ಸಾರಕ್ಕನವರು ನನ್ನ ಕವನ ಸಂಕಲನ “ಬಿಡುಗಡೆಯ ಕವಿತೆ”ಗಳಿಗೆ ಬೆನ್ನುಡಿಯನ್ನು ಬರೆದುದಕ್ಕೆ ಕೆಂಡಾಮಂಡಲವಾಗಿ ನಮ್ಮ ಸಂಬಂಧಿಯೊಬ್ಬರು, “ಈ ಇಸ್ಲಾಂ ವಿರೋಧಿ ಮಹಿಳೆಯಿಂದ ಬೆನ್ನುಡಿ ಬರೆಸುವುದೇ. ಇನ್ನು ಮುಂದೆ ನೀನು ಬರೆಯುವುದಿಲ್ಲವೆಂದು ಪ್ರಮಾಣ ಮಾಡು” ಎಂದು ನನ್ನ ಮುಂದೆ ಕುರಾನನ್ನು ಹಿಡಿದು ಪ್ರಮಾಣ ಮಾಡಲು ಒತ್ತಾಯಿಸಿದರು. ಆಗ ನಾನು ಒತ್ತಡಕ್ಕೆ ಒಳಗಾದರೂ ಧೈರ್ಯಗೆಡದೇ “ಆ ಕುರಿತು ವಿಚಾರ ಮಾಡುವೆ, ನಂತರ ಪ್ರಮಾಣ ಮಾಡುವೆ” ಎಂದು ಹೇಳಿ ತಪ್ಪಿಸಿಕೊಂಡೆ… ಹೀಗೆ ಸಾರಾ ಜತೆಗಿನ ತಮ್ಮ ನೆನಪುಗಳನ್ನು ಬಿಚ್ಚಿಡುತ್ತಾರೆ ಕವಯಿತ್ರಿ ಡಾ. ಷರೀಫಾ
“ಇಸ್ಲಾಂನಲ್ಲಿ ಹೆಣ್ಣು ಓದಬೇಕೆ ವಿನ: ಬರೆಯುವಂತಿಲ್ಲ.” ಇದು ಅಲಿಖಿತ ನಿರ್ಬಂಧ. ಆ ಕಾರಣಕ್ಕೇನೆ ಕನ್ನಡದಲ್ಲಿ ಶಾಂತಾಬಾಯಿ ನೀಲಗಾರರವರು ಬರೆದ “ಸದ್ಗುಣಿ ಕೃಷ್ಣಾಬಾಯಿ” ಕಾದಂಬರಿ 1906ರಲ್ಲಿ ಪ್ರಕಟವಾಯಿತು. ಆದರೆ ಮುಸ್ಲಿಂ ಸಮುದಾಯದಿಂದ ಬಂದ ಒಬ್ಬ ಕನ್ನಡದ ಲೇಖಕಿಯಿಂದ “ಚಂದ್ರಗಿರಿ ತೀರದಲ್ಲಿ” ಎಂಬ ಕಾದಂಬರಿ ರಚನೆಯಾಗಲು ಸುಮಾರು ಮುಕ್ಕಾಲು ಶತಮಾನ ಕಾಯಬೇಕಾಯಿತು. ಕನ್ನಡದಲ್ಲಿ ಮೊದಲ ಕಾದಂಬರಿ ಬರೆದ ಆ ಮಹಿಳೆ, ಇಸ್ಲಾಂನ ಅಲಿಖಿತ ನಿರ್ಬಂಧವನ್ನು ಮುರಿದಂತಹ ಆ ದಿಟ್ಟ ಮಹಿಳೆ ಸಾರಾ ಅಬೂಬಕರ್ರವರು. ಇಂತಹ ದಿಟ್ಟ ಮಹಿಳೆಯಿಂದು ನಮ್ಮಿಂದ ಅಗಲಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ದಿನಾಂಕ 10-1-2023ರಂದು ತಮ್ಮ ನಿವಾಸದಲ್ಲಿ ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ಕರ್ನಾಟಕದ ಗಡಿಪ್ರದೇಶವಾದ ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜೂನ್ 30, 1936ರಲ್ಲಿ ಅಹಮದ್ ಮತ್ತು ಜೈನಾಬಿಯವರ 4ನೇ ಮಗುವಾಗಿ ಜನಿಸಿದ ಇವರ ತಂದೆಯವರು ನ್ಯಾಯವಾದಿಗಳಾಗಿದ್ದರು. ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಅಬೂಬಕ್ಕರ್ರವರನ್ನು ಸಾರಾ ಮದುವೆಯಾಗುತ್ತಾರೆ. ಮದುವೆ ಮಕ್ಕಳು ಆಗಿ ನಲವತ್ತರ ಗಡಿ ದಾಟಿದ ನಂತರ ಪಿ.ಲಂಕೇಶ್ರವರ ಬೆಂಬಲದಿಂದ “ಚಂದ್ರಗಿರಿ ತೀರದಲ್ಲಿ” ಕಾದಂಬರಿ ರಚಿಸುತ್ತಾರೆ. ಅದು ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗ, ನಾನು ಅದನ್ನು ಓದಲು ಕಾತರಳಾಗಿ ಕಾಯುತ್ತಿದ್ದೆ. ಕಾದಂಬರಿಯಲ್ಲಿ ಸಾರಾ ಮೊದಲಿಗರಾದರೆ, ಕಥಾ ಪ್ರಕಾರದಲ್ಲಿ ಮುಲ್ಕಿಯ ಮುಮ್ತಾಜ್ ಬೇಗಂ ಮೊದಲಿಗರಾದರೆ, ಕಾವ್ಯ ಪ್ರಕಾರದಲ್ಲಿ ಕೆ.ಷರೀಫಾ ಮೊದಲಿಗರಾದರು. ಸಾರಾ ತಮ್ಮ “ಹೊತ್ತು ಕಂತುವ ಮುನ್ನ” ಅತ್ಮಕಥನ ಪ್ರಕಾರದಲ್ಲಿಯೂ ಮೊದಲನ್ನು ಸಾಧಿಸಿದವರು. ಸಮಾಜದ ಸ್ಥಾಪಿತ ಮೌಲ್ಯಗಳ ಪ್ರವಾಹದ ವಿರುದ್ಧ ಈಜಿದವರು. ಸಮಾಜದ ಹಲವಾರು ನಿಷೇಧಗಳ ಗೋಡೆಗಳನ್ನು ಕೆಡವಿದ ದಿಟ್ಟ ಮಹಿಳೆ ಸಾರಾ ಅಬೂಬಕ್ಕರ್ರವರೇ.
ಸಾರಕ್ಕನವರು ನನ್ನ ಕವನ ಸಂಕಲನ “ಬಿಡುಗಡೆಯ ಕವಿತೆ”ಗಳಿಗೆ ಬೆನ್ನುಡಿಯನ್ನು ಬರೆದುದಕ್ಕೆ ಕೆಂಡಾಮಂಡಲರಾದ ನಮ್ಮ ಸಂಬಂಧಿಯೊಬ್ಬರು, “ಈ ಇಸ್ಲಾಂ ವಿರೋಧಿ ಮಹಿಳೆಯಿಂದ ಬೆನ್ನುಡಿ ಬರೆಸುವುದೇ. ಇನ್ನು ಮುಂದೆ ನೀನು ಬರೆಯುವುದಿಲ್ಲವೆಂದು ಪ್ರಮಾಣ ಮಾಡು” ಎಂದು ನನ್ನ ಮುಂದೆ ಕುರಾನನ್ನು ಹಿಡಿದು ಪ್ರಮಾಣ ಮಾಡಲು ಒತ್ತಾಯಿಸಿದರು. ಆಗ ನಾನು ಒತ್ತಡಕ್ಕೆ ಒಳಗಾದರೂ ಧೈರ್ಯಗೆಡದೇ “ಆ ಕುರಿತು ವಿಚಾರ ಮಾಡುವೆ, ನಂತರ ಪ್ರಮಾಣ ಮಾಡುವೆ” ಎಂದು ಅವರಿಗೆ ಹೇಳಿ ಆ ಸಂದರ್ಭದಿಂದ ಜಾರಿಕೊಳ್ಳಲು ಪ್ರಯತ್ನಿಸಿದೆ. ಅವರಿಗೆ ಇನ್ನೂ ಸಿಟ್ಟು ನೆತ್ತಿಗೇರಿತು. ಹೆಣ್ಣು ಮಕ್ಕಳಿಗೆ ವಿಚಾರ ಮಾಡಲೂ ಬರುತ್ತದೆಯೇ? ಅವರು ಗಂಡಸರು ಹೇಳಿದಂತೆ ಕೇಳಬೇಕು, ಇದುವೆ ಅವರ ಧರ್ಮ ಎಂಬುದು ಅವರ ತಿಳುವಳಿಕೆಯಾಗಿತ್ತು. ಕೊನೆಗೂ ನಾನು ಪ್ರಮಾಣ ಮಾಡಲಿಲ್ಲ.
ಹೀಗೆ ಮುಸ್ಲಿಂ ಮಹಿಳೆಯರು ತಮ್ಮ ಸೃಜನಶೀಲತೆಗೆ ಅಡ್ಡಿಯಾದ ಪುರುಷಶಾಹಿ ಅಹಂನ ಅಡ್ಡಗೋಡೆಗಳನ್ನು ಒಡೆದು ಹೊರಬಂದು ಬರೆಯುವುದು ಸುಲಭದ ಕೆಲಸವಾಗಿರಲಿಲ್ಲ. ಎಪ್ಪತ್ತರ ದಶಕದಲ್ಲಿದ್ದ ಇಂತಹ ಹಲವಾರು ಸಮಸ್ಯೆಗಳನ್ನು ಸಾರಾರವರು ಮತ್ತು ನಾವುಗಳೂ ಎದುರಿಸುತ್ತಲೇ ಕನ್ನಡದಲ್ಲಿ ರಚನೆಗಿಳಿದವರು. ಕುರಾನ್ ಪಠಣ ಬಿಟ್ಟು ಇತರೇ ಕತೆ, ಕಾದಂಬರಿ, ಕವನದ ಓದು, ಬರಹ ಮುಸ್ಲಿಂ ಮಹಿಳೆಯರಿಗೆ ದಕ್ಕಿರಲಿಲ್ಲ. ಇದರಿಂದಾಗಿಯೇ ಇತರ ಧರ್ಮೀಯ ಮಹಿಳೆಯರು ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರೂ ಮುಸ್ಲಿಂ ಮಹಿಳೆಯರ ಸಾಹಿತ್ಯ ಪ್ರವೇಶಕ್ಕೆ ತಡವಾಯಿತು. ಹೀಗೆ ತಡವಾಗಿರುವುದಕ್ಕೆ ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಅವರದೇ ಆದ ಅನೇಕ ಕಾರಣಗಳಿವೆ.

ಇಲ್ಲಿಯವರೆಗೆ ಸುಮಾರು 10 ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, ಲೇಖನ ಸಂಕಲನ, ಪ್ರವಾಸ ಕಥನ ಮತ್ತು ಆತ್ಮ ಕಥನ, ಹಾಗೂ ಹಲವಾರು ಕೃತಿಗಳನ್ನು ಸಾರಾ ಅನುವಾದ ಮಾಡಿದ್ದಾರೆ. ಲೇಖನ ಸಂಕಲನಗಳಾದ ಲೇಖನ ಗುಚ್ಛ, ಅನಾವರಣ, ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ ಕೃತಿಗಳನ್ನು ಬರೆದರು. ಅವರು ಇಸ್ಲಾಂ ಲೋಕದ ಮಹಿಳೆಯರ ಅನೇಕ ನೋವು ತಲ್ಲಣಗಳನ್ನು ಕನ್ನಡದಲ್ಲಿ ರಚಿಸುವ ಮೂಲಕ, ಅಲ್ಲಿಯ ಸಂಸ್ಕೃತಿಯನ್ನು ಪರಿಚಯಿಸುವುದರ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಧೀಮಂತ ಮಹಿಳೆಯರನ್ನು ಮತ್ತು ಕನ್ನಡದ ಮುಸ್ಲಿಂ ಲೇಖಕರನ್ನು ಒಳಗೊಳ್ಳದ ಹಾವೇರಿಯಲ್ಲಿ ನಡೆದ ಪರಿಷತ್ತಿನ ಸಮ್ಮೇಳನಕ್ಕೆ ಹಿಂದು ಮುಸ್ಲಿಂ ಭೂತ ಕಾಡಿದ್ದು ಸೋಜಿಗದ ವಿಷಯವೇ ಸರಿ!
ಸಾರಾ ಲಂಕೇಶ್ ಪತ್ರಿಕೆಗೆ ಮೊದಲು “ನನ್ನ ಜನ ಒಂದಾಗಬೇಕು” ಎಂಬ ಲೇಖನವನ್ನು ಕಳಿಸಿದ್ದರು. ಆನಂತರ ಚಂದ್ರಗಿರಿ ತೀರದಲ್ಲಿ ಕಾದಂಬರಿ ಬರೆದರು. ಕಮಲಾ ದಾಸ್ರವರ ‘ಮನೋಮಿ’’, ಬಿ.ಎಂ. ಸುಹರಾರವರು ‘’ಬಲೆ, ಪಿ.ಕೆ. ಬಾಲಕೃಷ್ಣನ್ರವರ ‘ನಾನಿನ್ನು ನಿದ್ರಿಸುವೆ’, ಆರ್.ಬಿ. ಶ್ರೀಕುಮಾರ್ ರವರ ‘ಧರ್ಮದ ಹೆಸರಿನಲ್ಲಿ’ ಮುಂತಾದ ಕೃತಿಗಳನ್ನು ಮಲೆಯಾಳಂನಿಂದ ಕನ್ನಡಕ್ಕೆ ಸಾರಾರವರು ಅನುವಾದ ಮಾಡಿದರು. ಬಂಡಾಯ ಸಾಹಿತ್ಯ ಸಂಘಟನೆಯ ಚಳುವಳಿಯಲ್ಲಿ ಭಾಗವಹಿಸಿದರು. ಅವರ ಮೇಲೆ ಹಲ್ಲೆಗಳೂ ನಡೆದವು. ಧರ್ಮದೊಳಗೆ ಮಹಿಳೆಯರ ಶೋಷಣೆಯನ್ನು ಕಟುವಾಗಿ ವಿರೋಧಿಸುತ್ತಿದ್ದ ಸಾರಾ ಅವರು ಧರ್ಮದೊಳಗಿನ ಮೂಲಭೂತವಾದವನ್ನು ಎದುರಿಸಬೇಕಾಯಿತು; ಹಲ್ಲೆಗೊಳಗಾಗ ಬೇಕಾಯಿತು. ಧರ್ಮದೊಳಗಿನವರು “ನೋಡಿ, ಸಾರಾ ನಮ್ಮ ಧರ್ಮವನ್ನು ಅವಮಾನಿಸುತ್ತಿದ್ದಾರೆ.” ಎಂದು ಹೇಳಿದರೆ, ಇತರೇ ಧರ್ಮಿಯರು ಅವರು ಮುಸ್ಲಿಂ ಆಗಿದ್ದರೂ ಅವರನ್ನು ತಮ್ಮ ದಾಳವಾಗಿಸಿಕೊಳ್ಳಲು ಪ್ರಯತ್ನಿಸಿದರು. ಇಂತಹ ದಾಳಿಗಳು ನಡೆದಾಗಲೂ ಸಾರಾ ಹೇಳುತ್ತಾರೆ. “ಈ ಆಕ್ರಮಣ ನನ್ನಲ್ಲಿ ಹೆಪ್ಪುಗಟ್ಟಿದ್ದ ನೂರಾರು ವಿಷಯಗಳು ಹೊರಬರಲು ಹಾದಿಯೊದಗಿಸಿತು. ಏನು ಬರೆದರೆ ಯಾರು ಏನನ್ನುವರೋ ಎಂಬ ಅಳುಕು ಈಗ ನನ್ನಿಂದ ಮಾಯವಾಯಿತು” ಎಂದು.
