Friday, June 14, 2024

ಸತ್ಯ | ನ್ಯಾಯ |ಧರ್ಮ

ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿ: ನೆಹರು ಚಿಂತನೆಗಳು

(ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರು ಆದಿವಾಸಿಗಳ ಸಂಸ್ಕೃತಿ ಮತ್ತು ಅವರ ಅಭಿವೃದ್ಧಿಯ ಕುರಿತು ಮಾಡಿದ ಮೂರು ಪ್ರಖ್ಯಾತ ಭಾಷಣಗಳನ್ನು ಇಲ್ಲಿ ಅನುವಾದಿಸಲಾಗಿದೆ. ಅರವತ್ತರ ದಶಕದಲ್ಲಿ ನೆಹರು ಆದಿವಾಸಿಗಳ ಅಬಿವೃದ್ಧಿಯ ಕುರಿತು ಮಾಡಿದ ಈ ಭಾಷಣಗಳಿಗೆ ಚಾರಿತ್ರಿಕ ಮಹತ್ವವಿದೆ. ಅಲ್ಲದೆ ಆದಿವಾಸಿಗಳ ಕುರಿತ ಅಂದಿನ ಭಾರತದ ರಾಜಕೀಯಾರ್ಥಿಕ ಸಂದರ್ಭಗಳನ್ನು ಸೂಕ್ಷ್ಮವಾಗಿ ಈ ಭಾಷಣಗಳು ವಿವರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯಾನಂತರ, ಭಾರತ ಸರ್ಕಾರ ಆದಿವಾಸಿಗಳ ಅಭಿವೃದ್ಧಿ ನೀತಿಯನ್ನು ರೂಪಿಸಲು ನೆಹರು ಅವರ ಈ ಭಾಷಣಗಳನ್ನು ಪ್ರಧಾನ ಆಕರಗಳೆಂದೇ ಪರಿಗಣಿಸಿತು. ಆದಿವಾಸಿಗಳ ಅಭಿವೃದ್ಧಿಗೆ ಅಂದು ರಚಿಸಲ್ಪಟ್ಟ ಪಂಚಶೀಲ ತತ್ವಗಳು ನೆಹರು ಅವರ ಈ ಭಾಷಣಗಳಿಂದಲೇ ಉದ್ಭವಿಸಿದಂತಹವು.

ಆದಿವಾಸಿಗಳ ಅಭಿವೃದ್ಧಿಯ ಕುರಿತು ನೆಹರು ಒಬ್ಬ ಮಾನವ ಶಾಸ್ತ್ರಜ್ಞನಂತೆಯೇ ಚಿಂತಿಸಿದ್ದಾರೆ. ಆದಿವಾಸಿಗಳನ್ನು ಅಭಿವೃದ್ಧಿಪಡಿಸಲೆಂದೇ ನಾವು ಒತ್ತಾಯದಿಂದ ಅವರ ಮೇಲೆ ಏನನ್ನೂ ಹೇರಕೂಡದು. ಮತ್ತು ವಸ್ತುಸಂಗ್ರಹಾಲಯದ ಸ್ಪೆಸಿಮನ್‌ಗಳ ತರಹ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಬಾರದು. ಅವರ ಅಭಿವೃದ್ಧಿಗೆ ಒಂದು ಸುವರ್ಣ ಮಾಧ್ಯಮ ಸೂತ್ರವನ್ನು ಕಂಡುಕೊಳ್ಳಬೇಕಿದೆ ಎಂದು ತಮ್ಮ ಈ ಮೂರು ಭಾಷಣಗಳಲ್ಲಿ ನೆಹರು ಆದಿವಾಸಿಗಳ ಅಭಿವೃದ್ಧಿ ನೀತಿಯನ್ನು ರೂಪಿಸಲು ಅನೇಕ ಒಳನೋಟಗಳನ್ನು ನೀಡುತ್ತಾರೆ. ಆದರೆ ಅಭಿವೃದ್ಧಿಯ ಜೊತೆಯಲ್ಲಿಯೇ ಬರುವ ಆಧುನಿಕತೆಯನ್ನು ನೆಹರು ನಿರಾಕರಿಸುತ್ತಾರೆ. ಆಧುನಿಕತೆ ಬುಡಕಟ್ಟುಗಳ ಬದುಕನ್ನು ನಾಶ ಮಾಡಿಬಿಡುತ್ತದೆ ಎಂಬುದು ನೆಹರು ಅವರ ನಂಬಿಕೆಯಾಗಿತ್ತು.

ಭಾರತ ದೇಶ ಶೀಘ್ರ ಪ್ರಗತಿ ಸಾಧಿಸಲು ಯುರೋಪ್ ಮಾದರಿಯ ಅಭಿವೃದ್ಧಿ ನೀತಿ ಬೇಕು. ಆದರೆ ಈ ಬಗೆಯ ನೀತಿಯ ಜೊತೆಗೇ ಬರುವ ಆಧುನಿಕತೆಯಿಂದ ಇಂಡಿಯಾದ ವೈವಿಧ್ಯತೆಯು ನಾಶವಾಗಬಾರದು ಎಂಬುದು ಆಧುನಿಕತೆಯ ಕಡುಮೋಹಿಯಾಗಿದ್ದ ನೆಹರು ಅವರ ನಿಲುವಾಗಿತ್ತು. ನೆಹರು, ಆದಿವಾಸಿಗಳು ತಮ್ಮ ಹಾಡು, ನೃತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು ಎಂದು ಬಯಸಿದರು, ನಗರದಲ್ಲಿರುವ ಆಧುನಿಕತೆಯಿಂದ ವಿಕಾರಗೊಂಡಿರುವ ಸಮುದಾಯಗಳಂತೆ ಆದಿವಾಸಿಗಳು ರೂಪಾಂತರಗೊಳ್ಳಬಾರದು, ಆಧುನಿಕತೆಯು ಆದಿವಾಸಿಗಳ ಜೀವನಕ್ರಮದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ನಂಬಿದ್ದರು. ಆದಿವಾಸಿಗಳು ಅಭಿವೃದ್ಧಿ ಹೊಂದಬೇಕು, ಆದರೆ ಅವರ ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳು ಉಳಿಯಬೇಕು. ಇದು ನೆಹರು ಚಿಂತನೆಯಲ್ಲಿರುವ ಬಹುದೊಡ್ಡ ವಿರೋಧಾಭಾಸ. ಆದಿವಾಸಿಗಳು ತಮ್ಮ ಸಂಸ್ಕೃತಿ, ನೃತ್ಯ ಮತ್ತು ಇತ್ಯಾದಿ ಕಲೆಗಳನ್ನು ಉಳಿಸಿಕೊಳ್ಳಬೇಕೆಂದರೆ, ತಮ್ಮ ಪಾರಂಪರಿಕ ಉತ್ಪಾದನಾ ವ್ಯವಸ್ಥೆ ಮತ್ತು ಸಾಮುದಾಯಿಕ ಬದುಕನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕು. ಅಭಿವೃದ್ದಿ ಯೋಜನೆಗಳು ತರುವ ಅಲ್ಪಸ್ವಲ್ಪ ಸುಧಾರಣೆಗಳೂ ಆದಿವಾಸಿಗಳ ಬದುಕಿನ ಮೇಲೆ ನಿರ್ಣಾಯಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನೆಹರು ಹೇಳುವ ‘ಉಳಿಸಿಕೊಳ್ಳುವ’ ಚಿಂತನೆ ವರ್ತಮಾನದಲ್ಲಿ ಬಿದ್ದುಹೋಗುತ್ತದೆ. ನೆಹರು ಅತ್ಯಂತ ಮಮಕಾರದಿಂದ ಆದಿವಾಸಿಗಳ ಕುರಿತು ಮಾತಾಡಿದ್ದಾರೆ. ಈ ಭಾವನಾತ್ಮಕ ನಿಲುವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಆದಿವಾಸಿಗಳ ಸಹಜ ಹಕ್ಕುಬಾಧ್ಯತೆಗಳ ಕುರಿತ ನೆಹರು ಅವರ ರಾಜಕೀಯ ನಿಲುವುಗಳು ಮಾತ್ರ ಪ್ರಶ್ನಾರ್ಹವಾಗಿಯೇ ಇವೆ.

ನೆಹರೂ ಅವರು ಆದಿವಾಸಿಗಳ ಕುರಿತು ಮಾಡಿದ ಭಾಷಣಗಳ ಚಾರಿತ್ರಿಕ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎ.ಎಸ್.ಪ್ರಭಾಕರ್‌ ಅವರು ಅನುವಾದಿಸಿದ ನೆಹರೂ ಭಾಷಣಗಳನ್ನು ಪೀಪಲ್‌ ಮೀಡಿಯಾ ಓದುಗರಿಗೆ ನೀಡುತ್ತಿದ್ದೇವೆ.)

ಈಶಾನ್ಯ ಗಡಿರಾಜ್ಯಗಳ ಪ್ರವಾಸದಿಂದ ಹಿಂದಿರುಗಿದ ಮೇಲೆ ನೆಹರು ಮಾಡಿದ ಭಾಷಣ 1952:

ನಾನು ಈಶಾನ್ಯ ಗಡಿಭಾಗದ ಗುಡ್ಡಗಾಡು ಪ್ರದೇಶಗಳಾದ ಮಣಿಪುರ ಮತ್ತು ತ್ರಿಪುರಾದ ಕೆಲವು ಭಾಗಗಳನ್ನು ಸಂದರ್ಶಿಸಿದ್ದೇನೆ. ನಮ್ಮ ಈ ಹೊರ ಜಗತ್ತಿನಿಂದ ಸಹಜವಾಗಿಯೇ ಸಂಪರ್ಕಗಳನ್ನು ಕಡಿದುಕೊಂಡಿರುವ ಈ ಭಾಗದ ಜನತೆ, ಆ ಗಿರಿಕಂದರಗಳ ಜೊತೆ ತಮ್ಮ ದೀರ್ಘಕಾಲದ ಬದುಕನ್ನು ಬದುಕಿದ್ದಾರೆ. ಅವರು ಎಂತಹ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆಂದರೆ, ಅವರಿಗೆ ನಾವು ಕಳುಹಿಸುವ ಪರಿಕರಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಅವರ ವಾಸಸ್ಥಾನಗಳ ಸಮೀಪದಲ್ಲಿ ಮೇಲಿನಿಂದಲೇ ಹಾಕುವಂತಹ ದುರ್ಗಮ ಕಾಡುಗಳಲ್ಲಿ ಅವರು ವಾಸಿಸುತ್ತಿದ್ದಾರೆ. ಇಂಡಿಯಾದ ಬಹುತೇಕ ಜನತೆ ಈ ಆದಿವಾಸಿ ಸಮುದಾಯಗಳ ಕುರಿತು ಯಾವ ಬಗೆಯಲ್ಲಿ ಯೋಚಿಸುತ್ತಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಈ ಬಿಲ್, ಸಂತಾಲ ಮತ್ತು ಗೊಂಡ ಮುಂತಾದ ಸಮುದಾಯಗಳ ಕುರಿತು ನನ್ನಲ್ಲಿ ಒಂದು ಸಾಮಾನ್ಯ ಗ್ರಹಿಕೆ ರೂಪಗೊಂಡಿದೆ. ಈ ಹಿಂದುಳಿದ ಅಥವಾ ಆದಿಮ ಸಮುದಾಯಗಳೆಂದರೆ ನನಗೆ ತುಂಬಾ ಪ್ರೀತಿ, ಏಕೆಂದರೆ ಅವರ ಸಹಜ ಬದುಕು ನಮ್ಮ ಆದಿಮ ಜೀವನಪದ್ಧತಿಗೆ ತೀರಾ ಹತ್ತಿರವಾಗಿದೆ. ಆದಿವಾಸಿಗಳೂ ಸಹ ನಮ್ಮಂತಹ ಜನರೇ. ಅವಕಾಶಗಳು ದೊರೆತರೆ ಅವರಲ್ಲಿನ ಕೆಲವರು ಬೇರೆಬೇರೆ ರಂಗಗಳಲ್ಲಿ ಮುಂದುವರಿಯಬಲ್ಲರು. ಅದಕ್ಕಾಗಿ ನಾವು ಅವರಿಗೆ ಅವಕಾಶಗಳನ್ನು ದೊರೆಯುವಂತೆ ಮಾಡಬೇಕಿದೆ. ಈಶಾನ್ಯ ಗಡಿ ರಾಜ್ಯಗಳಿಗೆ ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಆದಿವಾಸಿಗಳ ಕುರಿತ ನನ್ನ ಗ್ರಹಿಕೆಗಳನ್ನು ಬದಲಿಸಿಕೊಂಡೆ. ಇಲ್ಲಿನ ಆದಿವಾಸಿಗಳು ಪರಸ್ಪರ ಅನೇಕ ರೀತಿಯಲ್ಲಿ ಬಿsನ್ನರಾಗಿದ್ದಾರೆ, ವೈವಿಧ್ಯಮಯವಾಗಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರು ನಿಸ್ಸಂದೇಹವಾಗಿ ಆದಿಮ ಶೈಲಿಯಲ್ಲೇ ಬದುಕುತ್ತಿದ್ದಾರೆ. ಕೆಲವರು ಆಶ್ಚರ್ಯಕರ ರೀತಿಯಲ್ಲಿ ಅಬಿsವೃದ್ಧಿ ಹೊಂದಿ ಮುಂದುವರಿದಿದ್ದಾರೆ. ಇವರನ್ನು ಹಿಂದುಳಿದವರು ಎಂದು ಕರೆಯುವುದು ನಿಜಕ್ಕೂ ಅಸಂಗತ ಎಂದೆನ್ನಿಸುತ್ತಿದೆ. ಇಲ್ಲಿನ ಆದಿವಾಸಿಗಳ ಕೆಲ ಗುಂಪುಗಳು ದೇಶದ ಬೇರೆ ಭಾಗದಲ್ಲಿ ಬದುಕುತ್ತಿರುವ ಆದಿವಾಸಿಗಳಿಗಿಂತ ಮುಂದುವರಿದ ಜೀವನವನ್ನು ನಡೆಸುತ್ತಿದ್ದಾರೆ ಎಂಬುದು ಭಾವನೆ ನನ್ನದು.

ನನ್ನ ಪ್ರವಾಸದ ಸಂದರ್ಭದಲ್ಲಿ, ಈ ಆದಿವಾಸಿಗಳ ದೈಹಿಕ ಚರ್ಯೆ, ಆರೋಗ್ಯ ಮತ್ತು ಬಲಿಷ್ಠ ದೇಹಗಳಿಗಿಂತ ಅವರ ನೇರ, ನಿಷ್ಕಳಂಕ ನಡವಳಿಕೆಗಳು ನನ್ನ ಗಮನ ಸೆಳೆದವು. ಅವರು ಧರ‍್ಯದಿಂದ, ಸಂಕೋಚವಿಲ್ಲದೆ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಾರೆ. ಅಲ್ಲಿನ ಹೆಣ್ಣು ಗಂಡುಗಳು ಆರೋಗ್ಯದಿಂದಿದ್ದಾರೆ, ಈ ಕಾರಣಕ್ಕಾಗಿ ಅವರು ನನ್ನ ಮನಸೂರೆಗೊಂಡಿದ್ದಾರೆ, ಯಾವುದೇ ದೇಶ ಹೆಮ್ಮೆ ಪಡಬಹುದಾದ ರೀತಿಯಲ್ಲಿ ಅವರು ಬದುಕುತ್ತಿದ್ದಾರೆ. ನಾನು ಭೇಟಿ ಕೊಟ್ಟ ಬಹುತೇಕ ಎಲ್ಲಾ ಕಡೆಯ ಆದಿವಾಸಿಗಳಲ್ಲಿ ಶಿಕ್ಷಣದ ಮಹತ್ವದ ಅರಿವು ವ್ಯಕ್ತವಾಯಿತು. ಅವರ ಬಹುಮುಖ್ಯ ಎರಡು ಬೇಡಿಕೆಗಳೆಂದರೆ, ಶಾಲೆಗಳು ಮತ್ತು ರಸ್ತೆಗಳು. ನನಗೆ ಭರವಸೆ ಇದೆ, ಇವರಿಗೆ ಸಂಪರ್ಕ ಸಾಧನ ಮತ್ತು ಶಾಲೆಗಳನ್ನು ನಿರ್ಮಿಸಿಕೊಟ್ಟರೆ, ಇವರು ತೀವ್ರಗತಿಯಲ್ಲಿ ಮುಂದುವರಿದು ಹಲವು ರೀತಿಯಲ್ಲಿ ದೇಶದ ನೈಜ ಸಂಪತ್ತಾಗಿ ರೂಪಗೊಳ್ಳುತ್ತಾರೆ.

ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಈ ಎಲ್ಲ ಆದಿವಾಸಿಗಳು ಮತ್ತು ಆ ಭಾಗದಲ್ಲಿ ವಾಸಿಸುವ ಇತರೆ ಜನಾಂಗಗಳು ಭಾರತದಿಂದ ಬಹುತೇಕ ಸಂಪರ್ಕ ಕಡಿದುಕೊಂಡೇ ಇದ್ದವು. ಕೆಲವು ಸಮುದಾಯಗಳು ಅವು ವಾಸಿಸುತ್ತಿದ್ದ ಪ್ರದೇಶಗಳಿಂದ ಈ ಕಡೆ ವಲಸೆ ಬಂದರೂ, ಹಲವಾರು ಸಮುದಾಯಗಳು ಅಲ್ಲೇ ಇದ್ದು ಹೊರಗಿನವರಂತೆಯೇ ಬದುಕಿದವು. ನಾವು ಅಲ್ಲಿ ಮೊದಲಿಗೆ ಎದುರಿಸಿದ ಸಮಸ್ಯೆ, ಆದಿವಾಸಿಗಳಲ್ಲಿ ತಾವು ಹೊರಗಿನವರು ಮತ್ತು ಅನಾಗರಿಕರು ಎಂಬ ಕೀಳರಿಮೆ ಬಲವಾಗಿ ಬೇರೂರಿರುವುದು. ಅವರಲ್ಲಿ ನಾವು ಆತ್ಮವಿಶ್ವಾಸ ತುಂಬಿ, ಭಾರತವೆಂಬ ದೊಡ್ಡ ದೇಶದ ಭಾಗವಾಗಿ ನೀವಿದ್ದೀರಿ ಎಂದು ಅವರನ್ನು ಹುರಿದುಂಬಿಸಬೇಕಿದೆ ಮತ್ತು ಅವರನ್ನು ಗೌರವಿಸುತ್ತಲೇ ಈ ವೈವಿಧ್ಯಮಯ ದೇಶದ ಭಾಗವಾಗಿ ಅವರು ಬದುಕುವಂತೆ ಪ್ರೇರೇಪಿಸಬೇಕಿದೆ. ಈ ಬಗೆಯ ನಮ್ಮ ನಿಲುವುಗಳು ಮಾತç, ಅವರನ್ನು ನೆಮ್ಮದಿಯಿಂದ ಬದುಕುವಂತೆ ಮಾಡಬಲ್ಲವು ಮತ್ತು ಹೊರಗಿನ ಒತ್ತಡಗಳಿಗೆ ಮಣಿಯದೆ ಅವರು ತಮ್ಮ ಪಾರಂಪರಿಕ ಆಚರಣೆ ಮತ್ತು ಸಂಸ್ಕೃತಿಗೆ ತಕ್ಕಂತೆ ತಮ್ಮಷ್ಟಕ್ಕೆ ಅಬಿsವೃದ್ಧಿಯನ್ನು ಹೊಂದಬಲ್ಲರು.

ಅಲ್ಲಿಯ ಇನ್ನೊಂದು ಸಮಸ್ಯೆಯೇನೆಂದರೆ, ಗಡಿ ಭಾಗದ ಜನತೆಯಲ್ಲಿ ತಮ್ಮಷ್ಟಕ್ಕೆ ತಾವು ಬದುಕಲು, ತಮ್ಮ ಇಚ್ಛೆಗೆ ಮತ್ತು ಅನನ್ಯತೆಗೆ ತಕ್ಕಂತೆ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು, ಇಲ್ಲಿ ತಮಗೆ ಪರಿಪೂರ್ಣ ಸ್ವಾತಂತ್ರ್ಯವಿದೆ ಎಂಬ ಭಾವನೆ ಅವರಲ್ಲಿ ಬಲಗೊಳ್ಳಬೇಕಿದೆ. ಭಾರತವೆಂಬುದು ನಮ್ಮನ್ನು ಕಾಯುವ, ರಕ್ಷಿಸುವ ದೇಶ ಮಾತçವಲ್ಲ, ನಮ್ಮನ್ನು ಮುಕ್ತವಾಗಿ, ಸ್ವಾತಂತ್ರ್ಯದದಿಂದ ಬದುಕುವಂತೆ ಪ್ರೇರೇಪಿಸುವ ದೇಶವೆಂದು ಅವರು ಮನಗಾಣುವಂತೆ ನಾವು ವರ್ತಿಸಬೇಕಿದೆ. ಭಾರತ ನಮ್ಮನ್ನು ಆಳುತ್ತಿದೆ, ನಾವು ಆಳಿಸಿಕೊಳ್ಳುವವರು ಎಂಬ ಕಲ್ಪನೆ ಅವರಿಗೆ ಬಂದಲ್ಲಿ, ಇಲ್ಲವೆ ಅವರ ಸಂಸ್ಕೃತಿ ಮತ್ತು ಪರಂಪರೆಗಳನ್ನು ಹೀಗಳೆದು ಹೊರಗಿನ ಕಟ್ಟುಪಾಡುಗಳನ್ನು ಅವರ ಮೇಲೆ ಹೇರಿದಲ್ಲಿ, ಅವರು ನಮ್ಮಿಂದ ವಿಮುಖರಾಗುತ್ತಾರೆ. ಜೊತೆಗೆ ಈಶಾನ್ಯ ಗಡಿಭಾಗದ ಸಮಸ್ಯೆಗಳು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಅಸ್ಸಾಮಿನ ರಾಜ್ಯಪಾಲರಾದ ಶ್ರೀ ಜಯರಾಮದಾಸ್ ದೌಲತ್ ರಾಮ್ ಅವರನ್ನು ಕಂಡಾಗ ನನಗೆ ತುಂಬಾ ಸಂತೋಷವಾಯಿತು. ಅವರು ಆದಿವಾಸಿಗಳ ಬಗ್ಗೆ ಸಹಜ ಅನುಕಂಪ ಮತ್ತು ಪ್ರೀತಿಗಳನ್ನು ಇಟ್ಟುಕೊಂಡಿದ್ದಾರೆ. ನಾವು ರೂಪಿಸಿರುವ ಯೋಜನೆಗಳನ್ನು ಅವರು ಮನಸಾರೆ ಹೊಗಳಿದ್ದಾರೆ. ಆದರೆ ಅವರು ಹೇಳಿದ ಮುಖ್ಯ ಸಮಸ್ಯೆ ಹಣಕಾಸಿನದು. ಅಲ್ಲಿನ ಶಾಲೆಗಳು ಸುಲಭ ದರದಲ್ಲಿ ಶಿಕ್ಷಣ ನೀಡುತ್ತಿವೆ. ಆದರೆ ಶಾಲೆಗಳಿಗೆ ಅಧಿಕ ಬೇಡಿಕೆ ಇದೆ. ಸಂಪರ್ಕ ಸಾಧನಗಳು ತುಂಬಾ ದುಬಾರಿ. ಆದರೂ ಸಂಪರ್ಕ ಸಾಧನಗಳಿಲ್ಲದೆ ನಾವು ಏನನ್ನೂ ಸಾದಿsಸಲಾರೆವು. ಬ್ರಿಟಿಷ್ ಆಡಳಿತದ ಉದ್ದಕ್ಕೂ ಆದಿವಾಸಿಗಳ ಈ ಪ್ರದೇಶ ಯಾವತ್ತೂ ಅಭಿವೃದ್ಧಿ ಹೊಂದದೆ ಉಳಿದುಬಿಟ್ಟಿತು. ಇಂದು ನಾವು ಇಲ್ಲಿನ ಸಮುದಾಯಗಳ ಅಭಿವೃದ್ಧಿಯ ಸಲುವಾಗಿ, ಈ ಪ್ರದೇಶದ ದುರ್ಗಮ ಪ್ರದೇಶಗಳ ಮೂಲೆಮೂಲೆಯನ್ನೂ ತಲುಪಬೇಕಿದೆ.

