Monday, June 17, 2024

ಸತ್ಯ | ನ್ಯಾಯ |ಧರ್ಮ

ನೆನಪು | ಜನಮನದಲ್ಲಿ ಉಳಿದುಹೋದ ಅರಸು

ಮೊದಲ ಬಾರಿಗೆ ಅರಸು ಅವರು  ಹಾವನೂರು ಆಯೋಗವನ್ನು ರಚಿಸಿದ್ದು ಬಹುದೊಡ್ಡ ಸಾಧನೆ. ಈ ವರದಿಯನ್ನು ಅರಸು ಸಚಿವ ಸಂಪುಟ ಒಪ್ಪಿ ಜಾರಿಗೆ ತಂದಿತು. ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಿರುಗಾಳಿಯೇ  ಬೀಸಿ ಕರ್ನಾಟಕದ ಚಲನೆಗೆ ಹೊಸ ಶಕ್ತಿ ಮತ್ತು ವೇಗ ದೊರೆತವು. ಅರಸು ಎದೆಎದೆಗಳಲ್ಲಿ ಉಳಿದದ್ದು ಚರಿತ್ರೆಯ ಭಾಗವಾಯಿತು. ಜಿ.ಪಿ.ಬಸವರಾಜು, ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು

ಮೈಸೂರು ಅರಸೊತ್ತಿಗೆಯನ್ನು ಕರ್ನಾಟಕ ಕಿತ್ತೊಗೆಯಿತು. ಸ್ವಲ್ಪ ತಡವಾದರೂ ಮೈಸೂರು ರಾಜ್ಯ ಅರಸೊತ್ತಿಗೆಯಿಂದ ಬಿಡುಗಡೆಗೊಂಡಿತು. ಆದರೆ ದೇವರಾಜ ಅರಸು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸರಾಗಿಯೇ ಉಳಿದರು; ಬಾಳಿದರು; ಮೆರೆದರು.

ಮೈಸೂರು ರಾಜ್ಯಕ್ಕೆ ʼಕರ್ನಾಟಕʼ ಎಂದು ಹೆಸರಿಟ್ಟವರು ದೇವರಾಜ ಅರಸು. ಅವರಾಗ ಮುಖ್ಯಮಂತ್ರಿಯಾಗಿದ್ದರು. ತೀರ ಕಡಿಮೆ ಸಂಖ್ಯೆಯ ಜನ ಸಮುದಾಯದಿಂದ ಬಂದ ಅರಸು ರಾಜಕೀಯದಲ್ಲಿ ತಲೆ ಎತ್ತುವುದು, ಅಧಿಕಾರ ಸೂತ್ರವನ್ನು ಹಿಡಿಯುವುದು ಸಾಧಾರಣ ಸಂಗತಿಯಾಗಿರಲಿಲ್ಲ. ರಾಜ್ಯದಲ್ಲಿ ಅಸಹಾಯಕರಾಗಿ, ಅಗಣ್ಯರಾಗಿ, ಅನುಕಂಪೆಗೆ ಒಳಗಾಗಿದ್ದ ಸಣ್ಣ ಸಣ್ಣ ಸಮುದಾಯಗಳನ್ನು ಸಂಘಟಿಸಿ ದೇವರಾಜ ಅರಸು ನಾಯಕರಾದರು; ಬಹುದೊಡ್ಡ ಶಕ್ತಿಯಾದರು. ಈ ಶಕ್ತಿಯೇ ಅವರನ್ನು ಮುಖ್ಯಮಂತ್ರಿ ಕುರ್ಚಿಯವರೆಗೆ ಕೊಂಡೊಯ್ದಿತು. ಅಷ್ಟೇ ಅಲ್ಲ ಅರಸು ಅವರ ಜೊತೆಗಿದ್ದ ಸಣ್ಣ ಸಣ್ಣ ಸಮುದಾಯಗಳನ್ನೂ ಮುನ್ನಡಿಸಿತು. ಅರಸು ಮಂತ್ರಿಮಂಡಲದಲ್ಲಿ ಮೊದಲ ಬಾರಿಗೆ ಮಂತ್ರಿಯಾದವರು ಎಂದೂ ಅಧಿಕಾರದ ಹತ್ತಿರವೇ ಸುಳಿಯದ ಇಂಥ ಸಮುದಾಯಗಳ ಜನರೇ ಆಗಿದ್ದರು. ಅದು ಅರಸು ಅವರ ಚಾಣಾಕ್ಷತನ ಮಾತ್ರ ಆಗಿರಲಿಲ್ಲ. ಅವರಿಗಿದ್ದ ಉದಾರತೆ, ಕಾಳಜಿ, ಜನಪರ ಚಿಂತನೆ ಮತ್ತು ಪ್ರಜಾಸತ್ತೆಯಲ್ಲಿ ಸರ್ವರೂ ಸಮಾನರು, ಎಲ್ಲರಿಗೂ ಸಮಪಾಲು ಸಿಕ್ಕಬೇಕೆಂಬ ನ್ಯಾಯಪರತೆ ಕಾರಣಗಳಾಗಿದ್ದವು. ಈ ಗುಣಗಳು ಅರಸರನ್ನು ಮುನ್ನಡೆಸಿದವು. ಮೂಲೆಗುಂಪಾಗಿದ್ದ ಹಲವಾರು ಸಮುದಾಯಗಳನ್ನೂ ಮುನ್ನಡೆಸಿದವು. ಕರ್ನಾಟಕ ಸರಿಯಾದ ದಿಕ್ಕಿನಲ್ಲಿ ಮುಂದೆ ಸಾಗಿತ್ತು. ಅರಸು ನಿಜ ಅರಸರಾಗಿ ಉಳಿದರು-ಜನರ ಮನದಾಳದಲ್ಲಿ.

