Tuesday, December 9, 2025

ಸತ್ಯ | ನ್ಯಾಯ |ಧರ್ಮ

ಸರ್ಕಾರಗಳ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ – ಎಸ್.ವರಲಕ್ಷ್ಮೀ

ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ನೀತಿಗಳಿಂದಾಗಿ ರಾಜ್ಯದ ಜನಸಾಮಾನ್ಯರ ಮೇಲೆ ಆಗುತ್ತಿರುವ ಪರಿಣಾಮಗಳು ಮತ್ತು ಅವರ ಬದುಕಿನ ಪ್ರಶ್ನೆಗಳನ್ನು ಆಧರಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ಜನಪರ ಪರ್ಯಾಯ ನೀತಿಗಳಿಗಾಗಿ ರಾಜ್ಯಾದ್ಯಂತ ಮನಮನೆ ಪ್ರಚಾರಾಂದೋಲನ ನಡೆಸುತ್ತಿದೆ. ಇದರ ಸಮಾರೋಪವಾಗಿ ಡಿಸೆಂಬರ್.21 ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆಯನ್ನು ನಡೆಸಲಾಗುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮೀ ತಿಳಿಸಿದರು.

ಇತ್ತೀಚೆಗೆ ನಗರದ ಸಿಪಿಐಎಂ ಕಚೇರಿಯಲ್ಲಿ ಜನಾಂದೋಲನದ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯಿಲ್ಲ, ಕಾರ್ಮಿಕರಿಗೆ ದುಡಿಮೆಗೆ ತಕ್ಕಂತ ಸಂಬಳವಿಲ್ಲ, ವಿಪರೀತ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ಸಾಗಿಸುವುದೇ ಅತ್ಯಂತ ದುಸ್ತರವಾಗಿದೆ. ಇದೆಲ್ಲದಕ್ಕೂ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳ ಜನವಿರೋಧಿ ನೀತಿಗಳೇ ಕಾರಣವಾಗಿದ್ದು, ಈ ನೀತಿಗಳನ್ನು ಹಿಮ್ಮೆಟ್ಟಿಸಿ ಪರ್ಯಾಯ ಜನಪರ ನೀತಿಗಳಿಗಾಗಿ ಸಿಪಿಐಎಂ ರಾಜ್ಯಾದ್ಯಂತ ಜನಾಂದೋಲನವನ್ನು ಸಂಘಟಿಸಲಾಗಿದೆ. ಇದಕ್ಕೆ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಜನಾಂದೋಲನ ಮತ್ತು ಪ್ರತಿಭಟನಾ ಬಹಿರಂಗ ಸಭೆಯಲ್ಲಿ ಮಂಡಿಸಲಾಗುವ ಹಕ್ಕೋತ್ತಾಯಗಳೇನು?

ಕೃಷಿ ಬಿಕ್ಕಟ್ಟು: ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.೫೦ ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು, ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು.
 

ಭೂಮಿ ಪ್ರಶ್ನೆ: ಬಲವಂತದ, ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು, ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗೈರ್ ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು.

ನಿರುದ್ಯೋಗ: ಎಲ್ಲ ಅರ್ಹ ಯುವಜನರಿಗೂ ಉದ್ಯೋಗದ ಭದ್ರತೆ ನೀಡಬೇಕು. ಯುವನಿಧಿಯನ್ನು ಕನಿಷ್ಟ 5,000 ರೂ.ಗಳಿಗೆ ಹೆಚ್ಚಿಸಿ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ ವಿಸ್ತರಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಸಗಿ ರಂಗದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕು ಮತ್ತು ಕೂಲಿಯನ್ನು 600ಕ್ಕೆ ಹೆಚ್ಚಿಸಿ 200 ದಿನ ಕೆಲಸ ನೀಡಬೇಕು. ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸಂಪರ್ಕ ಮತ್ತು ಸಂವಹನವನ್ನು ಕನ್ನಡದಲ್ಲಿ ಮಾಡಬೇಕು. ಯುವಜನರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಜಾಲ, ಜೂಜು, ಗೇಮಿಂಗ್ ಇತ್ಯಾದಿಗಳನ್ನು ತಡೆಗಟ್ಟಲು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಭ್ರಷ್ಟಾಚಾರ: ತಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಜನ ಸೇವೆಗಳೂ ಲಂಚವಿಲ್ಲದೆ ನಡೆಯುವುದೇ ಇಲ್ಲವೆನ್ನುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದ ಮತ್ತು ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಬಂಡವಾಳದಾರರಿಗೆ ವರ್ಗಾವಣೆ ಮಾಡುವ ಬೃಹತ್ ಭ್ರಷ್ಟಾಚಾರ ನಡೆಯುತ್ತಿದೆ. ಇವುಗಳ ವಿರುದ್ಧ ಜನತೆ ತೀವ್ರ ಪ್ರತಿರೋಧ ಮಾಡಬೇಕಾಗಿದೆ.