ನಾನು ಈ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಹೇಳಬಹುದೆನ್ನಿಸುತ್ತದೆ. ಈಶಾನ್ಯ ಭಾರತದ ಆಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಕೊಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದಷ್ಟೇ, ಭಾರತದ ಜನತೆಯೂ ಈ ಜವಾಬ್ದಾರಿಯಲ್ಲಿ ಪಾಲ್ಗೊಳ್ಳಬೇಕಿದೆ. ಆದಿವಾಸಿಗಳ ಜೊತೆಗಿನ ನಮ್ಮ ಸಂಬಂಧ, ಅವರಿಗೂ ಮತ್ತು ನಮಗೂ ಪರಸ್ಪರ ಪ್ರಯೋಜನಕಾರಿಯಾಗಲಿದೆ. ಅವರು ಇಂಡಿಯಾದ ಬಹುತ್ವ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅಂತಃಶಕ್ತಿಗೆ ಮಹತ್ವದ ಸೇರ್ಪಡೆಯಾಗಬಲ್ಲರು. ಭಾರತ ದೇಶದ ಈಶಾನ್ಯ ಭಾಗದಲ್ಲಿ ಯಾರಾದರು ಸಂಚರಿಸಿದರೆ, ಇಂಡಿಯಾ ದೇಶದ ಬೃಹತ್ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಜೊತೆಗೆ ಈ ದೇಶವನ್ನು ಯಾರಾದರು ಲಘುವಾಗಿ ಗ್ರಹಿಸಿದ್ದರೆ ಅದು ಅಸಂಗತ ಎಂಬುದು ಮನವರಿಕೆಯಾಗುತ್ತದೆ. ಯಾರಿಗೇ ಆಗಲಿ, ಇಲ್ಲಿಯವರೆಗೆ ತಮಗೆ ಪರಿಚಯವಿರುವ ಭಾರತ ಇನ್ನೂ ಅಪಾರ ವೈವಿಧ್ಯತೆಯನ್ನು ಹೊಂದಿದೆ. ಇನ್ನು ಅನೇಕ ಮಹತ್ವದ ಸ್ಥಳಗಳನ್ನು, ಜನಾಂಗಗಳನ್ನು, ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ನಾವಿನ್ನೂ ನೋಡಬೇಕಿದೆ ಎಂದೆನ್ನಿಸದೇ ಇರದು. ಕವಿ ರವೀಂದ್ರರು ಭಾರತದ ವೈವಿಧ್ಯತೆಯ ಕುರಿತು ಬರೆದ ಪದ್ಯದ ಕೆಲವು ಸಾಲುಗಳನ್ನು ನಿಮಗೆ ಹೇಳಬೇಕೆನ್ನಿಸುತ್ತದೆ.

ಇದು ಹಲವು ಮಾನವ ತೊರೆಗಳು ಏಕತ್ರಗೊಂಡ

ತಡೆಯಿಲ್ಲದೆ ನುಗ್ಗುವ ಪ್ರವಾಹ.

ಅಗೋಚರ ಮೂಲ, ಸೇರುವುದೊಂದೇ ಕಡಲು

ಅದು ಆರ‍್ಯ ಆರ‍್ಯೇತರ, ದ್ರಾವಿಡ ಚೀನೀ

ಹೂಣ ಪಠಾಣ ಶಕ ಮೊಘಲರ ಬಂಧ

ಅಪೂರ್ವ ಸಂಕರ, ಒಂದೇ ಒಡಲು

1952ರ ಜೂನ್ ತಿಂಗಳಲ್ಲಿ ನಾನು ದೆಹಲಿಯಲ್ಲಿ ಅನುಸೂಚಿತ ಪ್ರದೇಶಗಳ ಆದಿವಾಸಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದೆ. ಯಾವ ಪೂರ್ವ ತಯಾರಿಯಿಲ್ಲದೆ, ಆವತ್ತಿನ ಸಂದರ್ಭದ ಸ್ಫೂರ್ತಿಯಿಂದ ಮಾಡಿದ ಭಾಷಣದ ಹಲವು ಭಾಗಗಳು, ಮುಂದೆ ಆದಿವಾಸಿಗಳ ಕುರಿತು ನೀತಿ ರೂಪಿಸುವಾಗ ಸಹಾಯ ಮಾಡಿದವು. ಆ ಭಾಷಣ ಮುಂದೆ ಮುದ್ರಣಗೊಂಡು ಈಶಾನ್ಯ ಭಾಗದ ರಾಜ್ಯಗಳಲ್ಲಿ ಹಂಚಲ್ಪಟ್ಟಿತು. ನಂತರ ಆ ಭಾಷಣದ ಕೆಲವು ಮುಖ್ಯಾಂಶಗಳನ್ನು ಆರಿಸಿ ತೆಗೆದು ನನಗೇ ಮುಂದೆ ಅರ್ಪಿಸಲಾಯಿತು. ಆ ಭಾಷಣ ಒಂದು ತತ್ವಪ್ರಣಾಳಿಕೆಯಾಗುವ ಉದ್ದೇಶದಿಂದ ಮಾಡಿದ್ದಾಗಿರಲಿಲ್ಲ, ಆದರೆ ಅದಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಪ್ರಾಪ್ತವಾಗಿತ್ತು. ಅಸ್ಸಾಮಿನಲ್ಲಿ ಪದೇಪದೇ ಉಲ್ಲೇಖವಾಗುತ್ತಿದ್ದ ನನ್ನ ಆ ಭಾಷಣವನ್ನು ತರಿಸಿಕೊಂಡು ನಾನು ಮತ್ತೆ ಓದಿದೆ. ಆ ಭಾಷಣ ಈಶಾನ್ಯ ಗಡಿರಾಜ್ಯಗಳ ಆದಿವಾಸಿಗಳ ಸಮಸ್ಯೆಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ಉತ್ತಮ ಪ್ರಯತ್ನವೆಂದೇ ನಾನು ಭಾವಿಸುವೆ. ಈಚೆಗೆ ನಾನು ಮತ್ತೆ ಈಶಾನ್ಯ ರಾಜ್ಯಗಳಿಗೆ ಹೋದಾಗ ಆ ಭಾಷಣದ ಅಧಿಕೃತತೆಯ ಅರಿವಾಗತೊಡಗಿತು.

ಆದಿವಾಸಿ ಜನಪದ*

ಅಧ್ಯಕ್ಷರೆ ಮತ್ತು ಸ್ನೇಹಿತರೇ, ಆದಿವಾಸಿಗಳ ಕುರಿತು ವಿಶೇಷವಾಗಿ ಚಿಂತಿಸುವವರು ಇಲ್ಲಿ ಸೇರಿದ್ದೀರಿ. ಈ ವಿಷಯದ ಕುರಿತು ಆಳವಾಗಿ ಯೋಚಿಸುವ ಬಹುತೇಕ ತಜ್ಞರೇ ಇಲ್ಲಿದ್ದೀರಿ.  ಆದಿವಾಸಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಕುಳಿತರೆ, ಆ ವಿಷಯದಲ್ಲಿ ತಜ್ಞನಲ್ಲದ ನಾನು ಏನನ್ನು ತಾನೇ ವಿಶೇಷವಾಗಿ ಹೇಳಲು ಸಾಧ್ಯ? ಎಂಬ ಅಳುಕು ನನಗಿದೆ.

ನಾನು ಪ್ರಧಾನಿಯಾಗಿರುವ ಕಾರಣಕ್ಕಾಗಿ ನೀವು ಇಲ್ಲಿಗೆ ನನ್ನನ್ನು ಆಹ್ವಾನಿಸಿದ್ದೀರೆಂದು ನಾನು ಭಾವಿಸಿದ್ದೇನೆ. ಇದರ ಹೊರತಾಗಿ ಈ ಸಮ್ಮೇಳನದಲ್ಲಿ ಭಾಗಿಯಾಗುವ ಯಾವ ತಜ್ಞತೆಯೂ ನನಗಿದೆ ಎಂದು ನಾನು ಭಾವಿಸುವುದಿಲ್ಲ. ನನಗೆ ಈ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಇರುವ ಇನ್ನೊಂದು ಕಾರಣ ನಾನು ಪ್ರಧಾನಿಯಾದ ಆರಂಭದಲ್ಲಿ ಈ ಆದಿವಾಸಿ ಸಮುದಾಯಗಳಿಂದ ತುಂಬಾ ಆಕರ್ಷಿಸಲ್ಪಟ್ಟಿದ್ದೆ ಎನ್ನುವುದು. ನಾನು ಇವರಿಂದ ಆಕರ್ಷಿತನಾಗಿದ್ದೇನೆ ಎಂಬ ಭಾವನೆ, ಸಂಶೋಧಕನೊಬ್ಬ ಅಪರಿಚಿತ ಜನಸಮುದಾಯವನ್ನು ನೋಡುವ ಕುತೂಹಲದ ದೃಷ್ಟಿಕೋನದಿಂದ ಹುಟ್ಟಿದ್ದಲ್ಲ, ಇಲ್ಲವೆ ಇವರನ್ನೆಲ್ಲ ಉದ್ಧಾರ ಮಾಡಿಬಿಡುತ್ತೇನೆ ಎಂದುಕೊಳ್ಳುವ ಧರ್ಮದರ್ಶಿಯೊಬ್ಬನ ಉದಾರತೆಯಿಂದೇನು ಹುಟ್ಟಿದ್ದಲ್ಲ. ನಾನು ಇವರಿಂದ ಆಕರ್ಷಿತನಾದದ್ದು ಈ ಭಾರತವೆಂಬ ಮನೆಯಲ್ಲಿ ನಾನು ಅವರ ಜೊತೆ ಸಂತೋಷದಿಂದ ಬದುಕುತ್ತಿದ್ದೇನೆ ಎಂಬ ಕಾರಣಕ್ಕಾಗಿ ಮಾತ್ರ. ನಾನು ಅವರಿಗಾಗಿ ಏನಾದರೂ ಒಳ್ಳೆಯದನ್ನು ಮಾಡುತ್ತೇನೆ ಅಥವಾ ಅವರು ನನಗೆ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ ಎಂಬ ಕಾರಣಕ್ಕಾಗಿ ನಾನು ಇವರನ್ನು ಇಷ್ಟಪಡುತ್ತಿಲ್ಲ. ಯಾರಿಗಾದರೂ ಒಳ್ಳೆಯದನ್ನು ಮಾಡುವ ಹಂಬಲ ಒಳ್ಳೆಯದೆ, ಆದರೆ ಸಹಾಯ ಮಾಡುತ್ತಿದ್ದೇನೆ ಎಂಬ ಭಾವನೆ ಅಹಂಕಾರವಾಗಿ ರೂಪಾಂತರಗೊಂಡಲ್ಲಿ, ಸಹಾಯ ಪಡೆದುಕೊಳ್ಳುವವನಿಗೂ ಒಳ್ಳೆಯದಾಗುವುದಿಲ್ಲ, ಸಹಾಯ ಮಾಡುವವನೂ ತನ್ನ ಉದ್ದೇಶಗಳನ್ನು ಈಡೇರಿಸಿಕೊಂಡಂತಾಗುವುದಿಲ್ಲ.

