಅಡ್ವಾನ್ಸ್ಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (ATMS) ಬಳಸಲು ಸೂಚಿಸಲಾಗಿದೆ. ಇದರಲ್ಲಿ ಸಿಸಿಟಿವಿ ಕೆಮೆರಾಗಳು, ಸ್ಪೀಡ್ ಡಿಟೆಕ್ಟರ್‌ಗಳು, ಎಮರ್ಜೆನ್ಸಿ ಕಾಲ್ ಬಾಕ್ಸ್‌ಗಳು, ಜಿಪಿಎಸ್ ಆಧಾರಿತ ಫೋಟೋ ಸಾಕ್ಷ್ಯಗಳು ಮತ್ತು ಇ-ಚಲನ್ ತಂತ್ರಜ್ಞಾನಗಳು ಸೇರಿವೆ.

ಅಕ್ರಮ ಆಕ್ರಮಣಗಳ ಮೇಲ್ವಿಚಾರಣೆ ಹೇಗೆ?

ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮತ್ತು ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರಗಳು ನಿಯಮಿತ ತಪಾಸಣೆ ನಡೆಸಬೇಕು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸಾರ್ವಜನಿಕರ ದೂರುಗಳಿಗಾಗಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಬೇಕು ಮತ್ತು ವರ್ಷಕ್ಕೆ ಎರಡು ಬಾರಿ ಡ್ರೋನ್ ಸರ್ವೆ ನಡೆಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಇದರ ಜೊತೆಗೆ ಪ್ರತಿಯೊಂದು ಜಿಲ್ಲೆಯಲ್ಲೂ ‘ಹೈವೇ ಸೇಫ್ಟಿ ಟಾಸ್ಕ್ ಫೋರ್ಸ್’ ರಚಿಸಲು ಮತ್ತು ಹೆದ್ದಾರಿಗಳಲ್ಲಿ 24 ಗಂಟೆಯೂ ಗಸ್ತು ತಿರುಗುವಿಕೆಯನ್ನು ಖಚಿತಪಡಿಸಲು ಸೂಚಿಸಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣವೇ ತುರ್ತು ನೆರವು

ಅಪಘಾತದ ನಂತರ ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು, ಹೆದ್ದಾರಿಯ ಪ್ರತಿ 75 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ (BLS) ಆಂಬುಲೆನ್ಸ್ ಹಾಗೂ ರಿಕವರಿ ಕ್ರೇನ್‌ಗಳನ್ನು ನಿಯೋಜಿಸಬೇಕು. ಇದರಿಂದ ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ನೆರವು ಸಿಗಲಿದೆ.

ಇದಲ್ಲದೆ, ಹೆಚ್ಚು ಅಪಘಾತಗಳು ಸಂಭವಿಸುವ ‘ಬ್ಲ್ಯಾಕ್ ಸ್ಪಾಟ್‌ಗಳನ್ನು’ ಗುರುತಿಸಿ ಸಾರ್ವಜನಿಕರಿಗೆ ತಿಳಿಸಬೇಕು. ಇಂತಹ ಕಡೆಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸ್ಪೀಡ್ ಕೆಮೆರಾಗಳು ಹಾಗೂ ಎಚ್ಚರಿಕೆಯ ಫ್ಲೈಯಿಂಗ್ ಬೋರ್ಡ್‌ಗಳನ್ನು ಅಳವಡಿಸಬೇಕು.

ರಾಜ್ಯಗಳು ಅನುಷ್ಠಾನ ವರದಿ ಸಲ್ಲಿಸುವುದು ಕಡ್ಡಾಯ

ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಜುಲೈ 13 ರಂದು ನಡೆದ ವಿಚಾರಣೆಯ ವೇಳೆ ಬಿಹಾರ, ಕರ್ನಾಟಕ ಮತ್ತು ಪುದುಚೇರಿ ಮಾತ್ರ ಅನುಷ್ಠಾನ ಪ್ರಮಾಣಪತ್ರ ಸಲ್ಲಿಸಿದ್ದವು.

ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡು ವಾರಗಳ ಒಳಗಾಗಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ತಪ್ಪಿದಲ್ಲಿ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೋಲಿಸ್ ಮಹಾನಿರ್ದೇಶಕರು (DGP) ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 17 ರಂದು ನಡೆಯಲಿದೆ. ಮಹಾರಾಷ್ಟ್ರ ಸರ್ಕಾರ 60 ದಿನಗಳಲ್ಲಿ ಕೈಗೊಳ್ಳಲಿರುವ ಈ ಕ್ರಮವು ಸುಪ್ರೀಂ ಕೋರ್ಟ್‌ನ ಸಮಗ್ರ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿದೆ.

You cannot copy content of this page

Exit mobile version