Friday, June 14, 2024

ಸತ್ಯ | ನ್ಯಾಯ |ಧರ್ಮ

ಮಂಗಳೂರಿಗೆ ಮೋದಿ ಆಗಮನ: ಕ್ಷಣಗಣನೆ

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದ ವಿವಿಧ ಯೋಜನೆಗಳು ಸೇರಿದಂತೆ 3,800 ಕೋಟಿ ರು. ಗಳ ನಾನಾ ಕಾಮಗಾರಿಗೆ ಶಿಲಾನ್ಯಾಸ ಮತ್ತು ಅನಘಾ ರಿಫೈನರಿ ಬರ್ತ್ ಸೇರಿದಂತೆ ನಾನಾ ಯೋಜನೆ ಲೋಕಾರ್ಪಣೆ ನೆರವೇರಿಸಲು ಪ್ರಧಾನಿ ಮೋದಿ ಸೆ. 2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿಗಳು 12.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ 1.15 ಕ್ಕೆ ನವಮಂಗಳೂರು ಬಂದರು ಪ್ರಾಧಿಕಾರ ತಲಪುವರು.

1.30 ಕ್ಕೆ ಸರಿಯಾಗಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಮಾವೇಶದ ಸ್ಥಳ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದವರೆಗೂ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆ ಎಸ್ ಆರ್ ಪಿ, ಎ ಎನ್ ಎಫ್, ಸಿ ಎ ಆರ್, ಗಡಿ ಭದ್ರತಾ ಪಡೆ, ಡಿ ಎ ಆರ್, ಆರ್ ಎ ಎಫ್, ಐ ಎಸ್ ಜಿ, ಗರುಡ ಪಡೆ ಸೇರಿದಂತೆ 3,000 ಮಂದಿಯಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಭರದ ಸಿದ್ಧತೆ

ಪ್ರಧಾನಿಯವರನ್ನು ಸ್ವಾಗತಿಸಲು ಮಂಗಳೂರು ಇನ್ನಿಲ್ಲದಂತೆ ಸಜ್ಜಾಗಿದೆ. ಗೋಲ್ಡ್ ಫಿಂಚ್ ಮೈದಾನದ ಸುಮಾರು 30 ಎಕರೆಗಳಷ್ಟು ಪ್ರದೇಶದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಒಂದೂವರೆ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು 2,000 ಬಸ್ ಗಳನ್ನು 200 ಟೆಂಪೊ ಟ್ರಾವೆಲ್ ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಜಿಲ್ಲಾಡಳಿತವು 70,000 ಕ್ಕೂ ಅಧಿಕ ಮಂದಿ ಫಲಾನುಭವಿಗಳನ್ನು ಗುರುತಿಸಿ ಕಾರ್ಯಕ್ರಮಕ್ಕೆ ಬರಲು ಆದೇಶಿಸಿದೆ. ಬಿಜೆಪಿ ಮುಖಂಡರು ಮನೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ. ಕೇಸರಿ ಮತ್ತು ಹಸಿರು ಬಂಟಿಂಗ್ಸ್ ಗಳನ್ನು ಪ್ರಮುಖ ರಸ್ತೆಗಳ ಡಿವೈಡರ್ಗಳಿಗೆ ಕಟ್ಟಲಾಗಿದೆ. ವೃತ್ತಗಳಲ್ಲಿ ಬಿಜೆಪಿ ಧ್ವಜಗಳು ಹಾರಾಡುತ್ತಿವೆ. ಸ್ವಾಗತ ಕೋರುವ ಫ್ಲೆಕ್ಸ್ ಗಳು ನಗರವಿಡೀ ತುಂಬಿವೆ.ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಪ್ರಧಾನಿಗಳು ಓಡಾಡುವ ಆದರೆ ಜನಸಾಮಾನ್ಯರ ಮುಖ್ಯ ಸಂಚಾರ ಮಾರ್ಗದಲ್ಲಿ ಓಡಾಟ ನಿರ್ಬಂಧಿಸಲಾಗಿದೆ. ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ 9 ಕುಟುಂಬಗಳನ್ನು ಭದ್ರತೆಯ ನೆಪವೊಡ್ಡಿ ಅವರ ಟೆಂಟ್ ಗಳನ್ನು ತೆಗೆಸಿ ಹಾಕಿ ಅ ಪ್ರದೇಶವನ್ನು ಸುಂದರಗೊಳಿಸಲಾಗಿದೆ.

