Wednesday, June 18, 2025

ಸತ್ಯ | ನ್ಯಾಯ |ಧರ್ಮ

ಅಡಿಕೆ ಆಮದು ವಿವಾದ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಎಎಪಿ ಆಗ್ರಹ

ಬೆಂಗಳೂರು: ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ಭಾರತಕ್ಕೆ 15,000 ಕ್ವಿಂಟಾಲ್‌ ಅಡಿಕೆಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವು ಕರ್ನಾಟಕದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಅಡಿಕೆ ಬೆಳಗಾರರನ್ನು ಚಿಂತೆಗೀಡುಮಾಡಿದೆ. ಕಾಳಮೆಣಸು ಬೆಳಗಾರರಿಗೆ ಆದ ಅನ್ಯಾಯವು ಅಡಿಕೆ ಬೆಳಗಾರರಿಗೂ ಆಗಲಿದೆ ಎಂದು ತಿಳಿದ ನಂತರ ನಮ್ಮ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ ಕೇಂದ್ರ ಸರ್ಕಾರದ ಗಮನವನ್ನು, ಈ ಸಮಸ್ಯೆಯತ್ತ ಸೆಳೆಯುವ ನಮ್ಮ ಪ್ರಯತ್ನವು ಯಶಸ್ವಿಯಾಗಲಿಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ನೀವು ಮಧ್ಯಪ್ರವೇಶಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಮೇಕ್‌ ಇನ್‌ ಇಂಡಿಯಾ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ವಿರುದ್ಧವಾಗಿ ವಿದೇಶದಲ್ಲಿ ಬೆಳೆದ ಅಡಿಕೆ, ಕಾಳುಮೆಣಸನ್ನು ಭಾರತಕ್ಕೆ ತರಿಸಿ, ʻಎಲ್ಲಾದರೂ ಬೆಳೆಯಿರಿ, ಭಾರತಕ್ಕೆ ತನ್ನಿʼ ಎಂಬ ನೀತಿಯನ್ನು ಅನುಸರಿಸುತ್ತಿರುವುದೇಕೆ? ರಾಜಕೀಯ ಪ್ರಭಾವಿಗಳು ಇದರಲ್ಲಿ ಭಾಗಿಯಾಗಿ ಸಫೆಮಾ, ಫೆರಾ ಮುಂತಾದ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡುಬರುತ್ತಿದ್ದು, ಜಾರಿ ನಿರ್ದೇಶನಾಲಯದಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಎಎಪಿ ಮುಖಂಡರು ಹಾಗೂ ಹಿರಿಯ ವಕೀಲರಾದ ಬ್ರಿಜೇಶ್‌ ಕಾಳಪ್ಪ ಮಾತನಾಡಿ, “ನಮ್ಮಲ್ಲಿ ಬೆಳೆಯುವ ಅಡಿಕೆಗೆ ಹೋಲಿಕೆ ಮಾಡಿದರೆ ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆಯು ಕಳಪೆ ಗುಣಮಟ್ಟದ್ದಾಗಿರಲಿದೆ. ಅದೇ ರೀತಿ, ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುವ ಕಾಳುಮೆಣಸು ನಮ್ಮಲ್ಲಿ ಬೆಳೆಯುವ ಕಾಳುಮೆಣಸಿಗಿಂತ ಕಳಪೆ ಗುಣಮಟ್ಟದ್ದಾಗಿದೆ. ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಆಮದು ಮಾಡಿಕೊಂಡ ಅವುಗಳು ಮಿಶ್ರವಾಗುವುದರಿಂದ ಭಾರತದ ಅಡಿಕೆ ಹಾಗೂ ಕಾಳುಮೆಣಸು ಕಳಪೆ ಗುಣಮಟ್ಟದ್ದೆಂಬ ತಪ್ಪು ಕಲ್ಪನೆ ಗ್ರಾಹಕರಲ್ಲಿ ಮೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ವಾರ್ಷಿಕ 36,000 ಮೆಟ್ರಿಕ್‌ ಟನ್‌ ಕಾಳುಮೆಣಸು ಬೆಳೆಯಲಾಗುತ್ತಿದೆ. ಆಮದಿಗೂ ಮೊದಲು 850 ರೂಪಾಯಿಯಿದ್ದ ಬೆಲೆಯು 500 ರೂಪಾಯಿಗೆ ಕುಸಿದಿರುವುದರಿಂದ ಬೆಳೆಗಾರರಿಗೆ ಕೆಜಿಗೆ 350 ರೂಪಾಯಿ ನಷ್ಟವಾಗುತ್ತಿದೆ. ಅಂದರೆ ರೈತರಿಗೆ ಒಟ್ಟು 1.26 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಕಾಳುಮೆಣಸಿನ ಹಿಂದಿನ ಬೆಲೆಗೂ ಆಮದಿಗೆ ಅವಕಾಶ ನೀಡಿದ ನಂತರದ ಬೆಲೆಗೂ ಹೋಲಿಕೆ ಮಾಡಿದರೆ, ಗುತ್ತಿಗೆದಾರರು ಆರೋಪಿಸಿರುವಂತೆ 40% ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

ಎಎಪಿ ಮುಖಂಡರು ಹಾಗೂ ಹಿರಿಯ ವಕೀಲರಾದ ಕೆ.ದಿವಾಕರ್‌ ಮಾತನಾಡಿ,  ದೇಶಕ್ಕೆ ಅಗತ್ಯವಿರುವಷ್ಟು ಅಡಿಕೆ ಹಾಗೂ ಕಾಳುಮೆಣಸು ನಮ್ಮಲ್ಲೇ ಉತ್ಪಾದನೆಯಾಗುತ್ತಿದ್ದರೂ ವಿದೇಶಗಳಿಂದ ಆಮದಿಗೆ ಮುಂದಾಗಿರುವುದು ಅವುಗಳ ಬೆಳೆಗಾರರನ್ನು ಸಹಜವಾಗಿಯೇ ಚಿಂತೆಗೀಡುಮಾಡಿದೆ. ಒಂದುವೇಳೆ ಅಡಿಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಇವುಗಳಿಗೆ ವಿಧಿಸಬೇಕು. ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಆಮದುದಾರರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page