Thursday, June 19, 2025

ಸತ್ಯ | ನ್ಯಾಯ |ಧರ್ಮ

ಉಡುಪಿಗೆ ಬರುವ ಧೈರ್ಯ ಮಾಡಿದಂತೆ ಮಣಿಪುರಕ್ಕೂ ಹೋಗುವ ಧೈರ್ಯ ಮಾಡಿ: ಕಾಂಗ್ರೆಸ್

ಉಡುಪಿ ವಿಡಿಯೋ ಪ್ರಕರಣವನ್ನು ಮೊದಲಿಗೆ ನಿರ್ಲಕ್ಷ್ಯ ಮಾಡಿದ್ದ ಬಿಜೆಪಿ ನಂತರ ಅದು ರಾಷ್ಟ್ರ ಮಟ್ಟದಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿಯಾದ ನಂತರ ಎದ್ದು ಕುಳಿತು ಆ ಕುರಿತು ಪ್ರತಿಭಟನೆಗಳನ್ನು ಮಾಡತೊಡಗಿತು.

ಮೊದಲಿಗೆ ತಣ್ಣಗಿದ್ದ ಈ ವಿಚಾರ ನಂತರ ಕನ್ನಡ ಮಾಧ್ಯಮಗಳಲ್ಲೂ ಸದ್ದು ಮಾಡತೊಡಗಿತು. ಶೆಫಾಲಿ ವೈದ್ಯ, ರಶ್ಮಿ ಸಾಮಂತ್‌ ಅವರಂತಹ ಬಲಪಂಥೀಯ ಮಹಿಳೆಯರು ಇದನ್ನು ಮುನ್ನೆಲೆಗೆ ತರುತ್ತಿದ್ದಂತೆ ರಾಷ್ಟ್ರ ಮಟ್ಟದಲ್ಲಿ ಎಚ್ಚೆತ್ತುಕೊಂಡ ಬಿಜೆಪಿ ಇದರ ತನಿಖೆಗೆ ಮಹಿಳಾ ಆಯೋಗವನ್ನೂ ಕಳಿಸಿತ್ತು. ಆದರೆ ನಿನ್ನೆ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಬ್ರೇಕಿಂಗ್‌ ನ್ಯೂಸಿಗೆ ಕಾದಿದ್ದ ಮಾಧ್ಯಮಗಳಿಗೆ ಬುದ್ಧಿ ಹೇಳುವುದರೊಂದಿಗೆ ಅದೂ ಅಷ್ಟೇನೂ ಫಲಪ್ರದವಾದಂತಿಲ್ಲ.

ಈ ನಡುವೆ ಬಿಜೆಪಿಯ ಈ ರಾಜಕಾರಣವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದ್ದು, ಅದು ಬಿಜೆಪಿ ಉಡುಪಿಗೆ ಬರುವ ಧೈರ್ಯ ಮಾಡಿದಂತೆ ಮಣಿಪುರಕ್ಕೂ ಹೋಗುವ ಧೈರ್ಯ ಮಾಡಿ ಎಂದು ಕುಟುಕಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್‌, “ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕಾಂಗ್ರೆಸ್ ಆಡಳಿತದ ಕರ್ನಾಟಕಕ್ಕೆ ಬಂದು ನಿರ್ಭೀತಿಯಿಂದ ಉಡುಪಿ ಕಾಲೇಜು ಪ್ರಕರಣವನ್ನು ಪರಿಶೀಲಿಸಿದ್ದಾರೆ, ಆದರೆ ಮಹಿಳೆಯರನ್ನು ಬೆತ್ತಲೆಗೊಳಿಸಿದ, ನೂರಾರು ಅತ್ಯಾಚಾರಗಳು ನಡೆದಿರುವ ಬಿಜೆಪಿ ಆಡಳಿತದ ಮಣಿಪುರಕ್ಕೆ ಹೋಗುವುದಕ್ಕೆ ಧೈರ್ಯ ಇಲ್ಲವೇ ಅಥವಾ ಇಚ್ಛೆ ಇಲ್ಲವೇ? ರಾಷ್ಟ್ರೀಯ ಮಹಿಳಾ ಆಯೋಗವು ಮಣಿಪುರದ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿರುವುದೇಕೆ?” ಎಂದು ಕೇಳಿದೆ.

ಆದರೆ ಬಿಜೆಪಿಗೆ ಈಗಲೂ ಈ ಪ್ರಕರಣವನ್ನು ಬಿಡುವ ಮನಸ್ಸಿದ್ದಂತೆ ಕಾಣುತ್ತಿಲ್ಲ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಅದರ ಬೆಂಬಲಿಗರು ತನ್ನದೇ ಪಕ್ಷದ ಖುಷ್ಬೂ ಅವರ ವಿರುದ್ಧ ಕಿಡಿ ಕಾರತೊಡಗಿದ್ದಾರೆ.

ಈ ನಡುವೆ ಸುಳ್ಳು ಸುದ್ದಿ ಹರಡಿದ ರಶ್ಮಿ ಸಾಮಂತ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕುರಿತೂ ಆಕ್ರೋಶ ವ್ಯಕ್ತವಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page