
ಬಹುತೇಕರ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಹಿರಿಯ ಮುತ್ಸದ್ದಿ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಮುಡಿಗೇರಿದೆ. ಸುಮಾರು 9,000 ಮತಗಳಲ್ಲಿ 7,000 ಕ್ಕೂ ಮಿಕ್ಕಿ ಮತಗಳನ್ನು ಪಡೆದ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಸ್ಪರ್ಧಿ ಶಶಿ ತರೂರ್ ಗೆ ಕೇವಲ 1,000 ಮತಗಳನ್ನಷ್ಟೇ ಬಿಟ್ಟು ಕೊಟ್ಟಿದ್ದಾರೆ.
ಸುಮಾರು 24 ವರ್ಷಗಳ ನಂತರ, ಪಕ್ಷದ ಅಧಿಕಾರ ಗಾಂಧಿ ಕುಟುಂಬದ ಹೊರಗಿನ ಸದಸ್ಯನ ಕೈಗೆ ಹೋಗಿದೆ. ಇದು ಗಾಂಧಿ ಕುಟುಂಬವೇ ಬಿಟ್ಟು ಕೊಟ್ಟ ಹುದ್ದೆ ಎಂಬುದು ಸಧ್ಯಕ್ಕೆ ಎದ್ದಿರುವ ಅಪವಾದ. ಇದರ ಜೊತೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನೂ ಸಹ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಎಂದೇ ವಿರೋಧಿಗಳು ಅಣಕಿಸುತ್ತಿದ್ದಾರೆ. ಹಾಗಾದರೆ ಇಂತಹ ಅಪವಾದಗಳ ಜೊತೆಗೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರ ಮುಂದಿರುವ ಪ್ರಮುಖ ಸವಾಲುಗಳು ಏನು? ಮಲ್ಲಿಕಾರ್ಜುನ ಖರ್ಗೆಯವರ ವ್ಯಕ್ತಿತ್ವ ಮತ್ತು ಹಿರಿತನದ ಅನುಭವದ ಅಡಿಯಲ್ಲಿ ಅವರು ಆ ಸವಾಲುಗಳನ್ನು ನಿಭಾಯಿಸಬಲ್ಲರೆ?
‘ರಬ್ಬರ್ ಸ್ಟಾಂಪ್’ ಅಪವಾದದಿಂದ ಹೊರಬರುವರೇ?
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಇರುವ ದೊಡ್ಡ ಸವಾಲೆಂದರೆ ಅದು ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಸ್ವತ್ತು ಎಂಬ ಆಪಾದನೆಯಿಂದ ಹೊರ ತರುವುದು. ಕಾಂಗ್ರೆಸ್ ಪಕ್ಷ ಯಾವತ್ತೂ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ರಾಜಕೀಯ ಮಾಡುತ್ತದೆ ಎಂದು ಹೇಳಿಕೊಂಡರೂ ಕಾಂಗ್ರೆಸ್ ನ “ಹೈಕಮಾಂಡ್ ಸಂಸ್ಕೃತಿ” ಮಾತ್ರ ತೆರೆದಿಟ್ಟ ಗುಟ್ಟು. ಹಾಗಾಗಿ ಪಕ್ಷವನ್ನು ಸಾಮೂಹಿಕ ನಾಯಕತ್ವದ ಕೆಳಗೆ ತರಬೇಕಿರೋದು ಖರ್ಗೆಯವರ ಮುಂದಿರುವ ಬಹು ದೊಡ್ಡ ಸವಾಲು.
ಕಾಂಗ್ರೆಸ್ ನ ಆಂತರಿಕ ಮಟ್ಟದಲ್ಲೂ ಸಹ ಚುನಾವಣೆ ಘೋಷಣೆ ನಂತರ ಮಲ್ಲಿಕಾರ್ಜುನ ಖರ್ಗೆಯವರನ್ನು ಗಾಂಧಿ ಕುಟುಂಬದ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಸೈದ್ಧಾಂತಿಕವಾಗಿ ಗಟ್ಟಿ ಮತ್ತು ದಿಟ್ಟ ನಿಲುವು ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಈ ಅಪವಾದದಿಂದ ಹೇಗೆ ಹೊರಬರಬಹುದು ಎಂಬುದು ಕುತೂಹಲದ ಪ್ರಶ್ನೆ. ಜೊತೆಗೆ ಮೂಲದಿಂದಲೂ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಖರ್ಗೆ ಸಿದ್ಧಾಂತದ ಅಡಿಯಲ್ಲಷ್ಟೆ ತಮ್ಮ ನಾಯಕರನ್ನು ಗಟ್ಟಿಗೊಳಿಸುವ ಅನಿವಾರ್ಯತೆಯಿದೆ.
ಪಕ್ಷದ ಒಳಗಿನ RSS ಐಡಿಯಾಲಜಿ ಮುಖಂಡರ ಬಗ್ಗೆ
ಬಿಜೆಪಿ ಪಕ್ಷದಂತೆ ಕೇವಲ ಯಾವುದೇ ಒಂದು ಸಿದ್ಧಾಂತದ ಅಡಿಯಲ್ಲಿ ಎಂದೂ ಗುರುತಿಸಿಕೊಳ್ಳದ ಕಾಂಗ್ರೆಸ್ ಪಕ್ಷದ ಒಳಗೆ ಎಲ್ಲಾ ತರದ ಸಿದ್ಧಾಂತಿಗಳೂ ಇರುವುದು ಸ್ಪಷ್ಟ. ಆದರೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ, ಜಾತ್ಯಾತೀತತೆಗೆ ವಿರುದ್ಧವಿರುವ, ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧದ RSS ಸಿದ್ಧಾಂತದವರೂ ಇರುವುದು ಪಕ್ಷದ ಭವಿಷ್ಯದ ದೃಷ್ಟಿಯಲ್ಲಿ ಅತ್ಯಂತ ಅಪಾಯಕಾರಿ. ಇಂಥವರನ್ನು ಗುರುತಿಸುವುದು ಹೊಸ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಮುಂದಿರುವ ಮತ್ತೊಂದು ದೊಡ್ಡ ಸವಾಲು.
ಜೊತೆಗೆ ಅಷ್ಟೆ ಸಂಖ್ಯೆಯಲ್ಲಿ ಇರುವ ಮೃದು ಹಿಂದುತ್ವವಾದದ ಅಡಿಯಲ್ಲಿ ಬರುವ, ಸೈದ್ಧಾಂತಿಕ ಸ್ಪಷ್ಟತೆ ಇರುವ ಹಿಂದುತ್ವ ಸಿದ್ಧಾಂತದ ಕಡು ವಿರೋಧಿಗಳೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಜೊತೆಗೆ ಜಾತ್ಯತೀತ, ಧರ್ಮಾತೀತ ನಿಲುವನ್ನು ಹೊಂದಿದೆ ಎಂದು ಹೇಳುವ ಕಾಂಗ್ರೆಸ್ ಪಕ್ಷ ಇತರೆ ಧರ್ಮದ ನಾಯಕರಿಗೆ ಕೊಡಬಹುದಾದ ಪ್ರಾಮುಖ್ಯತೆ ಕೂಡ ಅಷ್ಟೆ ಮುಖ್ಯವಾಗಿದೆ. ಎಲ್ಲಾ ರೀತಿಯ ಸಿದ್ಧಾಂತ, ಜಾತಿ ಧರ್ಮದ ಕೆಳಗೆ ಗುರುತಿಸಿಕೊಳ್ಳುವ ನಾಯಕರೆಲ್ಲರನ್ನೂ ಒಗ್ಗೂಡಿಸಿ ಮುಂದೆ ಹೋಗಬೇಕಿರೋದು ಮಲ್ಲಿಕಾರ್ಜುನ ಖರ್ಗೆ ಅವರ ಎದುರಿಗಿರುವ ಇನ್ನೊಂದು ಸವಾಲು.
ಸಂಘಟನೆ, ಸಂಘಟನೆ ಮತ್ತು ಸಂಘಟನೆ
ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಮೇಲಿನ ಕೆಲವು ಸವಾಲುಗಳಿಂದ ಮುಕ್ತವಾಗುವಷ್ಟೇ ಪ್ರಾಮುಖ್ಯತೆ ಕೊಡಬೇಕಾದ್ದು ಪಕ್ಷದ ಸಂಘಟನೆ ಕಡೆಗೆ. ರಾಹುಲ್ ಗಾಂಧಿಯ ನಂತರ ತೆರವಾದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಗಾಧಿ ಇದಾಗಿದ್ದು, ಪಕ್ಷ ಕೆಲವು ರಾಜ್ಯಗಳಲ್ಲಂತೂ ಮುಖಂಡರೇ ಇಲ್ಲದಷ್ಟು ಸೊರಗಿ ಹೋಗಿದೆ. ಉತ್ತರ ಪ್ರದೇಶ, ಬಿಹಾರದಂತಹ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಬೇರು ಮಟ್ಟದಿಂದಲೇ ಕೆಲಸ ಮಾಡಬೇಕಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಸಂಘಟನೆ ಹಿನ್ನೆಲೆಯಲ್ಲಿ ಒಂದಷ್ಟು ಕೆಲಸ ಆಗಬಹುದು ಎಂದು ನಿರೀಕ್ಷಿಸಿದರೂ ಮುಖಂಡರು, ಕಾರ್ಯಕರ್ತರು ಒಗ್ಗೂಡದ ಹೊರತು, ಪಂಚಾಯಿತಿ ಬೂತ್ ಮಟ್ಟದ ಕೆಲಸ ಆಗದ ಹೊರತು ಪಕ್ಷ ಮೇಲೆತ್ತಲು ಕಷ್ಟಸಾಧ್ಯ.
