Sunday, June 23, 2024

ಸತ್ಯ | ನ್ಯಾಯ |ಧರ್ಮ

ಎಮ್‌ಸಿಡಿ ಚುನಾವಣೆ ಅತ್ಯಂತ ಕಷ್ಟಕರವಾಗಿತ್ತು: ಕೇಜ್ರಿವಾಲ್‌ ವಿಶ್ಲೇಷಣೆ

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಹಾಗು ಆಮ್‌ ಆದ್ಮಿ ಪಾರ್ಟಿಯ ಸರ್ವೋಚ್ಛ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ದಿಲ್ಲಿ ಮುನ್ಸಿಪಲ್‌ ಕೌನ್ಸಿಲ್‌ (ಎಂಸಿಡಿ) ಚುನಾವಣೆ ಎದುರಿಸುವುದು ಹಿಂದಿನ ಎಲ್ಲ ಚುನಾವಣೆಗಳಿಗಿಂತ ಹೆಚ್ಚು ಕಷ್ಟಕರವಾಗಿತ್ತು ಎಂದು ವಿಶ್ಲೇಷಿಸಿದ್ದಾರೆ.

ನೂತನವಾಗಿ ಚುನಾಯಿತರಾದ ತಮ್ಮ ಪಕ್ಷದ ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಎದುರಿಸಲು ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದರಲ್ಲದೆ, ಇಂಥ ಸಂಕಷ್ಟದಲ್ಲಿಯೂ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಎಂಸಿಡಿಯಲ್ಲಿ ಎಎಪಿ ಈ ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಎಎಪಿ ಮತ್ತು ಬಿಜೆಪಿ ನಡುವಿನ ತೀವ್ರ ಹಣಾಹಣಿಯಲ್ಲಿ ಎಎಪಿ ದಿಲ್ಲಿ ಎಂಸಿಡಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ಸ್ಥಾನಗಳನ್ನು ಗಳಿಸಲು ಯಶಸ್ವಿಯಾಗಿತ್ತು.

ಎಂಸಿಡಿಯಲ್ಲಿ ಪರಿಣಾಮಕಾರಿಯಾಗಿ ಆಡಳಿತವನ್ನು ಜಾರಿಗೊಳಿಸಲು ಎಲ್ಲರ ಬೆಂಬಲ ಬೇಕಿದೆ ಎಂದು ಪುನರುಚ್ಚರಿಸಿದ ಕೇಜ್ರಿವಾಲ್‌ ತಮಗೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದವೂ ಬೇಕಿದೆ ಎಂದು ಹೇಳಿದರು.

ಬಿಜೆಪಿ ಚುನಾವಣೆ ಸಮಯದಲ್ಲಿ ಎಎಪಿ ವಿರುದ್ಧ ಮೇಲಿಂದ ಮೇಲೆ ಅಪಪ್ರಚಾರ ಮಾಡುತ್ತ ಬಂದಿತು. 7 ಮುಖ್ಯಮಂತ್ರಿಗಳು, 17 ಕೇಂದ್ರ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಎಲ್ಲರೂ ಈ ಅಪಪ್ರಚಾರದಲ್ಲಿ ತೊಡಗಿದ್ದರು. ಇದಕ್ಕೆ ಮಾಧ್ಯಮಗಳನ್ನೂ ಬಳಸಿಕೊಂಡರು. ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿರುವ ವಿಡಿಯೋಗಳನ್ನು ಚುನಾವಣೆಯ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು. ನಮಗೆ ಸತ್ಯವನ್ನು ನಿರೂಪಿಸಲು ಸಹ ಅವಕಾಶ ನೀಡಲಿಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹರಿಹಾಯ್ದರು.

ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನಾಯಕರು ತಾವು ಪ್ರಾಮಾಣಿಕರು ಎಂದು ಹೇಳಿಕೊಳ್ಳಲಿಲ್ಲ. ಬದಲಾಗಿ ಎಎಪಿ ಕೂಡ ತಮ್ಮಂತೆ ಭ್ರಷ್ಟಾಚಾರಿ ಪಕ್ಷ ಎಂದು ಹೇಳುತ್ತ ಬಂದರು ಎಂದು ಕೇಜ್ರಿವಾಲ್‌ ಟೀಕಿಸಿದರು.

ಎಂಸಿಡಿ ಚುನಾವಣೆಗೆ ಮುನ್ನ ದೆಹಲಿಯಲ್ಲಿ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧದ ಆರೋಪಗಳು ಸೇರಿದಂತೆ ಹಲವಾರು ವಿವಾದಗಳು ಹೊರಬಂದಿದ್ದವು. ಬಿಜೆಪಿ ಮತ್ತು ಎಎಪಿಯ ನಡುವೆ ಮಾತಿನ ಸಂಘರ್ಷಗಳು ನಡೆಯುತ್ತಿದ್ದವು. ಇದೆಲ್ಲದರ ನಡುವೆಯೂ ಎಎಪಿ ಎಂಸಿಡಿ ಚುನಾವಣೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ದೆಹಲಿಯ ಮೂರು ಮುನ್ಸಿಪಾಲ್ ಆಡಳಿತಗಳು ಏಕೀಕರಣಗೊಂಡ ನಂತರದ ಮೊದಲ ಎಂಸಿಡಿ ಚುನಾವಣೆ ಇದಾಗಿದ್ದು, ದೆಹಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಾರ್ಟಿಗೆ ನಗರದಲ್ಲಿ ತನ್ನ ಆಡಳಿತದ ಅಧಿಕಾರವನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು