Wednesday, June 26, 2024

ಸತ್ಯ | ನ್ಯಾಯ |ಧರ್ಮ

ಹೊಸ ಸಂಸತ್ತು, ಹೊಸ ಸಮೀಕರಣ: ಆತಂಕಗಳು ನೂರಾರು

ಮೇ 28 ಭಾರತದ ಪ್ರಥಮ ಪ್ರಧಾನಿ, ಆಧುನಿಕ ಭಾರತದ ಶಿಲ್ಪಿ ಜವಾಹರಲಾಲ್ ನೆಹರೂ ಅವರ ಅಂತ್ಯಕ್ರಿಯೆ ನಡೆದ ದಿನ. ಅದು ಹಿಂದುತ್ವ ಪ್ರತಿಪಾದಕ ಮತ್ತು ವಿಭಜಕ ವ್ಯಕ್ತಿತ್ವದ ವಿ ಡಿ ಸಾವರ್ಕರ್ ಜನ್ಮದಿನ ಕೂಡಾ. ಇದೇ ದಿನವನ್ನು ಹೊಸ ಸಂಸತ್ ಉದ್ಘಾಟಿಸಲು ಮೋದಿಯವರು ಯಾಕೆ ಆರಿಸಿಕೊಂಡರು? ನೆಹರೂ ಯುಗದ ‘ಸೆಕ್ಯುಲರಿಸಂ’ ಅನ್ನು ಅಂತ್ಯಗೊಳಿಸಿ ಸಾವರ್ಕರ್ ರ ‘ಹಿಂದುತ್ವ’ ಯುಗದ ಆರಂಭದ ಸಂದೇಶವೇ ಅದು? ʼಶ್ರೀನಿʼ ಕಾಲಂನಲ್ಲಿ ಶ್ರೀನಿವಾಸ ಕಾರ್ಕಳ

“ಭಾರತವು ಹಿಂದೂ ರಾಷ್ಟ್ರವಾಗಲು ಸಾಧ್ಯವೇ ಇಲ್ಲ” ಹಿರಿಯ ಚಿಂತಕರೂ, ಕತೆಗಾರರೂ ಆಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಕಡ್ಡಿಮುರಿದಂತೆ ಹೇಳಿದಾಗ, ಸುತ್ತ ಇದ್ದವರ ಮನದಲ್ಲಿ ಒಮ್ಮಿಂದೊಮ್ಮೆಲೇ ಅಚ್ಚರಿ ಸಹಿತವಾದ ಒಂದು ಮಿಶ್ರ ಭಾವ! ಒಂದು ಕ್ಷಣ ಮುಖ ಮುಖ ನೋಡಿಕೊಂಡರು ಅಲ್ಲಿದ್ದವರೆಲ್ಲ. “ಯಾಕೆ?” ಎಂಬ ಸಹಜ ಪ್ರಶ್ನೆ ತೂರಿಬರುವ ಮುನ್ನವೇ ಆ ಸಾಹಿತಿ ಮುಂದುವರಿದು, “ಯಾಕೆ ಎಂದರೆ, ಅದು ಈಗಾಗಲೇ ಹಿಂದೂ ರಾಷ್ಟ್ರವಾಗಿದೆ” ಎಂದು ತಣ್ಣಗೆ ಹೇಳಿ ಮೌನಕ್ಕೆ ಜಾರಿದರು.

ನಿಗೂಢ ನೂರಾರು ಅರ್ಥಗಳೊಂದಿಗೆ ಹಾಸ್ಯಾತ್ಮಕವಾಗಿ ಅವರು ಹೇಳಿದರೂ ಕೂಡಾ ಇದೊಂದು ಗಂಭೀರ ವಿಷಯ. ಅಧಿಕೃತವಾಗಿ ಭಾರತವು ಹಿಂದೂ ರಾಷ್ಟ್ರ ಎಂದು ಘೋಷಿತವಾಗಿಲ್ಲ ನಿಜ. ಸಂವಿಧಾನದ ಪೀಠಿಕಾ ಭಾಗದಲ್ಲಿ ಇಂದಿಗೂ ಇದು ‘ಸೆಕ್ಯುಲರ್ ರಿಪಬ್ಲಿಕ್’ ಎಂದೇ ಇದೆ. ಆದರೆ ವಾಸ್ತವದಲ್ಲಿ ಹಾಗೆ ಇದೆಯೇ? ದೇಶದ ಅಧಿಕಾರ ಬಿಜೆಪಿಯ ಕೈವಶವಾದ ಬಳಿಕ ಹಿಂದೂಗಳಲ್ಲಿ ಭದ್ರತೆಯ ಭಾವವೂ, ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವವೂ ಮೂಡಿಲ್ಲವೇ? ಈ ಅರ್ಥದಲ್ಲಿ ಪರೋಕ್ಷವಾಗಿ ಈಗಾಗಲೇ ಭಾರತ ಹಿಂದೂ ರಾಷ್ಟ್ರವಾಗಿಲ್ಲವೇ?

ಉದಾಹರಣೆಗೆ ಕಳೆದ ಒಂಬತ್ತು ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ರೀತಿಯನ್ನೇ ಗಮನಿಸಿ. ದೇಶದ ಪ್ರಧಾನಿಯೆನಿಸಿಕೊಂಡ ವ್ಯಕ್ತಿ ನಿರ್ದಿಷ್ಟ ರಾಜಕೀಯ ಪಕ್ಷವೊಂದರಿಂದ ಆರಿಸಿ ಬಂದರೂ, ಪ್ರಧಾನಿಯಾದ ಮೇಲೆ ಅವರು ಎಲ್ಲರ ಪ್ರಧಾನಿ. ಓಟು ಹಾಕಿದವರಿಗೂ ಪ್ರಧಾನಿ, ಓಟು ಹಾಕದವರಿಗೂ ಪ್ರಧಾನಿ. ಸ್ವಪಕ್ಷೀಯರಿಗೂ ಪ್ರಧಾನಿ, ವಿರೋಧ ಪಕ್ಷದವರಿಗೂ ಪ್ರಧಾನಿ. ಇದನ್ನು ಗಮನದಲ್ಲಿರಿಸಿಕೊಂಡೇ ಅವರು ನಡೆದುಕೊಳ್ಳಬೇಕಾಗುತ್ತದೆ.

ಸರಕಾರ ಸೆಕ್ಯುಲರ್ ಆಗಿರಬೇಕು

ಭಾರತ ಸಂವಿಧಾನವು ಕೂಡಾ ಸರಕಾರವು ಸೆಕ್ಯುಲರ್ ಆಗಿರಬೇಕು, ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಇರಬೇಕು ಎಂದು ಬಯಸುತ್ತದೆ. ವ್ಯಕ್ತಿ ಧಾರ್ಮಿಕನಾಗಿರಬಹುದು. ಆದರೆ ಸಾರ್ವಜನಿಕವಾಗಿ ಆತ ಸೆಕ್ಯುಲರ್ ಇರಬೇಕು. ಯಾಕೆಂದರೆ ಇದು ಬಹುತ್ವದ ದೇಶ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯ ದೇಶ. ಧರ್ಮಗಳಿಂದ ದೂರ ಇರುವುದು ಸಾಧ್ಯವಾಗದಿದ್ದರೆ ಕನಿಷ್ಠಪಕ್ಷ ‘ಸರ್ವಧರ್ಮ’ಸಮಭಾವ’ ಎಂಬ ಆಶಯದಂತೆಯಾದರೂ ನಡೆದುಕೊಂಡಿರಬೇಕು.

