Sunday, June 22, 2025

ಸತ್ಯ | ನ್ಯಾಯ |ಧರ್ಮ

ಮೊಟ್ಟೆ ಪ್ರಕರಣದ ಆರೋಪಿ ಯಾವ ಪಕ್ಷದ ಕಾರ್ಯಕರ್ತ? ಇನ್ನೆಷ್ಟು ಸಾಕ್ಷ್ಯ ಬೇಕು?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬೆನ್ನಲ್ಲೇ ಮೊಟ್ಟೆ ಎಸೆದ ಆರೋಪಿ ಬಿಜೆಪಿ ಕಾರ್ಯಕರ್ತನೋ, ಕಾಂಗ್ರೆಸ್ ಕಾರ್ಯಕರ್ತನೋ ಎಂಬ ದೊಡ್ಡ ಮಟ್ಟದ ಆರೋಪ ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಈ ಬೆಳವಣಿಗೆ ತಮಾಷೆಯ ವಸ್ತುವಾಗಿ ಪರಿಣಮಿಸಿದೆ.

ಸಧ್ಯ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದು ದಾಳಿ ಮಾಡಿದ ಗಂಭೀರ ಆರೋಪವನ್ನು ಎದುರಿಸುತ್ತಿರುವ ಸೋಮವಾರಪೇಟೆಯ ಸಂಪತ್ ತಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎನ್ನುವ ಮೂಲಕ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದ್ದಾನೆ. ಈ ನಡುವೆ ಸಂಪತ್ ಮಾತನಾಡಿರುವ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಆರೋಪಿ ಸಂಪತ್ ‘ನಾನು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದೆ. ಆ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಪಕ್ಷ ನಂತರ. ಮೊದಲು ನಾನೊಬ್ಬ ಹಿಂದೂ. ಹಿಂದೂ ಕಾರ್ಯಕರ್ತ’ ಎಂದು ಮಾತನಾಡಿದ್ದಾನೆ. ವಿಡಿಯೋ ಚಿತ್ರೀಕರಣದ ಸಂದರ್ಭದಲ್ಲಿ ಸಂಪತ್ ಗೆ ಹಿನ್ನೆಲೆಯಲ್ಲಿ ಡೈಲಾಗ್ ಹೇಳಿಕೊಡುತ್ತಿರುವ ಧ್ವನಿ ಕೂಡಾ ಆ ವಿಡಿಯೋದಲ್ಲಿ ಕೇಳಿಸುತ್ತಿದ್ದು ಇದೊಂದು ಯೋಜಿತ ತಂತ್ರಗಾರಿಕೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇದರ ಜೊತೆಗೇ ಆತ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ನಿಂತಿರುವ ಫೋಟೋ ಕೂಡಾ ಬಿಜೆಪಿ ಪಕ್ಷದ ಮುಖಂಡರ ಜಾಲತಾಣಗಳ ಖಾತೆಗಳಲ್ಲಿ ಕಂಡುಬಂದಿದೆ.

ಆರೋಪಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ ವೀಡಿಯೊ ಮತ್ತು ಫೋಟೋ ಬೆನ್ನಲ್ಲೇ ಆತ RSS ಕಾರ್ಯಕರ್ತ, ಬಿಜೆಪಿ ಪಕ್ಷದ ಬೆಂಬಲಿಗ ಎಂಬುದರ ಸಾಕ್ಷ್ಯ ಒದಗಿಸುವ ಸಾಲು ಸಾಲು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಜೊತೆಯಲ್ಲಿ ತಗೆಸಿದ ಫೋಟೋ, RSS ಪಥಸಂಚಲನದಲ್ಲಿ ತೊಡಗಿಸಿಕೊಂಡ ಫೋಟೋ ಕೂಡ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ ಮಾಡಿ “ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ BJP ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು. ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ? ‘ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ಬಿಜೆಪಿ ನಡೆಸುತ್ತದೆ ಎಂದು‌ ಮಡಿಕೇರಿಯಲ್ಲಿ ಸಾಬೀತಾಗಿದೆ.” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮೇಲ್ನೋಟಕ್ಕೇ ಮೊಟ್ಟೆ ಎಸೆತದ ನಂತರದ ಬೆಳವಣಿಗೆಯಲ್ಲಿ ಈ ವ್ಯಕ್ತಿ ಕಾಂಗ್ರೆಸ್ ಬಾವುಟ ಹಿಡಿದು ನಿಂತಿದ್ದಾನೆ ಎಂಬುದು ಕಾಂಗ್ರೆಸ್ ಪಕ್ಷದ ಮತ್ತೊಂದು ಆರೋಪ. ಅದಕ್ಕೆ ಸಾಕ್ಷಿ ಎಂಬಂತೆ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂದರ್ಭದಲ್ಲಿ ಹಾಕಿದ್ದ ಪ್ಯಾಂಟ್ ನಲ್ಲೇ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ನಿಂತು ಆತ ಫೋಟೋ ತಗೆಸಿಕೊಂಡಿದ್ದೂ ಸಹ ಕೆಲವೊಂದು ಟ್ರೋಲ್ ಪೇಜುಗಳಲ್ಲಿ ವೈರಲ್ ಆಗಿವೆ.

ಸಧ್ಯ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕಿಂತ ಆತ ಯಾವ ಪಕ್ಷದ ಕಾರ್ಯಕರ್ತ ಎಂಬುದು ಈಗ ಎಲ್ಲೆಡೆ ಚರ್ಚಿತ ವಿಷಯವಾಗಿದೆ. ಆತ ಬಿಜೆಪಿ ಕಾರ್ಯಕರ್ತ ಎಂದು ಸಾಕ್ಷ್ಯ ಒದಗಿಸುವ ಹತ್ತಾರು ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಆರೋಪಿ ಸಂಪತ್ ಕಾಂಗ್ರೆಸ್ ಬಾವುಟ ಹಿಡಿದು ನಿಂತ ಒಂದೇ ಒಂದು ಫೋಟೋ ಇಟ್ಟುಕೊಂಡು ಬಿಜೆಪಿ ಆತನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಂಬಿಸಲು ಹೊರಟಂತಿದೆ. ಇದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಿಗೇ ಸಿದ್ದರಾಮಯ್ಯರ ಮೇಲೆ ಅಸಮಾಧಾನ ಇದೆ ಎಂಬ ರೀತಿಯಲ್ಲೂ ಆರೋಪಿ ಸಂಪತ್ ಹೇಳಿಕೆ ನೀಡಿದ್ದಾನೆ. ಒಟ್ಟಾರೆ ಆತ ಯಾವ ಪಕ್ಷದ ಕಾರ್ಯಕರ್ತ ಎಂದು ನಿರ್ಧರಿಸಲು ಇನ್ನೆಷ್ಟು ಸಾಕ್ಷ್ಯಗಳು ಬೇಕು ಎಂಬುದು ಇನ್ನೂ ಕಗ್ಗಂಟಾಗಿ ಉಳಿದ ಪ್ರಶ್ನೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page