ಇಂಡಿಯಾದ ಪಟ್ಟಣ, ನಗರ ಮತ್ತು ಬಯಲುಸೀಮೆಗಳಲ್ಲಿ ಬದುಕುತ್ತಿರುವ ಜನಸಮುದಾಯಗಳಲ್ಲಿ ನಾವು ಕಾಣಲಾರದ ವಿಶೇಷವಾದ ಮೌಲ್ಯಗಳನ್ನು ನಾನು ಆದಿವಾಸಿ ಸಮುದಾಯಗಳಲ್ಲಿ ಕಂಡಿದ್ದೇನೆ. ಈ ವಿಶೇಷ ಮೌಲ್ಯಗಳೇ ನನ್ನನ್ನು ಅವರೆಡೆ ಆಕರ್ಷಿತನಾಗುವಂತೆ ಮಾಡಿವೆ. ಭಾರತದಲ್ಲಿ ಬದುಕುತ್ತಿರುವ ಈ ಆದಿವಾಸಿಗಳು ಅತ್ಯಂತ ಸದೃಢ ಜನಸಮುದಾಯವಾಗಿದ್ದು, ಕೆಲವೊಮ್ಮೆ ಸಹಜವಾಗಿಯೇ ಹಾದಿತಪ್ಪಿ ನಡೆಯಲಾರಂಭಿಸುತ್ತಾರೆ. ಒಮ್ಮೊಮ್ಮೆ ಭೀಕರವಾಗಿ ಕಾದಾಡಿ ತಮ್ಮ ತಮ್ಮ ತಲೆಗಳನ್ನು ಕತ್ತರಿಸಿಕೊಳ್ಳುವ ಹಂತ ತಲುಪಿಬಿಡುತ್ತಾರೆ. ಈ ಬಗೆಯ ನಡವಳಿಕೆಗಳು ಹೇಯವಾದವು, ಇವುಗಳನ್ನು ಖಂಡಿತ ನಿರ್ಬಂಧಿಸಬೇಕಿದೆ. ಆದರೆ ನನಗನ್ನಿಸುವಂತೆ, ಎಲ್ಲವನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿರುವ ನಗರವಾಸಿಗಳಿಗಿಂತ, ಈ ಆದಿವಾಸಿಗಳು ನಿರಪಾಯಕಾರಿಗಳು. ಆದಿವಾಸಿಗಳಲ್ಲಿ ಕೈ ಕತ್ತರಿಸುವ, ರುಂಡ ಚೆಂಡಾಡುವ ಪ್ರವೃತ್ತಿಗಳಿರಬಹುದು. ಆದರೆ ನಾಗರಿಕ ಜಗತ್ತಿನಲ್ಲಿರುವ ಅವಮಾನಿಸುವ ಮತ್ತು ಹೃದಯಗಳನ್ನೇ ಕತ್ತರಿಸುವ ಹೀನಾಯ ಕೃತ್ಯಗಳ ಮುಂದೆ ಆದಿವಾಸಿಗಳ ಕೃತ್ಯಗಳು ಏನೇನೂ ಅಲ್ಲ. ಈ ಕಾರಣಕ್ಕಾಗಿ ನಾನು ಈ ಸರಳ ಬದುಕಿನ ಆದಿವಾಸಿಗಳ ಜೊತೆ ಸಂತೋಷದಿಂದಿರಲು ಬಯಸುತ್ತೇನೆ. ಏಕೆಂದರೆ ನನ್ನಲ್ಲಿರುವ ಅಲೆಮಾರಿತನ ಇವರ ಜೊತೆ ಒಂದು ಹಿತಕರವಾದ ಅನುಭೂತಿಯನ್ನು ನನ್ನಲ್ಲಿ ನೆಲೆಗೊಳಿಸಿದೆ. ನಾನು ಕೇವಲ ಗೆಳೆತನದ ಕಾರಣಗಳಿಗೆ ಇವರನ್ನು ಸಂಧಿಸುತ್ತೇನೆ. ಇವರನ್ನು ದೂರದಿಂದಲೇ ನಿಂತು ನೋಡಿ, ಅವರನ್ನು ಪರೀಕ್ಷಿಸಿ, ಅಳತೆ ಮಾಡಿ, ತೂಕ ಮಾಡಿ, ವರದಿ ಮಾಡಲೆಂದು, ಇಲ್ಲವೆ ಇವರನ್ನು ಬೇರೆ ಯಾರದೋ ಜೀವನ ವಿಧಾನಗಳ ಜೊತೆ ಹೋಲಿಸಲೆಂದು ಬಂದು ಹೋಗುವ ಅಧ್ಯಯನಕಾರನಂತೆ ನಾನು ಇವರ ಜೊತೆ ಬೆರೆಯಲಾಗುವುದಿಲ್ಲ.

