Friday, February 6, 2026

ಸತ್ಯ | ನ್ಯಾಯ |ಧರ್ಮ

ರಾಜಕೀಯ ನಿಲುವುಗಳ ಕಾರಣಕ್ಕೆ ವಿವಿ ಕಾರ್ಯಕ್ರಮದ ಆಹ್ವಾನ ರದ್ದು:‌ ವಿಶ್ವಗುರು ರಾಜಕೀಯವನ್ನು ಟೀಕಿಸಿದ ಹಿರಿಯ ನಟ ನಾಸಿರುದ್ದೀನ್ ಶಾ

ಮುಂಬೈ: ವಿವಾದವೊಂದಕ್ಕೆ ಕಿಡಿಹೊತ್ತಿಸಿರುವ ಘಟನೆಯಲ್ಲಿ, ತಮ್ಮ ರಾಜಕೀಯ ನಿಲುವುಗಳ ಕಾರಣಕ್ಕಾಗಿಯೇ ಮುಂಬೈ ವಿಶ್ವವಿದ್ಯಾಲಯದ ಉರ್ದು ವಿಭಾಗ ಆಯೋಜಿಸಿದ್ದ ‘ಜಶ್ನ್-ಎ-ಉರ್ದು’ ಕಾರ್ಯಕ್ರಮದ ಆಹ್ವಾನವನ್ನು ಕೊನೆಯ ಕ್ಷಣದಲ್ಲಿ ಹಿಂಪಡೆಯಲಾಗಿದೆ ಎಂದು ಹಿರಿಯ ನಟ ನಾಸಿರುದ್ದೀನ್ ಶಾ ಆರೋಪಿಸಿದ್ದಾರೆ. ತಾವೆಂದೂ ಸ್ವಯಂ ಘೋಷಿತ “ವಿಶ್ವಾಗುರು”ವನ್ನು ಹೊಗಳಿಲ್ಲ ಮತ್ತು ಅವರ ನಡವಳಿಕೆಯನ್ನು ಟೀಕಿಸುತ್ತಲೇ ಬಂದಿರುವುದಾಗಿ ಶಾ ಹೇಳಿದ್ದಾರೆ.

ಇದು ನಾನು ಬೆಳೆದ ದೇಶವಲ್ಲ ಎಂದು ಹೇಳಿರುವ ಶಾ, ಪ್ರಸ್ತುತ ಪರಿಸ್ಥಿತಿಯನ್ನು ಜಾರ್ಜ್ ಆರ್ವೆಲ್ ಅವರ ‘1984’ ಎಂಬ ಕಾಲ್ಪನಿಕ ಕಾದಂಬರಿಗೆ ಹೋಲಿಸಿದ್ದಾರೆ (ಈ ಕಾದಂಬರಿಯು ಸರ್ವಾಧಿಕಾರ, ಸಾಮೂಹಿಕ ಕಣ್ಗಾವಲು ಮತ್ತು ಜನರ ವರ್ತನೆಯ ಮೇಲಿನ ದಬ್ಬಾಳಿಕೆಯನ್ನು ಕೇಂದ್ರವಾಗಿರಿಸಿಕೊಂಡಿದೆ). ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದರ ಸಂಪಾದಕೀಯ ಪುಟದಲ್ಲಿ (Op-Ed) ಶಾ ಬರೆದ ಲೇಖನದಲ್ಲಿ ಮಾಡಲಾದ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಮುಂಬೈ ವಿಶ್ವವಿದ್ಯಾಲಯ ನಿರಾಕರಿಸಿದೆ.

ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ 75 ವರ್ಷದ ಶಾ, ನಟನೆಗಿಂತ ವಿದ್ಯಾರ್ಥಿಗಳೊಂದಿಗೆ ಬೆರೆಯುವುದರಿಂದಲೇ ಹೆಚ್ಚು ಕಲಿತಿದ್ದಾಗಿ ಹೇಳುತ್ತಾರೆ. “ಫೆಬ್ರವರಿ 1 ರಂದು ನಡೆಯಬೇಕಿದ್ದ ಮುಂಬೈ ವಿಶ್ವವಿದ್ಯಾಲಯದ ಉರ್ದು ವಿಭಾಗದ ‘ಜಶ್ನ್-ಎ-ಉರ್ದು’ ಕಾರ್ಯಕ್ರಮಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೆ. ಆದರೆ ಜನವರಿ 31 ರ ರಾತ್ರಿ ನನಗೆ ಬರದಂತೆ ತಿಳಿಸಲಾಯಿತು. ಇದಕ್ಕೆ ಯಾವುದೇ ಕಾರಣವನ್ನೂ ನೀಡಲಿಲ್ಲ, ಕ್ಷಮೆಯನ್ನೂ ಕೇಳಲಿಲ್ಲ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಗೆ ‘ನಾನು ಬರಲು ನಿರಾಕರಿಸಿದೆ’ ಎಂದು ಘೋಷಿಸುವ ಮೂಲಕ ಗಾಯದ ಮೇಲೆ ಬರೆ ಎಳೆದರು,” ಎಂದು ಶಾ ಬರೆದಿದ್ದಾರೆ.

ಎನ್‌ಎಸ್‌ಡಿ (NSD) ಮತ್ತು ಎಫ್‌ಟಿಐಐ (FTII) ಹಳೆ ವಿದ್ಯಾರ್ಥಿಯಾಗಿರುವ ಶಾ, ತಮ್ಮ ನಿಲುವುಗಳ ಕಾರಣಕ್ಕಾಗಿಯೇ ಆಹ್ವಾನ ಹಿಂಪಡೆದಿರಬಹುದು ಎಂದಿದ್ದಾರೆ. “ನಾನು ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತೇನೆ ಎಂಬ ಸತ್ಯವನ್ನು (ಅವರು ರಹಸ್ಯವಾಗಿ ಹೇಳಿದ್ದರೆ ಪರವಾಗಿರಲಿಲ್ಲ) ಹೇಳಲು ಅವರಿಗೆ ಧೈರ್ಯವಿಲ್ಲದಿರುವುದು ಆಶ್ಚರ್ಯವೇನಲ್ಲ. ಹಿರಿಯ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೀಗೆ ಹೇಳಿದ್ದಾರೆಂದು ವರದಿಯಾಗಿದೆ. ನಾನು ನನ್ನ ದೇಶವನ್ನು ನಿಂದಿಸಿದ ಒಂದೇ ಒಂದು ಹೇಳಿಕೆಯನ್ನು ಅವರು ತೋರಿಸಲಿ ಎಂದು ನಾನು ಸವಾಲು ಹಾಕುತ್ತೇನೆ,” ಎಂದು ಶಾ ತಮ್ಮ ಲೇಖನದಲ್ಲಿ ಪ್ರಶ್ನಿಸಿದ್ದಾರೆ.

“ಖಂಡಿತ, ನಾನೆಂದೂ ಸ್ವಯಂ ಘೋಷಿತ ‘ವಿಶ್ವಾಗುರು’ವನ್ನು ಹೊಗಳಿಲ್ಲ. ವಾಸ್ತವವಾಗಿ, ಅವರ ನಡವಳಿಕೆಯನ್ನು ನಾನು ಟೀಕಿಸುತ್ತೇನೆ. ಅವರ ಆತ್ಮರತಿ (narcissism) ನನಗೆ ಅಸಹ್ಯ ತರಿಸುತ್ತದೆ ಮತ್ತು ಕಳೆದ 10 ವರ್ಷಗಳಲ್ಲಿ ಅವರು ಮಾಡಿದ ಒಂದೇ ಒಂದು ಕೆಲಸವೂ ನನಗೆ ಇಷ್ಟವಾಗಿಲ್ಲ. ಆಡಳಿತಾರೂಢ ಸರ್ಕಾರ ಮಾಡುವ ಅನೇಕ ವಿಷಯಗಳನ್ನು ನಾನು ಟೀಕಿಸುತ್ತೇನೆ ಮತ್ತು ಟೀಕಿಸುತ್ತಲೇ ಇರುತ್ತೇನೆ. ನಮ್ಮ ದೇಶದಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆಯೂ ನಾನು ದನಿ ಎತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಶಾ ಮುಂದುವರಿದು: “ವಿದ್ಯಾರ್ಥಿ ಹೋರಾಟಗಾರರನ್ನು ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿ ಇಡುವುದು, ಆದರೆ ಶಿಕ್ಷೆಗೊಳಗಾದ ಅತ್ಯಾಚಾರಿಗಳು/ಕೊಲೆಗಾರರಿಗೆ ಆಗಾಗ್ಗೆ ಜಾಮೀನು ಸಿಗುವುದು, ಗೋರಕ್ಷಕರಿಗೆ ಕೊಲ್ಲಲು ಮತ್ತು ಅಂಗವಿಕಲರನ್ನಾಗಿಸಲು ಮುಕ್ತ ಅವಕಾಶ ನೀಡುವುದು, ಇತಿಹಾಸ ಮತ್ತು ಪಠ್ಯಪುಸ್ತಕಗಳ ತಿದ್ದುಪಡಿ, ವಿಜ್ಞಾನದೊಂದಿಗೆ ಚೆಲ್ಲಾಟ, ಮತ್ತು ಒಬ್ಬ ಮುಖ್ಯಮಂತ್ರಿಯೇ ‘ಮಿಯಾ’ಗಳಿಗೆ ಕಿರುಕುಳ ನೀಡುವ ಬಗ್ಗೆ ಮಾತನಾಡುವುದು… ಇವೆಲ್ಲದರ ಬಗ್ಗೆ ನಾನು ದನಿ ಎತ್ತಿದ್ದೇನೆ. ಈ ದ್ವೇಷವನ್ನು ಎಷ್ಟು ಕಾಲ ಉಳಿಸಿಕೊಳ್ಳಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

