ಹೊಸದಿಲ್ಲಿ: ಮೂರನೇ ಬಾರಿಯ ನರೇಂದ್ರ ಮೋದಿ ಸರಕಾರದ ಬಜೆಟ ಬಗ್ಗೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದು, ಬಜೆಟ್ ನಲ್ಲಿ ಸಾಮಾನ್ಯ ಭಾರತೀಯರಿಗೆ ಯಾವುದೇ ಪ್ರಯೋಜನಗಳಿಲ್ಲ ಎಂದು ದೂರಿದ್ದಾರೆ.
ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟನ್ನು ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಆಗಿದೆ. ಇದು ಬಿಜೆಪಿಯ ಮಿತ್ರಪಕ್ಷಗಳು ಮತ್ತು ಆಪ್ತರನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಇದು. ಮಿತ್ರ ಪಕ್ಷಗಳನ್ನು ಸಮಾಧಾನಪಡಿಸುವ ಪ್ರಯತ್ನ ಈ ಬಜೆಟ್ ನಲ್ಲಿದೆ. ಇತರ ರಾಜ್ಯಗಳ ವೆಚ್ಚದಲ್ಲಿ ಪೊಳ್ಳು ಭರವಸೆಗಳನ್ನು ನೀಡಲಾಗಿದೆ. ತಮ್ಮ ಆಪ್ತರನ್ನು ಸಮಾಧಾನಪಡಿಸಿರುವ ಈ ಬಜೆಟ್ ನಲ್ಲಿ ಸಾಮಾನ್ಯ ಭಾರತೀಯರಿಗೆ ಯಾವುದೇ ಪ್ರಯೋಜನಗಳಿಲ್ಲ. ಕಾಂಗ್ರೆಸ್ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್ಗಳನ್ನು ಇಲ್ಲಿ ಕಾಪಿ ಪೇಸ್ಟ್ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.