ಹೊಂಡ ಗುಂಡಿಗಳ ರಸ್ತೆಗಳಿಗೆ ಡಾಮಾರು ತೇಪೆ

ಇತ್ತೀಚಿನವರೆಗೂ ಹೊಂಡ ಗುಂಡಿಗಳಿಂದ ತುಂಬಿ ಹಲವು ಅನಾಹುತಗಳಿಗೆ, ಅಧ್ವಾನಗಳಿಗೆ ಕಾರಣವಾಗಿದ್ದ ರಸ್ತೆಗಳಿಗೆ ತರಾತುರಿಯಲ್ಲಿ ಪ್ಯಾಚ್ ವರ್ಕ್ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳ ಹುಲ್ಲು ತೆಗೆದು ಸ್ವಚ್ಛಗೊಳಿಸಲಾಗಿದೆ.ಈ ತರಾತುರಿಯ ಕೆಲಸಗಳಿಗೆ ಮಂಗಳೂರಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ದಕ್ಷಿಣ ಕನ್ನಡದ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ಇದರ ಫಲವಾಗಿ ಪ್ರಧಾನಿಯವರನ್ನು ಕರೆಸಿ ಡ್ಯಾಮೇಜ್ ಕಂಟ್ರೋಲ್ ಗೆ ಯತ್ನಿಸುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಪ್ರಧಾನಿಗಳ ಮಂಗಳೂರು ಭೇಟಿಯ ಕುರಿತು ಮಂಗಳೂರಿನ ಇಬ್ಬರು ಸಾಮಾಜಿಕ ಹೋರಾಟಗಾರರನ್ನು ಪೀಪಲ್ ಮೀಡಿಯಾ ಮಾತಾಡಿಸಿದಾಗ ಸಾಮಾಜಿಕ ಹೋರಾಟಗಾರರಾದ ಜೆರಾರ್ಡ್ ಟವರ್ಸ್ ‘ಪ್ರಧಾನಿಗಳ ಮಂಗಳೂರು ಭೇಟಿಗಾಗಿ ಸಾರ್ವಜನಿಕರ ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದು ಸರಿಯಲ್ಲ’ ಎಂದು ಹೇಳಿದರು.

‘ನಮ್ಮ ದೇಶದ ಪ್ರಧಾನಿ, ಎಲ್ಲಿ ಬೇಕಾದರೂ ಹೋಗಲಿ, ಅದಕ್ಕೆ ನನ್ನ ಆಕ್ಷೇಪಣೆ ಇಲ್ಲ. ಆದರೆ, ಅವರ ಭೇಟಿಗೆ ಲಕ್ಷಾಂತರ ಸಾರ್ವಜನಿಕ ತೆರಿಗೆ ಹಣವನ್ನು ಖರ್ಚು ಮಾಡುವುದು, ರಸ್ತೆಗಳನ್ನು ಬಂದ್ ಮಾಡಿ, ಸಾರ್ವಜನಿಕರ ಬದುಕನ್ನು ಅಸ್ತವ್ಯಸ್ತಗೊಳಿಸುವುದು, ಕೊರೋನದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ಕಾರ್ಮಿಕರ ಹೊಟ್ಟೆಗೆ ಹೊಡೆಯುವುದು ರಸ್ತೆ ಬದಿಯಲ್ಲಿ ಮಲಗುವವರನ್ನು ಎಬ್ಬಿಸಿ, ಅವರ ಜೀವದ ಮೇಲೆ ಚೆಲ್ಲಾಟ ಆಡುವುದು ಸರಿ ಅಲ್ಲ. ಅದಕಿಂತ ಮಿಗಿಲಾಗಿ, ಒಂದು ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಬರುವ ಅವರನ್ನು, ಆ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ನಲ್ಲಿ ಕರೆತಂದು ಆ ಕಾರ್ಯಕ್ರಮ ಮುಗಿಸಿ ನಿರ್ಗಮಿಸಿದ್ದರೆ, ಯಾರಿಗೂ ಏನೂ ತೊಂದರೆ ಆಗುತ್ತಿರಲಿಲ್ಲ. ಈಗ ಚುನಾವಣೆ ಹೇಗೂ ಇಲ್ಲ.ಇದೆಲ್ಲ ಬೇಕಿತ್ತಾ? ಬಲತ್ಕಾರದಿಂದ ಜನರನ್ನು, ಸರ್ಕಾರಿ ನೌಕರರನ್ನು ಮತ್ತು ಬಡ ಅಂಗನವಾಡಿ ಕಾರ್ಯಕರ್ತೆರ್ಯರನ್ನು ಸುತ್ತೋಲೆ ಕಳಿಸಿ ಬೆದರಿಕೆಯಿಂದ ಸಭೆಯಲ್ಲಿ ಭಾಗವಹಿಸುವಂತೆ ಮಾಡುವುದು ತಪ್ಪು’.

