Friday, November 7, 2025

ಸತ್ಯ | ನ್ಯಾಯ |ಧರ್ಮ

ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ನೂತನ ಅಧ್ಯಕ್ಷ ನಾಯಕರಹಳ್ಳಿ ಜಯರಾಮ್ ಪದಗ್ರಹಣ

ವಕೀಲರ ಸಂಘಟನೆಯ ಬಲವರ್ಧನೆಗೆ ಕರೆ

ಹಾಸನ : ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ನಾಯಕರಹಳ್ಳಿ ಜಯರಾಮ್ ಹಾಗೂ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ನೂತನ ಜಿಲ್ಲಾಧ್ಯಕ್ಷರಾಗಿ ನಾಯಕರಹಳ್ಳಿ ಜಯರಾಮ್, ಉಪಾಧ್ಯಕ್ಷರಾಗಿ ವಿಜಯಕುಮಾರ್, ಮಂಜು ಎಂ.ಡಿ., ಹರೀಶ್ ಕೆ.ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ಕೆ., ಖಜಾಂಚಿಯಾಗಿ ಮೊಹಮ್ಮದ್ ಆರಿಫ್ ಹಾಗೂ ಜಂಟಿ ಕಾರ್ಯದರ್ಶಿಗಳಾಗಿ ಇಮ್ರಾನ್ ಪಾಷಾ, ಲಕ್ಷ್ಮಣ, ಯೋಗೇಶ್ ಗೌರವ್ ಮತ್ತು ಮೋಹನ್ ಕುಮಾರ್ ಆಯ್ಕೆಗೊಂಡರು.

ಕಾರ್ಯಕ್ರಮವನ್ನು ಕೆಪಿಸಿಸಿ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ್ ಅವರು ಉದ್ಘಾಟಿಸಿ ಮಾತನಾಡಿ, ‘ಹಾಸನ ಜಿಲ್ಲೆಯಲ್ಲಿ ಕಾನೂನು ವಿಭಾಗದ ಸಂಘಟನೆಯನ್ನು ಬಲಪಡಿಸಿ, ವಕೀಲರ ನಡುವೆ ರಾಜಕೀಯ ಜಾಗೃತಿಯನ್ನು ಮೂಡಿಸುವತ್ತ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಕೆ.ಎಸ್. ಮಾತನಾಡಿ, ನಮ್ಮ ನಾಯಕ ರಾಹುಲ್ ಗಾಂಧೀಜಿ ಅವರ ದೃಷ್ಟಿಯಲ್ಲಿ ‘ಅಡ್ವೋಕೇಟ್ ಬ್ಯಾಂಕ್’ ಎಂಬ ಹೊಸ ಆಲೋಚನೆ ಅಳವಡಿಸಬೇಕು. ಇದು ಮತದಾರರ ಬ್ಯಾಂಕ್ ಮತ್ತು ರಕ್ತದಾನ ಬ್ಯಾಂಕ್‌ನಂತೆಯೇ ಜನರ ಹಕ್ಕು ರಕ್ಷಣೆಗೆ ನಿಂತು ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ ಮಾತನಾಡಿ, ಪಕ್ಷ ಈಗ ಅಧಿಕಾರದಲ್ಲಿರುವ ಹಿನ್ನಲೆಯಲ್ಲಿ ಸಂಘಟನೆಯನ್ನು ಬಲಪಡಿಸಿ, ಹೆಚ್ಚು ವಕೀಲರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕೆಂದು ಹುರಿದುಂಬಿಸಿದರು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯಬೇಕೆಂದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಬಾಬು ಮಾತನಾಡಿ, “ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ವಕೀಲರು ತಮ್ಮ ಕೆಲಸದ ಮೂಲಕ ಕಾಪಾಡಬೇಕು,” ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್. ಲಕ್ಷ್ಮಣ್ ವಹಿಸಿದ್ದ ಅವರು ಮಾತನಾಡಿ, ಕಾನೂನು ವಿಭಾಗವು ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು (ಖಖಿI) ಎಲ್ಲವನ್ನೂ ಒಳಗೊಂಡಿದೆ. ಆದ್ದರಿಂದ ಈ ಘಟಕದ ಕಾರ್ಯಕರ್ತರು ಎಚ್ಚರಿಕೆಯಿಂದ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಚಿಕ್ಕಮಗಳೂರು ವಕೀಲರು, ಯೂತ್ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಬಂದ ವಕೀಲರು, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯ ಸಂದೇಶ: ಕಾಂಗ್ರೆಸ್ ಕಾನೂನು ವಿಭಾಗವು ವಕೀಲರ ಹಕ್ಕುಗಳ ರಕ್ಷಣೆಯ ಜೊತೆಗೆ ಸಂವಿಧಾನದ ಮೌಲ್ಯಗಳನ್ನು ಉಳಿಸಿ, ಜನರ ಹಕ್ಕುಗಳ ಪರ ಹೋರಾಡುವ ಬದ್ಧ ವೇದಿಕೆಯಾಗಬೇಕು ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಯಿತು.

ವೇದಿಕೆಯಲ್ಲಿ ಕೆಪಿಸಿಸಿ ರಾಜ್ಯ ಜಂಟಿ ಕಾರ್ಯದರ್ಶಿ ಖಾಲಂದರ್ ಕೊಯ್ಲ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇ ಗೌಡ್ರು, ಸುಳ್ಯ ಕ್ಷೇತ್ರದ ಮುಖಂಡ ಜಿಗಣಿ ಕೃಷ್ಣಪ್ಪ, ಎಸ್.ಸಿ. ಘಟಕದ ಮಾಜಿ ಅಧ್ಯಕ್ಷ ಡಾ. ಮುನಿಸ್ವಾಮಿ, ಹಾಲಿ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ, ಕಾನೂನು ವಿಭಾಗದ ಮಾಜಿ ಅಧ್ಯಕ್ಷ ಡಿ.ಟಿ. ಪ್ರಸನ್ನ, ದುದ್ದ ಬ್ಲಾಕ್ ಅಧ್ಯಕ್ಷ ಜಿ.ಎಸ್. ವಿಶ್ವನಾಥ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಚ್.ಆರ್. ಒಂಬೆಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ದಾಸರಕೊಪ್ಪಲು ರಘು, ರಂಗಸ್ವಾಮಿ, ಎಚ್.ಎಂ. ಪ್ರಕಾಶ್, ರಾಜ್ಯ ಕಾರ್ಯದರ್ಶಿ ಗಂಡಸಿ ಕುಮಾರಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಹಾಗೂ ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ಎಚ್.ಆರ್. ವಿನೋದ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page