Friday, October 4, 2024

ಸತ್ಯ | ನ್ಯಾಯ |ಧರ್ಮ

ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನ

ಬೆಂಗಳೂರು: ಹಿರಿಯ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ನೀಡಲಾಗುವ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನಿಸಲಾಗಿದೆ. ಸಾರ್ವಜನಿಕರು, ಸಂಘ – ಸಂಸ್ಥೆಗಳು ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ. ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.

ಅರ್ಹತೆ:

ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷ ಸೇವಾನುಭವ ಹೊಂದಿರಬೇಕು. ಹಿರಿಯರಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ನ್ಯಾಯದ ಕಾಳಜಿ ಹೊಂದಿರುವ 10 ರಿಂದ 15 ಲೇಖನಗಳು ಪ್ರಕಟವಾಗಿರಬೇಕು ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ವಿಶೇಷ ವರದಿ, ಚರ್ಚೆ, ಸಂವಾದ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿರ್ಮಿಸಿರಬೇಕು. ನಾಮನಿರ್ದೇಶನಗಳನ್ನು ಸಲ್ಲಿಸಲು 2024ನೇ ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ.

ನಾಮನಿರ್ದೇಶನಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ.17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು 560 001 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ, ಇಲ್ಲವೇ tsraward@gmail.com ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ಇತರೆ ಜಿಲ್ಲೆಗಳ ಪತ್ರಕರ್ತರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬಹುದು.

ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಕಿರು ಪರಿಚಯ:

ಓದುಗರ ಸಂಪಾದಕ ಎಂದೇ ಹೆಸರಾಗಿದ್ದ ದಿ. ವಡ್ಡರ್ಸೆ ರಘುರಾಮ ಶೆಟ್ಟಿಯವರು 1960ರ ದಶಕದಿಂದ ಸುಮಾರು ನಲುವತ್ತು ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ವದ ಸೇವೆಗೈದಿದ್ದಾರೆ.

ಸಮಾಜದ ವಂಚನೆಯ ಜಾಲಗಳನ್ನು ಬಯಲಿಗೆಳೆಯುವ ಉದ್ದೇಶದಿಂದ 1984 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ʼಮುಂಗಾರುʼ ದಿನಪತ್ರಿಕೆಯನ್ನು ಪ್ರಾರಂಭಿಸಿ, ನಿರ್ಭೀತ ಬರಹಗಳ ಮೂಲಕ ಪತ್ರಿಕಾ ವೃತ್ತಿಯಲ್ಲಿ ಬದಲಾವಣೆಯನ್ನು ತಂದವರು.

ಕನ್ನಡ ಪತ್ರಿಕೋದ್ಯಮದಲ್ಲಿ ದೀನದಲಿತರ ಹಾಗೂ ದುರ್ಬಲ ವರ್ಗದವರ ಪರವಾಗಿ ಧ್ವನಿಯೆತ್ತಿದವರು. ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ಶ್ರಮಿಸಿದವರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page