Saturday, June 21, 2025

ಸತ್ಯ | ನ್ಯಾಯ |ಧರ್ಮ

ಒಂದು ದೇಶ, ಒಂದು ಚುನಾವಣೆ: ಚಿಂತನ ಕರ್ನಾಟಕದಿಂದ ಸಂವಾದ ಸಭೆ

ಬೆಂಗಳೂರು: ದೇಶದೆಲ್ಲೆಡೆ ಈಗ ಒಂದು ದೇಶ, ಒಂದು ಚುನಾವಣೆ ಕುರಿತಾದ ಚರ್ಚೆ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಂತನ ಕರ್ನಾಟಕ ವೇದಿಕೆ ಸಂಸ್ಥೆಯು ಈ ವಿಷಯದ ಕುರಿತು ಸಂವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಚರ್ಚೆಯಲ್ಲಿ ವಿವಿಧ ರಾಜಕಾರಣಿಗಳು, ಚುನಾವಣಾ ತಜ್ಞರು ಹಾಗೂ ಹಿರಿಯ ಚಿಂತಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆಂದು ಸಂಘಟಕರು ಹೇಳಿದ್ದಾರೆ.

ಈ ಸಂವಾದದಲ್ಲಿ ಸಾಮಾಜಿಕ ಚಿಂತಕರು, ಕನ್ನಡ ಪರ ಹೋರಾಟಗಾರರು ಹಾಗೂ ಎಎಪಿಯ ರಾಜ್ಯ ಉಪಾಧ್ಯಕ್ಷರಾದ ಡಾ.ರಮೇಶ್ ಬೆಲ್ಲಂಕೊಂಡ, ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರಾದ ಶಿವಸುಂದರ್‌, ರಾಜಕೀಯ ವಿಶ್ಲೇಷಕರು, ಚಿಂತಕರಾದ ಎ.ನಾರಾಯಣ, ಖ್ಯಾತನಟ, ರಂಗಕರ್ಮಿ, ಕರ್ನಾಟಕ ರಾಜ್ಯ ಎಎಪಿ ಅಧ್ಯಕ್ಷರಾದ ಡಾ.ಮುಖ್ಯಮಂತ್ರಿ ಚಂದ್ರು, ವಿಜಯಪುರ ಅಕ್ಕಮಹಾದೇವಿ ವಿವಿಯ ನಿವೃತ್ತ ಕುಲಸಚಿವರಾದ ಆರ್‌ ಸುನಂದಮ್ಮ, ಕರ್ನಾಟಕ ರಾಜ್ಯ ಕಾಂಗ್ರೆಸ್‌ ವಕ್ತಾರರಾದ ಸುಧೀರ್ ಕುಮಾರ್‌ ಮುರೊಳ್ಳಿ, ಜೆಡಿಎಸ್‌ ಕರ್ನಾಟಕದ ವಕ್ತಾರರಾದ ಸಿಎಂ ಫೈಜ್‌,  ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ.ಕೆ.ಪ್ರಕಾಶ್, ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ ಯುಟಿ ಫರ್ಜಾನ, ಸಿನಿಮಾ ನಟಿ, ರಂಗಭೂಮಿ ಕಲಾವಿದೆ ಸುಷ್ಮಾವೀರ್‌, ಸರ್ವೋದಯ ಕರ್ನಾಟದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್‌, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರಾದ ಮಂಜುನಾಥ್ ಅದ್ದೆ, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್‌,  ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ  ಚೇತನ್‌ ಜೀರಾಳ್‌ ಸೇರಿ ಹಲವು ಗಣ್ಯರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಒಂದು ದೇಶ ಒಂದು ಚುನಾವಣೆ ಕುರಿತು ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಮಾನಾಥ್‌ ಕೋವಿಂದ್‌ ಅವರ ನೇತ್ರತ್ವದಲ್ಲಿ ಸಮಿತಿಯೊಂದನ್ನು ನಿರ್ಮಿಸಿದ್ದು, ಅದರ ಬಳಿ ಶೀಘ್ರದಲ್ಲೇ ವರದಿ ನೀಡುವಂತೆ ಕೇಳಿದೆ.

ಈ ಹಿನ್ನೆಲೆಯಲ್ಲಿ ಸಂಘಟನೆಯು ಒಂದು ದೇಶ, ಒಂದು ಚುನಾವಣೆಯ ಹೂರಣವೇನು? ಅಜೆಂಡಾವೇನು? ಎನ್ನುವುದರ ಕುರಿತು ಚರ್ಚೆಯನ್ನು ನಡೆಸಲಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮವು ಸೆ.16ರಂದು ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯ ಭಾರತೀಯ ವಿದ್ಯಾಭವನ ಕೆ ಆರ್‌ ವಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page