ಇದು ಸ್ಮಾರ್ಟ್ ಫೋನ್ ಯುಗ. ಮಾಹಿತಿಗಳ ಮಹಾಪೂರವನ್ನೇ ನಮ್ಮ ಬೊಗಸೆಗೆ ತಂದು ಸುರಿಯುವ ಮೊಬೈಲ್ ಫೋನ್ ಗಳು ನಮ್ಮ ನೆಮ್ಮದಿಯನ್ನೂ, ಆರೋಗ್ಯವನ್ನೂ ಕಸಿಯುತ್ತಿವೆಯೇ? ಈ ಪ್ರಶ್ನೆ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಹನುಮಂತ ದಾಸರ ಹೊಗರನಾಳ ಅವರದು.
ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲದೇ ಸುತ್ತಲಿನ ವಾತಾವರಣಕ್ಕೂ, ಪ್ರಾಣಿ ಪಕ್ಷಿಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ.
ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬೆನ್ನಿಗೆ ಬಿದ್ದ ಮಾನವ ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನೂ ಕೂಡ ನಡೆಸಿ ಕೊಳ್ಳುವಲ್ಲಿ ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಸನ್ನಿವೇಶ ಇಂದು ನಮ್ಮೆದುರಿಗೆ ಸುಳಿದಿದೆ. ಮಾನವನ ಬದುಕಿಗೆ ಬೇಕಾದ ಪ್ರತಿಯೊಂದು ಕಾರ್ಯಗಳಿಗೆ ಇಂದು ತಂತ್ರಜ್ಞಾನ ಸಹಪಾಠಿಯಾಗಿ ನಿಂತಿದೆ.
ಮೊಬೈಲ್ ಮನುಷ್ಯನಿಗೆ ಮರುಳೋ, ಮನುಷ್ಯ ಮೊಬೈಲ್ ಗೆ ಮರುಳೋ?
ಇಂತಹ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಎಂಬ ಒಂದು ವಿಶೇಷ, ವಿಭಿನ್ನ ಹಾಗೂ ವಿಚಿತ್ರವಾದಂತಹ ತಂತ್ರಜ್ಞಾನ ಇಂದು ಪ್ರತಿಯೊಬ್ಬ ಮಾನವನನ್ನು ಆಳುವಂತಾಗಿದೆ. ಮೊಬೈಲ್ ನ್ನು ಎಷ್ಟು ಬೇಕೋ ಅಷ್ಟೇ ಬಳಸುವ ವ್ಯಕ್ತಿಯನ್ನು ಹುಡುಕುವುದಾದರೆ ಅದು ಜಗತ್ತಿನಲ್ಲೇ ತುಂಬಾ ಕಷ್ಟಕರವಾದ ಸಂಶೋಧನೆ ಆಗಬಹುದು. ಜಗತ್ತಿನಲ್ಲಿ ಎಷ್ಟು ತಂತ್ರಜ್ಞಾನಗಳು ಅನಾವರಣ ಗೊಂಡಿವೆಯೋ ಅವುಗಳು ಅಷ್ಟೇ ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಮೊಬೈಲ್ ಎನ್ನುವುದು ಅಂಗೈಯೊಳಗಿನ ಒಂದು ಚಿಕ್ಕ ತಂತ್ರಜ್ಞಾನದ ಸಾಧನೆಯಾದರೂ ಅದು ಇಡೀ ಜಗತ್ತನ್ನೇ ಅಂಗೈಯಲ್ಲಿ ತೋರಿಸುವಂತಹ ತಂತ್ರಜ್ಞಾನವನ್ನು ಒಳಗೊಂಡಿದೆ ಮತ್ತು ಅಂತಹ ವಿಭಿನ್ನ ತಂತ್ರಜ್ಞಾನದಿಂದ ನಾವು ಏನು ಬೇಕಾದರೂ ಕ್ಷಣಾರ್ಧದಲ್ಲೇ ಪಡೆದುಕೊಳ್ಳಬಹುದು. ಇಂತಹ ಮೊಬೈಲ್ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಏನೆಲ್ಲಾ ನಡೆಯಬೇಕೋ ಅದೆಲ್ಲಾ ನಡಿಯುತ್ತೆ, ಏನೆಲ್ಲಾ ನಡಿಯಬಾರದೋ ಅದೆಲ್ಲಾ ನಡಿಯುತ್ತೆ ಹಾಗೂ ಸಮಾಜದ ಮೇಲೆಯೂ ಕೆಟ್ಟದೂ ಒಳ್ಳೆಯದೂ ಪ್ರಭಾವ ಬೀರುತ್ತದೆ. ಆದರೆ ಪರಿಣಾಮವು ಅದರ ಬಳಕೆಯ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಬೇಕಾದಕಿಂತ ಅತಿಯಾಗಿ ಮೊಬೈಲ್ ನ್ನು ನಾವು ಉಪಯೋಗಿಸುತ್ತಿದ್ದೇವೆ. ಜೊತೆಗೆ ಗೊತ್ತಿಲ್ಲದೇ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ.

ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದು ಅವನ ಮಾನಸಿಕ ಸ್ಥಿತಿ, ಮಾನಸಿಕ ಸ್ಥಿತಿ ಸರಿಯಾಗಿದ್ದರೆ ಮಾತ್ರ ಮನುಷ್ಯ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಹೀಗಿರುವಾಗ, ಅತಿಯಾದ ಮೊಬೈಲ್ ಬಳಕೆಯಿಂದ ಮಾನವನ ಮೃದು ಮನಸ್ಸಿನ ಮೇಲೆ ಒತ್ತಡ ಬಿದ್ದು ಅವನ ಆರೋಗ್ಯ ದುಸ್ಥಿತಿಗೂ ಕಾರಣವಾಗುತ್ತದೆ. ಇತ್ತೀಚೆಗಂತೂ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲ ಅಂದ್ರೆ ಮಕ್ಕಳು ಊಟ ಮಾಡುವುದಿಲ್ಲ. ನಿದ್ರೆ ಮಾಡುವುದಿಲ್ಲ. ಕೆಲವು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಆಗ ಮಕ್ಕಳು ಅತ್ತಾಗ ಅವರ ಕೈಯಲ್ಲಿ ಯಾವುದೋ ಆಟದ ಬೊಂಬೆಯೋ, ಆಟಿಕೆ ವಸ್ತುಗಳನ್ನೋ ಕೊಟ್ಟು ಅವರ ಗಮನವನ್ನು ಅವುಗಳ ಮೇಲಿರಿಸಿ ಸುಮ್ಮನಿರಿಸುವುದು ಮತ್ತು ಊಟ ಮಾಡಲು ಹಠ ಮಾಡಿದಾಗ ಚಂದ್ರನನ್ನು ತೋರಿಸಿಯೋ ಅಥವಾ ಗುಮ್ಮ ಬರುತ್ತೆ ಹಾಗೆ ಹೀಗೆ ಅಂತ ಏನೇನೋ ಹೇಳಿ ಊಟ ಮಾಡಿಸಿ ಜೋಗುಳ ಹಾಡಿ ಮಗುವನ್ನು ಮಲಗಿಸುವಂತಹ ಕಾಲವಿತ್ತು. ಆದರೇ ಇಂದು ಅದೆಲ್ಲಾ ಬದಲಾಗಿ ವಿರುದ್ಧ ದಾರಿಯಲ್ಲಿ ನಡಿಯುತ್ತಿದೆ. ಅದಕ್ಕೆಲ್ಲಾ ಮೂಲ ಮಂತ್ರ ಈ ಮೊಬೈಲ್ ಎಂಬ ತಂತ್ರ. ಪ್ರತೀ ಕ್ಷಣವೂ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ ಅವತ್ತು ಆ ಮಗು ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ. ಮೇಲಾಗಿ ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಅತ್ತು ಅತ್ತು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವುದಂತೂ ಖಚಿತ. ಹೀಗೆ ಮೊಬೈಲ್ ಒಂದು ಬಿಟ್ಟರೂ ಬಿಡದ ಮಾಯೆ ಎಂಬಂತಾಗಿ ಮೊಬೈಲ್ ಮನುಷ್ಯನಿಗೆ ಮರುಳೋ, ಮನುಷ್ಯ ಮೊಬೈಲ್ ಗೆ ಮರುಳೋ ಎಂಬ ಪ್ರಶ್ನೆ ಕಾಡುವಂತಾಗಿದೆ.
ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು
ಕಣ್ಣು
ಮುಖ್ಯವಾಗಿ ಚಿಕ್ಕಮಕ್ಕಳ ಹಠಕ್ಕೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟು, ಗೇಮ್ ಹಚ್ಚಿ ಕೊಟ್ಟು ನಮ್ಮ ಕೆಲಸದಲ್ಲಿ ನಾವು ನಿರತರಾದರೆ ಮಕ್ಕಳು ಮೊಬೈಲ್ ಉಪಯೋಗಿಸುವಾಗ ಬಹಳ ಬ್ರೈಟ್ನೆಸ್ ಹೊಂದಿರುವ ಮೊಬೈಲ್ ಸ್ಕ್ರೀನ್ ಮಕ್ಕಳ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೃಷ್ಟಿ ಹೀನತೆ, ಕಣ್ಣು ಉರಿ, ತಲೆನೋವು ಇತ್ಯಾದಿ ಕಾರಣಗಳಿಗೆ ಅವರು ತುತ್ತಾಗಿ ಚಿಕ್ಕ ಮಕ್ಕಳಿಗೆ ಕನ್ನಡಕ ಧರಿಸುವಂತಹ ಸಾಧ್ಯತೆಗಳು ಹೆಚ್ಚಾಗಬಹುದು. ಕುರುಡುತನವೂ ಕಾಡಬಹುದು. ಇದು ಯುವಕರ ಆರೋಗ್ಯದ ಮೇಲೆಯೂ ಪ್ರಭಾವ ಬೀರಿ ದೂರದೃಷ್ಟಿ, ಸಮೀಪದೃಷ್ಟಿ ಎಂಬಂತಹ ತೊಂದರೆಗೆ ಅವರು ತುತ್ತಾಗಬಹುದು ಮತ್ತು ತಲೆನೋವು, ಸಿಟ್ಟು, ಚಂಚಲತೆ, ಯಾವುದರಲ್ಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಇರುವುದು ಇತ್ಯಾದಿಗಳು ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಕಿವಿ
ಅತಿಯಾಗಿ ಮೊಬೈಲ್ ಹಿಡಿದು ಮಾತನಾಡುವುದು, ಅತಿಯಾದ ಸೌಂಡ್ ಇಟ್ಟು ಹಾಡು ಕೇಳುವುದು, ಇಯರ್ ಫೋನ್ ಹಾಕಿ ಡಿಜೆ ಹಾಡುಗಳನ್ನು ಜೋರಾಗಿ ಕೇಳುವುದು ಹಾಗೂ ತಾಸುಗಟ್ಟಲೆ ಮಾತನಾಡುವಾಗ ಮೊಬೈಲ್ ಬಿಸಿಯಾಗಿ ಕಿವಿಗೆ ಬಿಸಿ ತಾಕುವುದು ಇಂತಹ ಕಾರಣಗಳಿಂದ ಕಿವಿಯ ಭಾಗಕ್ಕೆ ತೊಂದರೆಯಾಗಿ ಕಿವಿ ಕೇಳದಂತಾಗಿ ಕಿವುಡುತನಕ್ಕೂ ಕಾರಣವಾಗಬಹುದು.
ಬಾಯಿ
ಅತಿಯಾಗಿ ಮೊಬೈಲ್ ನಲ್ಲಿ ತಾಸುಗಟ್ಟಲೆ ಮಾತನಾಡುವುದರಿಂದ ಬಾಯಿಗೂ ಹಾಗೂ ದವಡೆಗೂ ಆಯಾಸವಾಗಿ ಗಂಟಲಿನಲ್ಲಿ ನೀರಿನಂಶ ಕಡಿಮೆಯಾಗಿ ಗಂಟಲು ಆರುವುದು ಮತ್ತು ಡಿಹೈಡ್ರೇಷನ್ ಆಗಬಹುದು.
ಚರ್ಮ
ಮೊಬೈಲ್ ಬಳಕೆಯನ್ನು ದೀರ್ಘ ಅವಧಿಯಲ್ಲಿ ಮಾಡುವಾಗ ಅದು ಅತೀ ಬಿಸಿಯಾಗಿ ಬ್ಯಾಟರಿ ಬ್ಲಾಸ್ಟ್ ಆಗಬಹುದು. ಅದರಿಂದ ದೇಹದ ಯಾವುದೇ ಭಾಗದ ನ್ಯೂನತೆಗೆ ಕಾರಣವಾಗಬಹುದು ಮತ್ತು ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಚರ್ಮದ ಸ್ಪರ್ಶ ಜ್ಞಾನ ಕಡಿಮೆಯಾಗಬಹುದು ಮತ್ತು ಚರ್ಮದಲ್ಲಿನ ನೀರಿನಂಶ ಕಡಿಮೆಯಾಗಿ, ರಕ್ತ ಸುಟ್ಟು ಅಲರ್ಜಿಗೂ ಕಾರಣವಾಗಬಹುದು.
ಮೆದುಳು
ಅತೀಯಾಗಿ ಮೊಬೈಲ್ ಹಿಡಿದು ಮಾತನಾಡುವುದರಿಂದ, ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವುದರಿಂದ (ರಾತ್ರಿವೇಳೆಯಲ್ಲಿ ಮಾತ್ರ ಬ್ರೈಟ್ಟ್ನೆಸ್ ಕಡಿಮೆ ಇರಬೇಕು), ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಕಣ್ಣಿಗೂ ಆಯಾಸವಾಗಿ, ಕಿವಿಯ ತಮಟೆಯ ಮೇಲೆ ಒತ್ತಡ ಬೀರಿ, ಚರ್ಮದ ಮೇಲೆಯೂ ಪರಿಣಾಮ ಬೀರಿ ನಂತರ ಮೆದುಳಿನ ಮೇಲೆಯೂ ಒತ್ತಡ ಬಿದ್ದಾಗ ಮೆದುಳಿನ ನರಗಳು ಆಯಾಸಗೊಳ್ಳಬಹುದು. ಮೆದುಳಿಗೆ ಅನಾವಶ್ಯಕ ಕೆಲಸ ಕೊಟ್ಟಾಗ ತಲೆನೋವು, ಸಿಟ್ಟು, ಚಂಚಲತೆ ಕಾಣಿಸಿಕೊಳ್ಳಬಹುದು. ವಿಚಾರ ಶಕ್ತಿ ಹಾಳಾಗಬಹುದು, ಏಕಾಗ್ರತೆ ಕುಂಠಿತಗೊಳ್ಳಬಹುದು, ಮಾನಸಿಕ ಒತ್ತಡ ಹೆಚ್ಚಾಗಿ ಮನುಷ್ಯ ಮಾನಸಿಕ ರೋಗಕ್ಕೂ ತುತ್ತಾಗಬಹುದು.