ಜೆರಾರ್ಡ್ ಟವರ್ಸ್
ಸಾಮಾಜಿಕ ಹೋರಾಟಗಾರ ಮತ್ತು ಸಮಾಜ ಸೇವಕ

ಮತ್ತೋರ್ವ ಚಿಂತಕ ಎಂ ಜಿ. ಹೆಗ್ಗಡೆಯವರು ‘ಪ್ರಧಾನಿಗಳು ಜನರ ಸಮಸ್ಯೆಗಳ ಸುತ್ತವೇ ಮಾತಾಡಬೇಕು’ ಎಂಬ ತಮ್ಮ ನಿರೀಕ್ಷೆಯನ್ನು ವ್ಯಕ್ತ ಪಡಿಸಿದರು..
ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರೀ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬರುತ್ತಿದ್ದಾರೆ. ಬಿಜೆಪಿ ಪಕ್ಷದ ಪ್ರಚಾರವೂ ನಡೆದಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರದ ಖರ್ಚು. ಹಾಗಾಗಿ ಅವರು ರಾಜಕೀಯ ಮಾತನಾಡಲಾರರು ಎಂದು ಭಾವಿಸಲಾಗಿದೆ. ಆದರೆ, ಸರ್ಕಾರದ ಆರ್ಥಿಕ ಪರಿಸ್ಥಿತಿ , ನಿರುದ್ಯೋಗ , ಇತ್ಯಾದಿ ವಿಷಯ ಮಂಡನೆ ಮಾಡಬೇಕು. ಯಾಕೆಂದರೆ
ಪ್ರಧಾನಿಯವರೇ ಜನರೊಂದಿಗೆ ಇಂತಹ ವಿಷಯ ಹಂಚಿಕೊಳ್ಳುವ ಅಗತ್ಯವಿದೆ.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಮೋದಿ ನೋಡಿ ಓಟು ಕೊಡಿ ಅನ್ನುವುದೇ ಅವರ ಚಳುವಳಿಯಾಗಿತ್ತು. ಅವರು ಗೆದ್ದದ್ದೂ ಅದಕ್ಕೆ. ಕಳೆದ ಚುನಾವಣೆಯಲ್ಲಿ ಮೋದಿಯವರು ಮತ್ತು ಅವರ ಪ್ರತಿನಿಧಿಗಳು ನೀಡಿದ ಆಶ್ವಾಸನೆಯ ಬಗ್ಗೆ ಅವರು ಮಾತನಾಡಬೇಕು. ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ , ಜಿ ಎಸ್ ಟಿ , ಬೆಲೆ ಏರಿಕೆ , ನಿರುದ್ಯೋಗ , ಖಾಸಗೀಕರಣ ..ಹೀಗೆ ಜನರ ಸಮಸ್ಯೆ ಕುರಿತು ತಮ್ಮ ನಿಲುವು ಹೇಳಬೇಕೆಂದು ನಿರೀಕ್ಷೆ .

ಪ್ರಧಾನಿಯವರು ಕೇಂದ್ರ ಸರ್ಕಾರದ ಮುಖ್ಯಸ್ಥರು. ಕೇಂದ್ರ ಸರ್ಕಾರ ಅನೇಕ ವಿಷಯಗಳಲ್ಲಿ ವಿಫಲವಾಗಿದೆ ಅನ್ನುವ ಸಂದರ್ಭದಲ್ಲಿ ಅವರ ಮಾತುಗಳು ಅದಕ್ಕೆ ಸಂಬಂಧಿಸಿದಂತೆ ಇದ್ದರೆ ಸೂಕ್ತ.

ಎಂ ಜಿ ಹೆಗಡೆ
ಚಿಂತಕರು

Related Articles

ಇತ್ತೀಚಿನ ಸುದ್ದಿಗಳು