 ಮಹಿಳೆಯರು: ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕುಟುಂಬಗಳ ಹೆಚ್ಚುತ್ತಿರುವ ಸಂಕಷ್ಟದಿAದಾಗಿ ಮಹಿಳೆಯರ ಮೇಲಿನ ಒತ್ತಡ ಹೆಚ್ಚುತ್ತಿದೆ. ಮೈಕ್ರೋಫೈನಾನ್ಸ್ ಕಿರುಕುಳಗಳು, ಉದ್ಯೋಗ ಖಾತ್ರಿ ಕೆಲಸಗಳ ಕಡಿತದಿಂದ ಸಂಕಷ್ಟ ಹೆಚ್ಚಾಗುತ್ತಿದೆ.

ದಲಿತರು: ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಮೀಸಲಾತಿ ವಿಷಯಗಳು ಗೊಂದಲಗಳನ್ನು ಉಂಟು ಮಾಡುತ್ತಿವೆ. ಸರ್ಕಾರಿ ಮತ್ತು ಸಾರ್ವಜನಿಕ ಉದ್ಯೋಗಗಳು ನಾಶವಾಗುತ್ತಿವೆ. ಖಾಸಗೀಕರಣದ ದಾಳಿಯು ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ದಲಿತರಿಂದ ದೂರ ಮಾಡುತ್ತಿದೆ. ಸಂಪತ್ತು ಮತ್ತು ಅಧಿಕಾರದ ವಂಚನೆಯು ಹೆಚ್ಚುತ್ತಿದೆ. ದಲಿತರ ಸ್ಥಿತಿಗತಿಗಳ ಸಮೀಕ್ಷೆ ಆಧರಿಸಿ ಭೂಮಿ, ಆಸ್ತಿ ಮತ್ತು ಅಧಿಕಾರಗಳ ಸಮರ್ಪಕ ಹಂಚಿಕೆಯಾಗಬೇಕು.

ಅಲ್ಪಸಂಖ್ಯಾತರು: ಆರ್.ಎಸ್.ಎಸ್.ನ ಮತೀಯ ದಾಳಿಗಳಿಂದಾಗಿ ಅಲ್ಪಸಂಖ್ಯಾತರು ಆತಂಕಿತರಾಗಿದ್ದಾರೆ. ನಿರಂತರ ಅಪಪ್ರಚಾರ, ಸುಳ್ಳುಗಳನ್ನು ಹೇಳುವ ಮೂಲಕ ಅಲ್ಪಸಂಖ್ಯಾತರಲ್ಲಿ ಪರಕೀಯತೆ, ಆತಂಕ, ಅಭದ್ರತೆಗಳನ್ನು ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಬದುಕಿನ ಪ್ರಶ್ನೆಗಳನ್ನು ಬಗೆಹರಿಸಬೇಕಾಗಿದೆ.

