ಬೆಂಗಳೂರು: ಬಿಜೆಪಿಗರು ತಾವು ಮಾಡುವ ಪ್ರತೀ ಭಾಷಣದಲ್ಲೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡದೆ ಭಾಷಣ ಮುಗಿಯುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು, ʼನನ್ನನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ʼಕಲಬುರಗಿಯಲ್ಲಿ ಬಿಜೆಪಿ ಪಕ್ಷ ಹಿಂದುಳಿದ ಜಾತಿಗಳ ಸಮಾವೇಶವನ್ನು ಏರ್ಪಾಡು ಮಾಡಿ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಸೇರಿದ್ದು 40 ರಿಂದ 50 ಸಾವಿರ ಜನ ಮಾತ್ರ. ಈ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರು ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಲ್ಲಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರು ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆʼ ಎಂದು ಹೇಳಿದ್ದಾರೆ.
ʼಸಿದ್ದರಾಮಯ್ಯ ಅವರ ಸರ್ಕಾರ ಕುರುಬರನ್ನು ಸಚಿವರೇ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ಹೆಚ್.ಎಂ ರೇವಣ್ಣ, ಹೆಚ್.ವೈ ಮೇಟಿ ಮಂತ್ರಿಯಾಗಿದ್ದದ್ದು ಯಾರ ಸರ್ಕಾರದಲ್ಲಿ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ? ಈ ತರ ಯಾಕೆ ಸುಳ್ಳು ಹೇಳಬೇಕಪ್ಪ? ಮರಾಠ ಜಾತಿಯ ಸಂತೋಷ್ ಲಾಡ್, ನೇಕಾರ ಜನಾಂಗದ ಉಮಾಶ್ರೀ, ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಬಾಬುರಾವ್ ಚಿಂಚನಸೂರ್, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದ ಜಾತಿಗಳಿಗೆ ಸೇರಿದವರಲ್ವಾ? ಮುಖ್ಯಮಂತ್ರಿಯಾಗಿದ್ದ ನಾನು ಕುರುಬ ಜಾತಿಯವನಲ್ವಾ? ಆದರೂ ಬಿಜೆಪಿಯವರು ಕುರುಬರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ. ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣʼ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದಾರೆ.
ʼಮಂಡಲ್ ಕಮಿಷನ್ ವರದಿ ಜಾರಿ ಮಾಡಿದಾಗ ವಿರೋಧ ಮಾಡಿದವರು ಯಾರು? ಬಿಜೆಪಿ ನಾಯಕ ಅಡ್ವಾಣಿ ಅವರು ರಥಯಾತ್ರೆ ಆರಂಭ ಮಾಡಿ, ಉತ್ತರ ಭಾರತದಲ್ಲಿ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದರು. ಉನ್ನತ ಶಿಕ್ಷಣದಲ್ಲಿ ಮೊದಲು ಮೀಸಲಾತಿ ಇರಲಿಲ್ಲ. ಅರ್ಜುನ್ ಸಿಂಗ್ ಅವರು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದರು. ಅದನ್ನು ರಾಜ್ಯದಲ್ಲಿ ಇದೇ ಅನಂತಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಅವರು ವಿರೋಧ ಮಾಡಿದ್ದರುʼ ಎಂದು ಸಿದ್ದರಾಮಯ್ಯ ಹೇಳಿದರು.
ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದವರು ರಾಜೀವ್ ಗಾಂಧಿ ಅವರು. ಇದನ್ನು ಜಾರಿ ಮಾಡಿದ್ದು ಪಿ.ವಿ ನರಸಿಂಹರಾವ್ ಅವರ ಸರ್ಕಾರ. ಕರ್ನಾಟಕದಲ್ಲಿ 1994-95ರಲ್ಲಿ ಇದು ಜಾರಿಗೆ ಬಂತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ 33% ಹಾಗೂ ಮಹಿಳೆಯರಿಗೆ 50% ಮೀಸಲಾತಿ ಸಿಕ್ಕಿತು. ಇದನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ವಿರೋಧ ಮಾಡಿದ್ದರು. ಆಗ ಅವರು ಬಿಜೆಪಿಯ ಉಪಾಧ್ಯಕ್ಷ ಕೂಡ ಆಗಿದ್ದರು. ಹಿಂದುಳಿದ ಜಾತಿ, ಮಹಿಳೆಯರಿಗೆ, ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದನ್ನು ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರು. ಆಗ ಈಶ್ವರಪ್ಪ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅನಂತಕುಮಾರ್, ನಳಿನ್ ಕುಮಾರ್ ಕಟೀಲ್ ಅವರಾಗಲೀ ರಾಮಾ ಜೋಯಿಸ್ ಅವರನ್ನು ತಡೆದ್ರಾ? ಪಕ್ಷದ ಗಮನಕ್ಕೆ ತರದೆ ಈ ರೀತಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಸಾಧ್ಯವೇ? ಇದು ಪಕ್ಷದ ನಿರ್ಧಾರವೇ ಆಗಿತ್ತು. ಎಂದು ಮೀಸಲಾತಿ ಬಗ್ಗೆ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಲಾಗಿತ್ತು . ಈ ಸಮಿತಿ ವರದಿ ನೀಡಿದ್ದು 02-02-2020ರಲ್ಲಿ. ವರದಿ ಬಂದ ತಕ್ಷಣ 24 ಗಂಟೆಗಳಲ್ಲಿಈ ವರದಿ ಜಾರಿ ಮಾಡ್ತೀವಿ ಶ್ರೀರಾಮುಲು ಹೇಳಿದ್ದರು. ಆದರೆ ಎರಡು ವರ್ಷ ಮೂರು ತಿಂಗಳು ಸರ್ಕಾರ ಮತ್ತು ಶ್ರೀರಾಮುಲು ಸುಮ್ಮನಿದ್ದುದ್ದು ಯಾಕೆ? ಎಂದು ಪ್ರಶ್ನಿಸಿದರು.
ಮುಂದುವರೆದು ಮಾತನಾಡಿದ ಅವರು, ʼವಾಲ್ಮೀಕಿ ಸಮಾಜದ ಸ್ವಾಮೀಜಿ 257 ದಿನಗಳ ಕಾಲ ಧರಣಿ ಮಾಡಿದ್ರು, ಅವರು ಧರಣಿ ಆರಂಭ ಮಾಡಿದ ದಿನವೇ ವರದಿ ಜಾರಿ ಮಾಡಿದ್ರೆ ಸಮಸ್ಯೆ ಏನಾಗುತ್ತಿತ್ತು? ಅಂದು ಕೂಡ ನಾಗಮೋಹನ್ ದಾಸ್ ಅವರ ಸಮಿತಿ ವರದಿ ಇದೇ ಆಗಿತ್ತು ಅಲ್ವಾ? ನಿಜವಾಗಿ ಈ ಸರ್ಕಾರಕ್ಕೆ ಬದ್ಧತೆ ಇದ್ದಿದ್ದರೆ ಅಂದೇ ಮಾಡುತ್ತಿದ್ದರುʼ ಎಂದು ಕಿಡಿಕಾರಿದ್ದಾರೆ.
ಹಿಂದುಳಿದ ಜಾತಿಗಳ ಸಮಾವೇಶ ಮಾಡಿ, ನನ್ನನ್ನು ಟಾರ್ಗೆಟ್ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಗೆ ನನ್ನ ಕಂಡರೆ ಎಷ್ಟು ಭಯ ಎಂದರೆ ದೊಡ್ಡಬಳ್ಳಾಪುರ, ಕಲಬುರಗಿ ಎಲ್ಲಿ ಹೋದರೂ ನನ್ನ ಬಗ್ಗೆ ಮಾತು. ಇದೇ ಕಾರಣಕ್ಕೆ ನಾನು ಹೇಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ವೇದಿಕೆ ಮೇಲೆಯಾದರೂ ಸರಿ ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ ನಾನೂ ನಮ್ಮ ಸರ್ಕಾರ ಏನು ಮಾಡಿದೆ ಹೇಳುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ. ಹಾನಗಲ್ ಉಪಚುನಾವಣೆಯಲ್ಲೇ ಈ ಸವಾಲು ಹಾಕಿದ್ದೆ ಆದರೆ ಇವತ್ತಿನವರೆಗೆ ಅವರು ಬರಲು ತಯಾರಾಗಿಲ್ಲ. ರಾಜ್ಯ ಸರ್ಕಾರ ಜನಗಳಿಗೆ ಸುಳ್ಳು ಹೇಳುವುದನ್ನು ಬಿಡಬೇಕು. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದೀರ, ಇದನ್ನು ನಾನು ಕೂಡ ಸ್ವಾಗತಿಸುತ್ತೇನೆ, ಇಂಥದನ್ನು ಮಾಡಿದರೆ ನಮ್ಮ ತಕರಾರು ಇಲ್ಲ ಎಂದು ಹೇಳಿದ್ದಾರೆ.