ಪುಣೆ: ವಿಷಪೂರಿತ ಮದ್ಯ ಸೇವಿಸಿ 12 ಜನರ ಸಾವು

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ದುರಂತವೊಂದು ಸಂಭವಿಸಿದೆ. ಕಲಬೆರಕೆ ಮದ್ಯ ಸೇವಿಸಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಈ ಘಟನೆ ಪುಣೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಎರಡು ದಿನಗಳಲ್ಲಿ ಪುಣೆ ಮತ್ತು ಪಿಂಪ್ರಿ-ಚಿಂಚವಾಡಿನಲ್ಲಿ ಕಲಬೆರಕೆ ಮದ್ಯ ಸೇವಿಸಿದ ಕಾರಣದಿಂದಾಗಿ ಈ 12 ಜನರು ಮರಣ ಹೊಂದಿದ್ದಾರೆ.

ಪಿಂಪ್ರಿ-ಚಿಂಚವಾಡಿನ ಫುಗೇವಾಡಿ ಪ್ರದೇಶದಲ್ಲಿ ಏಳು ಜನ ಹಾಗೂ ಹಡಪ್ಸರ್ ಮೂಲದ ಐದು ಜನ ಮೃತಪಟ್ಟಿದ್ದಾರೆ. ಹಡಪ್ಸರ್‌ನಲ್ಲಿ ಮೃತರಾದವರನ್ನು ರಾಹುಲ್ ಶರದ್ ಕ್ಷೀರಸಾಗರ್, ವಿಜಯ್ ಭೂಕುರ್ಲಾಲ್ ಶರ್ಮಾ, ಅರುಣ್ ದಾದರ್ ಮತ್ತು ಅಶೋಕ್ ರಮೇಶ್ ಚವಾಣ್ ಎಂದು ಪೊಲೀಸರು ಗುರುತಿಸಿದ್ದಾರೆ. ಇನ್ನು ಫುಗೇವಾಡಿಯಲ್ಲಿ ಮೃತರಾದವರಲ್ಲಿ ರಾಜೇಶ್ ರಜಪೂತ್, ಪಾಂಡುರಂಗ್ ಫುಗೇ, ಆನಂದ್ ದೇಸಾಯಿ, ಅಕ್ಬರ್ ಪಠಾಣ್ ಮತ್ತು ಆನಂದ್ ನಿಕಲ್ಜೆ ಪ್ರಮುಖರಾಗಿದ್ದಾರೆ.

ಈ ಘಟನೆಯಲ್ಲಿ ಫುಗೇವಾಡಿಯ ಒಂದೇ ಕುಟುಂಬದ ಇಬ್ಬರು ಸಹೋದರರು ಮೃತಪಟ್ಟಿರುವುದು ತೀವ್ರ ವಿಷಾದನೀಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಸ್ಥಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈ ಘಟನೆಯ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪುಣೆ ಮತ್ತು ಪಿಂಪ್ರಿ-ಚಿಂಚವಾಡ್ ಪೊಲೀಸ್ ಕಮಿಷನರ್‌ಗಳಿಗೆ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಎಂಟು ಜನರನ್ನು ಬಂಧಿಸಿದ್ದಾರೆ.

ಕಲಬೆರಕೆ ಮದ್ಯ ಮಾರಾಟದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬಂಧನಗಳು ನಡೆಯುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು