Monday, July 28, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು | ಸಿ ಎಮ್ ಸಿದ್ಧರಾಮಯ್ಯ ‌ನೇತೃತ್ವದಲ್ಲಿ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯ ಮೊದಲ ಸಭೆಗೆ ಕ್ಷಣಗಣನೆ

ಬೆಂಗಳೂರು: ಎಐಸಿಸಿಯ ರಾಷ್ಟ್ರೀಯ ಒಬಿಸಿ ಸಲಹಾ ಮಂಡಳಿಯ ಚೊಚ್ಚಲ ಸಭೆಗೆ ತಯಾರಿ ಆರಂಭವಾಗಿದೆ. ಕೇಂದ್ರ ಸರ್ಕಾರ ಜಾತಿ ಜನಗಣತಿಯ ತೀರ್ಮಾನ ಕೈಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಈ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಚಾಲಕತ್ವದಲ್ಲಿ ಈ ಸಭೆ ಜರುಗಲಿದೆ.

ದೇಶದ ವಿವಿಧ ರಾಜ್ಯಗಳಿಂದ 50ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಎರಡು ದಿನಗಳ ಈ ಸಭೆಯಲ್ಲಿ ಜಾತಿ ಜನಗಣತಿ, ಸಾಮಾಜಿಕ ನ್ಯಾಯಕ್ಕೆ ಪೂರಕವಾದ ನೀತಿಗಳ ರೂಪುಗೊಳಿಕೆ, ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಯಲಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು, ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು ಮತ್ತು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ 50ಕ್ಕೂ ಅಧಿಕ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಹೊಟೇಲ್ ಶಾಂಗ್ರಿಲಾದಲ್ಲಿ ಸಲಹಾ ಮಂಡಳಿಯ ಪ್ರಗತಿ ಪರಿಶೀಲನೆ ನಡೆಯಲಿದೆ. ತದನಂತರ ಜಾತಿ ಜನಗಣತಿ, ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಲಂ 164(1) ಕುರಿತು ಚರ್ಚೆಗಳು ನಡೆಯಲಿವೆ. ಅಂದು ಮಧ್ಯಾಹ್ನದ ವೇಳೆಗೆ ಸಭೆ ಮುಕ್ತಾಯಗೊಳ್ಳಲಿದೆ. ತೆಲಂಗಾಣ ಮಾದರಿಯಲ್ಲಿ ರಾಷ್ಟ್ರಮಟ್ಟದ ಜಾತಿ ಜನಗಣತಿಯನ್ನು ಕೈಗೊಳ್ಳುವಂತೆ ಒತ್ತಾಯಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page