ಚೀನಾ ಗಡಿ ಸಮೀಪದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ನೀರಿನ ಹರಿವು ಹಠಾತ್ತನೆ ಉಕ್ಕಿ ಹರಿದಿದ್ದರಿಂದ ಬುಧವಾರ ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಮತ್ತು ವಿದೇಶಿಯರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ವಿಧ್ವಂಸ ಸೃಷ್ಟಿಸಿದ ಈ ಆಕಸ್ಮಿಕ ಪ್ರವಾಹಕ್ಕೆ ನಿಖರವಾದ ಕಾರಣವೇನು ಎಂಬುದರ ಕುರಿತು ಪ್ರಸ್ತುತ ಪರಿಶೀಲನೆ ನಡೆಯುತ್ತಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಲೆಂಡೆ ನದಿಗೆ ಹಿಮಕುಸಿತ ಅಡ್ಡಿಯುಂಟುಮಾಡಿದ್ದರಿಂದ ನೀರು ನಿಂತುಹೋಗಿ, ಬಳಿಕ ಕೆಳಭಾಗದಲ್ಲಿ ಹಠಾತ್ತಾಗಿ ಪ್ರವಾಹದ ರೂಪದಲ್ಲಿ ಉಕ್ಕಿ ಹರಿದಿರಬಹುದು ಎಂದು ತಿಳಿದುಬಂದಿದೆ.
ನೇಪಾಳ ಮತ್ತು ಚೀನಾದ ವಿಜ್ಞಾನಿಗಳೊಂದಿಗೆ ನಡೆಸಿದ ಚರ್ಚೆಗಳ ಆಧಾರದ ಮೇಲೆ ಈ ಪ್ರಾಥಮಿಕ ಅಂದಾಜಿಗೆ ಬರಲಾಗಿದೆ ಎಂದು ಕಠ್ಮಂಡು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಹವಾಮಾನ ಸಂಶೋಧಕ ರಿಜನ್ ಭಕ್ತ ಕಾಯಸ್ಥ ತಿಳಿಸಿರುವುದಾಗಿ ‘ದಿ ಕಠ್ಮಂಡು ಪೋಸ್ಟ್’ ವರದಿ ಮಾಡಿದೆ. ನೇಪಾಳದ ಕಡೆಯಿಂದ ಸಂಭವಿಸಿದ ಹಿಮಕುಸಿತವು ಲೆಂಡೆ ನದಿಗೆ ಬಿದ್ದು ಅದರ ಹರಿವನ್ನು ತಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.
ಸರಿಸುಮಾರು ಅದೇ ಸಮಯದಲ್ಲಿ ಟಿಬೆಟ್ ಕಡೆಯೂ ಭೂಕಂಪ ಸಂಭವಿಸಿರುವುದು ತಿಳಿದುಬಂದಿದೆ. ಗೋಸೈನ್ಕುಂಡದ ಉತ್ತರಕ್ಕೆ ಸುಮಾರು 47 ಕಿಲೋಮೀಟರ್ ದೂರದಲ್ಲಿರುವ ಟಿಬೆಟ್ ಪ್ರದೇಶದಲ್ಲಿ ಬೆಳಿಗ್ಗೆ 8.37 ರ ಸುಮಾರಿಗೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ದಾಖಲಿಸಿದೆ.
ಆದರೆ ಪ್ರವಾಹ ಉಂಟಾಗುವಲ್ಲಿ ಭೂಕಂಪದ ಪಾತ್ರವೇನಾದರೂ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ದುರಂತಕ್ಕೆ ಹಿಮನದಿ ಸರೋವರದ ಒಡೆತ (ಗ್ಲೇಸಿಯಲ್ ಲೇಕ್ ಔಟ್ಬರ್ಸ್ಟ್) ಕಾರಣವೇ ಎಂಬುದರ ಬಗ್ಗೆಯೂ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಆ ಭಾಗದಲ್ಲಿ ಅನೇಕ ದೊಡ್ಡ ಹಿಮನದಿ ಸರೋವರಗಳಿರುವುದರಿಂದ, ಸರೋವರ ಒಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲವು ದಿನಗಳು ಬೇಕಾಗಬಹುದು ಎಂದು ಕಾಯಸ್ಥ ತಿಳಿಸಿದ್ದಾರೆ.
2025 ರ ಜುಲೈ 8 ರಂದು ಇದೇ ಪ್ರದೇಶದಲ್ಲಿ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿತ್ತು. ಹಿಮನದಿ ಸರೋವರವೊಂದು ಒಮ್ಮಿಂದೊಮ್ಮೆಲೆ ಒಡೆದ ಪರಿಣಾಮ ಲೆಂಡೆ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ನೇಪಾಳ-ಚೀನಾ ಗಡಿಯ ಸಮೀಪ ಹಿಮನದಿ ಸರೋವರ ಒಡೆದಿರುವುದನ್ನು ಆ ಸಮಯದ ಉಪಗ್ರಹ ಚಿತ್ರಗಳು ದೃಢಪಡಿಸಿದ್ದವು.
ನೇಪಾಳ ಪ್ರಧಾನಿಗೆ ಪ್ರಧಾನಿ ಮೋದಿ ಕರೆ:
ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತನಾಡಿದರು. ದಿಢೀರ್ ಪ್ರವಾಹದಿಂದ ಸಂಭವಿಸಿದ ಜೀವಹಾನಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು, ನೇಪಾಳಕ್ಕೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ನೀಡಲು ಭಾರತ ಸಿದ್ಧವಾಗಿದೆ ಹಾಗೂ ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಗಳಲ್ಲಿ ಎರಡೂ ದೇಶಗಳ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ನೇಪಾಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಪ್ರವಾಹದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಬಿಹಾರ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
