Monday, June 17, 2024

ಸತ್ಯ | ನ್ಯಾಯ |ಧರ್ಮ

ಪಡಿತರ ಅಂಗಡಗಳ ಮುಂದೆ ಮೋದಿ ಪ್ಲೆಕ್ಸ್ ಅಳವಡಿಕೆ ಸೂಚನೆ: ತಿರಸ್ಕರಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಅವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು, ಫ್ಲೆಕ್ಸ್ಗಳನ್ನು ಮತ್ತು ಬೋರ್ಡ್‌ಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಆದರೆ, ಈ ನಿರ್ದೇಶನವನ್ನು ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಹಾಗೂ ಕೇರಳ ಮುಖ್ಯಮಂತ್ರಿ ಮತ್ತು ಪಿಣರಾಯಿ ವಿಜಯನ್ ಅವರು ಸಾಧ್ಯವಿಲ್ಲ ಎಂದಿದ್ದಾರೆ ಎಂದು ತಿರಸ್ಕರಿಸಿದ್ದಾರೆ.


ಈ ಕುರಿತು ಕೇರಳ ರಾಜ್ಯ ವಿಧಾನಸಭೆಯಲ್ಲಿ ಕೇರಳ ಸಿಎಂ ಪಿಣರಾಯ್‌ ವಿಜಯನ್ ಮಾತನಾಡಿ, ಇದು ಖಂಡಿತವಾಗಿಯೂ ಲೋಕಸಭೆ ಚುನಾವಣೆಯ ಪ್ರಚಾರದ ಗಿಮಿಕ್‌ ಆಗಿದೆ. ಇದನ್ನು ಕೇರಳದಲ್ಲಿ ಜಾರಿಗೆ ತರುವುದು ಕಷ್ಟ ಎಂದು ನಾವು ಕೇಂದ್ರಕ್ಕೆ ತಿಳಿಸುತ್ತೇವೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೂ ತರುತ್ತೇವೆ ಎಂದರು.


ಕೇಂದ್ರ ಸರಕಾರದ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿನ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ದೇಶಿಸಲಾಗಿತ್ತು. ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಪಡಿತರ ಅಂಗಡಿಗಳು ಕೇರಳದಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗ ಈ ನಿರ್ದೇಶನವನ್ನು ನೀಡಿದೆ, ಖಂಡಿತವಾಗಿಯೂ ಇದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೀಡಿರುವುದಾಗಿದೆ ಎಂದು ಪಿಣರಾಯ್‌ ವಿಜಯನ್ ದೂರಿದ್ದಾರೆ.


ಇದಕ್ಕೂ ಮುನ್ನ 10,000 ಪಡಿತರ ಅಂಗಡಿಗಳಲ್ಲಿ ಮೋದಿ ಇರುವ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿ ವರದಿ ಸಲ್ಲಿಸುವಂತೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಕೇರಳದ ನಾಗರಿಕ ಮತ್ತು ಸರಬರಾಜು ಖಾತೆ ಸಚಿವ ಜಿ.ಆರ್‌ ಅನಿಲ್ ಸದನಕ್ಕೆ ತಿಳಿಸಿದ್ದಾರೆ. 550 ಪಡಿತರ ಅಂಗಡಿಗಳಲ್ಲಿ ಪ್ರಧಾನಿಯವರ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆಯೂ ನಿರ್ದೇಶನ ನೀಡಿದೆ ಇದಲ್ಲದೆ ಕೇಂದ್ರ ಸರ್ಕಾರದ ಬ್ರ್ಯಾಂಡಿಂಗ್ ಹೊಂದಿರುವ ಕ್ಯಾರಿ ಬ್ಯಾಗ್‌ಗಳನ್ನು ಸಹ ಗ್ರಾಹಕರಿಗೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸಾರ್ವಜನಿಕರ ಹಣದ ದುರ್ಬಳಕೆ


ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಸೆಲ್ಫೀ ಹುಚ್ಚು ಹೆಚ್ಚಾಗಿದೆ. ಪ್ರಚಾರದ ವಿಚಾರದಲ್ಲಿ ‘ಸೆಲ್ಫಿ ಪಾಯಿಂಟ್‌ಗಳು’ ಮಹತ್ವದ ಪಾತ್ರ ವಹಿಸುತ್ತಿವೆ. ಅವುಗಳನ್ನು ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಲ್ಲಿ ಇರಿಸುವಂತೆ ಈ ಮೊದಲು ನಿರ್ದೇಶನವನ್ನು ನೀಡಲಾಗಿತ್ತು. ಇವೆಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗುತ್ತಿದೆ.
ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌ಗಳ ನಿರ್ಮಾಣಕ್ಕೆ ಆದೇಶ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರೈಲ್ವೇ ನಿಲ್ದಾಣಗಳಲ್ಲಿ ಸಾರ್ವಜನಿಕರ ವೆಚ್ಚದಲ್ಲಿ ಮೋದಿಯ ಪೋಟೋ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದ್ದು ವಿರೋಧಕ್ಕೆ ಕಾರಣವಾಗಿತ್ತು. ಮೋದಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದವು.

Related Articles

ಇತ್ತೀಚಿನ ಸುದ್ದಿಗಳು