ಕಾಠ್ಮಂಡು: ಮುಂಬರುವ ಕೈಲಾಸ ಮಾನಸಸರೋವರ ಯಾತ್ರೆಯನ್ನು ಲಿಪುಲೇಖ್ ಪಾಸ್ ಮೂಲಕ ನಡೆಸಲು ಭಾರತ ಮತ್ತು ಚೀನಾ ಯೋಜಿಸುತ್ತಿರುವುದಕ್ಕೆ ನೇಪಾಳ ಭಾನುವಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರದೇಶವು ತನ್ನ ಭೂಪ್ರದೇಶಕ್ಕೆ ಸೇರಿದ್ದು ಎಂದು ಕಾಠ್ಮಂಡು ಪ್ರತಿಪಾದಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ನೇಪಾಳದ ವಿದೇಶಾಂಗ ಸಚಿವಾಲಯವು, ತೀರ್ಥಯಾತ್ರೆಯ ಮಾರ್ಗವನ್ನು ಅಂತಿಮಗೊಳಿಸುವ ಮೊದಲು ಕಾಠ್ಮಂಡುವನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದೆ. ಲಿಪುಲೇಖ್ ತನಗೆ ಸೇರಿದ್ದು ಎಂದು ನವದೆಹಲಿ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.
ಜೂನ್ ಮತ್ತು ಆಗಸ್ಟ್ ನಡುವೆ ಯಾತ್ರೆ ನಡೆಯಲಿದೆ ಎಂದು ಭಾರತ ಘೋಷಿಸಿದ ಕೆಲವೇ ದಿನಗಳಲ್ಲಿ ನೇಪಾಳದ ಈ ಆಕ್ಷೇಪ ವ್ಯಕ್ತವಾಗಿದೆ.
“1816 ರ ಸುಗೌಲಿ ಒಪ್ಪಂದದ ಆಧಾರದ ಮೇಲೆ ಮಹಾಕಾಳಿ ನದಿಯ ಪೂರ್ವದಲ್ಲಿರುವ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಅವಿಭಾಜ್ಯ ಅಂಗಗಳಾಗಿವೆ ಎಂಬ ತನ್ನ ನಿಲುವಿಗೆ ನೇಪಾಳ ಸರ್ಕಾರವು ಬದ್ಧವಾಗಿದೆ,” ಎಂದು ವಿದೇಶಾಂಗ ಸಚಿವಾಲಯವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
“ನೇಪಾಳದ ಭೂಪ್ರದೇಶವಾದ ಲಿಪುಲೇಖ್ ಮೂಲಕ ಆಯೋಜಿಸಲಿರುವ ಕೈಲಾಸ-ಮಾನಸಸರೋವರ ಪ್ರವಾಸದ ಬಗ್ಗೆ ನೇಪಾಳ ಸರ್ಕಾರವು ಭಾರತ ಮತ್ತು ಚೀನಾ ಎರಡಕ್ಕೂ ತನ್ನ ಸ್ಪಷ್ಟ ನಿಲುವನ್ನು ಪುನರುಚ್ಚರಿಸಿದೆ,” ಎಂದು ಅದು ಹೇಳಿದೆ.
ಈ ಹಿಂದೆ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ವಿಸ್ತರಣೆ, ಗಡಿ ವ್ಯಾಪಾರ ಮತ್ತು ತೀರ್ಥಯಾತ್ರೆಯಂತಹ ಚಟುವಟಿಕೆಗಳನ್ನು ನಡೆಸದಂತೆ ಭಾರತ ಸರ್ಕಾರಕ್ಕೆ ವಿನಂತಿಸಲಾಗಿತ್ತು ಎಂದು ನೇಪಾಳ ಸರ್ಕಾರ ನೆನಪಿಸಿದೆ. ಈ ವಿಷಯದ ಕುರಿತು ಚೀನಾಕ್ಕೂ ಮಾಹಿತಿ ನೀಡಲಾಗಿದೆ ಎಂದು ಹೇಳಿಕೆ ಸೇರಿಸಿದೆ.
“ಭಾರತ ಮತ್ತು ನೇಪಾಳ ನಡುವೆ ಇರುವ ನಿಕಟ ಮತ್ತು ಸ್ನೇಹ ಸಂಬಂಧದ ದೃಷ್ಟಿಯಿಂದ, ಐತಿಹಾಸಿಕ ಒಪ್ಪಂದಗಳು, ತಿಳುವಳಿಕೆ, ಸತ್ಯಗಳು, ನಕ್ಷೆಗಳು ಮತ್ತು ಪುರಾವೆಗಳ ಆಧಾರದ ಮೇಲೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಗಡಿ ಸಮಸ್ಯೆಯನ್ನು ಪರಿಹರಿಸಲು ನೇಪಾಳ ಸರ್ಕಾರವು ಯಾವಾಗಲೂ ಬದ್ಧವಾಗಿದೆ,” ಎಂದು ಸಚಿವಾಲಯ ತಿಳಿಸಿದೆ.
ಲಿಪುಲೇಖ್ ಮತ್ತು ಕಾಲಾಪಾನಿ ತನ್ನ ಭೂಪ್ರದೇಶಗಳು ಎಂದು ನೇಪಾಳ ಪ್ರತಿಪಾದಿಸುತ್ತಿದ್ದರೆ, ಅವು ತನಗೆ ಸೇರಿದ್ದು ಎಂದು ಭಾರತ ಹೇಳುತ್ತಿದೆ. ಮೇ 2020 ರಲ್ಲಿ ನೇಪಾಳದ ಕೆ.ಪಿ. ಓಲಿ ನೇತೃತ್ವದ ಸರ್ಕಾರವು ಕಾಲಾಪಾನಿ ಮತ್ತು ಲಿಪುಲೇಖ್ ಸೇರಿದಂತೆ ಈ ಪ್ರದೇಶಗಳನ್ನು ತನ್ನ ಅಧಿಕೃತ ನಕ್ಷೆಯಲ್ಲಿ ಸೇರಿಸಿಕೊಂಡಿತ್ತು.
ಟಿಬೆಟ್ನಲ್ಲಿರುವ ಕೈಲಾಸ ಮಾನಸಸರೋವರ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಧಾರ್ಚುಲಾದಿಂದ ಲಿಪುಲೇಖ್ ಪಾಸ್ವರೆಗೆ 80 ಕಿಮೀ ರಸ್ತೆಯನ್ನು ಭಾರತ ಉದ್ಘಾಟಿಸಿದ ನಂತರ ಈ ಬೆಳವಣಿಗೆ ನಡೆದಿತ್ತು. ಭಾರತದ ಈ ಕ್ರಮವನ್ನು ನೇಪಾಳವು “ಏಕಪಕ್ಷೀಯ ಕೃತ್ಯ” ಎಂದು ಪ್ರತಿಭಟಿಸಿತ್ತು.
ಏಪ್ರಿಲ್ 30 ರಂದು ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA), ಈ ವರ್ಷದ ವಾರ್ಷಿಕ ಕೈಲಾಸ ಮಾನಸಸರೋವರ ಯಾತ್ರೆಯು ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂನ ನಾಥು ಲಾ ಮೂಲಕ ಜೂನ್ನಿಂದ ಆಗಸ್ಟ್ವರೆಗೆ ನಡೆಯಲಿದೆ ಎಂದು ಘೋಷಿಸಿತ್ತು.
ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿರುವ ಕೈಲಾಸ ಪರ್ವತ ಮತ್ತು ಮಾನಸಸರೋವರ ಸರೋವರದ ತೀರ್ಥಯಾತ್ರೆಯು ಹಿಂದೂಗಳು, ಜೈನರು ಮತ್ತು ಬೌದ್ಧರಿಗೆ ಧಾರ್ಮಿಕ ಮಹತ್ವವನ್ನು ಹೊಂದಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಪ್ರಯತ್ನದ ಭಾಗವಾಗಿ ಸುಮಾರು ಐದು ವರ್ಷಗಳ ವಿರಾಮದ ನಂತರ ಕಳೆದ ವರ್ಷ ಯಾತ್ರೆಯು ಪುನರಾರಂಭಗೊಂಡಿತ್ತು.