ಈ ಹಿಂದೆ ಪ್ರಧಾನಿಗಳಾಗಿದ್ದವರು ಬಹುಮಟ್ಟಿಗೆ ಈ ಪರಂಪರೆಯನ್ನು ಅನುಸರಿಸಿಕೊಂಡೇ ಬಂದಿದ್ದರು. ಆದರೆ ಈಗಿನ ಪ್ರಧಾನಿಯವರ ನಡೆವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಯಾವ ಅಳುಕೂ ಇಲ್ಲದೆ, ನೇರವಾಗಿ ಹಿಂದೂ ಧರ್ಮ ಮತ್ತು ಅದರ ಆಚರಣೆಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಮಸೀದಿಗೆ, ಚರ್ಚ್ ಗೆ ಎಂದೂ ಹೋಗದ ಅವರು ದೇವಸ್ಥಾನಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ರಾಮಮಂದಿರಕ್ಕೆ ಅಡಿಗಲ್ಲು ಇಡುವ ಕಾರ್ಯಕ್ರಮದ ಹೋಮ ಹವನಗಳಲ್ಲಿ ಪಾಲ್ಗೊಳ್ಳುತ್ತಾರೆ.

ಅವರು ಹಿಂದೂ ಧರ್ಮೀಯರಾಗಿರುವುದರಿಂದ ಒಂದು ಮಟ್ಟಿಗೆ ಇದನ್ನು ಸಹಿಸಿಕೊಳ್ಳೋಣ. ಆದರೆ ಪ್ರಜಾತಂತ್ರದ ದೇಗುಲವಾದ ಮತ್ತು ಸಂವಿಧಾನವೇ ಪರಮ ಪವಿತ್ರ ಧರ್ಮಗ್ರಂಥವಾದ ಸಂಸತ್ ನಲ್ಲಿ ಅವರು ನಡೆದುಕೊಂಡ ರೀತಿಯನ್ನು ಹೇಗೆ ಒಪ್ಪಿಕೊಳ್ಳೋಣ? ರಾಜಪ್ರಭುತ್ವದ ಸಂಕೇತವಾದ ರಾಜದಂಡ ಸೆಂಗೋಲ್ ಹಸ್ತಾಂತರದಿಂದ ಹಿಡಿದು, ಹಿಂದೂ ಪುರೋಹಿತರನ್ನು ಸಂಸತ್ತಿಗೆ ಕರೆಸಿಕೊಂಡು ಅಪ್ಪಟ ಹಿಂದೂ ಧಾರ್ಮಿಕ ಕಾರ್ಯಕ್ರಮದಂತೆಯೇ ಅಲ್ಲಿನ ಚಟುವಟಿಕೆಗಳು ನಡೆಸಿದುದನ್ನು ನೋಡುವಾಗ ಸ್ವಾತಂತ್ರ್ಯದ 75 ವರ್ಷಗಳ ಬಳಿಕ ನಾವು ತಲಪಿದ್ದಾದರೂ ಎಲ್ಲಿಗೆ ಎಂಬ ಆತಂಕ ಮೂಡುವುದಿಲ್ಲವೇ?!

ಮೇ 28 ರ ಸಂದೇಶ ಏನು?

ಮೇ 28 ಭಾರತದ ಪ್ರಥಮ ಪ್ರಧಾನಿ, ಆಧುನಿಕ ಭಾರತದ ಶಿಲ್ಪಿ ಜವಾಹರಲಾಲ್ ನೆಹರೂ ಅವರ ಅಂತ್ಯಕ್ರಿಯೆ ನಡೆದ ದಿನ. ಅದು ಹಿಂದುತ್ವ ಪ್ರತಿಪಾದಕ ಮತ್ತು ವಿಭಜಕ ವ್ಯಕ್ತಿತ್ವದ ವಿ ಡಿ ಸಾವರ್ಕರ್ ಜನ್ಮದಿನ ಕೂಡಾ. ಇದೇ ದಿನವನ್ನು ಹೊಸ ಸಂಸತ್ ಉದ್ಘಾಟಿಸಲು ಮೋದಿಯವರು ಯಾಕೆ ಆರಿಸಿಕೊಂಡರು? ನೆಹರೂ ಯುಗದ ‘ಸೆಕ್ಯುಲರಿಸಂ’ ಅನ್ನು ಅಂತ್ಯಗೊಳಿಸಿ ಸಾವರ್ಕರ್ ರ ‘ಹಿಂದುತ್ವ’ ಯುಗದ ಆರಂಭದ ಸಂದೇಶವೇ ಅದು?

ಸಂಸತ್ ಒಂದು ಪಕ್ಷದ ಕಚೇರಿಯಲ್ಲ. ಅದು ಈ ದೇಶದ ಜನರ ಆ‍ಸ್ತಿ. ಈ ಅರ್ಥದಲ್ಲಿ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡ ದಿನವಾದ ನವೆಂಬರ್ 26 ‘ಸಂವಿಧಾನದ ದಿನ’ದಂದು ಅದನ್ನು ಉದ್ಘಾಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು! ಆದರೆ ಬಹುತ್ವ, ಸೆಕ್ಯುಲರಿಸಂ, ಪ್ರಜಾತಂತ್ರ, ಸಂವಿಧಾನ, ತ್ರಿವರ್ಣಧ್ವಜ, ರಾಷ್ಟ್ರಗೀತೆ ಎಲ್ಲವನ್ನೂ ಪೂರ್ಣ ಮನಸಿನಿಂದ ಒಪ್ಪಿಕೊಳ್ಳದ ಸಂಘಟನೆಯ ಮೂಲದಿಂದ ಬಂದವರಿಗೆ ಇದನ್ನು ಹೇಳಿ ಏನು ಪ್ರಯೋಜನ?

ಸದರಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚ 972 ಕೋಟಿ ರುಪಾಯಿ ಎಂದು ಸರಕಾರ ಸಂಸತ್ ನಲ್ಲಿ ಹೇಳಿತ್ತು. ಅದರ ವೆಚ್ಚ ಈಗ 1200-1800 ಕೋಟಿ ಆಗಿರಬಹುದು ಎಂದೂ ಹೇಳುವವರಿದ್ದಾರೆ. ಇಂತಹ ಒಂದು ಭಾರೀ ಖರ್ಚಿನ ಮತ್ತು ಮಹತ್ವದ ಸೌಧವನ್ನು ಕಟ್ಟುವಾಗ ವಿಪಕ್ಷೀಯರನ್ನೂ ವಿಶ‍್ವಾಸಕ್ಕೆ ತೆಗೆದುಕೊಳ್ಳಬೇಡವೇ? ‘ಇದರ ನಿರ್ಮಾಣ ಕಾರ್ಯ ನನಗೆ ತಿಳಿದುದೇ ದಿನಪತ್ರಿಕೆಯ ಮೂಲಕ’ ಎನ್ನುತ್ತಾರೆ ಎನ್ ಸಿ ಪಿ ಯ ಶರದ್ ಪವಾರ್. ಇದು ಈ‍ಗಿನ ಸರಕಾರ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ರೀತಿ!!

ಸಂಸತ್ ಉದ್ಘಾಟಿಸಬೇಕಾದವರು ಯಾರು?

