BJP Vs RSS | ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿಗೆ ಪಕ್ಷದ ಸೈದ್ಧಾಂತಿಕ ಗುರು ಎಂದೇ ಬಿಂಬಿತವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ನಾಯಕರು ಶಾಕ್ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ದಯನೀಯವಾಗಿ ವಿಫಲವಾಗಿದ್ದು, ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ ಎಂದಿರುವ ಆರ್ಎಸ್ಎಸ್ನ ಕೆಲ ಮುಖಂಡರು ಒಟ್ಟಾಗಿ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಭಾನುವಾರ ಇಂದೋರ್ನಲ್ಲಿ ನೂರಾರು ಸಂಘದ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸಿದ ಮೂವರು ಹಿರಿಯ ನಾಯಕರಾದ ಅಭಯ್ ಜೈನ್, ಮನೀಶ್ ಕಾಳೆ ಮತ್ತು ವಿಶಾಲ್ ಬಾದಲ್ ಅವರು ‘ಜನಹಿತ’ ಹೆಸರಿನಲ್ಲಿ ಪಕ್ಷವನ್ನು ಘೋಷಿಸಿದರು.
ಇನ್ನು ಮೂರು ತಿಂಗಳಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತದ ವಿರುದ್ಧ ಆರೆಸ್ಸೆಸ್ ನಾಯಕರು ಹೊಸ ಪಕ್ಷ ಕಟ್ಟುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಬಿಜೆಪಿಯ ಆಡಳಿತದ ಬಗ್ಗೆ ಸಂಘದ ಮುಖಂಡರೂ ತೀವ್ರ ಅತೃಪ್ತರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಬಿಜೆಪಿಗೆ ತೀವ್ರ ವಿರೋಧ
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರಕ್ಕೆ ತೀವ್ರ ವಿರೋಧವಿದ್ದು, ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಅಭಯ್ ಜೈನ್, ಮನೀಶ್ ಕಾಳೆ, ವಿಶಾಲ್ ಬಾದಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. 5 ಲಕ್ಷ ಜನರ ಸಹಿ ಸಂಗ್ರಹಿಸಿ ಮನವಿ ಪತ್ರ ಸಲ್ಲಿಸಿದರೂ ಸಿಎಂ ಚೌಹಾಣ್ ಸರ್ಕಾರದ ವೈಫಲ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಜನರಲ್ಲಿರುವ ಅಸಮಾಧಾನ ಹೋಗಲಾಡಿಸಲು ಹಾಗೂ ಸರ್ಕಾರದ ಕಾರ್ಯವೈಖರಿ ಬದಲಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಎಷ್ಟೇ ಬಾರಿ ಸೂಚಿಸಿದರೂ ಕೇಳಿಲ್ಲ ಎಂದರು. ಶಿವರಾಜ್ ಸರ್ಕಾರ್ ಗೆ ಬುದ್ಧಿ ಕಲಿಸಲು ಹೊಸ ಪಕ್ಷ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ನಾವು 230 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 230 ವಿಧಾನಸಭಾ ಸ್ಥಾನಗಳಲ್ಲಿ ಜನಹಿತ ಪಕ್ಷ ಸ್ಪರ್ಧಿಸಲಿದೆ ಎಂದು ಅಭಯ್ ಜೈನ್ ಬಹಿರಂಗಪಡಿಸಿದ್ದಾರೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ತಮ್ಮ ಪಕ್ಷ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ಅವರ ಪಕ್ಷದಿಂದ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗದಂತೆ ತಡೆಯಲಿದೆ ಎಂದರು. ಬಿಜೆಪಿ ಸರ್ಕಾರದ ವಿರುದ್ಧವಿದ್ದು ಹಿಂದುತ್ವ ಸಿದ್ಧಾಂತ ಹೊಂದಿರುವ ಮತದಾರರು ತಮ್ಮತ್ತ ಮುಖ ಮಾಡುತ್ತಾರೆ ಎಂದರು.
ಇನ್ನೂರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರೆ ಕೆಲವರು ಬೆಂಬಲ ಘೋಷಿಸಿ ಬೇರೆ ರಾಜ್ಯಗಳಿಂದ ಬಂದಿದ್ದರು ಎಂದರು. ಉತ್ತಮ ಆಡಳಿತ, ಶಿಕ್ಷಣ, ಆರೋಗ್ಯ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ತ್ವರಿತ ನ್ಯಾಯ ವ್ಯವಸ್ಥೆಯೇ ತಮ್ಮ ಪಕ್ಷದ ಮುಖ್ಯ ಉದ್ದೇಶ ಎಂದು ಅಭಯ್ ಜೈನ್ ಹೇಳಿದ್ದಾರೆ.