ಕೆಲವು ಸಲ ನಾನು ನಿಜಕ್ಕೂ ಗಲಿಬಿಲಿಗೊಳ್ಳುತ್ತೇನೆ. ನಾನು ಗಮನಿಸುತ್ತಿದ್ದೇನೆ ಈ ದೇಶದಲ್ಲೊಂದೇ ಅಲ್ಲ, ನಾವು ಗುರುತಿಸುವ ಬಹುದೊಡ್ಡ ರಾಷ್ಟ್ರಗಳಲ್ಲೂ ಹಲವು ಜನ ತಮ್ಮ ಇಷ್ಟ ಮತ್ತು ಯೋಚನೆಗಳಿಗೆ ಅನುಗುಣವಾಗಿಯೇ ಇನ್ನೊಬ್ಬರು ನಡೆದುಕೊಳ್ಳಬೇಕು ಎಂದು ಯೋಚಿಸುತ್ತಿರುತ್ತಾರೆ. ಇಲ್ಲವೇ ತಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಕಾತರಿಸುತ್ತಿರುತ್ತಾರೆ. ನಮ್ಮ ರಾಷ್ಟ್ರಪತಿ ಯಾರು? ಅವರು ರಾಜರೂ ಅಲ್ಲ, ಸಾಮ್ರಾಟರೂ ಅಲ್ಲ. ಅವರೂ ನಮ್ಮಂತೆಯೇ ಮನುಷ್ಯರು. ಅವರು ಬಿಹಾರದ ರೈತ ಕುಟುಂಬದಿಂದ ಬಂದವರು. ರಾಜ ಮಹಾರಾಜರ ಕಾಲ ಎಂದೋ ಮುಗಿದು ಹೋಗಿದೆ. ಈಗ ನಮ್ಮ ದೇಶದ ಜನ ಶಿಕ್ಷಣವನ್ನು ಪಡೆದು, ಅಭಿವೃದ್ಧಿ ಸಾಧಿಸಿ ಸಮಾನತೆಯಿಂದ ಬದುಕುವ ಕಾಲ ಬಂದಿದೆ. ಈಗಿರುವ ನಮ್ಮ ರಾಷ್ಟçಪತಿಗಳು ಹೇಗೆ ಈಗಿನ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಯಿತು? ಏಕೆಂದರೆ ಜನ ಅವರನ್ನು ಇಷ್ಟಪಟ್ಟಿದ್ದಾರೆ, ಒಪ್ಪಿಕೊಂಡಿದ್ದಾರೆ, ರಾಷ್ಟ್ರಪತಿಯನ್ನಾಗಿ ಚುನಾಯಿಸಿದ್ದಾರೆ. ಈಗ ನಾನು ಈ ದೇಶದ ಪ್ರಧಾನಮಂತ್ರಿ. ನಾನು ಪ್ರಧಾನಮಂತ್ರಿಯಾದದ್ದಾದರೂ ಹೇಗೆ? ಹೇಗೆಂದರೆ ಜನ ನನ್ನನ್ನು ಈ ಹುದ್ದೆಗಾಗಿ ಆರಿಸಿದ್ದಾರೆ. ಹೀಗಾಗಿ ನಮ್ಮ ಜನ ಈ ದೇಶದ ಅತ್ಯುನ್ನತ ಪದವಿಗೆ ಯಾರನ್ನಾದರೂ ಆರಿಸಬಹುದಾಗಿದೆ. ಈ ಜನ ಎಷ್ಟು ಕಾಲ ಒಬ್ಬ ವ್ಯಕ್ತಿ ಆ ಹುದ್ದೆಯಲ್ಲಿರಬೇಕೆಂದು ಬಯಸುವರೋ, ಅಷ್ಟು ಕಾಲವೂ ಆತ ಆ ಹುದ್ದೆಯಲ್ಲಿ ಮುಂದುವರಿಯುತ್ತಾನೆ. ಈ ಬೃಹತ್ ದೇಶದಲ್ಲಿ ಅನೇಕರು ಜೀವಿಸುತ್ತಿದ್ದಾರೆ, ಅನೇಕ ಜಾತಿ ಮತಗಳಿವೆ. ಎಲ್ಲರಿಗೂ ಈ ದೇಶದ ಪ್ರಧಾನಿಯೋ, ರಾಷ್ಟ್ರಪತಿಯೋ ಆಗುವ ಹಕ್ಕಿದೆ. ನಿಮಗೂ ಸಹ ಈ ಬಗೆಯ ಹಕ್ಕು ಇದೆ. ನಿಮ್ಮಲ್ಲೇ ಇರುವ ಒಬ್ಬ ದಕ್ಷ ವ್ಯಕ್ತಿ ಈ ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಆಗಬಹುದು.

ಭಾರತದಲ್ಲಿ ಗೊಂಡ ಸಮುದಾಯದ ಸಹೋದರರು ವಾಸಿಸುತ್ತಿದ್ದಾರೆ. ಈ ಸಮುದಾಯದಲ್ಲಿ ನನಗೆ ಅನೇಕ ಹಿರಿಯ ಗೆಳೆಯರೂ ಇದ್ದಾರೆ. ಕೆಲವು ಸಲ ನಾನು ಗೊಂಡರ ಆ ಹಳ್ಳಿಗಳಿಗೂ ಹೋಗುವುದಿದೆ. ನನಗೆ ಕಂಡ ಮಟ್ಟಿಗೆ ಅವರು ಆರೋಗ್ಯದಿಂದ ಇದ್ದಾರೆ. ನನ್ನ ಪ್ರಕಾರ, ನಿಮಗೆ ಹೊಸದನ್ನು ಕಲಿಯುವ ಅವಕಾಶಗಳು ಸಿಕ್ಕರೆ, ನೀವು ಅಭಿವೃದ್ಧಿ ಹೊಂದುವುದರ ಜೊತೆಗೆ ನಿಮ್ಮ ಸಂಪ್ರದಾಯ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳಬಹುದು. ಆದರೆ ಒಂದು ಸಂಗತಿಯನ್ನು ನಿಮ್ಮ ಮನಸ್ಸಲ್ಲಿಟ್ಟುಕೊಳ್ಳಬೇಕಿದೆ. ಅದೇನೆಂದರೆ ನಾವೆಲ್ಲ ಈ ಭಾರತ ದೇಶಕ್ಕೆ ಸೇರಿದವರು, ನಾವೆಲ್ಲರೂ ಇಲ್ಲಿ ಸಮಾನರು, ನಮಗೆ ಇಲ್ಲಿ ಸಮಾನ ಪಾಲು ಮತ್ತು ಹಕ್ಕುಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ದೆಹಲಿಯವರೇ ಆಗಿರಲಿ. ಅಥವಾ ದೂರದ ಪ್ರದೇಶದಿಂದ ಬಂದವರಾಗಿರಲಿ, ದೆಹಲಿ ನಮ್ಮ ರಾಜಧಾನಿ, ನಮ್ಮ ಮುಂದೆ ಈಗ ನಾವು ಮಾಡಲೇಬೇಕಿರುವ ಹಲವು ಮಹತ್ವದ ಕೆಲಸಗಳಿವೆ. ಅಪಾರವಾದ ಜನಸಂಖ್ಯೆ ಇರುವ ದೇಶ ಇದು. ಇವರೆಲ್ಲರ ಕಲ್ಯಾಣ ಮತ್ತು ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ. ಬಹಳಷ್ಟು ಯೋಜನೆಗಳನ್ನು ಈಗ ಜನತೆಯ ಅಭಿವೃದ್ಧಿಗಾಗಿ ರೂಪಿಸಲಾಗಿದೆ. ನಮ್ಮ ಮುಂದೆ ಒಂದು ದೊಡ್ಡ ಪ್ರಶ್ನೆ ಇದೆ. ಜನತೆಗಾಗಿ ನಾವು ಇನ್ನೂ ಏನನ್ನ ಮಾಡಬೇಕಿದೆ ಎನ್ನುವುದು. ನಾವು ಕೇವಲ ಸರ್ಕಾರದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಸರ್ಕಾರ ಎಂದರೆ ಯಾರು? ನಾನು ಆಗಲೇ ಹೇಳಿದಂತೆ ಈಗ ಯಾವ ರಾಜನೂ, ಸಾಮ್ರಾಟನೂ ಬದುಕಿ ಉಳಿದಿಲ್ಲ. ಹಿಂದೆ ಇಲ್ಲಿ ಬ್ರಿಟಿಷ್ ಸರ್ಕಾರ ಇತ್ತು, ಈಗ ಅವರು ನಮ್ಮನ್ನು ಬಿಟ್ಟು ತೊಲಗಿದ್ದಾರೆ. ಇಲ್ಲಿ ಬೇರೆ ಸರ್ಕಾರವೆಂಬುದಿಲ್ಲ. ಭಾರತದ ಜನತೆಯೇ ಇಲ್ಲಿಯ ಸರ್ಕಾರ. ಹಳ್ಳಿಗಳಲ್ಲಿ ಬದುಕುತ್ತಿರುವ ಜನತೆಯೇ ಇಲ್ಲಿನ ಸರ್ಕಾರ. ಆದರೆ ಈ ದೇಶವನ್ನು ಇಲ್ಲಿನ ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ? ಹೇಗೆ ಕಾರ್ಯ ನಿರ್ವಹಿಸುತ್ತಿದೆ?  ಎಂಬುದನ್ನು ನೀವು ಗಮನಿಸುತ್ತಿರಬೇಕು. ಈ ವಿಷಯದಲ್ಲಿ ನಾವು ನಮ್ಮ ದಾರಿ ಮತ್ತು ಗುರಿಗಳ ಕುರಿತು ಯೋಚಿಸಬೇಕಿದೆ.

ಈ ದೇಶವನ್ನು ಮುನ್ನಡೆಸಲು ಒಬ್ಬ ಮುಖ್ಯಸ್ಥ ಆರಿಸಲ್ಪಡುತ್ತಾನೆ. ಅಂದರೆ, ನೀವು… ನೀವುಗಳು, ಜನರೇ ಆತನನ್ನು ಆರಿಸುತ್ತೀರಿ. ನೀವು ಡಾ. ರಾಜೇಂದ್ರ ಪ್ರಸಾದ್ ಅವರನ್ನೇ ಅಥವಾ ಬೇರೆ ಯಾರನ್ನೇ ಆದರೂ ನಿಮ್ಮ ಭಾಗದಿಂದ ಅಥವಾ ನಿಮ್ಮ ಜಿಲ್ಲೆ, ಇಲ್ಲವೆ ನಿಮ್ಮ ತಹಶೀಲಿನಿಂದ ಆರಿಸುತ್ತೀರಿ, ಆರಿಸುವುದು ನಿಮ್ಮ ಕೆಲಸ, ನೀವೇ ಧಣಿಗಳು. ಈ ದೇಶದ ಜನತೆಯೇ ನಿಜವಾದ ಯಜಮಾನರು, ನೀವು ಆರಿಸಿ ಕಳುಹಿಸಿದ ಜನರೇ ಮುಂದೆ ಸರ್ಕಾರ ರಚಿಸುತ್ತಾರೆ.

