ಕೊಚ್ಚಿನ್: ಸಮಾಜದಲ್ಲಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಗೌರವವಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಹಿರಿಯ ನಟ ಹಾಗೂ ನಿರ್ದೇಶಕ ಬಾಲಚಂದ್ರ ಮೆನನ್ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಂತರ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಯಿತು.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬೆಳಕಿಗೆ ಬಂದ ನಂತರ, ಅನೇಕ ನಟಿಯರು ಈ ಹಿಂದೆ ಕಿರುಕುಳವನ್ನು ಎದುರಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 2007ರಲ್ಲಿ ಚಲನಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕ ಬಾಲಚಂದ್ರ ಮೆನನ್ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ನಟಿಯೊಬ್ಬರು ಇತ್ತೀಚೆಗೆ ದೂರು ನೀಡಿದ ನಂತರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
17 ವರ್ಷಗಳ ನಂತರ ದೂರು ದಾಖಲಾಗಿದ್ದು, ತನ್ನ ಪ್ರತಿಷ್ಠೆಗೆ ಧಕ್ಕೆ ತರುವುದು ಅರ್ಜಿದಾರರ ಉದ್ದೇಶವಾಗಿದೆ ಎಂದು ಮೆನನ್ ಹೈಕೋರ್ಟ್ಗೆ ತಿಳಿಸಿದರು. ಈ ವಾದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಅವರು, 40 ಚಿತ್ರಗಳನ್ನು ನಿರ್ದೇಶಿಸಿರುವ ಮೆನನ್ ಅವರಿಗೆ ಎರಡು ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದು, ಸರಕಾರದಿಂದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಗೌರವ ಕೇವಲ ಹೆಣ್ಣಿಗಷ್ಟೇ ಅಲ್ಲ ಪುರುಷರಿಗೂ ಇದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ನ್ಯಾಯದ ಹಿತದೃಷ್ಟಿಯಿಂದ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಧೀಶ ಹೇಳಿದ್ದಾರೆ.
ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಮೆನನ್ ಅವರಿಗೆ ಸೂಚಿಸಲಾಗಿದೆ. ಮೆನನ್ ಅವರನ್ನು ಬಂಧಿಸಲು ತನಿಖಾಧಿಕಾರಿ ಪ್ರಸ್ತಾಪಿಸಿದರು. ಆದರೆ ರೂ.50,000 ಬಾಂಡ್ ಮತ್ತು ಇಬ್ಬರ ಶ್ಯೂರಿಟಿಯ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಯಿತು.