ಕಾಳಿ ‘ಕೊಲ್ಲುತ್ತಿದ್ದಾಳೆ’ ಎಂಬಂತೆ ಚಿತ್ರಿಸಿದ ವ್ಯಕ್ತಿಯ ಮನಸ್ಥಿತಿ ಹೇಗಿದ್ದಿರಬಹುದು? ಸದಾಕಾಲ ಹೆಣ್ಣನ್ನು ರಾಕ್ಷಸಿ ಎಂಬಂತೆ ಬಿಂಬಿಸಿ, ಅವಳ ಗೌರವಕ್ಕೆ ಕಪ್ಪು ಚುಕ್ಕೆ ಇಡುವ ಹುನ್ನಾರವಿತ್ತೋ? ಅಥವಾ ಗಣೇಶ, ಶಿವನಂತೆ ಕಾಳಿಯೂ ಸೌಮ್ಯವಾಗಿ ಬಿಂಬಿತವಾದರೆ ಹೆಣ್ಣು ಗಂಡಿನ ಸಮನಾಗಿ ಬಿಡುತ್ತಾಳೆ ಎಂಬ ಭಯವಿತ್ತೋ?…ಹೀಗೆ ಪ್ರಶ್ನಿಸಿದವರು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿ ದಿವ್ಯಶ್ರೀ ಅದರಂತೆ. ಮುಂದೆ ಓದಿ ಕ್ಯಾಂಪಸ್ ಕನ್ನಡಿ.
ಗಿರೀಶ್ ಕಾರ್ನಾಡರ ಹಯವದನ ನಾಟಕ (ಇಂಗ್ಲೀಷಿಗೆ ಅನುವಾದಗೊಂಡಿರುವುದು)ದ ಬಗ್ಗೆ ಒಂದು ವಾರದಿಂದ ಕ್ಲಾಸಿನಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲಿನ ಕಾಳಿದೇವಿಯ ಚಿತ್ರಣದ ಕುರಿತು ಉಪನ್ಯಾಸಕಿ ವಿವರಿಸುವಾಗಲೆಲ್ಲಾ ತಲೆಯಲ್ಲಿ ಒಂದು ಪ್ರಶ್ನೆ ಸುಮ್ಮನೇ ಹಾದು, ನಾಲಿಗೆಗೆ ಬರುವ ಧೈರ್ಯ ತಾಳದೇ ಮರೆಯಾಗುತಿತ್ತು. ಇವತ್ತು ಅದ್ಹೇಗೋ ಧೈರ್ಯ ಮಾಡಿ ನಡುಗುವ ಕೈಗಳ ಒತ್ತಿಟ್ಟು, ತೊದಲುವ ನಾಲಿಗೆಯಿಂದ ಕೇಳಿಯೇ ಬಿಟ್ಟೆ! Ma’am, we have seen image of many Goddess like Kali one who killing somebody but we have never seen any single Image of God like horrible, for instance image of Lord Shiva, Ganesha appears like very simple.. Why the only image of goddess portrays like that? Why not image of God?