ನಮಗೆ ಗೊತ್ತಿದ್ದಂತೆ ನಿಮ್ಮ ಸಮುದಾಯಕ್ಕೆ ನಿಮ್ಮವೇ ಆದ ಕಾನೂನು ಕಟ್ಟಳೆಗಳಿವೆ. ಅವುಗಳನ್ನು ನೀವು ಪಾಲಿಸುತ್ತಲೇ ಬಂದಿದ್ದೀರಿ. ನೀವು ಆ ನಿಯಮಗಳನ್ನು ಪಾಲಿಸದಿದ್ದಲ್ಲಿ, ಅಲ್ಲಿ ಅರಾಜಕತೆ ಏರ್ಪಡುತ್ತದೆ. ಇದೇ ರೀತಿ, ಈ ದೇಶಕ್ಕೂ ಕೆಲವು ಕಾಯ್ದೆ ಕಾನೂನುಗಳಿವೆ. ಆಡಳಿತಕ್ಕಾಗಿ ಕಾಯ್ದೆ ಕಾನೂನುಗಳು ರೂಪಿಸಲ್ಪಟ್ಟಿವೆ. ಸಾಮಾನ್ಯ ಜನತೆಯ ಆಶಯಗಳಂತೆಯೇ ಈ ಕಾಯ್ದೆಗಳು ರೂಪಿಸಲ್ಪಟ್ಟಿವೆ. ಅದಕ್ಕಾಗಿ ಜನತೆ ಈ ಕಾನೂನುಗಳನ್ನು ಗೌರವಿಸಿ ಅವುಗಳನ್ನು ಅನುಸರಿಸಬೇಕಿದೆ. ಇಲ್ಲದಿದ್ದಲ್ಲಿ ಅರಾಜಕತೆ ಮತ್ತು ಅಸ್ತವ್ಯಸ್ತತೆಗಳು ತಲೆದೋರಿಬಿಡಬಹುದು. ನಾವು ಏನನ್ನಾದರೂ ಈ ದೇಶಕ್ಕೆ ಮಾಡಬಹುದೆಂದುಕೊಂಡಲ್ಲಿ, ಅದನ್ನು ನಾವು ಸಾಮುದಾಯಿಕವಾಗಿಯೇ ಮಾಡಬೇಕಿದೆ. ನಾವು ಪರಸ್ಪರ ಸದಾ ಸಂಪರ್ಕದಲ್ಲಿದ್ದು, ಸಹಕಾರದಿಂದ ಬದುಕಿದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ನಾವು ಬಸ್ತಾರ್ ಪ್ರದೇಶದಲ್ಲಿರಲಿ, ಡೆಲ್ಲಿಯವರೇ ಆಗಿರಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರಲಿ, ನಾವೆಲ್ಲಾ ಒಂದೇ ಹಡಗಿನಲ್ಲಿ ಪಯಣಿಸುತ್ತಿರುವ ಪ್ರಯಾಣಿಕರು ಎಂಬುದನ್ನು ನೀವು ಮನಸ್ಸಲ್ಲಿಟ್ಟುಕೊಳ್ಳಬೇಕು. ನೀವು ನಾವೆಲ್ಲ ಸೇರಿ ಈ ಹಡಗನ್ನು ಸರಿಯಾಗಿ ನಡೆಸಿಕೊಂಡು ಹೋಗದಿದ್ದಲ್ಲಿ ನಾವು ಮುಳುಗಿ ಹೋಗಿಬಿಡುತ್ತೇವೆ. ಅದಕ್ಕಾಗಿ ನಾವು ನಮ್ಮನಮ್ಮ ಕರ್ತವ್ಯಗಳನ್ನು ಪ್ರೀತಿ ಸಹಕಾರಗಳ ಮೂಲಕ ನಿರ್ವಹಿಸಬೇಕಿದೆ ಮತ್ತು ಆ ಮೂಲಕ ಅತ್ಯಂತ ಉನ್ನತ ಅಬಿsವೃದ್ಧಿಯನ್ನು ಸಾದಿsಸಬೇಕಿದೆ.

ನಮ್ಮ ದೇಶಕ್ಕೆ  ಸ್ವಾತಂತ್ರ್ಯ ಬಂದು ಏಳು ವರ್ಷಗಳಾದವು. ಈ ಏಳು ವರ್ಷಗಳಲ್ಲಿ ದೇಶ ಅನೇಕ ಏಳುಬೀಳುಗಳನ್ನು ಕಂಡಿದೆ. ನಮ್ಮ ದೇಶ ಮುನ್ನಡೆದಿದೆ. ಆದರೆ ಅಭಿವೃದ್ಧಿಯ ಕಡೆಗೆ ನಮ್ಮ ದೇಶ ವೇಗವಾಗಿ ಹೆಜ್ಜೆ ಇಡಬೇಕೆಂಬುದೇ ನಮ್ಮ ಆಸೆ. ಎಲ್ಲರಿಗೂ ಗೊತ್ತಿರುವಂತೆ ನಮ್ಮ ಮುಂದೆ ಅನೇಕ ಸಮಸ್ಯೆಗಳಿವೆ ನಿಜ. ನಾವೆಲ್ಲ ಇಲ್ಲಿ ಯಾಕೆ ಸೇರಿದ್ದೇವೆಂದರೆ, ಆದಿವಾಸಿಗಳ ಅಬಿsವೃದ್ಧಿಗಾಗಿ ನಾವು ಯಾವ ಯಾವ ಗೊತ್ತು ಗುರಿಗಳನ್ನು ರೂಪಿಸಿಕೊಳ್ಳಬೇಕು?  ಆದಿವಾಸಿಗಳು ಉತ್ತಮಗೊಳ್ಳಲು, ಅವರು ಎಲ್ಲರಂತೆ ಉನ್ನತ ಏಳ್ಗೆಯನ್ನು ಕಾಣಲು ನಾವು ಎಂತಹ ಯೋಜನೆಗಳನ್ನು ಹಮ್ಮಿಕೊಳ್ಳಬೇಕು?  ಎಂಬುದನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಈ ದೇಶದ ಆದಿವಾಸಿಗಳು ಶಿಕ್ಷಿತರಾಗಬೇಕು, ಅನೇಕ ಸಂಗತಿಗಳನ್ನು ಕಲಿಯುವಂತಾಗಬೇಕು, ಅವರ ಜಮೀನುಗಳನ್ನು ಅವರೇ ಉತ್ತಿ ಬೆಳೆಯುವಂತಾಗಬೇಕು, ಆಗ ಮಾತ್ರ ಭಾರತ ತನ್ನ ಅಭಿವೃದ್ಧಿಯನ್ನು ಪರಿಪೂರ್ಣವಾಗಿ ಸಾಧಿಸಬಲ್ಲದು. ನಿಮ್ಮ ಸಬಲೀಕರಣಕ್ಕಾಗಿ ರೂಪುಗೊಳ್ಳುವ ಈ ಅಭಿವೃದ್ಧಿ ನೀತಿಯು ನಿಮ್ಮ ಧರ್ಮ, ಆಚರಣೆ, ರೂಡಿs, ಸಂಪ್ರದಾಯಗಳನ್ನು ಇಲ್ಲವಾಗಿಸಬಾರದು. ನಿಮ್ಮ ಪರಂಪರೆ ನಮಗೆ ಬೇಕು. ಕೆಲವು ಜನರು, ಈ  ಆದಿವಾಸಿ ಸಮುದಾಗಳು ಬದಲಾಗಬೇಕೆಂದು ಹೇಳುತ್ತಾರೆ. ಆದರೆ ನಾನು ಆ ರೀತಿ ಯೋಚಿಸಲಾರೆ. ನೀವು ಹೇಗಿರಬೇಕೆಂಬುದನ್ನು ನಿಮ್ಮಷ್ಟಕ್ಕೆ ನೀವೇ ಯೋಚಿಸಿ ಒಂದು ತೀರ್ಮಾನಕ್ಕೆ ಬನ್ನಿ, ಅದರಂತೆ ಮುಂದಿನ ಯೋಜನೆಗಳನ್ನು ನಾವು ಅನುಷ್ಠಾನಗೊಳಿಸಲು ಯತ್ನಿಸುತ್ತೇವೆ. ನಿಮ್ಮ ಪಾರಂಪರಿಕ ಮತ್ತು ಸಾಂಘಿಕ ಬದುಕು ಉಳಿಯಬೇಕು. ನಿಮ್ಮ ಗೀತೆ, ನೃತ್ಯಗಳು ಉಳಿಯಬೇಕು. ಹಾಗೆಯೇ, ಈ ನಮ್ಮ ದೇಶ, ಅಂದರೆ ಭಾರತದ ಏಳ್ಗೆಗೆ ಮತ್ತು ಅಬಿsವೃದ್ಧಿಗೆ ನೀವೂ ಶçಮಿಸಬೇಕು. ಈ ದೇಶವನ್ನು ಮುನ್ನಡೆಸಲು ನಮಗೆ ನಿಮ್ಮ ಸಲಹೆ ಸಹಕಾರಗಳು ಬೇಕು. ಒಂದ ವಿಷಯವನ್ನು ನೀವುಗಳೆಲ್ಲ ನೆನಪಲ್ಲಿಟ್ಟುಕೊಳ್ಳಬೇಕು. ಕಷ್ಟಪಟ್ಟು ನೀವು ಗಳಿಸಿರುವ ಈ ಸ್ವಾತಂತ್ರವೆನ್ನುವುದು ಕೇವಲ ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾದದ್ದಲ್ಲ. ಅದು ಎಲ್ಲ ತಾಯಂದಿರಿಗೆ, ಮಕ್ಕಳಿಗೆ, ಎಲ್ಲ ನನ್ನ ಸಹೋದರಿಯರಿಗೆ ಸಿಗುವಂತಾಗಬೇಕು. ಈ ದೇಶ ನಿಮ್ಮದು, ಯಾರೂ ಇದರ ಮೇಲೆ ಅದಿsಕಾರ ಸ್ಥಾಪಿಸುವಂತಿಲ್ಲ. ಈ ದೇಶದ ಪ್ರಜೆಗಳಿಗೆ ಯಾವಯಾವ ಹಕ್ಕುಗಳಿವೆಯೋ ನಿಮಗೂ ಆ ಹಕ್ಕುಗಳಿವೆ. ನಾವೆಲ್ಲರೂ ಈಗ ಅಬಿsವೃದ್ಧಿಯ ಕಡೆಗೆ ಹೆಜ್ಜೆ ಹಾಕಬೇಕಿದೆ. ನಮ್ಮದೇನು ಸರ್ವಾದಿsಕಾರಿ ಸ್ವರೂಪದ ಸರ್ಕಾರವಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ.