ಮೈಸೂರು ಅರಸರ ಹತ್ತಿರದ ಸಂಬಂಧಿಯಾದರೂ ದೇವರಾಜ ಅರಸು ಮೈಸೂರಿನ ಒಡೆಯರೇನೂ ಆಗಿರಲಿಲ್ಲ. ಅವರು ಹುಟ್ಟಿದ್ದು ರೈತ ಕುಟುಂಬದಲ್ಲಿ; ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ. ಉಳುಮೆ, ಜಾನುವಾರುಗಳ ಜೊತೆಯಲ್ಲಿ ಒಡನಾಟ, ಹಳ್ಳಿಯ ಬದುಕು ಎಲ್ಲವನ್ನೂ ಬಲ್ಲವರಾಗಿದ್ದ ಅರಸು, ಅಲ್ಲಿಂದಲೇ ಕುಡಿಯೊಡೆದು, ಗಿಡವಾಗಿ, ಮರವಾಗಿ ರಾಷ್ಟ್ರ ರಾಜಕಾರಣವನ್ನೇ ಆವರಿಸುವಂತೆ ಬೆಳೆದರು. ಕರ್ನಾಟಕದ ರಾಜಕಾರಣದಲ್ಲಿ ಹೊಸ ನೀರನ್ನು ಹರಿಸಿದರು; ಹೊಸ ಶಕ್ತಿಯನ್ನು ತುಂಬಿದರು.