ಪ್ರಧಾನಿಯವರು ಸರಕಾರದ ಮುಖ್ಯಸ್ಥರು. ಅವರು ಸಂಸತ್ ಗೆ ಉತ್ತರದಾಯಿ. ಆದರೆ ಸಂಸತ್ ನ ಪರಮೋಚ್ಚ ಅಧಿಕಾರಿ ರಾಷ್ಟ್ರಪತಿ. ಲೋಕಸಭೆಯನ್ನು ಅಸ್ತಿತ್ವಕ್ಕೆ ತರುವುದೂ ರಾಷ್ಟ್ರಪತಿಗಳೇ, ಅದನ್ನು ಬರ್ಖಾಸ್ತು ಮಾಡುವುದೂ ರಾಷ್ಟ್ರಪತಿಗಳೇ. ಸಂಸತ್ ನಲ್ಲಿ ಅಂಗೀಕಾರ ಗೊಂಡ ಮಸೂದೆಗಳು ಕಾಯಿದೆಯಾಗುವುದು ರಾಷ್ಟ್ರಪತಿಗಳ ಸಹಿ ಬಿದ್ದ ಬಳಿಕ. ಈ ಎಲ್ಲ ಅರ್ಥದಲ್ಲಿಯೂ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಬೇಕಾದುದು ರಾಷ್ಟ್ರಪತಿಗಳು. ಅದೂ ಈಗ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿಗಳಾಗಿರುವುದರಿಂದ ದ್ರೌಪದಿ ಮುರ್ಮು ಅವರು ಉದ್ಘಾಟಿಸುತ್ತಿದ್ದರೆ ಅದಕ್ಕೆ ಹೆಚ್ಚಿನ ಘನತೆ ಇರುತ್ತಿತ್ತು. ಆದರೆ ಸ್ವಮೋಹಿ ಮತ್ತು ಪ್ರಚಾರದ ಅದಮ್ಯ ಬಯಕೆ ಇರುವ ಮೋದಿಯವರು ಇದಕ್ಕೆಲ್ಲ ಅವಕಾಶ ಕೊಡುವವರಲ್ಲ. ‘ನಾನು, ನಾನೊಬ್ಬನೇ, ನನ್ನಿಂದಲೇ’ ಎಂಬುದು ಅವರ ಸಿದ್ಧಾಂತ. ಇದೇ ಕಾರಣದಿಂದ 19 ಬಹುಮುಖ್ಯ ವಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಐತಿಹಾಸಿಕ ಮಹತ್ವದ ಕಾರ್ಯಕ್ರಮವೊಂದು ಕಳೆಗುಂದಿತು.

ಸಂಸತ್ ನ ಮಹತ್ವದ

ಸಂಸತ್ತನ್ನು ಯಾರು ಉದ್ಘಾಟಿಸಬೇಕು ಎಂಬ ಪ್ರಶ್ನೆಗಳನ್ನು ಬದಿಗಿಟ್ಟು ಈಗ ಸಂಸತ್ ನ ಮಹತ್ವದ ಬಗ್ಗೆ ಯೋಚಿಸೋಣ. ಸಂಸತ್ತು ಇರುವುದು ಕಾನೂನುಗಳನ್ನು ರೂಪಿಸುವುದಕ್ಕಾಗಿ ಮತ್ತು ಪ್ರಜಾತಾಂತ್ರಿಕ ಚರ್ಚೆಗಳನ್ನು ನಡೆಸುವುದಕ್ಕಾಗಿ. ಅಲ್ಲಿ ವಿಪಕ್ಷೀಯರು ಪ್ರಶ್ನೆಗಳನ್ನು ಕೇಳುತ್ತಾರೆ, ಅದಕ್ಕೆ ಆಡಳಿತ ಪಕ್ಷ ಉತ್ತರ ಕೊಡಬೇಕು, ಎಲ್ಲರೂ ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸಬೇಕು. ಅದಕ್ಕಾಗಿ ವರ್ಷದಲ್ಲಿ ದೀರ್ಘಕಾಲ ಸಂಸತ್ ಕಲಾಪಗಳು ನಡೆಯಬೇಕು. ಇದು ಈಗ ಸಾಧ‍್ಯವಾಗುತ್ತಿದೆಯೇ?

ನೆಹರೂ ಯುಗದ ಮೊದಲ ಲೋಕಸಭೆಯ ಕಾಲದಲ್ಲಿ ವರ್ಷವೊಂದರ ಸರಾಸರಿ 135 ದಿನಗಳ ಕಾಲ ಕಲಾಪ ನಡೆಯುತ್ತಿತ್ತು. ಈಗ 60 ದಿನಗಳ ಕಾಲವೂ ನಡೆಯುತ್ತಿಲ್ಲ. 16 ನೇ ಲೋಕಸಭೆಯಲ್ಲಿ  ಕಲಾಪ ನಡೆದುದು ಕೇವಲ 330 ದಿನ. ಅಂದರೆ ವರ್ಷವೊಂದರ ಕೇವಲ 66 ದಿನ. ಈಗಿನ 17 ನೇ ಲೋಕಸಭೆಯ ಕಳೆದ ನಾಲ್ಕು ವರ್ಷಗಳಲ್ಲಿ ಕಲಾಪ ನಡೆದುದು ಕೇವಲ 230 ದಿನಗಳು!

