Home Uncategorized IFS ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ:ಆರೋಪಿಯ ರಕ್ಷಣೆಗೆ ನಿಂತರೇ ಮಾಜಿ ಸಚಿವ‌ ಮುನಿರತ್ನ?

IFS ಅಧಿಕಾರಿ ವಿರುದ್ಧ ಅತ್ಯಾಚಾರ ಪ್ರಕರಣ:ಆರೋಪಿಯ ರಕ್ಷಣೆಗೆ ನಿಂತರೇ ಮಾಜಿ ಸಚಿವ‌ ಮುನಿರತ್ನ?

0

ಬೆಂಗಳೂರು: IFS ಅಧಿಕಾರಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಕುರಿತು ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ದೂರಿನ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ದೂರು ಹಿಂಪಡೆಯಲು ಬೆದರಿಕೆ ಒಡ್ಡಿದ್ದ ಶಾಸಕರು, ಪೊಲೀಸರ ಸಮೇತ ಹಲವರ ವಿರುದ್ಧ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ದೂರು ಹಿಂಪಡೆಯುವಂತೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್‌, ಎಸ್‌ ಐ, ರೈಟರ್‌ ಹಾಗೂ ಇತರ ಸಿಬ್ಬಂದಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

ದಾಖಲಾಗಿರುವ ದೂರಿನ ಪ್ರತಿ ಪೀಪಲ್‌ ಟಿವಿಗೆ ದೊರಕಿದ್ದು, ಅದರಲ್ಲಿನ ವಿವರಗಳು ಬೆಚ್ಚಿಬೀಳಿಸುವಂತಿವೆ.

ಏನಿದು ಪ್ರಕರಣ?


2022ರ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಐಎಫ್ಎಸ್‌ ಅಧಿಕಾರಿ ರವಿಶಂಕರ್‌ ಎನ್ನುವವರ ವಿರುದ್ಧ ವಿರುದ್ಧ ದೆಹಲಿಯ ಚಾಣಕ್ಯಪುರಿ ಪೊಲೀಸ್‌ ಠಾಣೆಯಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಕುರಿತು ದೂರು ದಾಖಲಿಸಿದ್ದರು. ಈ ಕುರಿತು ಮಾಹಿತಿ ಪಡೆದ ಐಪಿಎಸ್‌ ಅಧಿಕಾರಿ ರವಿಶಂಕರ್ ತನ್ನ ಪತ್ನಿಯ ಪರಿಚಯವನ್ನು ಬಳಸಿಕೊಂಡು ಮಾಜಿ ಸಚಿವ, ಹಾಗೂ ಹಾಲಿ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಸಂಪರ್ಕಿಸಿ ಅವರ ಪ್ರಭಾವವನ್ನು ಬಳಸಿಕೊಂಡು ನಗರದ ಅನ್ನಪೂರ್ಣ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಲೋಹಿತ್‌ ಎನ್ನುವವರ ಮೂಲಕ ವ್ಯಕ್ತಿತ್ವ ಹರಣ ಮಾಡುವಂತಹ ದೂರನ್ನು ಕೊಡಿಸಿದ್ದಾರೆʼ ಎಂಬುದು ಮಹಿಳೆಯ ಆರೋಪ.

ಲೋಹಿತ ಎನ್ನುವ ವ್ಯಕ್ತಿಯು ಮುನಿರತ್ನ ಅವರ ಆಪ್ತೆ ಲಕ್ಷ್ಮೀಯವರ ಮೂಲಕ ಪರಿಚಯವಾಗಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಲಕ್ಷ್ಮೀ, ಯಶೋಧಾ, ಕಾಮಾಕ್ಷಿ, ಲೋಹಿತ, ಕಿರಣ, ಮಂಜು ಎಂಬುವವರು ತನ್ನ ಸ್ನೇಹ ಸಂಪಾದಿಸಿ ಗುಹಾಂತರ, ಅಗಲಗುರ್ಕಿ ರೆಸಾರ್ಟುಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಮತ್ತು ಬರಿಸುವ ಔಷಧಿ ನೀಡಿರುತ್ತಾರೆ. ನಂತರ ತನ್ನ ಅಸಭ್ಯ ಫೋಟೊಗಳನ್ನು ತೆಗೆದ ಅವರು ಅದನ್ನು ಶಾಸಕ ಮುನಿರತ್ನರಿಗೆ ಕೊಟ್ಟಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯು 2022ರ ಅಕ್ಟೋಬರ್‌ 6ರಂದು ದೆಹಲಿಯಲ್ಲಿ ದೂರು ನೀಡಿದ್ದನ್ನು ಅರಿತು ಅದೇ ದಿನ ಶಾಸಕ ಮುನಿರತ್ನ ಅವರು ಲೋಹಿತನ ಮೂಲಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ. ದೂರಿನಲ್ಲಿ ಮಹಿಳೆಯು ಲೋಹಿತನ ಫೋಟೊಗಳನ್ನು ಇರಿಸಿಕೊಂಡು ಬ್ಲಾಕ್‌ ಮೇಲ್ ಮಾಡುತ್ತಿರುವುದಾಗಿ ಆರೋಪಿಸಲಾಗಿತ್ತು. ಈ ದೂರಿನನ್ವಯ 225/2021 – FIR ಸಂಖ್ಯೆಯಡಿ ಕಲಂ 420, 385, 506, R|W 34ರ ಅನ್ವಯ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಇದಾದ ನಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ ವಿಜಯನಗರದಲ್ಲಿದ್ದ ಮಹಿಳೆಯ ಮನೆಗೆ ನುಗ್ಗಿ, ʼನಿನ್ನ ಮನೆಯಲ್ಲಿ ಗಾಂಜಾ ಇದೆʼ ಎಂದು ಆರೋಪಿಸಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಆಕೆಯ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ಮಹಿಳೆಯ ಮನೆ ಮಾಲಿಕನ ಬಳಿ ಆಕೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಆದಷ್ಟು ಬೇಗ ಮನೆ ಖಾಲಿ ಮಾಡಿಸುವಂತೆ ಹೇಳಿದ್ದಾಗಿ ಸಂತ್ರಸ್ಥೆ ದೂರಿದ್ದಾರೆ.‌

ಅಲ್ಲಿಂದ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಗೆ ಕರೆದೊಯ್ದ ಅವರು ಅಲ್ಲಿ ಮಹಿಳೆಯನ್ನು ಕೂರಿಸಿಕೊಂಡು ನಿನಗೆ ದೊಡ್ಡವರ ಸಹವಾಸ ಯಾಕೆ ಬೇಕು, ರವಿಶಂಕರ್‌ ವಿರುದ್ಧ ಏಕೆ ದೂರು ಕೊಟ್ಟಿದ್ದೀಯ ಎಂದು ಕೇಳಿರುತ್ತಾರೆ.
ಅಂದು ಮಹಿಳಾ ಪಿಸಿಗಳೊಡನೆ ಮಹಿಳೆಯನ್ನು ಮನೆಗೆ ಕಳುಹಿಸಿದ ಅಧಿಕಾರಿಯು, ನಂತರ 2021ರ ಅಕ್ಟೋಬರ್‌ 12ರಂದು ಮಹಿಳೆಯನ್ನು ಅಂದಿನ ಸಚಿವ ಮುನಿರತ್ನರ ಮನೆಗೆ ಕರೆದೊಯ್ದಿದ್ದಾರೆ. ಅಂದು ಅಧಿಕಾರಿಯ ಜೊತೆಯಲ್ಲಿ ಲೋಹಿತ, ಸಿಬ್ಬಂದಿ ಉಮೇಶ, WPC ಕೂಡಾ ಇದ್ದರು. ಅಲ್ಲಿ ಸಚಿವ ಮುನಿರತ್ನ ಲೋಹಿತನನ್ನು ಕರೆಸಿ “ನಾನು ಈ ಕ್ಷೇತ್ರದ ಶಾಸಕ ಕ್ಷೇತ್ರದಲ್ಲಿನ ಘಟನೆಗಳಿಗೆ ಸ್ಪಂದಿಸುವ ಜವಬ್ದಾರಿ ನನಗಿದೆ. ಈ ಕೇಸನ್ನು ಹಿಂದಕ್ಕೆ ತೆಗೆದುಕೋ, ಆಕೆ ಜೈಲಿಗೆ ಹೋಗುವುದು ನಿನಗೆ ಬೇಕೇ?” ಎಂದು ಕೇಳಿ ಲೋಹಿತನ ಬಳಿ ಕೇಸು ವಾಪಸ್‌ ಪಡೆಯುವಂತೆ ಮುನಿರತ್ನ ಹೇಳಿದ್ದಾರೆ.