“ಇದು ನಾನು ಬೆಳೆದ ಮತ್ತು ಪ್ರೀತಿಸಲು ಕಲಿತ ದೇಶವಲ್ಲ. ‘ಥಾಟ್ ಪೊಲೀಸ್’ (ಆಲೋಚನೆಗಳ ಮೇಲೆ ಕಾವಲು) ಮತ್ತು ಕಣ್ಗಾವಲು ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದೆ. ‘ಗ್ರೇಟ್ ಲೀಡರ್’ನ ಗುಣಗಾನ ಮಾಡದಿರುವುದನ್ನೇ ದೇಶದ್ರೋಹ ಎಂದು ಪರಿಗಣಿಸುವ ಜಾರ್ಜ್ ಆರ್ವೆಲ್ ಅವರ ‘1984’ ಕಾದಂಬರಿಯ ಸನ್ನಿವೇಶಕ್ಕೆ ಇದನ್ನು ಹೋಲಿಸುವುದು ತಪ್ಪಾಗಲಾರದು,” ಎಂದು ಅವರು ಬರೆದಿದ್ದಾರೆ.

ತೇಲ್ತುಂಬ್ಡೆ ಕಾರ್ಯಕ್ರಮ ರದ್ದು ಇದೇ ರೀತಿಯ ಘಟನೆಯಲ್ಲಿ, ಮುಂಬೈ ಪೊಲೀಸರ ಸೂಚನೆಯ ಮೇರೆಗೆ ‘ಕಾಲಾ ಘೋಡಾ ಆರ್ಟ್ಸ್ ಫೆಸ್ಟಿವಲ್’ (KGAF) ನಲ್ಲಿ ನಡೆಯಬೇಕಿದ್ದ ಲೇಖಕ ಮತ್ತು ವಿದ್ವಾಂಸ ಆನಂದ್ ತೇಲ್ತುಂಬ್ಡೆ ಅವರ ಪುಸ್ತಕ ಚರ್ಚೆಯನ್ನು ಮಂಗಳವಾರ ರಾತ್ರಿ ರದ್ದುಗೊಳಿಸಲಾಗಿದೆ. ಫೆಬ್ರವರಿ 5 ರಂದು ನಡೆಯಬೇಕಿದ್ದ ಈ ಗೋಷ್ಠಿಯಲ್ಲಿ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಯಾಗಿರುವ (ಪ್ರಸ್ತುತ ಜಾಮೀನಿನ ಮೇಲಿರುವ) ತೇಲ್ತುಂಬ್ಡೆ ಅವರು ತಮ್ಮ ಜೈಲು ನೆನಪುಗಳ ಕುರಿತ ‘ದ ಸೆಲ್ ಅಂಡ್ ದ ಸೋಲ್: ಎ ಪ್ರಿಸನ್ ಮೆಮೊಯಿರ್’ ಪುಸ್ತಕದ ಬಗ್ಗೆ ಮಾತನಾಡಬೇಕಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page