Home ರಾಜಕೀಯ ಬಿಜೆಪಿ – ಜೆಡಿಎಸ್‌ ನಡುವೆ ಸೀಟ್‌ ಹಂಚಿಕೆ ಇನ್ನೂ ಫೈನಲ್‌ ಆಗಿಲ್ಲ – ಪ್ರಲ್ಹಾದ ಜೋಷಿ

ಬಿಜೆಪಿ – ಜೆಡಿಎಸ್‌ ನಡುವೆ ಸೀಟ್‌ ಹಂಚಿಕೆ ಇನ್ನೂ ಫೈನಲ್‌ ಆಗಿಲ್ಲ – ಪ್ರಲ್ಹಾದ ಜೋಷಿ

0

ಮಂಡ್ಯ ಕ್ಷೇತ್ರದ ಕುರಿತು ಒತ್ತಿ ಹೇಳಿದ ಕೇಂದ್ರ ಸಚಿವರ ಮಾತಿನ ಇಂಗಿತದ ಸುತ್ತ ಹಲವು ಅನುಮಾನಗಳ ಹುತ್ತ

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್‌ ನಡುವೆ ಸೀಟು ಹಂಚಿಕೆ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬುಧವಾರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಫೆಬ್ರವರಿ 17 ಮತ್ತು 18 ರ ನಂತರ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಕ್ಷೇತ್ರ ಸೇರಿದಂತೆ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಜೋಶಿ ಹೇಳಿದ್ದಾರೆ.

ಚುನಾವಣೆಗೂ ಮೊದಲು ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನಡುವೆ ವಾಗ್ಯುದ್ಧ ನಡೆದಿತ್ತು. ಕುಮಾರಸ್ವಾಮಿ ಪ್ರಲ್ಹಾದ ಜೋಶಿಯವರನ್ನು ಪೇಶ್ವೆ ಬ್ರಾಹ್ಮಣ ಎಂದು ಕರೆದಿದ್ದರು. ಬಿಜೆಪಿ ಗೆದ್ದರೆ ಅದು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ, ಬದಲಿಗೆ ಪೇಶ್ವೆ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತದೆ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಿಂದಾಗಿ ಲಿಂಗಾಯತ ಮತಗಳು ಬಿಜೆಪಿಯಿಂದ ದೂರ ಸರಿದಿದ್ದವು. ಕೊನೆಗೆ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತ್ತು.

ಇನ್ನೊಂದೆಡೆ ಕುಮಾರ ಸ್ವಾಮಿ ಮಂಡ್ಯದಲ್ಲಿ ತನ್ನ ಮಗನಿಗೆ ಟಿಕೆಟ್‌ ಕೊಡಿಸಲು ಓಡಾಡುತ್ತಿದ್ದಾರೆ. ಆದರೆ ಸುಮಲತಾ ಕೂಡಾ ಮಂಡ್ಯ ಟಿಕೆಟ್‌ ಆಕಾಂಕ್ಷಿಯಾಗಿದ್ದು ಅವರೂ ಇತ್ತೀಚೆಗೆ ದೆಹಲಿಗೆ ಹೋಗಿ ಹಿರಿಯ ನಾಯಕರಾದ ಅಮಿತ್‌ ಶಾ, ನಡ್ಡಾ ಮೊದಲಾದವರನ್ನು ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಮಂಡ್ಯ ಟಿಕೆಟ್‌ ಕುರಿತು ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದಿರುವುದು ಕುತೂಹಲಕಾರಿ ಸಂಗತಿಯಾಗಿದೆ.

“ನಮ್ಮ ರಾಷ್ಟ್ರೀಯ ನಾಯಕರು ಬಿಜೆಪಿಯ ರಾಜ್ಯ ಘಟಕದೊಂದಿಗೆ ಈ ವಿಷಯವನ್ನು ಚರ್ಚಿಸಿ ನಂತರ ನಿರ್ಧರಿಸಲಿದ್ದಾರೆ. ಉಳಿದವು ಕೇವಲ ಊಹೆ, ಕೇವಲ ಕ್ರಿಯೆ ಮತ್ತು ಪ್ರತಿಕ್ರಿಯೆಗಳು” ಜೋಶಿ ವಿವರಿಸಿದರು.

ಜೋಶಿ ತಮ್ಮ ಕ್ಷೇತ್ರದಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು. “ನಾನು ಈ ಬಾರಿಯೂ ಭರ್ಜರಿ ಮುನ್ನಡೆಯೊಂದಿಗೆ ಗೆಲ್ಲುತ್ತೇನೆ” ಎಂದು ಅವರು ಒತ್ತಿ ಹೇಳಿದರು.

You cannot copy content of this page

Exit mobile version