ಇಂದೋರ್ (ಮಧ್ಯಪ್ರದೇಶ): ಇಂದೋರ್ನಲ್ಲಿ ನಡೆದ ಆಪಾದಿತ ಕೊಲೆ ಯತ್ನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಂತರ ನಾಮಪತ್ರ ಹಿಂಪಡೆದು ಬಿಜೆಪಿ ಸೇರಿದ್ದ ಅಕ್ಷಯ್ ಕಾಂತಿ ಬಾಮ್ ಮತ್ತು ಅವರ ತಂದೆಗೆ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.
ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ (ಏಪ್ರಿಲ್ 29) ಇಂದೋರ್ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಮ್ ರೇಸ್ನಿಂದ ಹಿಂದೆ ಸರಿದು ಆಡಳಿತಾರೂಢ ಬಿಜೆಪಿಗೆ ಸೇರಿದ್ದರು. ನಂತರ ಈ ಘಟನೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿದ ಐದು ದಿನಗಳ ನಂತರ, ಹೈಕೋರ್ಟ್ನ ಇಂದೋರ್ ಪೀಠದ ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ಅವರು ಬಾಮ್ (46) ಮತ್ತು ಅವರ ತಂದೆ ಕಾಂತಿಲಾಲ್ (75) ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರು.
2007ರಲ್ಲಿ ಸ್ಥಳೀಯ ರೈತ ಯೂನಸ್ ಪಟೇಲ್ ಅವರ ಮೇಲೆ 2007ರಲ್ಲಿ ನಡೆದ ಆಪಾದಿತ ದಾಳಿಗೆ ಸಂಬಂಧಿಸಿದಂತೆ ಬಾಮ್ ಮತ್ತು ಅವರ ತಂದೆಯ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) ಸೇರಿಸಲು ನಗರ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್ಸಿ) ಏಪ್ರಿಲ್ 24ರಂದು ಆದೇಶ ನೀಡಿದ್ದರು.
ಇಂದೋರ್ನ ಸೆಷನ್ಸ್ ನ್ಯಾಯಾಲಯವು ಮೇ 10 ರಂದು ಬಾಮ್ ಮತ್ತು ಅವರ ತಂದೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಈ ವಿಚಾರದಲ್ಲಿ 17 ವರ್ಷಗಳ ವಿಳಂಬದ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು ಮತ್ತು ಬಾಮ್ ಮತ್ತು ಅವರ ತಂದೆ ನಗರದಲ್ಲಿ ಅನೇಕ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ ಮತ್ತು ಅವರು ತಲೆಮರೆಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಪ್ರತಿವಾದಿ ವಕೀಲ ಅಜಯ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.
ರೈತ ಯೂನಸ್ ಪಟೇಲ್ ಪರ ವಕೀಲ ಮುಖೇಶ್ ದೇವಲ್ ವಾದಿಸಿ, ಜೆಎಂಎಫ್ಸಿ ಆದೇಶದ ಹೊರತಾಗಿಯೂ, ಬಾಮ್ ಮತ್ತು ಅವರ ತಂದೆ ಮೇ 10 ರಂದು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ನಂತರ ಅವರಿಬ್ಬರ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಯಿತು. ಮೇ 10ರಂದು ರಾಜ್ಯದ ಸಚಿವರೊಬ್ಬರ ಹುಟ್ಟುಹಬ್ಬವನ್ನು ಬಾಮ್ ಆಚರಿಸುತ್ತಿರುವುದು ಕಂಡುಬಂದಿದೆ ಎಂದು ದೇವಲ್ ಆರೋಪಿಸಿದ್ದಾರೆ.
ಅಕ್ಟೋಬರ್ 4, 2007ರಂದು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪಟೇಲ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಾಮ್, ಅವರ ತಂದೆ ಕಾಂತಿಲಾಲ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ಕಾಂತಿಲಾಲ್ ಅವರ ಆಜ್ಞೆಯ ಮೇರೆಗೆ ಸೆಕ್ಯುರಿಟಿ ಏಜೆನ್ಸಿಯ ಮಾಲೀಕ ಸತ್ವೀರ್ ಸಿಂಗ್ 12-ಬೋರ್ ಗನ್ನಿಂದ ತನ್ನ ಮೇಲೆ ಗುಂಡು ಹಾರಿಸಿದರು ಎಂದು ಪಟೇಲ್ ಆರೋಪಿಸಿದ್ದಾರೆ. ಸಿಂಗ್ ಪ್ರಸ್ತುತ ಮೃತಪಟ್ಟಿದ್ದಾರೆ.