ಮೊದಲ ಬಾರಿಗೆ ಅವರು ಹಾವನೂರು ಆಯೋಗವನ್ನು ರಚಿಸಿದ್ದು ಬಹುದೊಡ್ಡ ಸಾಧನೆ. ತನ್ನೆಲ್ಲ ಶಕ್ತಿಯನ್ನು ತೊಡಗಿಸಿ, ಅಪಾರ ಕಾಳಜಿಯಿಂದ ಎಲ್‌.ಜಿ.ಹಾವನೂರು ಸಿದ್ಧಪಡಿಸಿದ ಬೃಹತ್‌ ವರದಿ ಕರ್ನಾಟಕದ ಜನಜೀವನದ ದಿಕ್ಕನ್ನೇ ಬದಲಾಯಿಸಿತು. ಈ ವರದಿಯಲ್ಲಿ ಹಾವನೂರು ರಾಜ್ಯದ ಸಣ್ಣಪುಟ್ಟ ಜನ ಸಮುದಾಯಗಳು, ಬೆಳಕಿಗೇ ಬಾರದೇ ನೂರಾರು ವರ್ಷ ಕತ್ತಲೆಯಲ್ಲಿಯೇ ಉಸಿರಾಡಿದ ಗುಂಪುಗಳು ಮೊದಲ ಬಾರಿಗೆ ಈ ವರದಿಯಲ್ಲಿ ಮುಖ ತೋರಿಸಿದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಗುರುತೂ ದಾಖಲಾಗಬೇಕು, ಅವರಿಗೆ ಸಿಕ್ಕಬೇಕಾದ ನ್ಯಾಯಬದ್ಧ ಪಾಲು ಸಿಕ್ಕಬೇಕು, ಅವರೂ ಇತರರ ಹಾಗೆ ತಲೆ ಎತ್ತಿ ನಡೆಯಬೇಕು, ಅದಕ್ಕೆ ಅಗತ್ಯವಾದ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ದಕ್ಕಬೇಕು ಎಂದು ಈ ವರದಿ ಹೇಳಿತು. ಅರಸು ಆಯೋಗವನ್ನು ರಚಿಸಿದ ಹಿಂದಿನ ಉದ್ದೇಶ, ಗುರಿ ಇದೇ ಆಗಿತ್ತು. ಈ ವರದಿಯನ್ನು ಅರಸು ಸಚಿವ ಸಂಪುಟ ಒಪ್ಪಿ ಜಾರಿಗೆ ತಂದಿತು. ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಿರುಗಾಳಿಯೇ  ಬೀಸಿ ಕರ್ನಾಟಕದ ಚಲನೆಗೆ ಹೊಸ ಶಕ್ತಿ ಮತ್ತು ವೇಗ ದೊರೆತವು. ಅರಸು ಎದೆಎದೆಗಳಲ್ಲಿ ಉಳಿದದ್ದು ಚರಿತ್ರೆಯ ಭಾಗವಾಯಿತು.

ಅರಸು ದಲಿತರ, ತಳ ಸಮುದಾಯಗಳ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿದ್ದರು. ಸಾವಿರಾರು ವರ್ಷಗಳಿಂದ ಹಲಬಗೆಯ ವಂಚನೆಗೆ ಒಳಗಾಗಿದ್ದ ಅವರಿಗೆ ನ್ಯಾಯ ಸಿಕ್ಕಬೇಕು, ಸಮಪಾಲು ದೊರೆಯಬೇಕು ಎಂಬುದು ಅರಸರ ಒಳದನಿಯಾಗಿತ್ತು.

