Friday, June 20, 2025

ಸತ್ಯ | ನ್ಯಾಯ |ಧರ್ಮ

ಮಳವಳ್ಳಿ ಅತ್ಯಾಚಾರ ಪ್ರಕರಣ: ಮಕ್ಕಳ ಆಯೋಗಕ್ಕೆ ಎಎಪಿ ದೂರು, ಸಿಬಿಐ ತನಿಖೆಗೆ ಆಗ್ರಹ

ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೋರಿ ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಘಟಕವು ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿದೆ.

ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಸ್ವಾಮಿಯವರು ಮಾತನಾಡಿ “ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಅಕ್ಟೋಬರ್‌ 11, 2022ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಹಾಗೂ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಲೆ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್‌ ಒಳಗೆ ಎಸೆಯಲಾಗಿರುತ್ತದೆ. ಘಟನೆಗೆ ಸಂಬಂಧಿಸಿ ಕಾಂತರಾಜು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ದುಷ್ಕೃತ್ಯ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯು ಈ ಹಿಂದೆಯೂ ಇಂತಹ ದುಷ್ಕೃತ್ಯ ಎಸಗಿದ್ದರೂ ಆತನ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿರುವುದಿಲ್ಲ. ಪರಿಣಾಮವಾಗಿ. ಈಗ ಮಳವಳ್ಳಿಯ ಅಮಾಯಕ ಬಾಲಕಿ ಆತನಿಂದ ಬಲಿಯಾಗಿದ್ದಾಳೆ” ಎಂದು ಹೇಳಿದರು.

“ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸ್‌ ಇಲಾಖೆಯ ವೈಫಲ್ಯವು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಬಾಲಕಿಯ ಅತ್ಯಾಚಾರ ಹಾಗೂ ಕೊಲೆಗೆ ಕಾರಣರಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸುವುದು ಕಡಿಮೆಯಾಗುತ್ತದೆ” ಎಂದು ಕುಶಲಸ್ವಾಮಿ ಹೇಳಿದರು.

“ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದರಲ್ಲಿ ರಾಜ್ಯ ಗೃಹ ಇಲಾಖೆ ವಿಫಲವಾಗಿದೆ. ಇದರಿಂದಾಗಿ ಕಾಮುಕರಿಗೆ ಕಾನೂನಿನ ಭಯವೇ ಇಲ್ಲವಾಗಿದೆ. ಮಾಧ್ಯಮಗಳಲ್ಲಿ ದೊಡ್ಡದಾಗಿ ವರದಿಯಾಗುವ ಪ್ರಕರಣಗಳನ್ನಷ್ಟೇ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರವಾದಾಗ, ಸಂತ್ರಸ್ತೆಯು ಆ ವೇಳೆ ಅಲ್ಲಿಗೆ ಬಂದಿದ್ದೇ ತಪ್ಪೆಂಬಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತಾನಾಡಿದ್ದರು. ಗೃಹ ಸಚಿವರ ಇಂತಹ ಮನಸ್ಥಿತಿಯಿಂದಾಗಿ ಕಾಮುಕರಿಗೆ ಹೆದರಿಕೆ ಇಲ್ಲದಂತಾಗಿದೆ” ಎಂದು ಕುಶಲಸ್ವಾಮಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page