ಕೋಮುವಾದ-ಜಾತಿವಾದ: ಸಮಾಜದಲ್ಲಿ ಕೋಮುವಾದ ಮತ್ತು ಜಾತಿವಾದ ವ್ಯಾಪಕಗೊಂಡಿದೆ. ಪರಸ್ಪರ ಸಹಬಾಳ್ವೆಯನ್ನು ನಾಶ ಮಾಡಿ, ಅಪನಂಬಿಕೆಗಳನ್ನು ಹೆಚ್ಚು ಮಾಡಲಾಗಿದೆ. ಮತೀಯ ಮತ್ತು ಜಾತಿಯ ಅಸ್ಮಿತೆಗಳನ್ನು ಮನಸ್ಸಿನಾಳಕ್ಕೆ ಇಳಿಸಲಾಗುತ್ತಿದೆ. ಕೋಮುವಾದವನ್ನು ಜಾತಿವಾದವನ್ನು ಸೋಲಿಸದಿದ್ದರೆ ಜನರ ಬದುಕು ತೀವ್ರವಾಗಿ ತೊಂದರೆಗೆ ಒಳಗಾಗಲಿದೆ.

ಸೇವೆಗಳ ಖಾಸಗೀಕರಣ: ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳ ಖಾಸಗೀಕರಣವನ್ನು ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ.

ಹೆಚ್ಚುತ್ತಿರುವ ಬಡವ-ಶ್ರೀಮಂತ ಅಸಮಾನತೆ: ದೇಶವನ್ನು ಮುನ್ನಡೆಸುವ ಕಾರ್ಮಿಕರ ಶ್ರಮ, ನೆಲ, ಜಲ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ನೀತಿಗಳಿಂದಾಗಿ ಬಿಲಿಯಾಧಿಪತಿಗಳು ಭಾರತವನ್ನು ಕಬ್ಜ ಮಾಡಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಗಾಧವಾಗಿ ಬೆಳೆದಿದೆ. ಈ ಅಸಮಾನತೆಯನ್ನು ಇಲ್ಲವಾಗಿಸಬೇಕು.

ಬಯಲು ಸೀಮೆಯ ನೀರಾವರಿ ಪ್ರಶ್ನೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೃಷ್ಣಾ ನೀರಿನಲ್ಲಿ ಈ ಭಾಗಕ್ಕೆ ನೀರನ್ನು ಒದಗಿಸಬೇಕು.

ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ: ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಗಳ ಹಣಕಾಸು, ಶಾಸನಾತ್ಮಕ ಮತ್ತು ಆಡಳಿತಾತ್ಮಕ ಹಕ್ಕುಗಳ ಮೇಲೆ ತೀವ್ರವಾದ ದಾಳಿಗಳನ್ನು ಮಾಡುತ್ತಿದೆ. ಸಂವಿಧಾನದ ಒಕ್ಕೂಟ ತತ್ವದ ಅಡಿಪಾಯವನ್ನು ದುರ್ಬಗೊಳಿಸುತ್ತಿದೆ. ರಾಜ್ಯಗಳು ಈ ದಾಳಿಗಳ ವಿರುದ್ಧ ಪ್ರಬಲವಾಗಿ ನಿಲ್ಲಬೇಕಾಗಿದೆ.

ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು: ರಾಜ್ಯ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆ, ಹೋರಾಟಗಳನ್ನು ನಡೆಸುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲು, ಕೇಂದ್ರ ಸರ್ಕಾರದ ವಿಧಾನಗಳನ್ನೇ ಬಳಸುತ್ತಿರುವುದು ಸರಿಯಲ್ಲ. ಜನ ವಿರೋಧಿ ನೀತಿಗಳ ವಿರುದ್ಧ ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿರೋಧವನ್ನು ಒಡ್ಡಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಬೇಕು.

ಧರ್ಮಸ್ಥಳದಲ್ಲಿನ ಎಲ್ಲಾ ಅಸಹಜ ಸಾವುಗಳು, ಭೂಕಬಳಿಕೆ, ಮೈಕ್ರೋಫೈನಾನ್ಸ್ ಕುರಿತು ಸಮಗ್ರ ತನಿಖೆ ನಡೆಯಬೇಕು.

ಈ ಸಂದರ್ಭದಲ್ಲಿ ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಧರ್ಮೇಶ್, ಎಂ.ಜಿ.ಪೃಥ್ವಿ, ಹೆಚ್.ಎಸ್.ಮಂಜುನಾಥ್, ಜಿ.ಪಿ.ಸತ್ಯನಾರಾಯಣ, ಸೌಮ್ಯ ಹಾಗೂ ಅರವಿಂದ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page