Friday, September 13, 2024

ಸತ್ಯ | ನ್ಯಾಯ |ಧರ್ಮ

“ನಾಗಮಂಗಲ ಗಲಭೆ ಪೂರ್ವಯೋಜಿತ, ಸಧ್ಯದಲ್ಲೇ ದಾಖಲೆ ಬಿಡುಗಡೆ : ಬಿಜೆಪಿ, ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡಿದ ಎಂ ಲಕ್ಷ್ಮಣ್

ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದ ಗಲಭೆ ಹಿಂಸಾಚಾರ ಬಿಜೆಪಿ ಮತ್ತು RSS ಸಂಘಟನೆಯ ಕೃತ್ಯ. ಇದೊಂದು ಪೂರ್ವನಿಯೋಜಿತ ಗಲಭೆಯಾಗಿದ್ದು, ಇದಕ್ಕೆ ಜೆಡಿಎಸ್ ಕೂಡ ಭಾಗಿಯಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.

ಮೊದಲು ಮೈಸೂರಿನಲ್ಲಿ ಕೋಮು ಗಲಭೆಗೆ ಸಂಚು ಹೂಡಿದ್ದರು. ಅಲ್ಲಿ ಅವರ ಪ್ಲ್ಯಾನ್ ವಿಫಲವಾಗಿದೆ. ಹೀಗಾಗಿ ಮೈಸೂರಿನಿಂದ ಗಲಭೆ ಪ್ಲಾನ್ ನಾಗಮಂಗಲಕ್ಕೆ ಶಿಫ್ಟ್ ಆಗಿದ್ದು, ಗಲಭೆ ಸಂಬಂಧ ನಾಗಮಂಗಲದಲ್ಲಿ 20 ಜನ ಹಿಂದೂಗಳು, 30 ಜನ ಮುಸ್ಲಿಮರು ಭಾಗಿಯಾಗಿದ್ದು ಈಗಾಗಲೇ ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ.

ಹಾಗೇ ಇದು ಆರ್ ಎಸ್ ಎಸ್, ಬಿಜೆಪಿ, ಜೆಡಿಎಸ್ ಪೂರ್ವ ನಿಯೋಜಿತ ಕೃತ್ಯ. ಈ ಕುರಿತು ಗೃಹ ಸಚಿವರು ಸಧ್ಯದಲ್ಲೇ ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದು ಮೈಸೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗಣಪತಿ ವಿಸರ್ಜನೆ ನಡೆಸುವವರು ಪೊಲೀಸರ ಅನುಮತಿಯೂ ಪಡೆಯದೇ ಮಧ್ಯರಾತ್ರಿ ಒಂದೂವರೆ ವರೆಗೂ ಮೆರವಣಿಗೆ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಮಸೀದಿ ಮುಂದೆಯೇ ಹೆಚ್ಚು ಹೊತ್ತು ನಿಂತು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.‌ ಇದಕ್ಕೆ ಕುಮ್ಮಕ್ಕು ಕೊಟ್ಟವರಾರು, ಇದಕ್ಕೆ ಕಾರಣವಾದವರು ಯಾರು? ಎಂದು ಲಕ್ಷ್ಮಣ್ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಅಲ್ಲಿ ಎರಡೂ ಸಮುದಾಯದವರೂ ಕಲ್ಲು ತೂರಿದ್ದಾರೆ ಹಾಗೂ ಕತ್ತಿ ಹಿಡಿದಿದ್ದಾರೆ. ಮಸೀದಿಯ ಎದುರಿನಲ್ಲೇ‌ ನಿಂತು, ಅಲ್ಲೇ ಪಟಾಕಿ ಸಿಡಿಸಿ ಪ್ರಚೋದಿಸಬೇಕು ಎಂಬ ಪೂರ್ವ ಯೋಜಿತ ಕೃತ್ಯ ಇದಾಗಿತ್ತು. ಹೆಚ್.ಡಿ. ಕುಮಾರಸ್ವಾಮಿ ಗೆದ್ದಾಗಿನಿಂದ ಮಂಡ್ಯದ ಜನರ ನೆಮ್ಮದಿ ಹಾಳಾಗಿದೆ. ಆ ಜನರು ಮುಂದೆಯೂ, ನೆಮ್ಮದಿಯಿಂದ ಇರುವುದಕ್ಕೆ ಕುಮಾರಸ್ವಾಮಿ ಬಿಡುವುದಿಲ್ಲ ಎಂದು ದೂರಿದರು.

ನಾಗಮಂಗಲದಲ್ಲಿ ಲೋಪ ಆಗಿರುವ ಬಗ್ಗೆ ಅಲ್ಲಿನ ಇನ್‌ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ತಪ್ಪಿತಸ್ಥರು ಯಾವುದೇ ವರ್ಗದವರಾಗಿದ್ದರೂ ಕ್ರಮ ಜರುಗಿಸುತ್ತೇವೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ದೇಶದಲ್ಲಿರುವ ಎಲ್ಲರೂ ಭಾರತ ಮಾತೆಯ ಮಕ್ಕಳೆ. ಅವರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಿ ನೋಡುವ ಕೆಲಸವನ್ನು ‌ಬಿಜೆಪಿಯವರು ಮಾಡಬಾರದು. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.

ಅಷ್ಟೇ ಅಲ್ಲದೆ ಘಟನೆ ನಂತರ ಬಿಜೆಪಿ ನಾಯಕರು ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ವಿಜಯೇಂದ್ರ, ಅಶೋಕ್ ಒಂದು ಸಮುದಾಯವನ್ನು ಬೈದಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page