ದೇವಮಾನವ ಅಶೋಕ್ ಖರತ್ ಜೊತೆ ನಂಟು: ಮಹಾರಾಷ್ಟ್ರ ಉಪ ಜಿಲ್ಲಾಧಿಕಾರಿ ಅಭಿಜಿತ್ ಭಾಂಡೆ-ಪಾಟೀಲ್ ಅಮಾನತು

ಮುಂಬೈ: ಸ್ವಯಂಘೋಷಿತ ದೇವಮಾನವ ಅಶೋಕ್ ಖರತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಗುರುವಾರ ಮೊದಲ ಬಾರಿಗೆ ಕಠಿಣ ಕ್ರಮ ಕೈಗೊಂಡಿದ್ದು, ಉಪ ಜಿಲ್ಲಾಧಿಕಾರಿ ಅಭಿಜಿತ್ ಭಾಂಡೆ-ಪಾಟೀಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಅಶೋಕ್ ಖರತ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿದ ನಂತರ ಈ ವರ್ಷದ ಮಾರ್ಚ್‌ನಲ್ಲಿ ಆತನನ್ನು ಬಂಧಿಸಲಾಗಿತ್ತು. ತನಿಖೆಯ ವೇಳೆ ಖರತ್ ಹೆಸರಿನಲ್ಲಿ ಹಲವು ‘ಬೆನಾಮಿ’ ಬ್ಯಾಂಕ್ ಖಾತೆಗಳು ಮತ್ತು ಅನುಮಾನಾಸ್ಪದ ಭೂ ವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಅಕ್ರಮಗಳಲ್ಲಿ ಅಧಿಕಾರಿಗಳ ಕೈವಾಡ ಇರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಈಗ ಮೊದಲ ಅಮಾನತು ಪ್ರಕ್ರಿಯೆ ನಡೆದಿದೆ.

ರಾಜ್ಯ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ಈ ಕುರಿತು ಮಾತನಾಡಿ, “ಪ್ರಾಥಮಿಕ ತನಿಖೆಯಲ್ಲಿ ಭಾಂಡೆ-ಪಾಟೀಲ್ ಅವರು ಖರತ್ ಜೊತೆ ನಂಟು ಹೊಂದಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರಾಗಿ ಕಾಣುತ್ತಿರುವುದರಿಂದ, ತನಿಖೆ ಮುಗಿಯುವವರೆಗೆ ಅವರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಪ್ರಸ್ತುತ ಮುಂಬೈನ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದಲ್ಲಿ (SRA) ಉಪ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಂಡೆ-ಪಾಟೀಲ್ ಅವರನ್ನು ಕಳೆದ ಮಾರ್ಚ್‌ನಲ್ಲಿ ಅವರ ಮೂಲ ಇಲಾಖೆಗೆ ವರ್ಗಾಯಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥರನ್ನೂ ವಿಶೇಷ ತನಿಖಾ ತಂಡ (SIT) ಈಗಾಗಲೇ ವಿಚಾರಣೆ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು