Friday, June 14, 2024

ಸತ್ಯ | ನ್ಯಾಯ |ಧರ್ಮ

‘ಓಟು ಕೇಳಲು ಬಂದರೆ ಓಡಾಡಿಸಿಕೊಂಡು ಹೊಡೀರಿ’ ; ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣ ; ಕುಸುಮಾ ಗಂಭೀರ ಆರೋಪ

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ನೀತಿ ಸಂಹಿತೆ ಅಡಿಯಲ್ಲಿ ಅಧಿಕಾರಿಗಳು ತಪಾಸಣೆ, ನಿಯಮಗಳ ಉಲ್ಲಂಘನೆಯನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೋರ್ಟ್ ಕೂಡಾ ದ್ವೇಷದ ಭಾಷಣ (Hate Speech) ಕಂಡುಬಂದರೆ ಸೂಕ್ತ ದಾಖಲೆ ಒದಗಿಸಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಇದರ ನಡುವೆ ರಾಜ್ಯ ರಾಜಕಾರಣದಲ್ಲಿ ಸಂಹಿತೆಯನ್ನು ಗಾಳಿಗೆ ತೂರಿ ದ್ವೇಷ ಭಾಷಣ ಎಗ್ಗಿಲ್ಲದೆ ಸಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಚಿವ ಮುನಿರತ್ನ ವಿರೋಧ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರನ್ನು ಎತ್ತಿ ಕಟ್ಟಿ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸಿ ಮಾತನಾಡಿರುವ ಮುನಿರತ್ನ ಕ್ಷೇತ್ರದಲ್ಲಿ ಅಶಾಂತಿ ಹುಟ್ಟಲು ನಾಂದಿ ಹಾಡಿದ್ದಾರೆ.

ಈ ಬಗ್ಗೆ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮುನಿರತ್ನ ಅವರ ಪ್ರಚೋದನಕಾರಿ ದ್ವೇಷ ಭಾಷಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ‌. ಅದರ ಜೊತೆಗೆ ಕನ್ನಡಿಗರು ಮತ್ತು ತಮಿಳರ ನಡುವೆ ಕಂದಕ ಸೃಷ್ಟಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ಮುನಿರತ್ನ ಮಾಡಿದ ಬಗ್ಗೆ ಗಂಭೀರವಾಗಿ ಆರೋಪಿಸಿದ್ದಾರೆ.


https://twitter.com/KusumaH_INC/status/1641676567377248259

ಹೆಚ್ಚಿನದಾಗಿ ತಮಿಳು ಭಾಷಿಕರು ವಾಸಿಸುತ್ತಿರುವ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ ತಮಿಳಿನಲ್ಲಿ ಮಾತನಾಡಿ ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು “ಬೇರೆ ಪಕ್ಷದವರು ನಿಮ್ಮ ವ್ಯಾಪ್ತಿಯಲ್ಲಿ ಬಂದರೆ ಅಟ್ಟಾಡಿಸಿ ಹೊಡೆಯಿರಿ, ಮುಂದಿನದು ನಾನು ನೋಡ್ಕೋತೀನಿ..” ಎಂಬ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ.

ಮುನಿರತ್ನ ಮಾಡಿರುವ ಪ್ರಚೋದನಕಾರಿ ದ್ವೇಷ ಭಾಷಣದ ತುಣುಕು ಈ ಕೆಳಗಿನಂತಿದೆ ; “ಯಾರಾದರೂ ನಿಮ್ಮ ವಾರ್ಡಿನ ಒಳಗೆ ಬಂದರೆ ಓಡಾಡಿಸಿಕೊಂಡು ಹೊಡೆಯಿರಿ. ಮಿಕ್ಕಿದ್ದು ನಾನು ನೋಡ್ಕೋತೀನಿ. ನೀವು ಯಾವ ರೀತಿಯಲ್ಲಿ ಹೊಡೀಬೇಕು ಅಂದ್ರೆ.. ಅವರು ತಿರುಗಿ ನೋಡಬಾರದು. ಆ ತರ ಹೊಡೀರಿ. ಯಾರ್ಯಾರು ಹೊಡೀತೀರಿ ಕೈ ಎತ್ತಿ ನೋಡೋಣ.. ನಾಳೆ ನಮ್ದು. ಯಾವಾಗ ನಮ್ಜು? ನಾಳೆ ಓಟ್ ಹಾಕ್ತೀರಲ್ಲ ಆ ನಾಳೆ ನಮ್ದು” ಎಂಬುದಾಗಿ ಬೇರೆ ಯಾವುದೇ ಪಕ್ಷದ ನಾಯಕರು ಬಂದರೂ ಹೊಡೆಯಲು ಕರೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ “ಈ ರೀತಿಯ ದ್ವೇಷ ಭಾಷಣ ಮಾಡುವುದರಿಂದ ಯಾವುದಾದರೂ ಪ್ರಾಣಹಾನಿಯಾದರೆ ಯಾರು ಹೊಣೆ? ತನ್ನ ಬೆಂಬಲಿಗರು ಹಾಗೂ ಸಾಮಾನ್ಯ ಜನರ ಜೀವಕ್ಕೆ ಇವರ ಬಳಿ ಬೆಲೆಯೇ ಇಲ್ಲವೇ?” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತನ್ನ ಬೆಂಬಲಿಗರಿಗೆ ಹಿಂಸಾಚಾರಕ್ಕೆ ಇಳಿಯಿರಿ ಎಂಬ ಶಾಸಕ ತಮ್ಮ ಮನೆ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸುತ್ತಾರೆಯೇ? ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಇವರು ಒಬ್ಬ ಜನಪ್ರತಿನಿಧಿ ಆಗಲು ಯೋಗ್ಯನೇ?” ಎಂಬುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿಯವರಿಗೆ ದೂರು ದಾಖಲಿಸಿ ದ್ವೇಷ ಭಾಷಣದ ಅಡಿಯಲ್ಲಿ ಮುನಿರತ್ನ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಹಾಗೇ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡು ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಇನ್ನು ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕ್ರಮ ತಗೆದುಕೊಳ್ಳಬಹುದು ಎಂಬುದು ಒಂದು ಮುಖ್ಯ ಪ್ರಶ್ನೆಯಾದರೆ, ಮುನಿರತ್ನ ಇಂತಹ ಪ್ರಚೋದನಾಕಾರಿ ಭಾಷಣದ ಹಿಂದೆ ಬಿಜೆಪಿ ಪಕ್ಷ ಎಷ್ಟರ ಮಟ್ಟಿಗೆ ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ನಾಯಕರು ಮುನಿರತ್ನರ ಪ್ರಚೋದನಕಾರಿ ಭಾಷಣದ ಬಗ್ಗೆ ಈ ಬಗ್ಗೆ ತುಟಿ ಬಿಚ್ಚದೇ ಇರುವುದು ಸಹ ಮುನಿರತ್ನ ಮಾತಿಗೆ ಸಮ್ಮತಿ ಎಂದುಕೊಳ್ಳಬಹುದೇನೋ?

Related Articles

ಇತ್ತೀಚಿನ ಸುದ್ದಿಗಳು