ಸಧ್ಯ ಮಲ್ಲಿಕಾರ್ಜುನ ಖರ್ಗೆಯವರ ದಲಿತ್ ಐಡೆಂಟಿಟಿ ಒಂದು ಹಂತಕ್ಕಷ್ಟೆ ಕೆಲಸ ಮಾಡಬಹುದು. ಆದರೆ ಬಿಜೆಪಿ ಮತ್ತು ಇತರೆ ಪ್ರಾದೇಶಿಕ ಪಕ್ಷಗಳ ಎದುರು ಕಾಂಗ್ರೆಸ್ ಈ ಸಂದರ್ಭದಲ್ಲಿ ಅತಿ ಹೆಚ್ಚು ಕೆಲಸ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಸಂದರ್ಭ ‘ಮಾಡು ಇಲ್ಲವೆ ಮಡಿ’ ಪರಿಸ್ಥಿತಿ ಆಗಿದ್ದು, ಲೋಕಸಭಾ ಚುನಾವಣೆಗೆ ಈ ಕಾಲಾವಧಿಯಲ್ಲಿ ಉಸಿರು ಕಟ್ಟಿ ಕೆಲಸ ಮಾಡುವ ಸಂದರ್ಭವಾಗಿದೆ. ಅಕಸ್ಮಾತ್ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿ ಇರುವ ರಾಜ್ಯಗಳಲ್ಲಿ ಕೊಂಚ ಮಟ್ಟಿಗೆ ಪಕ್ಷ ಚೇತರಿಸಿಕೊಂಡರೂ ಖರ್ಗೆ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ನಾಯಕರಾಗಿ, ಗಾಂಧಿ ಕುಟುಂಬದ ಸರಿಸಮನಾದ ನಾಯಕನಾಗಿ ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಜೆಪಿ ಆಡಳಿತ ಲೋಪಗಳ ಕಾರಣಕ್ಕೆ ಬಿಜೆಪಿ ಸೋತರೆ ಅದು ಕಾಂಗ್ರೆಸ್ ಗೆಲುವಲ್ಲ
ಈಗಾಗಲೇ ಬಿಜೆಪಿ ಎಲ್ಲಾ ಹಂತದಲ್ಲೂ ಅಧಿಕಾರ ನಿರ್ವಹಣೆ ವಿಚಾರದಲ್ಲಿ ತಾನು ಅಸಮರ್ಥ ಎಂದೇ ತೋರಿಸಿಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟುತ್ತಿದೆ. ಸಾಮಾನ್ಯ ಜನ ಬದುಕಲು ಹೆಣಗಾಡುತ್ತಿದೆ. ಸಣ್ಣಪುಟ್ಟ ಉದ್ದಿಮೆಗಳು ಹೇಳ ಹೆಸರಿಲ್ಲದಂತೆ ಹೋಗಿವೆ. ನಿರುದ್ಯೋಗ ತಾಂಡವವಾಡುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಭಾರತದ ಆರ್ಥಿಕತೆ ಮೂವತ್ತು ನಲವತ್ತು ವರ್ಷಗಳಷ್ಟು ಹಿಂದೆ ಹೋಗಿದೆ ಎಂದೇ ಆರ್ಥಿಕ ತಜ್ಞರು ಅಂದಾಜಿಸುತ್ತಿದ್ದಾರೆ. ಈ ಹಂತದಲ್ಲಿ ಬಿಜೆಪಿ ಪಕ್ಷದ ಅಧಿಕಾರ ನಿರ್ವಹಣೆ ಬಗ್ಗೆ ಸ್ವತಃ ಬಿಜೆಪಿ ಮಂದಿಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಜನತೆ ಪರ್ಯಾಯ ಪಕ್ಷಕ್ಕೆ ಹೊರಳುವುದೂ ಸಹಜ. ಹಾಗಾಗಿ ಬಿಜೆಪಿ ಪಕ್ಷದ ಲೋಪಗಳ ಅಡಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡರೆ ಅದು ಕಾಂಗ್ರೆಸ್ ನ ನಿಜವಾದ ಗೆಲುವಲ್ಲ ಎಂದೇ ಅಂದಾಜಿಸಬಹುದು. ಯಾಕೆಂದರೆ ಬಿಜೆಪಿ ಈಗಾಗಲೇ ಸಂಘಟನೆ ದೃಷ್ಟಿಯಿಂದ ತುಂಬಾ ಬಲಿಷ್ಠವಾಗಿದೆ. ಹಾಗಾಗಿ ಅದು ಪಕ್ಷದ ತಾತ್ಕಾಲಿಕ ಗೆಲುವಾಗಬಹುದು. ಸಧ್ಯ ‘ಭಾರತ ಐಕ್ಯತಾ ಯಾತ್ರೆ’ ಸಂಘಟನೆ ಹಿನ್ನೆಲೆಯಲ್ಲಿ ಒಂದಷ್ಟು ಪರಿಣಾಮಕಾರಿ ಕೆಲಸ ಮಾಡಬಹುದು ಎಂದು ಅಂದಾಜಿಸಬಹುದು. ಆದರೆ ಅದನ್ನು ರಾಜ್ಯ ನಾಯಕರು ಹೇಗೆ ನಿಭಾಯಿಸಬಲ್ಲರು ಮತ್ತು ಹೊಸ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಎಷ್ಟರ ಮಟ್ಟಿಗೆ ರಾಜ್ಯ ಮುಖಂಡರಿಗೆ ನೆರವಾಗಬಲ್ಲರು ಎಂಬುದು ಕುತೂಹಲದ ವಿಷಯ.
2024 ರ ಲೋಕಸಭಾ ಚುನಾವಣೆ ಮತ್ತು ಅದರ ಒಳಗೆ ಬರುವ ವಿಧಾನಸಭಾ ಚುನಾವಣೆಗಳು
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮುಂದಿರುವ ಅತಿ ದೊಡ್ಡ ಸವಾಲೆಂದರೆ 2024 ರ ಲೋಕಸಭಾ ಚುನಾವಣೆ ಮತ್ತು ಅದರ ನಡುವೆ ಬರುವ ಗುಜರಾತ್, ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳು. ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಬಹುದಾದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಖರ್ಗೆಯವರ ನಾಯಕತ್ವಕ್ಕೆ ತುರ್ತು ಸವಾಲೊಡ್ಡಬಹಹುದಾದ ಚುನಾವಣೆಗಳು. ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಅಥವಾ ಅಲ್ಪ ಬಹುಮತ ಬಂದರೂ ಖರ್ಗೆಯವರು ಒಂದು ಹಂತಕ್ಕೆ ಗೆಲುವು ಕಂಡಂತೆ. ಇನ್ನು ಮುಂದಿರುವುದು ತೆಲಂಗಾಣ. ಕೆಲವೇ ದಿನಗಳ ಹಿಂದೆ ರಾಷ್ಟ್ರೀಯ ಪಕ್ಷವಾಗಿ ವಿಲೀನಗೊಂಡ ‘ತೆಲಂಗಾಣ ರಾಷ್ಟ್ರ ಸಮಿತಿ’ ತೆಲಂಗಾಣದ ಅತಿ ದೊಡ್ಡ ಪಕ್ಷ. ಅದನ್ನು ಅಧಿಕಾರದಿಂದ ದೂರವಿಡಲು ಸಧ್ಯದ ಮಟ್ಟಿಗೆ ಅಸಾಧ್ಯ. ಆದರೆ ಸಂಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಥಳೀಯವಾಗಿ ತೆಲಂಗಾಣದಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ.
ಇನ್ನು 2023 ರಲ್ಲಿ ಎದುರಾಗುವ ಕರ್ನಾಟಕ ವಿಧಾನಸಭಾ ಚುನಾವಣೆ ಖರ್ಗೆಯವರ ಬಲಪ್ರದರ್ಶನಕ್ಕೆ ಸಿಕ್ಕಿರುವ ಒಂದು ದೊಡ್ಡ ಅವಕಾಶ. ಸ್ವತಃ ಕರ್ನಾಟಕದ ಹಿನ್ನೆಲೆಯ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಕರ್ನಾಟಕ ಕಾಂಗ್ರೆಸ್ ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ರೀತಿಯಲ್ಲೂ ಸಜ್ಜುಗೊಂಡಿದೆ ಎಂದೇ ಹೇಳಬಹುದು. ಆದರೆ ಸ್ಥಳೀಯ ಮುಖಂಡರ ಮಸುಕಿನ ಗುದ್ದಾಟವನ್ನು ಖರ್ಗೆ ಹೇಗೆ ನಿಭಾಯಿಸಬಲ್ಲರು ಎಂಬುದು ಕೂಡಾ ಸಧ್ರದ ಕುತೂಹಲ.