ಸಾರಾರವರು ನನ್ನ ಭೇಟಿಯಾದಾಗ ಫೋನ್ ಮಾಡಿದಾಗಲೆಲ್ಲ ಪ್ರಕಾಶಕರು ಅವರ ಪುಸ್ತಕಗಳನ್ನು ಪ್ರಕಟಿಸಿ ಅವರಿಗೆ ಗೌರವಧನ ಕೊಡದೇ ಇರುವ ಬಗ್ಗೆ, ಅವರ ಮೋಸದ ಬಗ್ಗೆ ಬಹಳ ಕೋಪ ಮಾಡಿಕೊಳ್ಳುತ್ತಿದ್ದರು. ಅವರು ಸರಳರೂ, ಮುಗ್ಧರೂ ಆಗಿದ್ದರೂ ವ್ಯವಹಾರ ಚತುರೆಯಾಗಿದ್ದರು. ಪ್ರಕಾಶಕರ ಮೋಸಕ್ಕೆ ಬೇಸರವಾಗಿ ಕೊನೆಗೊಂದು ಸಲ ಅವರು ಪ್ರಕಾಶಕಿಯೂ ಆದರು. ಹಣಕಾಸಿನ ವಿಷಯದಲ್ಲಿ ಕರಾರುವಕ್ಕಾದ ಮಾತು ಅವರದಾಗಿತ್ತು. ಅವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯನ್ನು ಅವರ ಒಪ್ಪಿಗೆ ಪಡೆಯದೇ ಸಿನಿಮಾ ಮಾಡಿದವರ ವಿರುದ್ಧ ಕೋರ್ಟಿನ ಮೆಟ್ಟಿಲನ್ನೂ ಹತ್ತಿ ಗೆದ್ದಂತಹ ಧೀಮಂತ ಮಹಿಳೆ.
ಅವರನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿಗಳು ಬಂದವು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಯು. ಶ್ರೀನಿವಾಸ ಮಲ್ಯ ಸ್ಮಾರಕ ಪ್ರಶಸ್ತಿ, ಮಂಗಳೂರು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪಟ್ಟ, ಸಂದೇಶ ಸಾಹಿತ್ಯ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಿರುದು, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಿರುದು ಮತ್ತು ಬಿ.ಸರೋಜಾದೇವಿ ಶ್ರೀಹರ್ಷ ಪ್ರಶಸ್ತಿ.. ಹೀಗೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷೆಯ ಗೌರವವೂ ಅವರಿಗೆ ಸಂದಿದೆ. ಹೀಗೆ ನಾಡಿನ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅವರೆಂದೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದು ತಮ್ಮ ಗೌರವವನ್ನು ಹೆಚ್ಚಿಸಿಕೊಂಡವು.
ಹೀಗೆ ಎತ್ತರೆತ್ತರಕ್ಕೆ ಬೆಳೆದು ನಿಂತ ಸಾರಾರವರು ಅಸ್ತಂಗತರಾದ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕನ್ನಡ ಲೋಕ ನೀಡಿದ ಪ್ರೀತಿ ಗೌರವಗಳಿಗೆ ಬೇರೆ ಸಾಟಿಯಿಲ್ಲ. ಕೋಮುವಾದದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಅವರು ಸಂಘರ್ಷ, ಹೋರಾಟದ ಬದುಕನ್ನೇ ನಡೆಸಿದವರು. ದಣಿದ ದೇಹಕ್ಕೆ ಇಂದು ವಿಶ್ರಾಂತಿ ದೊರಕಿದೆ. ಅಕ್ಕ ಈಗಲಾದರೂ ನೆಮ್ಮದಿಯಿಂದ ಮಲಗಲಿ.
ಮುಸ್ಲಿಂ ಮಹಿಳೆಯರ ಪರದೆಯ ಹಿಂದಿನ ಶೋಷಣೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವುದರ ಮೂಲಕ, ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಂವೇದನೆಗಳ ಹೊಸ ತೊರೆಯನ್ನು ಹರಿಸುವುದರ ಮೂಲಕ ಅದನ್ನು ಶ್ರೀಮಂತಗೊಳಿಸಿದ ಆ ಧೀಮಂತ ಶಕ್ತಿಗೆ ಗೌರವದ ಅಂತಿಮ ನಮನಗಳು.
ಡಾ.ಕೆ.ಷರೀಫಾ
ಕವಯಿತ್ರಿ, ಸಮಾಜ ಮತ್ತು ಸಂಸ್ಕೃತಿ ಚಿಂತಕಿ