ಸಂವಾದದ ಜಾಗವಾಗಿರಬೇಕಾಗಿದ್ದ ಸಂಸತ್ತು ಈಗ ಸಂಘರ್ಷದ ಜಾಗವಾಗಿದೆ. ಗದ್ದಲಕ್ಕೆ ಕಲಾಪ ಬಲಿ ಈಗ ಮಾಮೂಲು. ಇತ್ತೀಚಿನ ಬಜೆಟ್ ಅಧಿವೇಶನ ನಡೆದುದು ಕೇವಲ 45 ಗಂಟೆ. ಅಂಗೀಕಾರಗೊಂಡುದು 6 ಮಸೂದೆಗಳು. ಉತ್ತರ ಸಿಕ್ಕಿದ್ದು 29 ಪ್ರಶ್ನೆಗಳಿಗೆ. ಕೇಂದ್ರ ಬಜೆಟ್ ಚರ್ಚೆಯಿಲ್ಲದೆ ಪಾಸಾಯಿತು.

ಆಡಳಿತ ಪಕ್ಷದಿಂದಲೇ ಗದ್ದಲ!

ಸಂಸತ್ತಿನಲ್ಲಿ ವಿಪಕ್ಷಗಳು ಕಲಾಪಕ್ಕೆ ತಡೆ ಒಡ್ಡುವುದು ಸಾಮಾನ್ಯ. ಆದರೆ ಮೊನ್ನೆಯ ಬಜೆಟ್ ಅಧಿವೇಶನದ ಎರಡನೆ ಅವಧಿಯಲ್ಲಿಯಂತೂ ಆಡಳಿತ ಪಕ್ಷದವರೇ ಕಲಾಪ ನಡೆಯದಂತೆ ನೋಡಿಕೊಂಡರು. ಹಿಂದಿನ ಒಂದು ಲೆಕ್ಕಾಚಾರದ ಪ್ರಕಾರ ಸಂಸತ್ ನ ಒಂದು ನಿಮಿಷದ ಕಲಾಪಕ್ಕೆ ತಗಲುವ ಖರ್ಚು 2.5 ಲಕ್ಷ ರುಪಾಯಿ. ಹಾಗಾದರೆ ಒಟ್ಟು ಎಷ್ಟು ನಷ್ಟವಾಗಿರಬಹುದು ಲೆಕ್ಕ ಹಾಕಿ.

ಮನಮೋಹನ ಸಿಂಗ್ ರ ಯುಪಿಎ ಕಾಲದಲ್ಲಿ 60-70% ಮಸೂದೆಗಳು ಪರಿಶೀಲನೆಗಾಗಿ ಸದನ ಸಮಿತಿಗೆ ಹೋಗುತ್ತಿದ್ದರೆ, ಮೋದಿ ಸರಕಾರದಲ್ಲಿ ಅದು 25% ಕ್ಕೆ ಇಳಿದಿದೆ. ಮೋದಿಯವರ ಎರಡನೆ ಅವಧಿಯಲ್ಲಿ ಅದು ಕೇವಲ 13%. ಅತ್ಯಂತ ಮಹತ್ವದ ಕೃಷಿ ಕಾಯ್ದೆ ಕೂಡಾ ಸದನ ಸಮಿತಿಯ ಪರಿಶೀಲನೆಗೆ ಹೋಗಲಿಲ್ಲ.

ನೆಹರೂ ಅವರು ಗರಿಷ್ಠ ಕಾಲ ಸಂಸತ್ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಶ್ನೆಗಳಿಗೆ ತಾವೇ ಉತ್ತರ ಕೊಡುತ್ತಿದ್ದರು. ಆದರೆ ಮೋದಿಯವರು ಸಂಸತ್ ಕಲಾಪಕ್ಕೆ ಹಾಜರಾಗುವುದು ತೀರಾ ವಿರಳ. ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಮಾತ್ರ ಹಾಜರಾಗಿ, ಭಾಷಣ ಮಾಡಿ ಹೋಗುತ್ತಾರೆ.

ಸಂಸತ್ ಕಲಾಪ ಎಷ್ಟೊಂದು ನಿರಾಶಾದಾಯಕವಾಗಿದೆ ಎಂದರೆ ಅಲ್ಲಿ ಚೀನಾ ಅತಿಕ್ರಮಣ, ಕೋವಿಡ್ ಮಹಾಮಾರಿ, ನೋಟು ನಿಷೇಧದಂತಹ ರಾಷ್ಟ್ರೀಯ ಮಹತ್ವದ ವಿಷಯಗಳ ಚರ್ಚೆಗೂ ಅವಕಾಶ ಕೊಡಲಿಲ್ಲ. ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾದ ಸಭಾಪತಿಗಳು ಯಾವ ಮುಚ್ಚುಮರೆಯೂ ಇಲ್ಲದೆ ಆಡಳಿತ ಪಕ್ಷದ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸುತ್ತಾರೆ. ಹಿಂದೆ ಸಂಸತ್ ನ ಸೆಂಟ್ರಲ್ ಹಾಲ್ ಗೆ ಮಾಧ್ಯಮದ ಮಂದಿಗೆ ಪ್ರವೇಶ ಇತ್ತು. ಈಗ ಅಲ್ಲಿಗೆ ಪ್ರವೇಶವಿಲ್ಲ. ಸುದ್ದಿಯನ್ನು, ಮಾಹಿತಿಯ ಹರಿವನ್ನು ನಿಯಂತ್ರಿಸಲು ಸರಕಾರ ಸ್ಪಷ್ಟವಾಗಿ ಯತ್ನಿಸುತ್ತಿದೆ. ಸಂಸತ್ತಿನೊಳಗೇ ಪ್ರಜಾತಾಂತ್ರಿಕ ಚಟುವಟಿಕೆಗಳ ಪರಿಸ್ಥಿತಿ ಹೀಗಿರುವಾಗ ಭವ್ಯ ದಿವ್ಯ ಕಟ್ಟಡ ಹಿಡಿದುಕೊಂಡು ಏನು ಮಾಡೋಣ?

ಮುಂದಿವೆ ಆತಂಕದ ದಿನಗಳು

ಹಾಗೆ ನೋಡಿದರೆ, ಪ್ರಾದೇಶಿಕ ಪ್ರಾತಿನಿಧ್ಯದ ದೃಷ್ಟಿಯಿಂದ ಮುಂದಿನ ಆತಂಕದ ದಿನಗಳನ್ನು ಊಹಿಸಿದರೆ ಈಗಿನದು ಏನೂ ಅಲ್ಲ. ಈಗ ದೇಶದ ಒಟ್ಟು ಜನಸಂಖ್ಯೆ 140 ಕೋಟಿ. ಲೋಕಸಭೆ ಯಲ್ಲಿ 543 ಸಂಸದ ಸ್ಥಾನಗಳಿವೆ. ಅಂದರೆ 25 ಲಕ್ಷ ಜನರಿಗೆ ಒಬ್ಬ ಸಂಸದ ಇದ್ದಾನೆ. ಈ ಹಿಂದೆ ಈ ಸಂಖ್ಯೆಯನ್ನು ಬದಲಾಯಿಸಿದ್ದು 1976 ರಲ್ಲಿ. ಆಗ ಜನಸಂಖ್ಯೆ ಕೇವಲ 64 ಕೋಟಿ. ಆಗ ಒಬ್ಬ ಸಂಸದ 11 ಲಕ್ಷ ಮಂದಿಗೆ ಪ್ರತಿನಿಧಿ. ಈಗ ಜನಸಂಖ್ಯೆ ದುಪ್ಪಟ್ಟು ಆದರೂ ಸಂಸದರ ಸಂಖ್ಯೆ ಅಷ್ಟೇ ಇದೆ. 2026 ಕ್ಕೆ ಈ ಸ್ಥಗಿತ ಸ್ಥಿತಿ ಕೊನೆಗೊಂಡು ಡಿಲಿಮಿಟೇಶನ್  (ಕ್ಷೇತ್ರ ಪುನರ್ವಿಂಗಡಣೆ) ನಡೆಯಲಿದೆ.

