ಮುಂಬೈ: ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ದಹಿ ಹಂಡಿ ಹಬ್ಬದ ವೇಳೆ ಮುಂಬೈನಲ್ಲಿ ಭೀಕರ ಅಪಘಾತ ಸಂಭವಿಸಿದೆ. ದಹಿ ಹಂಡಿ ಒಡೆಯಲು ಮಾಡಲಾಗಿದ್ದ ಮಾನವ ಪಿರಮಿಡ್ ಏಕಾಏಕಿ ಮುರಿದು ಬಿದ್ದಿದ್ದರಿಂದ ಗೋವಿಂದರು ಒಬ್ಬರ ಮೇಲೊಬ್ಬರು ಬಿದ್ದು ಸ್ಥಳದಲ್ಲಿ ಗೊಂದ ಉಂಟಾಗಿದ್ದು, ಅವರಲ್ಲಿ ಹಲವರಿಗೆ ಗಾಯವಾಗಿದೆ.
ಅಪಘಾತದಲ್ಲಿ 60ಕ್ಕೂ ಹೆಚ್ಚು ಗೋವಿಂದರಿಗೆ ಗಾಯಗಳಾಗಿದ್ದು, ಕೆಲವರಿಗೆ ತಲೆಗೆ ಗಾಯವಾಗಿದ್ದರೆ, ಕೆಲವರಿಗೆ ಮೂಳೆ ಮುರಿದಿದೆ, ಹಲವರ ಕೈಕಾಲು ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೂಲಗಳ ಪ್ರಕಾರ, 20ಕ್ಕೂ ಹೆಚ್ಚು ಜನರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, 30 ಕ್ಕೂ ಹೆಚ್ಚು ಜನರು ಇನ್ನೂ ಒಪಿಡಿಯಲ್ಲಿ ದಾಖಲಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 8 ಮಂದಿ ಗೋವಿಂದರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 3 ಮಂದಿಯನ್ನು ರಾಜವಾಡಿ ಆಸ್ಪತ್ರೆಗೆ ಮತ್ತು ಇತರರನ್ನು ಕೆಇಎಂ ಆಸ್ಪತ್ರೆ, ಸೇಂಟ್ ಜಾರ್ಜ್ ಆಸ್ಪತ್ರೆ, ಎಂಟಿ ಆಸ್ಪತ್ರೆ ಮತ್ತು ಕುರ್ಲಾ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ದಿನವಿಡೀ ವಿವಿಧ ಸ್ಥಳಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 200 ಕ್ಕೂ ಹೆಚ್ಚು ಗೋವಿಂದರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಮಹಾನಗರ ಪಾಲಿಕೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ದಹಿ ಹಂಡಿ ಹಬ್ಬದ ಸಾಂಪ್ರದಾಯಿಕ ವೈಭವ
ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿಯ ಸಂದರ್ಭದಲ್ಲಿ ದಹಿ ಹಂಡಿ (ಮೊಸರು ಕುಡಿಕೆ) ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ಗೋವಿಂದ ಎಂದು ಕರೆಯಲ್ಪಡುವ ಭಕ್ತರು ಎತ್ತರದಲ್ಲಿ ಕಟ್ಟಲಾದ ಮಡಕೆಯನ್ನು ಒಡೆಯಲು ಮಾನವ ಪಿರಮಿಡ್ ರೂಪಿಸುತ್ತಾರೆ. ಸ್ಪರ್ಧೆಯ ಭಾಗವಾಗಲು ತಂಡಗಳು ಹಲವಾರು ದಿನಗಳವರೆಗೆ ಅಭ್ಯಾಸ ಮಾಡುತ್ತವೆ. ಆದರೆ, ಮುಂಬೈನಲ್ಲಿ ಈ ಬಾರಿ ಸಂಭವಿಸಿದಂತೆ ಈ ಪ್ರಕ್ರಿಯೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತವೆ.