ತನಗೆ ಆಗದವರ ಮಟ್ಟ ಹಾಕಲು, ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳ ಸುಮ್ಮನಾಗಿಸಲು, ಓಟು ಗಿಟ್ಟಿಸಲು ಬಿಜೆಪಿ ಶಾಸಕ ಮುನಿರತ್ನ ಹನಿಟ್ರಾಪ್ ಮಾಡುತ್ತಿದ್ದರು. ಅದಕ್ಕಾಗಿಯೇ ಎರಡ್ಮೂರು ಪ್ರತ್ಯೇಕ ಸ್ಟುಡಿಯೋ ಸೆಟಪ್ ಕೂಡಾ ಮಾಡಿಕೊಂಡಿದ್ದಾರೆ ಎಂದು ಶಾಸಕ ಮುನಿರತ್ನ ಬೆಂಬಲಿಗ, ಜುಲೈ 23 ರ ಭಾನುವಾರ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ವೇಲು ನಾಯ್ಕರ್ ಒಂದು ಕಾಲದಲ್ಲಿ ಶಾಸಕ ಮುನಿರತ್ನ ಆಪ್ತ ವಲಯದಲ್ಲಿದ್ದು, ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಹೇಗೆ ಅಂದಾಗ ಈಸ್ಟಮನ್ ಕಲರ್ ಸಿನಿಮಾ ಇದೆ, ಅದನ್ನು ತೋರಿಸಿ ಓಟು ಗಿಟ್ಟಿಸೋದು ಅನ್ನೋ ಮತನ್ನು ಹೇಳಿದ್ದರು. ಇದು ಮುನಿರತ್ನ ಚುನಾವಣೆ ಎದುರಿಸೋ ರೀತಿ ಅಂತಲೇ ವೇಲು ನಾಯ್ಕರ್ ನೇರವಾಗಿ ಆರೋಪಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಕಾರ್ಪೊರೇಟರ್ ಗಳಾದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ, ಸಿದ್ದೇಗೌಡರು ಸೇರಿದಂತೆ ನೂರಾರು ಮಂದಿ ಅವರ ಅನುಯಾಯಿಗಳು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಕಾರ್ಯಕ್ರಮದಲ್ಲಿ ಮುನಿರತ್ನ ಮೇಲೆ ವೇಲು ನಾಯ್ಕರ್ ಮೇಲಿನಂತೆ ಆರೋಪಿಸಿದ್ದಾರೆ.

ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಸಚಿವರಾದ ಮೇಲೂ ಇದನ್ನೇ ಮುಂದುವರಿಸಿಕೊಂಡೇ ಬಂದಿದ್ದಾರೆ. ಅವರ ಕಚೇರಿಗಳಲ್ಲಿ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು. ಆಗದವರ ಮೇಲೆ ಹನಿಟ್ರ್ಯಾಪ್ ಮಾಡಿ ಹೆದರಿಸುವುದು ಮಾಡುತ್ತಾರೆ. ಜೆ.ಪಿ.ಪಾರ್ಕ್, ಡಾಲರ್ಸ್ ಕಾಲೋನಿಯಲ್ಲಿ ಇದಕ್ಕಾಗಿ ಒಂದು ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಹೇಗಿದ್ದರೂ ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ.