Home ಇನ್ನಷ್ಟು ಕೋರ್ಟು - ಕಾನೂನು ಆರಾಧನಾ ಸ್ಥಳಗಳ ಸಮೀಕ್ಷೆ ಕೋರಿ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸದಂತೆ ಕೋರ್ಟುಗಳಿಗೆ ಸುಪ್ರೀಂ ಸೂಚನೆ

ಆರಾಧನಾ ಸ್ಥಳಗಳ ಸಮೀಕ್ಷೆ ಕೋರಿ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸದಂತೆ ಕೋರ್ಟುಗಳಿಗೆ ಸುಪ್ರೀಂ ಸೂಚನೆ

0

ಹೊಸದಿಲ್ಲಿ: ಧಾರ್ಮಿಕ ಆರಾಧನಾ ಸ್ಥಳಗಳ ಸಮೀಕ್ಷೆ ಕೋರಿ ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸದಂತೆ ಹಾಗೂ ಬಾಕಿ ಉಳಿದಿರುವ ಅರ್ಜಿಗಳಿಗೆ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಗುರುವಾರ ದೇಶದ ಎಲ್ಲಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ಆರಾಧನಾ ಸ್ಥಳಗಳ ವಿಶೇಷ ನಿಬಂಧನೆಗಳು ಕಾಯಿದೆ, 1991 ರ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಿದ ನಂತರ ಮುಂದಿನ ಆದೇಶಗಳನ್ನು ಹೊರಡಿಸುವವರೆಗೆ ನ್ಯಾಯಾಲಯಗಳು ಈ ಕುರಿತು ತಟಸ್ಥವಾಗಿರುವಂತೆ ಸೂಚಿಸಲಾಯಿತು.

ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಜ್ಞಾನವಾಪಿ, ಮಥುರಾ, ಸಂಭಾಲ್ ಸೇರಿದಂತೆ 10 ಮಸೀದಿಗಳು ಮತ್ತು ದರ್ಗಾಗಳ ವಿರುದ್ಧ ಹಿಂದೂ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನಿಲ್ಲಿಸಲಾಯಿತು. ಇವುಗಳ ನಿಜವಾದ ಧಾರ್ಮಿಕ ಸ್ವರೂಪವನ್ನು ತಿಳಿಯಲು ಸಮೀಕ್ಷೆ ನಡೆಸಬೇಕೆಂದು ಅರ್ಜಿದಾರರು ಬಯಸಿದ್ದಾರೆ. 6 ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ನೇತೃತ್ವದ ವಿಶೇಷ ಪೀಠ ಈ ಆದೇಶ ನೀಡಿದೆ. ಇವುಗಳಲ್ಲಿ 1991 ರ ಪೂಜಾ ಸ್ಥಳಗಳ ವಿಶೇಷ ನಿಬಂಧನೆಗಳ ನಿಬಂಧನೆಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯೂ ಸೇರಿದೆ.

ಈ ಅರ್ಜಿಗಳಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪೂಜಾ ಸ್ಥಳಗಳ ವಿಶೇಷ ನಿಬಂಧನೆಗಳು ಕಾಯಿದೆ, 1991 ರ ಪ್ರಕಾರ, ಧಾರ್ಮಿಕ ಪೂಜಾ ಸ್ಥಳಗಳು ಆಗಸ್ಟ್ 15, 1947 ರಂದು ಇದ್ದ ಅದೇ ಪರಿಸ್ಥಿತಿಯಲ್ಲಿ ಮುಂದುವರಿಯಬೇಕು. ಅವುಗಳ ಧಾರ್ಮಿಕ ಸ್ವಭಾವ ಬದಲಾಗಬಾರದು. ಈ ಕಾಯ್ದೆಯನ್ನು ಹಿಂದೂ ಸಂಘಟನೆಗಳು ಮತ್ತು ಇತರ ಕೆಲವು ಅರ್ಜಿದಾರರು ಪ್ರಶ್ನಿಸಿದ್ದರು. ಈ ಕಾಯ್ದೆಯು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಲಾಗಿದೆ.

You cannot copy content of this page

Exit mobile version