Friday, June 14, 2024

ಸತ್ಯ | ನ್ಯಾಯ |ಧರ್ಮ

ವಿಜಯೇಂದ್ರಗೆ ಪಟ್ಟ: ಚುರುಕಾದ ಆಪರೇಷನ್‌ ಫಲಾನುಭವಿಗಳು

ಬೆಂಗಳೂರು: ಇತ್ತ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಬಿಜೆಪಿ ಅಧ್ಯಕ್ಷ ಗಾದಿ ಸಿಗುತ್ತಿದ್ದಂತೆ ಯಡಿಯೂರಪ್ಪ ನಿಷ್ಟರು ಮತ್ತು ಆಪರೇಷನ್‌ ಕಮಲದ ಫಲಾನುಭವಿಗಳು ಫುಲ್‌ ಆಕ್ಟಿವ್‌ ಆಗಿ ಎದ್ದು ನಿಂತಿದ್ದಾರೆ.

ಸಂತೋಷ ಕೂಟ ಕೈ ಕೆಳಗಾಗುತ್ತಿದ್ದ ಹಾಗೆ ರೇಣುಕಾಚಾರ್ಯ ಫುಲ್‌ ಫಾರ್ಮಿಗೆ ಬಂದಿದ್ದು, ತಾನು ಇನ್ನು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಮಾಜಿ ಶಾಸಕ ರವೀಂದ್ರ ಅವರನ್ನು ಭೇಟಿ ಮಾಡಿರುವ ರೇಣುಕಾಚಾರ್ಯ ತಮಗೆ ದಾವಣಗೆರೆ ಕ್ಷೇತ್ರದ ಲೋಕಸಭೆಯ ಟಿಕೆಟ್‌ ಖಾತರಿಯಾದಂತೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ರೇಣುಕಾಚಾರ್ಯ ತಮ್ಮನ್ನು ಬರ ಅಧ್ಯಯನ ತಂಡದಲ್ಲಿ ಸೇರಿಸಿಕೊಳ್ಳದ ಪಕ್ಷದ ವಿರುದ್ಧ ಕಿಡಿಕಾರಿ ತಮ್ಮದೇ ಆದ ಬರ ಅಧ್ಯಯನ ನಡೆಸಲು ಹೊರಟಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಅತ್ತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿನಿಮೀಯ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಪ್ರದೀಪ ಈಶ್ವರ ಎದುರು ಮಂಕಾದಂತೆ ಸುಧಾಕರ್‌ ಅವರೂ ವಿಜಯೇಂದ್ರ ಅಧ್ಯಕ್ಷರಾಗುತ್ತಿದ್ದಂತೆ ಮತ್ತೆ ಚುರುಕಾಗಿದ್ದಾರೆ. ಇತ್ತ ಯಶವಂತಪುರದ ಶಾಸಕ ಎಸ್‌ ಟಿ ಸೋಮಶೇಖರ್‌ ಅಂತೂ ಚುನಾವಣೆ ಮುಗಿದ ದಿನದಿಂದಲೂ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟುಕೊಂಡೇ ಪಕ್ಷ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರು. ಅವರೂ ಈಗ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದು ಯಡಿಯೂರಪ್ಪ ಪಾಳಯದಲ್ಲಿ ನೆಮ್ಮದಿಯ ಅಲೆಗಳು ಬೀಸುತ್ತಿವೆ.

ಇತ್ತೀಚೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಆಪ್ತವಲಯವನ್ನು ತೊರೆದು ಸಂತೋಷ ಕೂಟವನ್ನು ಸೇರಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ತಮ್ಮ ಹಿಂದಿನ ಕ್ಷೇತ್ರವಾದ ಯಶವಂತಪುರದ ಶಾಸಕ ಸೋಮಶೇಖರ್‌ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಅವರ ಪಕ್ಷ ವಿರೋಧಿ ಹೇಳಿಕೆಗಳು ಸರಿಯಲ್ಲ ಎಂದಿದ್ದಾರೆ.

ಹಿರಿಯ ನಾಯಕ ಈಶ್ವರಪ್ಪ ಕೂಡಾ ವಿಜಯೇಂದ್ರ ಆಯ್ಕೆಯಿಂದ ಕಂಗಾಲಾಗಿದ್ದು, ವಿಜಯೇಂದ್ರ ಒಬ್ಬರಿಗೇ ನಾಯಕತ್ವವನ್ನು ನೀಡಲಾಗದು, ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಮುಂದುವರೆಯಲಿದೆ ಎಂದಿದ್ದಾರೆ. ಆದರೆ ಆಕ್ರಮಣಕಾರಿ ಗುಣದ ವಿಜಯೇಂದ್ರ ಸಾಮೂಹಿಕ ನಾಯಕತ್ವನ್ನು ಒಪ್ಪಿಕೊಂಡು ಮುನ್ನಡೆಯುವುದು ಕಷ್ಟ ಎನ್ನುತ್ತಿವೆ ಪಕ್ಷದ ಮೂಲಗಳು.

Related Articles

ಇತ್ತೀಚಿನ ಸುದ್ದಿಗಳು