ಅದಾದ ನಂತರ ಅಲ್ಲಿಯೇ ಲೋಹಿತನು ಆಕೆಗೆ “ಇನ್ನೊಂದು ಸಲ ಹೆಂಡತಿಗೆ ತಿಳಿದರೆ ನಿನ್ನನ್ನು ನನ್ನ ಕಾರಿನಿಂದ ಸಾಯಿಸಿಬಿಡುತ್ತೇನೆ” ಎಂದು ಗದರಿದ್ದಾನೆ. ಮತ್ತು ಅದೇ ದಿನ ನ್ಯಾಯಾಲಯದ ಮುಂದೆ ಮಹಿಳೆಗೆ ಹರ್ಷ ಎನ್ನುವ ವಕೀಲರನ್ನು ಸಹ ನೇಮಿಸಿಕೊಡಲಾಗಿತ್ತು. ಅಂದು ಲೋಹಿತ ತಾನು ಪ್ರಕರಣ ವಾಪಸ್‌ ಪಡೆಯುತ್ತಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದನಾದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

ಇದಲ್ಲದೆ ಅನ್ನಪೂರ್ಣ ನಗರ ಪೊಲೀಸ್‌ ಠಾಣೆಯ ರೈಟ್‌ ವೆಂಕಟೇಶ್‌ ಎನ್ನುವಾತ ಸಂತ್ರಸ್ತ ಮಹಿಳೆಗೆ ಮತ್ತೆ ಮತ್ತೆ ಫೋನ್‌ ಮಾಡಿರುವ ದಾಖಲೆಯು ಪೀಪಲ್‌ ಮೀಡಿಯಾಕ್ಕೆ ಲಭ್ಯವಾಗಿದ್ದು, ಅದರಲ್ಲಿ ಆತ ಸಂತ್ರಸ್ಥ ಮಹಿಳೆಗೆ “ಸಾಹೇಬರು ಮಾತನಾಡಬೇಕು, ವಾಟ್ಸಾಪ್‌ ಹಾಕಿಸಿಕೊಳ್ಳಿ, ಇಂಟರ್ನೆಟ್‌ ಆನ್‌ ಮಾಡಿಕೊಳ್ಳಿ” ಎಂದು ಪದೇ ಪದೇ ಒತ್ತಾಯಿಸುತ್ತಿರುವುದನ್ನು ಕೇಳಬಹುದಾಗಿದೆ. ದೂರಿನ ಪ್ರತಿಯೂ ನಮಗೆ ಲಭ್ಯವಾಗಿದ್ದು ಮೇಲಿನ ವಿವರಗಳನ್ನು ಅದರಿಂದಲೇ ಪಡೆಯಲಾಗಿದೆ.

ಅಧಿಕಾರ ದುರ್ಬಳಕೆ ವಿರುದ್ಧ ಸಂತ್ರಸ್ಥ ಮಹಿಳೆಯು 2021ರ ಡಿಸೆಂಬರ್‌ ತಿಂಗಳಿನಲ್ಲೇ ಅಂದಿನ DGP, ಪೊಲೀಸ್‌ ಕಮಿಷನರ್‌ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರಸ್ತುತ ಕೇಸು ಹೊಸ ತಿರುವು ಪಡೆದಿದ್ದು ಮತ್ತೆ ಕಮಿಷನರ್‌ ಅವರಿಗೆ ದೂರು ಸಲ್ಲಿಕೆಯಾಗಿದೆ. ಈ ಕುರಿತು ಕ್ರಮ ಏನಾದರೂ ಜರುಗಿಸಲಾಗುತ್ತದೆಯೇ ಅಥವಾ ಮತ್ತೆ ಪ್ರಭಾವ ಬಳಸುವ ಮೂಲಕ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

You cannot copy content of this page

Exit mobile version