Tuesday, March 4, 2025

ಸತ್ಯ | ನ್ಯಾಯ |ಧರ್ಮ

ರಾಜ್ಯಗಳ ನಿರ್ಲಕ್ಷ್ಯದಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿಗಳ ಬೆಲೆ ಏರಿಕೆ: ಸುಪ್ರೀಮ್‌ ಕೋರ್ಟ್

ಕೈಗೆಟುಕುವ ವೈದ್ಯಕೀಯ ಆರೈಕೆ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ‌. ರಾಜ್ಯ ಸರ್ಕಾರಗಳ ವೈಫಲ್ಯ ಖಾಸಗಿ ಆಸ್ಪತ್ರೆಗಳಿಗೆ ಪ್ರೋತ್ಸಾಹಕವಾಗಿ ಪರಿಣಮಿಸಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.

ಖಾಸಗಿ ಆಸ್ಪತ್ರೆಗಳು ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಹೆಚ್ಚಿನ ಬೆಲೆಯ ಔಷಧಿಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಿಚಾರಣೆ ನಡೆಸಿತು. ಖಾಸಗಿ ಆಸ್ಪತ್ರೆಗಳು ತಮ್ಮದೇ ಔಷಧಾಲಯಗಳಿಂದ ಔಷಧಿ ಖರೀದಿಸುವಂತೆ ರೋಗಿಗಳನ್ನು ಒತ್ತಾಯಿಸದಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.

ಖಾಸಗಿ ಆಸ್ಪತ್ರೆಗಳ ವಿರುದ್ಧ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ರೋಗಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅರ್ಜಿದಾರರ ವಾದವನ್ನು ಒಪ್ಪಿಕೊಂಡ ಸುಪ್ರೀಂ ಕೋರ್ಟ್, ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸೂಚಿಸಿದ ಔಷಧಿ ಬೇರೆಡೆ ಕಡಿಮೆ ಬೆಲೆಗೆ ಲಭ್ಯವಿರುವಾಗ ಅದನ್ನು ತಮ್ಮ ಔಷಧಾಲಯಗಳಿಂದ ಖರೀದಿಸುವಂತೆ ಒತ್ತಾಯಿಸಬಾರದು ಎಂದು ರಾಜ್ಯಗಳಿಗೆ ಸಲಹೆ ನೀಡಿತು.

ಸಮಾಜದ ಬಡ ವರ್ಗಗಳಿಗೆ ಜೀವರಕ್ಷಕ ಔಷಧ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ರೀತಿಯ ದರೋಡೆಯಿಂದ ನಾಗರಿಕರನ್ನು ರಕ್ಷಿಸಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇದೇ ವಿಷಯದ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆ ಹಲವಾರು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ತಮಿಳುನಾಡು, ಹಿಮಾಚಲ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಬಿಹಾರ ಮತ್ತು ರಾಜಸ್ಥಾನ ರಾಜ್ಯಗಳು ಸುಪ್ರೀಂ ಕೋರ್ಟ್‌ನ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಿವೆ. ಅವು ಪ್ರತಿ ಅಫಿಡವಿಟ್ ಸಹ ಸಲ್ಲಿಸಿವೆ. ಅದರಲ್ಲಿ ಕೇಂದ್ರ ಕೈಗೊಳ್ಳುವ ನಿಯಂತ್ರಣ ಕ್ರಮಕ್ಕೆ ಬದ್ಧರಾಗಿ ಇರುವುದಾಗಿ ಹೇಳಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page