ʼಕನ್ನಡ ಸಾಹಿತ್ಯದಲ್ಲಿ ಬೂಸಾʼ ಇರುವುದನ್ನು ಗಟ್ಟಿ ಗಂಟಲಲ್ಲಿ ಸಾರ್ವಜನಿಕವಾಗಿ ಸಾರಿದ ಬಸವಲಿಂಗಪ್ಪ ಅವರು ಅರಸು ಸಂಪುಟದಲ್ಲಿ ಬಹಳ ಮುಖ್ಯರಾದ ಸಚಿವರಾಗಿದ್ದರು. ಆಗಿನ್ನೂ ಸಾಮಾಜಿಕ ಮಾಧ್ಯಮಗಳಾಗಲಿ, ವಿದ್ಯುನ್ಮಾನ ಮಾಧ್ಯಮಗಳಾಗಲಿ ಇರಲಿಲ್ಲ. ಮುದ್ರಣ ಮಾಧ್ಯಮವೇ ಪ್ರಭಾವಶಾಲಿ ಮಾಧ್ಯಮವಾಗಿತ್ತು. ವರದಿಗಾರರು ಮಾಡುವ ವರದಿಯೇ  ಅಧಿಕೃತ ವರದಿಯಂತಿದ್ದ ಕಾಲ ಅದು. ಕನ್ನಡ ಸಾಹಿತ್ಯವೇ ಬೂಸಾ ಎಂದು ಇಡೀ ರಾಜ್ಯದಲ್ಲಿ ಗದ್ದಲ ಎದ್ದಿತು. ಮೇಲ್ವರ್ಗ ಮತ್ತು ಮೇಲ್ಜಾತಿಗಳು ಇದನ್ನೇ ಪ್ರಬಲ ಅಸ್ತ್ರವಾಗಿ ಝಳಪಿಸಿದವು. ಅರಸು ಅವರಿಗೆ ಇದು ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಅರಸರ ಮೇಲೆ ದೊಡ್ಡ ಒತ್ತಡ ಬಂತು. ದಲಿತ ಸಮುದಾಯದ ದಿಟ್ಟ ಪ್ರತಿನಿಧಿಯಾಗಿದ್ದ ಬಸವಲಿಂಗಪ್ಪ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಬೇಕೆಂಬ ತೀವ್ರವಾದ ಒತ್ತಡ ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು.

ಅರಸು ಮೈಸೂರಿಗೆ ಬಂದರು. ಅವರ ಸೋದರ ಸಂಬಂಧಿ ಚದುರಂಗರು ಮೈಸೂರಿನ ಒಂಟಿಕೊಪ್ಪಲಿನಲ್ಲಿದ್ದರು. ಮುಖ್ಯಮಂತ್ರಿ ಅರಸು ಚದುರಂಗರ ಮನೆಗೆ ಬಂದು, ಬಸವಲಿಂಗಪ್ಪ ಏನು ಹೇಳಿದರು ಸರಿಯಾಗಿ ತಿಳಿದುಕೊಳ್ಳಬೇಕಲ್ಲಾ ಎಂದರು. ಚದುರಂಗರು ಅವತ್ತಿನ ಸಭೆಯಲ್ಲಿದ್ದ ಪ್ರೊ. ಜಿ.ಎಚ್‌.ನಾಯಕರನ್ನು ಕರೆಸಿದರು. ನಾಯಕರು ಹೇಳುವುದನ್ನೆಲ್ಲ ಅರಸು ಕೇಳಿಕೊಂಡರು. ಬಸವಲಿಂಗಪ್ಪ ಮಾತನಾಡಿದ್ದರಲ್ಲಿ ಉತ್ಪ್ರೇಕ್ಷೆ ಏನಿಲ್ಲ ಎಂಬುದು ಅವರಿಗೆ ಮನದಟ್ಟಾಯಿತು. ಸರಿ ಎಂದು ಬೆಂಗಳೂರಿಗೆ ವಾಪಸ್ಸಾದರು. ಬಸವಲಿಂಗಪ್ಪನವರನ್ನು ಸಂಪುಟದಿಂದ ಕೈಬಿಡುವ ಮಾತೇ ಇಲ್ಲ ಎಂದು ನಿರ್ಧರಿಸಿದರು. ಆದರೆ ಒತ್ತಡ ಎಷ್ಟು ಜೋರಾಗಿತ್ತೆಂದರೆ ಅರಸು ಮಣಿಯಲೇ ಬೇಕಾಗಿತ್ತು. ಬಸವಲಿಂಗಪ್ಪ ಮಂತ್ರಿ ಪದವಿ ಕಳೆದುಕೊಂಡರು. ಇದರಿಂದ ಅರಸು ಬಹಳ ನೊಂದುಕೊಂಡರು.