ಪ್ರಶ್ನೆಯನ್ನು ಸರಳವಾಗಿ ಹೇಳುವುದಾದರೆ, ಯಾಕೆ ಹೆಣ್ಣುದೇವತೆಗಳನ್ನು ಮಾತ್ರ ಕಾಳಿ, ದುರ್ಗಾ, ಚಾಮುಂಡಿ ಎಂಬಂತೆ ಭಯಾನಕವಾಗಿ ಚಿತ್ರಿಸಲಾಗಿದೆ? ಗಂಡು ದೇವರು ಯಾಕೆ ಹಾಗಿಲ್ಲ? ಎಂಬುದಾಗಿತ್ತು. ಫೆಮಿನಿಸ್ಟ್ ಆಗಿದ್ದ ಉಪನ್ಯಾಸಕಿ, ಇದರ ಹಿಂದೆ ಅಡಗಿದ್ದ ಪಿತೃಪ್ರಧಾನ ವ್ಯವಸ್ಥೆಯ ಕ್ರೂರ ಮಜಲುಗಳನ್ನು ಎಳೆಎಳೆಯಾಗಿ ವಿವರಿಸಬಹುದು ಎಂದೇ ನಾ ಆ ಪ್ರಶ್ನೆ ಮುಂದಿಟ್ಟಿದ್ದೆ. ಆದರೆ ಆಕೆ ಅದ್ಯಾವುದನ್ನೂ ಹೇಳದೇ, ” ಹೆಣ್ಣಿನ ಇನ್ನೊಂದು ಮುಖ ಅಷ್ಟೇ ಅದು, ನೀನೇ ಹೇಳು, ಅದೆಷ್ಟು ದಿನ ಆಕೆ ಚಾಯ್ವಾಲಾ ನ ಹಾಗೆ ಮಾಡಿದ್ದೆ ಕೆಲಸ ಮಾಡಿಕೊಂಡು ಇರ್ತಾಳೆ? ಅವಳ ಒಡಲ ಉರಿಯೆಲ್ಲಾ ಜ್ವಾಲಾಮುಖಿಯಾಗಿ ಬುಗ್ಗೆಯಾಗಿ ಹೊರಡಬೇಕಲ್ಲ ಅದಕೆಲ್ಲ ಸ್ಫೂರ್ತಿ ಆ ಚಿತ್ರಗಳು! ಪ್ರತಿದಿನ ಸೌಟು ಹಿಡಿಯುವ ಕೈಗಳು, ಒಂದಿನವಾದರೂ ತ್ರಿಶೂಲ ಹಿಡಿದು ನರ್ತಿಸಲಿ. ಆ ದೇವತೆಗಳು ನಮ್ಮಂತೆ ಸಾದಾ ಸೀದಾ ಹೆಣ್ಣುಗಳಾದರೆ, ನಮಗಾರು ಸ್ಫೂರ್ತಿ? ಈ ಚಿತ್ರಗಳೆಲ್ಲ ಹೆಣ್ಣಿನ ಅಂತರಂಗದಲ್ಲಿ ಹುದುಗಿಟ್ಟ ಆವೇಶಗಳ ಪ್ರತಿರೂಪ. ಹೀಗೆ ಹೆಣ್ಣುದೇವತೆಯನ್ನೇ ಕೇಂದ್ರವಾಗಿರಿಸಿ ಭಯಾನಕವಾಗಿ ಚಿತ್ರಿಸಿದ ಹಿಂದಿನ ದುರುದ್ದೇಶ ಏನಾದರೂ ಇರಲಿ, ಆದರೆ ಇದು ಹೆಣ್ಣುಮಕ್ಕಳಿಗೆಲ್ಲ ಸ್ಫೂರ್ತಿಯಲ್ಲದೇ ಮತ್ತೇನೂ ಕೇಡಾಗಲಾರದು” ಎಂದು ತಣ್ಣನೆಯ ಉತ್ತರ ಕೊಟ್ಟು ಮುಗುಳ್ನಕ್ಕರು.
ಹಲವು ದಿನಗಳಿಂದ ಕೊರೆಯುತ್ತಿದ್ದ ಪ್ರಶ್ನೆಯಿಂದ ಸ್ವಲ್ಪ ಬಿಡುಗಡೆ ಸಿಕ್ಕಿದ ಖುಷಿಯೊಂದಿಗೆ, ಕಾಳಿ ‘ಕೊಲ್ಲುತ್ತಿದ್ದಾಳೆ’ ಎಂಬಂತೆ ಚಿತ್ರಿಸಿದ ವ್ಯಕ್ತಿಯ ಮನಸ್ಥಿತಿ ಹೇಗಿದ್ದಿರಬಹುದು? ಸದಾಕಾಲ ಹೆಣ್ಣನ್ನು ರಾಕ್ಷಸಿ ಎಂಬಂತೆ ಬಿಂಬಿಸಿ, ಅವಳ ಗೌರವಕ್ಕೆ ಕಪ್ಪು ಚುಕ್ಕೆ ಇಡುವ ಹುನ್ನಾರವಿತ್ತೋ? ಅಥವಾ ಗಣೇಶ, ಶಿವನಂತೆ ಕಾಳಿಯೂ ಸೌಮ್ಯವಾಗಿ ಬಿಂಬಿತವಾದರೆ ಹೆಣ್ಣು ಗಂಡಿನ ಸಮನಾಗಿ ಬಿಡುತ್ತಾಳೆ ಎಂಬ ಭಯವಿತ್ತೋ? ಎಂದು ಯೋಚಿಸುವ ನನ್ನಂತವರ ನಡುವೆ, ದುರುದ್ದೇಶ ಏನಾದರೂ ಇರಲಿ, ಅದನ್ನ ನಾವು ಸ್ವೀಕರಿಸುವ ಬಗೆಯ ಕುರಿತು ಒಂದೆರಡು ಹೆಜ್ಜೆ ಮುಂದೆಯೇ ಹೋಗಿ ಮಾತಾಡಿದ ನನ್ನ ಉಪನ್ಯಾಸಕಿಯ ಪ್ರಬುದ್ಧ ಯೋಚನೆ ಇಷ್ಟವಾಗಿಬಿಟ್ಟಿತು.
ಹೌದು, ನಿತ್ಯವೂ ಗಂಡಿನಿಂದ ನಡೆಯುವ ಕ್ರೌರ್ಯ, ದೌರ್ಜನ್ಯಗಳು ಕಣ್ಣೆದುರೇ ಕಾಣುವಾಗ ಅವುಗಳಿಗೇಕೆ ಬಿಂಬ ಪ್ರತಿಬಿಂಬಗಳು? ಯಾವತ್ತೋ ಒಂದು ದಿನ ಇನ್ನು ಸಹಿಸಲಸಾಧ್ಯ ಎಂದು, ಸಂಕೋಲೆಗಳ ಕಳಚಿಟ್ಟು ತೊಟ್ಟ ಬಟ್ಟೆಯಲ್ಲೇ ಎಲ್ಲವನ್ನೂ ತೊರೆದು ಬರುವ ಅದೆಷ್ಟೋ ಹೆಣ್ಣುಗಳಿಗೆ ಈ ಕಾಳಿ, ದುರ್ಗೆಯರೇ ಸ್ಫೂರ್ತಿಯೇನೋ!
“ನೀನು ಹೆಣ್ಣು, ಅದಕ್ಕೆಂದೇ ಇದೆಲ್ಲವನ್ನು ಸಹಿಸಬೇಕೆಂದು” ತಲತಲಾಂತರದಿಂದ ಬಳುವಳಿಯಾಗಿ ಬಂದ ಘೋಷವಾಕ್ಯದ ಅಸ್ತಿತ್ವ ಇನ್ನಿಲ್ಲದಂತೆ ಕೊನೆಗಾಣಿಸಲು ಈ ನೆಲದ ಹೆಣ್ಣುಗಳೆಲ್ಲ ಕಾಳಿಯರಾಗಲೇಬೇಕು!
ಹೆಣ್ಣು ಬದುಕಲು, ಬದುಕಿನಲ್ಲಿ ಒಂದಷ್ಟು ಸುಖ ಉಣ್ಣಲು ಆಕೆಯೂ ಕೈಯಲ್ಲೊಂದು ತ್ರಿಶೂಲ ಹಿಡಿಯುತ್ತಾಳೆ, ಅಗತ್ಯ ಬಂದಾಗ ಅದನ್ನೇ ಆಧಾರ ಸ್ತಂಭವನ್ನಾಗಿ ಮಾಡಿಕೊಳ್ಳುತ್ತಾಳೆ. ಆದರೆ ಅವಳು ಕೊಲ್ಲುವುದಿಲ್ಲ, ಕಾಯುತ್ತಾಳೆ.
ನನ್ನ ನಾಳೆಯ ಹೆಣ್ಣು ಸಹ ಕಾಳಿಯಾಗುತ್ತಾಳೆ! ಕಾಳಿಯಂತೆ ಘರ್ಜಿಸುತ್ತಾಳೆ.
ದಿವ್ಯಶ್ರೀ ಅದರಂತೆ
ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