ನನಗೆ ಈಗ ನಿಮ್ಮೆಲ್ಲರನ್ನು ನೋಡುವ, ಭೇಟಿಯಾಗುವ ಅವಕಾಶ ಸಿಕ್ಕಿದೆ. ಇನ್ನೊಮ್ಮೆ ನಿಮ್ಮೆಡೆಗೆ ಬರುವಂತಾದರೆ ನಿಮ್ಮ ಹಳ್ಳಿಗಳಿಗೆ ಬಂದು ವ್ಯಕ್ತಿಶಃ ನಿಮ್ಮೆಲ್ಲರನ್ನು ಭೇಟಿಯಾಗಲು ಇಚ್ಚಿಸುತ್ತೇನೆ.

ಅಲ್ಲಿ ನೋಡಿ, ನಿಮ್ಮದೇ ನೃತ್ಯ ತಂಡವೊಂದು ದೆಹಲಿಯಯಲ್ಲಿ ಗೆದ್ದುಕೊಂಡು ಬಂದ ಪಾರಿತೋಷಕವೊಂದಿದೆ. ಅಲ್ಲಿ ನಿಮ್ಮ ಕಲಾ ತಂಡದವರು ಉತ್ಕಷ್ಟ ನೃತ್ಯ ಪ್ರದರ್ಶನವನ್ನು ನೀಡಿದರು. ಆ ನೃತ್ಯ ಪ್ರದರ್ಶನಕ್ಕೆ ಸಿಕ್ಕ ಬಹುಮಾನವಿದು. ಇದೊಂದು ಸಂತೋಷದ ಸಂಗತಿ. ನೀವು ಎಂತಹ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿದ್ದೀರಿ ಎಂಬುದನ್ನು ಇದು ಸಂಕೇತಿಸುತ್ತದೆ.

ನಮ್ಮ ದೇಶ ಭಾರತ. ನಮ್ಮ ಈ ದೇಶಕ್ಕೆ, ಅಂದರೆ ಭಾರತಕ್ಕೆ ಅನೇಕ ಹೆಸರುಗಳಿವೆ. ಭರತವರ್ಷ, ಭಾರತ, ಹಿಂದೂಸ್ತಾನ, ಆಂಗ್ಲಭಾಷೆಯಲ್ಲಿ ಇವಳನ್ನು ನಾವು ಇಂಡಿಯಾ ಮತ್ತು ಹಿಂದ್ ಎಂಬ ಹೆಸರುಗಳಲ್ಲಿ ಕರೆಯುತ್ತೇವೆ. ನೀವೆಲ್ಲ ಕೇಳಿರಬಹುದು, ನಾವು ಯಾವಾಗಲೂ ‘ಭಾರತ್ ಮಾತಾಕಿ ಜೈ, ಜೈಹಿಂದ್’ ಎಂದು ಹೇಳಬೇಕು. ‘ಭಾರತ್ ಮಾತಾಕಿ ಜೈ’ ಎಂದರೇನು? ‘ಭಾರತ್ ಮಾತಾಕಿ ಜೈ’ ಎಂದರೆ, ಈ ದೇಶದ ಜನತೆಗೆ ಗೆಲುವಾಗಲಿ. ಇದರರ್ಥ ನಿಮಗೆ ಗೆಲುವಾಗಲಿ ಎಂಬುದೇ ಆಗಿದೆ. ಭಾರತ ಮಾತೆ ರಕ್ತ ಮಾಂಸದಿಂದ ಒಡಗೂಡಿದ ಮಹಿಳೆಯೇನಲ್ಲ. ನಾವೆಲ್ಲ ಬದುಕುವ ಈ ನೆಲ, ಈ ಮಣ್ಣು, ಇದು  ಭಾರತ ಮಾತೆಯ ಮಡಿಲು. ಈ ಮಾತೆಯ ಮಡಿಲಲ್ಲಿ ಬದುಕುತ್ತಿದ್ದೇವೆ. ಜಾತಿ ಮತ್ತು ಧರ್ಮ ಭೇದಗಳಿಲ್ಲದೆ ಭಾರತ ಮಾತೆ ನಮಗೆ ಆಶ್ರಯ ನೀಡಿದ್ದಾಳೆ. ನಾವೆಲ್ಲ ಭಾರತ ಮಾತೆಯ ಮಕ್ಕಳು. ‘ಭಾರತ್ ಮಾತಾಕಿ ಜೈ’ ಎಂದರೆ ಈ ದೇಶದ ಜನತೆಗೆ ಗೆಲುವಾಗಲಿ ಎಂಬುದೇ ಅದರ ಅರ್ಥ. ದೇಶವೆಂದರೆ ನಾವು, ನಾವು ಎಂದರೆ, ಜಾತಿ ಧರ್ಮ ಭೇದಗಳಿಲ್ಲದೆ ಈ ದೇಶವನ್ನು ಕಟ್ಟಿಕೊಂಡು ಬಂದ ಪ್ರತಿಯೊಬ್ಬ ಜನಸಮಾನ್ಯ. ನಾನೀಗ ಜೈಹಿಂದ್ ಎಂದು ಹೇಳುತ್ತೇನೆ, ನಾನು ಹೇಳಿದ ಮೇಲೆ ನೀವು ಮೂರು ಸಲ ಜೈಹಿಂದ್ ಎಂದು ನನ್ನ ಜೊತೆ ದನಿಗೂಡಿಸಿ.. ಜೈಹಿಂದ್.. ಜೈಹಿಂದ್.. ಜೈಹಿಂದ್.

* ಅನುಸೂಚಿತ ಪ್ರದೇಶಗಳ ಆದಿವಾಸಿ ಸಮುದಾಯಗಳ ಸಮ್ಮೇಳನದ ಉದ್ಘಾಟನಾ ಭಾಷಣ, ನವದೆಹಲಿ, ಜೂನ್, ೧೯೫೨.

ಡಾ. ಎ.ಎಸ್.ಪ್ರಭಾಕರ್‌

ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರು

Related Articles

ಇತ್ತೀಚಿನ ಸುದ್ದಿಗಳು