2026 ರ ಜನಗಣತಿ ಬಳಿಕ ಸಂಸದರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಕಳೆದ 50 ವರ್ಷಗಳಲ್ಲಿ ಕೆಲವು ರಾಜ್ಯಗಳು ಜನಸಂಖ್ಯೆ ನಿಯಂತ್ರಿಸಿವೆ. ಪರಿಣಾಮ ಕೆಲವು ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿದ್ದರೆ ಇನ್ನು  ಕೆಲವು ರಾಜ್ಯಗಳಲ್ಲಿ ಕಡಿಮೆ ಇದೆ. ವಲಸೆಯೂ ಜನಸಂಖ್ಯೆಯ ಸ್ವರೂಪವನ್ನು ಬದಲಾಯಿಸಿದೆ. ಡಿಲಿಮಿಟೇಶನ್ ಬಳಿಕ ಉತ್ತರಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ರಾಜಸ್ತಾನ ಸಂಸತ್ ನಲ್ಲಿ ಅಧಿಕ ಸಂಸದರನ್ನು ಹೊಂದಿದರೆ. ಕೇರಳ, ಈಶಾನ್ಯ ಭಾರತ, ತಮಿಳುನಾಡು, ಪಶ್ಚಿಮ ಬಂಗಾಳ ನಷ್ಟ ಅನುಭವಿಸಲಿವೆ. ರಾಜಕೀಯ ಬಲದ ಸಮೀಕರಣ ನಾಟಕೀಯವಾಗಿ ಪಲ್ಲಟಗೊಳ್ಳಲಿದೆ.

ಅದೇ ಹೊತ್ತಿನಲ್ಲಿ, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆಯೂ ಸರಕಾರ ಬಹಳ ಕಾಲದಿಂದ ಮಾತನಾಡುತ್ತಿದೆ. ಡಿಲಿಮಿಟೇಶನ್ ಬಳಿಕ ದಕ್ಷಿಣ ಭಾರತ ಸಂಸತ್ತಿನಲ್ಲಿ ಧ್ವನಿ ಕಳೆದುಕೊಂಡು, ಅದೇ ಹೊತ್ತಿನಲ್ಲಿ ‘ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ’ ಜಾರಿಗೆ ಬಂದರೆ ಯಾರಿಗೆ ಅನುಕೂಲ ಮತ್ತು ಪರಿಸ್ಥಿತಿ ಏನಾಗಬಹುದು ಊಹಿಸಿ. ಭವ್ಯ ಹೊಸ ಸಂಸತ್ ಕಟ್ಟಡ, ರಾಜನ ಪಟ್ಟಾಭಿಷೇಕ ನೆನಪಿಸುವ ವೈಭವದ ಉದ್ಘಾಟನಾ ಕಾರ್ಯಕ್ರಮದ ನಡುವೆ ನಮಗೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದವರಿಗೆ ಚಿಂತೆಯ ಸಂಗತಿಯಾಗಬೇಕಾದುದು ಇದು.

ಶ್ರೀನಿವಾಸ ಕಾರ್ಕಳ

ಲೇಖಕರು

ಇದನ್ನೂ ಓದಿ-ಮಹಿಳಾ ಕುಸ್ತಿ ಪಟುಗಳ ಹೋರಾಟ | ಇದೆಂಥಾ ಕ್ರೌರ್ಯ?!

.

Related Articles

ಇತ್ತೀಚಿನ ಸುದ್ದಿಗಳು