ಎತ್ತರಕ್ಕೆ, ಜಟ್ಟಿಯಹಾಗಿದ್ದ ಅರಸು ಬಡಪೆಟ್ಟಿಗೆ ಬಗ್ಗುವವರಾಗಿರಲಿಲ್ಲ. ನಗರದ ಮೇಲ್ವರ್ಗ, ಶಿಕ್ಷಿತ ವರ್ಗ, ಅಧಿಕಾರಿ ವರ್ಗ ಮತ್ತು ಈ ಬಗೆಯ ಸಭಿಕರೇ ಇರುತ್ತಿದ್ದ ಸಭೆಗಳಲ್ಲಿ ಅರಸು ಎಷ್ಟು ದಿಟ್ಟವಾಗಿ ಮಾತನಾಡುತ್ತಿದ್ದರೆಂದರೆ, ʼನಿಮ್ಮ ಓಟುಗಳೇ ನನಗೆ ಬೇಡ, ನಮ್ಮ ಪಕ್ಷಕ್ಕೆ ಓಟುಕೊಡುವವರು ಯಾರೆಂಬುದು ನನಗೆ ಗೊತ್ತು, ಮಾತಿಲ್ಲದೆ ಮೌನವಾಗಿ ನ್ಯಾಯಬದ್ಧವಾಗಿ ಬದುಕುತ್ತಿರುವ ಆ ಮತದಾರರು ನಮ್ಮವರು. ಅವರು ʼಕಾಣದ ಮತದಾರರುʼ. ನನಗೆ ಅವರೇ ಮುಖ್ಯʼ ಎನ್ನುತ್ತಿದ್ದರು.

ಅರಸು ಚಿಂತನೆ ಪಾರದರ್ಶಕ; ಒಳ-ಹೊರಗನ್ನು ತೋರಿಸುವ ಶುಭ್ರ ಚಿಂತನೆ. ಅದಕ್ಕೆ ಒಪ್ಪುವ ನಡವಳಿಕೆ. ನೊಂದವರ, ಬಡವರ, ತಳ ಸಮುದಾಯಗಳ ಮಾತು ಅವರಿಗೆ ಕೇಳುತ್ತಿತ್ತು. ಅವರ ಬದುಕು ಅರಸರಿಗೆ ತಿಳಿಯುತ್ತಿತ್ತು. ಈ ಸಮುದಾಯಗಳನ್ನು ಮೇಲೆತ್ತಲು ರಾಜಕೀಯವಾಗಿ ಏನೆಲ್ಲ ಮಾಡಬಹುದು ಎಂದು ಸದಾ ಅರಸು ಚಿಂತಿಸುತ್ತಿದ್ದರು. ಅದನ್ನೇ ಮಾಡಲು ಹೋಗಿ ಗೆದ್ದರು; ಆಗಾಗ ಬಿದ್ದರು. ಮುಗ್ಧರು ಎಂದುಕೊಂಡವರೇ ಅರಸರಿಗೆ ಕೈಕೊಟ್ಟರು. ಅರಸು ಅದನ್ನೆಲ್ಲ ನುಂಗಲೇಬೇಕಾಗಿತ್ತು.

ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಉದ್ಘಾಟಿಸಿದವರು ಅರಸು-ಎಂಬ ಬಿರುದೂ ಅವರ ಹೆಗಲನ್ನೇರಿತು. ಅರಸು ಅದನ್ನೂ ಮುಚ್ಚಿಡಲಿಲ್ಲ. ʼನಾನೇನು ಮಾಡಲಪ್ಪ, ಹೈಕಮಾಂಡಿಗೆ ಕೊಡಬೇಕಲ್ಲʼ ಎನ್ನುತ್ತಿದ್ದರು.

ಅದು ನಿಜ. ಅರಸು ಸ್ವಂತಕ್ಕೆ ಏನೂ ಮಾಡಿಕೊಳ್ಳಲಿಲ್ಲ. ಅಧಿಕಾರ ಕಳೆದುಕೊಂಡಾಗ ಅವರು ಸಾಮಾನ್ಯ ಮನುಷ್ಯನಂತೆಯೇ ಇದ್ದರು. ಹಣಕ್ಕೆ ಪರದಾಡುತ್ತಿದ್ದರು. ಸಣ್ಣಪುಟ್ಟ ಅಗತ್ಯಗಳಿಗೂ ಅವರು ಮಿತ್ರರನ್ನು, ಹತ್ತಿರದವರನ್ನು, ನಂಬಿಕೆಯವರನ್ನು ಅವಲಂಬಿಸಬೇಕಾಗಿತ್ತು.

ಅರಸು ಚಿಂತನೆ ಸಮಾಜಮುಖಿಯಾದದ್ದು; ಜನಪರವಾದದ್ದು. ನಿರಂತರವಾಗಿ ಅವರು ಓದುತ್ತಿದ್ದರು. ಬುದ್ಧಿಜೀವಿಗಳನ್ನು, ಚಿಂತಕರನ್ನು ಅವರು ಗೌರವಿಸುತ್ತಿದ್ದರು. ಆದರೆ ಈ ಚಿಂತನೆಯ ದಿಕ್ಕು ಜನಹಿತದ ಕಡೆಗೇ ಇರಬೇಕೆಂದು ಬಲವಾಗಿ ನಂಬಿದ್ದರು. ಮುಂಬೈನಲ್ಲಿದ್ದ ಪ್ರಖರ ಬುದ್ಧಿಮತ್ತೆಯ ಪಿ.ಕೆ.ಶ್ರೀನಿವಾಸನ್‌ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳಲು ಅರಸು ಅವರು ಪಿಕೆಯನ್ನು ಬೆಂಗಳೂರಿಗೆ ಕರೆಸಿಕೊಂಡರು. ಕಾರ್ಯದರ್ಶಿಯಾಗಿ ಅವರನ್ನು ಕಾಣದೆ, ಸಮಾನ ಮನಸ್ಕರಾಗಿ ಅವರೊಂದಿಗೆ ಬೆರೆಯುತ್ತ, ಚಿಂತಿಸುತ್ತ, ಓದುತ್ತ, ಕರ್ನಾಟಕದ ಮುನ್ನಡೆಗೆ ಏನು ಮಾಡಬಹುದು ಎಂಬುದನ್ನು ರೂಪಿಸುತ್ತಿದ್ದರು.

ನನಗೆ ನೆನಪಿರುವಂತೆ ಲಂಕೇಶ್‌ ಅವರು ಅರಸು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅರಸು ಅವರಿಗೆ ಕಾಣಿಕೆಯಾಗಿ ಕೊಟ್ಟದ್ದು ಒಂದು ಮಹತ್ವದ ಪುಸ್ತಕ- ಷೂಮಾಕರ್‌ ಅವರ ʼಸ್ಮಾಲ್‌ ಈಸ್‌ ಬ್ಯೂಟಿಫುಲ್‌ʼ. ಅರಸು ಲಂಕೇಶರನ್ನು ಬಹಳ ಪ್ರೀತಿ-ಗೌರವದಿಂದ ಕಂಡದ್ದು ಮಾತ್ರವಲ್ಲ, ಆ ಪುಸ್ತಕವನ್ನು ಬಹಳ ಆಸಕ್ತಿಯಿಂದ ಓದಿದರೆಂದೂ ಕೇಳಿದ್ದೇನೆ.

ಜಿ.ಪಿ.ಬಸವರಾಜು

ಹಿರಿಯ ಪತ್ರಕರ್ತರು, ಸಾಹಿತಿಗಳು

ಇದನ್ನೂ ಓದಿ

ಸ್ಮರಣೆ | ಅರಸರ ಸಾಂಸ್ಕೃತಿಕ ಒಗ್ಗೂಡುವಿಕೆ ಕಲ್ಪನೆಗಳು

Related Articles

ಇತ್ತೀಚಿನ ಸುದ್ದಿಗಳು