Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸಾರ್ವಜನಿಕ ಹಣ ದುರುಪಯೋಗ: ಬೊಮ್ಮಾಯಿ ವಿರುದ್ಧ ರಮೇಶ್‌ ಬಾಬು ಆರೋಪ

ಬೆಂಗಳೂರು: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ನೀಡುವುದರ ಜೊತೆಗೆ ಮಣ್ಣು ಸಂರಕ್ಷಣೆಯ ಹೆಸರಿನಲ್ಲಿ ಒಂದು ನೂರು ಕೋಟಿ ರೂಪಾಯಿಗಳನ್ನು ನೀಡುವುದರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಅವರ ವೈಯಕ್ತಿಕ ಚಪಲಕ್ಕೆ ಬಲಿಯಾಗಿದ್ದು, ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್‌ ಬಾಬು ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ, ಈ ನೆಲದ ಮಣ್ಣು ಮತ್ತು ಬೆಳೆಗಳ ಕುರಿತು ಕ್ರಮ ಕೈಗೊಳ್ಳಲು, ಅದ್ಯಯನ ಮಾಡಲು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ತಜ್ಞರು ಮತ್ತು ಪ್ರಗತಿಶೀಲ ರೈತರು ಇರುತ್ತಾರೆ. ಜಗ್ಗಿ ವಾಸುದೇವ್ ಅವರಂತಹ ವ್ಯಾಪಾರಿ ಮನೋಭಾವದ ದೇವಮಾನವರ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಜನಸಾಮಾನ್ಯರ ತೆರಿಗೆ ಹಣವನ್ನು ಬೇಕಾಬಿಟ್ಟಿ ವಂಚಕರಿಗೆ ಹಂಚಲು ಬೊಮ್ಮಾಯಿಯವರಿಗೆ ಯಾವುದೇ ಅಧಿಕಾರ ನೈತಿಕತೆ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಗ್ಗಿ ವಾಸುದೇವ್‌ರವರು ಈ ಹಿಂದೆಯೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಣ ಮತ್ತು ಭೂಮಿ ಕೋರಿ ಮನವಿಗಳನ್ನು ಸಲ್ಲಿಸಿದ್ದರು. ಹಿಂದಿನ ಸರ್ಕಾರಗಳು ಇವರ ಮನವಿಯನ್ನು ಪರಿಗಣಿಸಿರಲಿಲ್ಲ. ಕಾವೇರಿ ಕೂಗು ಅಭಿಯಾನದಲ್ಲಿ ಸಂಗ್ರಹವಾದ ಹಣದ ಮಾಹಿತಿ ಬಹಿರಂಗಪಡಿಸದ ಆರೋಪ ಇವರ ಮೇಲಿದೆ. ತಮಿಳುನಾಡಿನ ಕೊಯಮತ್ತೂರಿನ ಭೂ ಹಗರಣ, ಸರ್ಕಾರಕ್ಕೆ ತೆರಿಗೆ ವಂಚನೆ ಆರೋಪ, ಅರಣ್ಯ ಭೂಮಿಯ ಒತ್ತುವರಿ ಮುಂತಾದ ಆರೋಪಗಳು ಇವರ ಮೇಲೆ ಮತ್ತು ಇವರ ಪೌಂಡೇಷನ್ ಮೇಲೆ ಇರುತ್ತದೆ. ರಾಜ್ಯಕ್ಕೆ ಉಪಯೋಗವಿಲ್ಲದ ನಕಲು ಮಾಡಿದ ಯೋಜನೆಗೆ ಹಣ ನೀಡುವ ಮೂಲಕ ಬೊಮ್ಮಾಯಿಯವರು ತಪ್ಪನ್ನು ಎರಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಕಡೆ ಸರ್ಕಾರದ ಹಣವನ್ನು ಬೇಕಾಬಿಟ್ಟಿ ಹಂಚಿಕೆ ಮಾಡುವ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಪುಣ್ಯಕೋಟಿ ಯೋಜನೆಗೆ ಭಿಕ್ಷೆ ಬೇಡುತ್ತಾರೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ನೌಕರರ ನ್ಯಾಯಯುತ ಬೇಡಿಕೆಗಳನ್ನು ಬಾಕಿಯಿಟ್ಟು, ಪುಣ್ಯಕೋಟಿ ಯೋಜನೆಗೆ ಹಣ ನೀಡಿದರೆ ಬೇಡಿಕೆಗಳನ್ನು ಈಡೇರಿಸುವ ಆಮಿಷ ಒಡ್ಡಿ ನೂರು ಕೋಟಿ ರೂಪಾಯಿಗಳ ಒಂದು ದಿನದ ವೇತನ ನೀಡಲು ಸಂಘದಿಂದ ಒಪ್ಪಿಗೆ ಪತ್ರ ಪಡೆಯುತ್ತಾರೆ. ಜಗ್ಗಿ ವಾಸುದೇವ್‌ ಅವರಿಗೆ ಕಾರಣವಿಲ್ಲದೆ ಜನರ ತೆರಿಗೆ ಹಣವನ್ನು ನೀಡಿ ರಾಜ್ಯವನ್ನು ವಂಚಿಸಿರುವ ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರಿಂದ ವಂತಿಗೆ ಪಡೆಯುವ ನೈತಿಕತೆ ಇದೆಯೇ? ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಇದುವರೆಗೆ ಏಳನೇ ವೇತನ ಆಯೋಗವನ್ನು ರಚಿಸಿರಲ್ಲ, ನೌಕರರಿಗೆ 18 ತಿಂಗಳ ತುಟ್ಟಿಭತ್ಯೆ ನೀಡಿಲ್ಲ, ಖಾಲಿಯಿರುವ ಹುದ್ದೆಗಳನ್ನು ತುಂಬಿಕೊಂಡಿಲ್ಲ, ವರ್ಗಾವಣೆ ನೀತಿ ಭ್ರಷ್ಟಮಯವಾಗಿದೆ. ಸರ್ಕಾರ ಘೋಷಣೆ ಮಾಡಿದ ಸ್ಥಳಗಳಲ್ಲಿ ಗೋಶಾಲೆಗಳೇ ಇರುವುದಿಲ್ಲ. ರಾಜ್ಯದ ರೈತರಿಗೆ ಸ್ಪಂದಿಸದ ಸರ್ಕಾರ ಜಗ್ಗಿ ವಾಸುದೇವ್‌ಗೆ ತಲೆಬಾಗುತ್ತದೆ. ಪುಣ್ಯಕೋಟಿ ಹೆಸರಿನಲ್ಲಿ ದಂದೆ ಮಾಡುವ ಅನಿವಾರ್ಯತೆ ಸೃಷ್ಟಿ ಮಾಡುತ್ತದೆ ಎಂದು ದೂರಿದ್ದಾರೆ.

ಜಗ್ಗಿ ವಾಸುದೇವ್‌ರವರ ಮೇಲೆ ಆರೋಪಗಳ ಜೊತೆಗೆ ಪ್ರಕರಣಗಳೂ ನ್ಯಾಯಾಲಯದಲ್ಲಿ ಬಾಕಿಯಿರುತ್ತವೆ. ಕಳಂಕಿತರಿಗೆ ಮತ್ತು ಆರೋಪಿತರಿಗೆ ರಾಜ್ಯ ಸರ್ಕಾರದ ಹಣವನ್ನು ಹಂಚಿಕೆ ಮಾಡುವ ಪ್ರವೃತ್ತಿ ಸಾರ್ವಜನಿಕ ಹಿತದೃಷ್ಟಿಯಿಂದ ನಿಲ್ಲಬೇಕಾಗಿದೆ. ಹೀಗಾಗಿ ಬಸವರಾಜ ಬೊಮ್ಮಾಯಿಯವರು ಜಗ್ಗಿ ವಾಸುದೇವ್ ಪೌಂಡೇಷನ್ ಜೊತೆಯಲ್ಲಿ ಮಾಡಿಕೊಂಡಿರುವ ಒಪ್ಪಂದ (MOU) ರದ್ದುಪಡಿಸಿ, ಹಂಚಿಕೆಯಾದ ಜಮೀನು ವಾಪಸ್ಸು ಪಡೆದು ರಾಜ್ಯದ ಜನರ ಕ್ಷಮೆ ಕೇಳಲಿ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು