ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಷಯದಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ಮಧ್ಯಸ್ಥಿಕೆ ವಹಿಸಬೇಕು ಎಂದು ವೇಟ್ಲಿಫ್ಟರ್ ಮೀರಾಬಾಯಿ ಚಾನು ಮನವಿ ಮಾಡಿಕೊಂಡಿದ್ದಾರೆ. ತಮ್ಮ ರಾಜ್ಯದಲ್ಲಿ ಎರಡು ಸಮುದಾಯಗಳ ಮಧ್ಯೆ ನಡೆಯುತ್ತಿರುವ ಘರ್ಷಣೆಯನ್ನು ಶೀಘ್ರವಾಗಿ ಪರಿಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಮಣಿಪುರದಲ್ಲಿ ಮೇ 3ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿದೆ. ಇದುವರೆಗೆ ಘರ್ಷಣೆಯಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರಸ್ತುತ ಅಮೇರಿಕಾದಲ್ಲಿ ತರಬೇತಿ ಪಡೆಯುತ್ತಿರುವ ಮೀರಾಬಾಯಿ ಚಾನು, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಈಶಾನ್ಯ ರಾಜ್ಯದ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ, ಈ ಹಿಂಸಾಚಾರದಿಂದ ಕ್ರೀಡಾಪಟುಗಳ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿ 3 ತಿಂಗಳು ಕಳೆದಿವೆ. ಇನ್ನೂ ಇಲ್ಲಿ ಶಾಂತಿ ಸ್ಥಾಪನೆಯಾಗಿಲ್ಲ. ಈ ಸಂಘರ್ಷದಿಂದಾಗಿ ಹಲವಾರು ಆಟಗಾರರಿಗೆ ತರಬೇತಿ ಪಡೆಯಲು ಸಾಧ್ಯವಾಗಿಲ್ಲ, ಅಲ್ಲದೆ ಇದರಿಂದ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಇದರ ಜತೆಗೆ ಅನೇಕ ಮನೆಗಳು ನಾಶವಾಗಿವೆ ಎಂದು ಚಾನು ತನ್ನ ಟ್ವಿಟರ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಅವರು “ನಾನು ಈ ವಿಡಿಯೋ ಮೂಲಕ ಗೃಹ ಸಚಿವ ಅಮಿತ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನನ್ನ ರಾಜ್ಯದ ಸ್ಥಿತಿಯನ್ನು ನೋಡಿ ನನಗೆ ತರಬೇತಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಲ್ಲಿಸಲು ಅಗತ್ಯ ಕಠಿಣ ಕ್ರಮಗಳನ್ನು ಕೈಗೊಂಡು ಶಾಂತಿಯನ್ನು ಮರುಸ್ಥಾಪಿಸಿ” ಎಂದು ಅವರು ಕೇಳಿಕೊಂಡಿದ್ದಾರೆ.
“ಮುಂಬರುವ ವಿಶ್ವ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಗೇಮ್ಸ್ಗೆ ತಯಾರಿ ನಡೆಸಲು ನಾನು ತರಬೇತಿಗಾಗಿ ಯುಎಸ್ಎ ಬಂದಿದ್ದರೂ ನನ್ನ ಮನಸ್ಸೆಲ್ಲ ಅಲ್ಲೇ ಇದೆ. ಮಣಿಪುರ ನನ್ನ ಮನೆ. ನಾನು ಪ್ರಸ್ತುತ ಅಲ್ಲಿಲ್ಲದೇ ಹೋದರೂ ಮನಸ್ಸು ಈ ಸಂಘರ್ಷ ಯಾವಾಗ ಕೊನೆಗೊಳ್ಳುವುದೋ ಎನ್ನುವುದರ ಕುರಿತಾಗಿಯೇ ಯೋಚಿಸುತ್ತಿರುತ್ತದೆ” ಎಂದಿದ್ದಾರೆ.
ಕೆಲವು ತಿಂಗಳ ಹಿಂದೆ ಒಲಂಪಿಕ್ ಪದಕ ವಿಜೇತ ಬಾಕ್ಸರ್ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ ಕೂಡಾ ಪ್ರಧಾನಿ ಮತ್ತು ಗೃಹಸಚಿವರು ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ ಈ ವಿಷಯದ ಕುರಿತು ಮನವಿ ಸಲ್ಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.