ಅಂಡಾಣುವಿನ ಮೇಲೆ
ಈ ಮೇಲಿನ ಎಲ್ಲಾ ಅಂಶಗಳಿಂದ ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು- ಹೆಣ್ಣಿನ ಲೈಂಗಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳಾದ ಈಸ್ಟ್ರೋಜನ್ ಮತ್ತು ಪ್ರಾಜೆಸ್ಟಿರೋನ್ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ. ಹೀಗೆ ಮೊಬೈಲ್ ಹಾಗೂ ಇನ್ನಿತರ ತಂತ್ರಜ್ಞಾನ ಸಾಧನಗಳ ಅತಿಯಾದ ಬಳಕೆಯಿಂದ ಮಾನವನ ಮುಖ್ಯವಾದ ಅಂಗಾಂಗಗಳ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇಂತಹ ಕಾರಣಕ್ಕಾಗಿಯೇ ಎಂಬಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದೆ.
ಈ ಎಲ್ಲಾ ಅಂಶಗಳನ್ನು ಮನಗಂಡು ನಾವು ನಮ್ಮ ನಿತ್ಯ ಮೊಬೈಲ್ ಬಳಕೆಯ ಮೇಲೆ ಗಮನ ಹರಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಇಡೀ ಜಗತ್ತನ್ನು ಅಂಗೈಯಲ್ಲಿ ತೋರಿಸಿ ನಮ್ಮ ಆರೋಗ್ಯವನ್ನು ಕಸಿದು ಕೊಳ್ಳುವಂತಹ ಮೊಬೈಲ್ ಹುನ್ನಾರಕ್ಕೆ ನಾವು ತುತ್ತಾಗದಿರೋಣ.
ಮೊಬೈಲ್ ನಿಂದ ದೂರ ಇರುವುದು ಹೇಗೆ?
ಮೊಬೈಲ್ ನಲ್ಲಿ ಅತಿಯಾಗಿ ತಲ್ಲಿನರಾಗುವುದನ್ನು ಬಿಟ್ಟು ಸ್ವಲ್ಪ ಸಮಯ ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರೊಂದಿಗೆ ಬೆರೆಯುವುದು, ಮತ್ತೊಬ್ಬರ ಕಷ್ಟ ಸುಖದ ಬಗ್ಗೆ ಮಾತನಾಡುವುದು ಅಥವಾ ಬೇರೊಬ್ಬರಿಗೆ ಸಹಾಯ ಮಾಡುವುದು, ದಿನಾಲು ಸ್ವಲ್ಪ ಸಮಯ ಮೊಬೈಲ್ ಬಿಟ್ಟು ಧ್ಯಾನದಲ್ಲಿ ಮುಳುಗುವುದು, ಸುತ್ತಲಿನ ಪರಿಸರದೊಂದಿಗೆ ಬೆರೆಯುವುದು, ಒಳ್ಳೆಯ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಪಶು ಪಕ್ಷಿಗಳ ಇಂಚರವನ್ನು ಆಲಿಸುವುದು, ಬಿಡುವಿದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು, ವಿಭಿನ್ನ ವಿಚಾರಗಳ ಬಗ್ಗೆ ತಿಳಿಯುವುದು, ಬರೆಯುವುದು, ಹಿರಿಯರೊಂದಿಗೆ ಬೆರೆತು ವಿಶೇಷ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು, ಚಿಕ್ಕ ಮಕ್ಕಳ ಜೊತೆಗೆ ಆಟ ಆಡುವುದು, ಗ್ರಾಮೀಣ ಕ್ರೀಡೆಗಳನ್ನು ಆಡುವುದು… ಇಂತಹ ಹವ್ಯಾಸಗಳನ್ನು ನಾವು ಮೈಗೂಡಿಸಿಕೊಂಡಾಗ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಹಿತವಾಗಿರುತ್ತದೆ.
ಹನುಮಂತ ದಾಸರ ಹೊಗರನಾಳ
ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.